ಶಹಾಪುರ: ಪಂಡಿತ ಪಂಚಾಕ್ಷರಿ ಗವಾಯಿಗಳು ಅದ್ಭುತ ಸಾಧನೆ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಫಕೀರೇಶ್ವರ ಮಠದ ಗುರುಪಾದ ಶ್ರೀಗಳು ಹೇಳಿದರು. ನಗರದ ಫಕೀರೇಶ್ವರ ಮಠದ ಆವರಣದಲ್ಲಿ ಶ್ರೀಗುರು ಕೃಪಾ ಸಂಗೀತ ಸಾಂಸ್ಕೃತಿಕ ಕಲಾ ಸಂಸ್ಥೆ ಉದ್ಘಾಟನೆ ಮತ್ತು ಗದುಗಿನ ಗಾನಯೋಗಿ ಪಂಡಿತ ಪಂಚಾಕ್ಷರಿ ಅವರ 74ನೇ ಪುಣ್ಯಸ್ಮರಣೆ ಹಾಗೂ ಡಾ| ಪುಟ್ಟರಾಜ ಗವಾಯಿ ಅವರ 8ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಂಧ ಗುರು ಅಂಧ ಶಿಷ್ಯರಿಬ್ಬರೂ ಸಂಗೀತ ಮೂಲಕ ಜಗತ್ತನ್ನೆ ಬೆಳಗುತ್ತಾರೆ ಎಂದು ಗೊತ್ತಿರಲಿಲ್ಲ. ಪುಟ್ಟಯ್ಯನವರು 8 ವರ್ಷದ ಬಾಲಕನಿರುವಾಗ ಪಂಡಿತ ಪಂಚಾಕ್ಷರಿ ಮಡಿಲಿಗೆ ಒಪ್ಪಿಸಿದರಂತೆ, ಅಂಧ ಗುರು ಅಂಧ ಶಿಷ್ಯನನ್ನು ಪಡೆದು ಸಂಗೀತ ಮೂಲಕ ಜನರನ್ನು ಗೆಲ್ಲುತ್ತಾರೆ. ಇದು ಸರ್ವರಿಗೂ ಮಾದರಿಯಾಗಿದೆ ಎಂದರು.
ಪುಟ್ಟರಾಜರು ಕರ್ನಾಟಕ, ಹಿಂದೂಸ್ಥಾನಿ, ಟಬಲಾ, ಹಾರ್ಮೋನಿಯಂ, ಸಾರಂಗಿ ಮತ್ತು ಶಹನಾಯಿಗಳಲ್ಲಿ ಪರಿಣತ ಪಡೆದರು. ಮುಂದೆ ಅವರ ಸಂಗೀತ ಲೋಕ ಕಂಡು ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಅವರ ನಿತ್ಯ ಶ್ರದ್ಧಾ ಭಕ್ತಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಶರಣ ಸಂತರಂತೆ ಅವರ ಬದುಕಾಗಿತ್ತು. ಹೀಗಾಗಿ ಜನ ಅವರನ್ನು ಕಂಡು ಭಕ್ತಿಪೂರ್ವಕ ಕೈ ಮುಗಿಯುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ಚ.ಬ. ಸಂಸ್ಥಾನ ಬಸವಯ್ಯ ಶರಣರು ನೇತೃತ್ವ ವಹಿಸಿದ್ದರು. ವೀರಶೈವ ಸಮಾಜದ ಬಸವರಾಜೇಂದ್ರ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಡಾ| ಶರಣು ಗದ್ದುಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಮುಖಂಡ ಮಲ್ಲಣ ಮಡ್ಡಿ, ಚಂದ್ರಶೇಖರ ಆರಬೋಳ, ಸಿದ್ಲಿಂಗಪ್ಪ ಆನೇಗುಂದಿ, ಬಸವರಾಜ ಹಿರೇಮಠ, ಗುಂಡಪ್ಪ ತುಂಬಗಿ, ಅಡಿವೆಪ್ಪ ಜಾಕಾ, ಬಸವರಾಜ ಆನೇಗುಂದಿ ಇದ್ದರು.