Advertisement

ಕುಂತಿಗೆ ಸಿಕ್ಕಿದ ವರ ಶಾಪವೂ ಹೌದು!

07:49 PM Feb 03, 2020 | mahesh |

ದ್ರೌಪದಿ ಎಂಬ ಹೆಸರು ಕೇಳಿದರೆ ಸಾಕು ಬಹುಪತಿತ್ವವೇ ನಮ್ಮ ಕಣ್ಣಮುಂದೆ ಬರುವುದು. ಆ ಬಗ್ಗೆ ಹಲವು ಲೇಖಕರು, ಹಲವು ವರ್ಣನೆಗಳನ್ನು ಮಾಡಿಯಾಗಿದೆ. ಕನ್ನಡ ಹಾಗೂ ಭಾರತೀಯ ಸಾಹಿತ್ಯದ ಮಟ್ಟಿಗೆ ಎಸ್‌.ಎಲ್‌.ಭೈರಪ್ಪ ಬರೆದಿರುವ ಪರ್ವ ಅತ್ಯದ್ಭುತ ವರ್ಣನೆಯನ್ನು ಹೊಂದಿದೆ. ಆದರೆ, ಮಹಾಭಾರತದಲ್ಲಿ ದ್ರೌಪದಿಯ ಅತ್ತೆ ಕುಂತಿಯೂ ಪರೋಕ್ಷವಾಗಿ ಬಹುಪತಿತ್ವ ಹೊಂದಿರುತ್ತಾಳೆ. ಅಷ್ಟು ಮಾತ್ರವಲ್ಲ, ಕುಂತಿ, ಮಾದ್ರಿ, ಗಾಂಧಾರಿಯರ ಅತ್ತೆಯಂದಿರಾದ ಅಂಬಿಕಾ, ಅಂಬಾಲಿಕಾ ಕೂಡ ಬಹುಪತಿತ್ವ ಹೊಂದಿರುತ್ತಾರೆ. ಇವರ ಅತ್ತೆ ಸತ್ಯವತಿಯದ್ದೂ ಇದೇ ಕಥೆ! ಹೊರಜಗತ್ತಿನ ಮಾತುಕತೆಯಲ್ಲಿ ಐವರು ಪತಿಯರ ಒಡತಿ, ದ್ರೌಪದಿ ಎಂದು ಒಂದೇ ಸಮನೆ ಹೇಳಲಾಗುತ್ತದೆ. ಒಂದಲ್ಲ ಒಂದುರೀತಿಯಲ್ಲಿ ಇನ್ನೂ ಕೆಲವರು ಅದೇ ರೀತಿ ಬದುಕಿದ್ದಾರೆ ಎಂದಾಗ ಆಶ್ಚರ್ಯಗೊಳ್ಳಬಾರದು, ಅದೂ ಸತ್ಯ!

Advertisement

ವ್ಯತ್ಯಾಸವೆಂದರೆ ದ್ರೌಪದಿ ಐವರನ್ನು ವಿದ್ಯುಕ್ತವಾಗಿ ವರಿಸಿದಳು. ಸತ್ಯವತಿ ಸೇರಿ ಮೇಲೆ ಉಲ್ಲೇಖೀಸಿದ ಇತರೆ ಸ್ತ್ರೀಯರೆಲ್ಲ ಸಂತಾನಾರ್ಥವಾಗಿ ಪರಪುರುಷರನ್ನು ಸೇರಿರುತ್ತಾರೆ. ಸತ್ಯವತಿಯದ್ದು ಸ್ವಲ್ಪ ಬೇರೆಯದ್ದೇ ಆದ ಕಥೆ. ಆಕೆ ಪರಾಶರ ಮುನಿಗಳ ಆಸೆಯನ್ನು ಒಪ್ಪಿ ಅವರನ್ನು ಸೇರುತ್ತಾಳೆ. ಆಕೆಗೇನು ಸಂತಾನದ ಅಪೇಕ್ಷೆ ಇರುವುದಿಲ್ಲ. ಮುಂದೆ ಶಂತನುವನ್ನು ವರಿಸುತ್ತಾಳೆ. ಉಳಿದ ಸ್ತ್ರೀಯರೆಲ್ಲ ಸಂತಾನಕ್ಕಾಗಿ ಮಾತ್ರ ಪರಪುರುಷರನ್ನು ಸೇರಿದ್ದು. ಪರೋಕ್ಷವಾಗಿ ನೋಡಿದಾಗ ಇದೂ ಬಹುಪತಿತ್ವದಂತೆಯೇ ಕಂಡರೂ, ಪರಿಸ್ಥಿತಿಯ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳುವ ಜನರು ಅದನ್ನು ಬಹುಪತಿತ್ವ ಎಂದು ಹೇಳುವುದಿಲ್ಲ ಅಷ್ಟೇ.

ಈಗ ದ್ರೌಪದಿಯ ಅತ್ತೆ, ಮಹಾಭಾರತದ ಮಹಾನಾಯಕ ಕೃಷ್ಣನ ಅತ್ತೆ, ಪಾಂಡವರ ತಾಯಿ, ಪಾಂಡುರಾಜನ ಪತ್ನಿ, ವರಸೆಯಲ್ಲಿ ಮಾದ್ರಿಗೆ ಅಕ್ಕ, ಗಾಂಧಾರಿಗೆ ತಂಗಿಯಾಗುವ ಕುಂತಿಯ ವಿಷಯಕ್ಕೆ ಬರೋಣ. ಆಕೆಯ ಜೀವನ ಬಹಳ ವಿಶಿಷ್ಟವಾದ ಕಥೆಯನ್ನು ಹೊಂದಿದೆ. ಅದನ್ನಿಟ್ಟುಕೊಂಡು ಒಂದು ದೊಡ್ಡ ಪುಸ್ತಕವನ್ನೇ ಬರೆಯಬಹುದು. ಶ್ರೀಕೃಷ್ಣನ ಅಜ್ಜ ಶೂರಸೇನನ ಮಗಳು ಕುಂತಿ. ಅಂದರೆ ಕೃಷ್ಣನ ಅಪ್ಪ ವಸುದೇವನ ಸ್ವಂತ ತಂಗಿ! ಈಕೆಯ ಮೂಲ ಹೆಸರು ಪೃಥಾ. ಈಕೆಯನ್ನು ಮಕ್ಕಳಿಲ್ಲದ ಕುಂತಿಭೋಜನಿಗೆ ಶೂರಸೇನ ಸಾಕಿಕೊಳ್ಳಲು ನೀಡುತ್ತಾನೆ.

ಕುಂತಿಭೋಜನ ಅರಮನೆಗೆ ಒಮ್ಮೆ ದೂರ್ವಾಸ ಮುನಿಗಳು ಬಂದಿರುತ್ತಾರೆ. ಅವರ ಸೇವೆಯನ್ನು ಕುಂತಿ ಬಹಳ ಶ್ರದ್ಧೆಯಿಂದ ಮಾಡುತ್ತಾಳೆ. ಅದನ್ನು ಮೆಚ್ಚಿದ ದೂರ್ವಾಸರು ಆಕೆಗೆ ಐದು ಮಂತ್ರಗಳನ್ನು ನೀಡುತ್ತಾರೆ. ಅದನ್ನು ಜಪಿಸಿದರೆ, ಸಂಬಂಧಪಟ್ಟ ದೇವತೆಗಳು ಆಗಮಿಸಿ ಆಕೆಗೆ ಸಂತಾನವುಂಟಾಗುವಂತೆ ಮಾಡುತ್ತಾರೆನ್ನುವುದೇ ಅದು. ಇದು ಒಂದು ರೀತಿಯಲ್ಲಿ ಆಕೆಗೆ ವರವೂ ಹೌದು, ಶಾಪವೂ ಹೌದು ಎನ್ನುವಂತಾಯಿತು. ಆಕೆ ವಿವಾಹಕ್ಕೆ ಮುನ್ನ ಸೂರ್ಯನಿಂದ ಕರ್ಣನನ್ನು ಪಡೆಯುತ್ತಾಳೆ. ಆ ಕರ್ಣ ಕುಂತಿಗೆ ಕೊನೆಯ ತನಕ ಕಾಡುತ್ತಾನೆ. ಮಹಾಭಾರತದಲ್ಲಿ ಕುಂತಿ ಒಂದೊಮ್ಮೆ ನಾನೇ ನಿನ್ನ ತಾಯಿ, ನನ್ನ ಮಕ್ಕಳಿಗೆ ಏನೂ ಮಾಡಬೇಡ ಎಂದು ಕರ್ಣನಲ್ಲಿ ಕೇಳಿಕೊಳ್ಳಲು ಹೋಗಬೇಕಾಗುತ್ತದೆ. ಆಗ ಕರ್ಣ; ಅರ್ಜುನನೊಬ್ಬನನ್ನು ಬಿಟ್ಟು, ಉಳಿದವರಿಗೆ ಏನೂ ಮಾಡುವುದಿಲ್ಲ ಎಂದು ಮಾತು ಕೊಡುತ್ತಾನೆ. ವಾಸ್ತವವಾಗಿ ಯುದ್ಧರಂಗದಲ್ಲಿದ್ದಾಗ ಈ ವಚನಗಳೆಲ್ಲ ಹೇಗೆ ಕಾರ್ಯಸಾಧುವೋ ಗೊತ್ತಾಗುವುದಿಲ್ಲ. ಇರಲಿ.

ಪತಿ ಪಾಂಡು ಶಾಪಕ್ಕೊಳಗಾಗಿ ಕುಂತಿಯನ್ನು ಸೇರುವ ಅವಕಾಶವನ್ನೇ ಕಳೆದುಕೊಳ್ಳುತ್ತಾನೆ. ಆಗ ವಂಶವನ್ನು ಮುಂದುವರಿಸುವ ಹೊಣೆ ಕುಂತಿಯ ಮೇಲೇರುತ್ತದೆ. ಈ ಹಂತದಲ್ಲಿ ತನಗೆ ದೂರ್ವಾಸರಿಂದ ಸಿಕ್ಕಿದ ಮಂತ್ರವನ್ನು ಆಕೆ ಬಳಸಿಕೊಂಡು ಐವರ ಜನನಕ್ಕೆ ಕಾರಣವಾಗುತ್ತಾಳೆ. ಈ ಐವರು ಪುತ್ರರನ್ನು ಆಕೆ ಎಷ್ಟು ಪ್ರೀತಿಯಿಂದ ಸಾಕುತ್ತಾಳೆ ಎಂದರೆ, ಮಾದ್ರಿಯಿಂದ ಹುಟ್ಟಿದ ನಕುಲ-ಸಹದೇವರು ಕೂಡ ಆಕೆಯನ್ನು ಸಂಪೂರ್ಣವಾಗಿ ತಾಯಿಯೆಂದು ಸ್ವೀಕರಿಸುತ್ತಾರೆ. ತನ್ನ ಪ್ರೀತಿಯಿಂದ ಈ ಐವರು ಮಕ್ಕಳಲ್ಲಿ ಒಗ್ಗಟ್ಟು ಮೂಡಿಸುತ್ತಾಳೆ. ಆ ಒಗ್ಗಟ್ಟೇ ಮಹಾಭಾರತ ಯುದ್ಧದಲ್ಲಿ ನಿರ್ಣಯಕವಾಗುವುದು.

Advertisement

-ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next