ಉಡುಪಿ: ಬಹು ದಿನಗಳ ಜಿಲ್ಲಾಸ್ಪತ್ರೆಯ ಉನ್ನತೀಕರಣ ಕೂಗಿಗೆ ಇದೀಗ ಯುವಜನರ ಧ್ವನಿ ಸೇರ್ಪಡೆಯಾಗಿದೆ. ಕಳೆದ 18 ವರ್ಷಗಳಿಂದ ನನೆಗುದಿಗೆ ಬಿದ್ದ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಸಹಿ ಸಂಗ್ರಹ ಅಭಿಯಾನ ಪ್ರಾರಂಭವಾಗಿದೆ.
ಯುವ ಜನರು ಎಲ್ಲ ಭೇದವನ್ನು ಮರೆತು ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಧ್ವನಿಗೂಡಿಸಿದ್ದಾರೆ. ಯುವಕರ ತಂಡ ಶಾಸಕರನ್ನು ಭೇಟಿ ಮಾಡಿ ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬಡಜನರ ಪಾಲಿನ ಸಂಜೀವಿನಿಯಾಗಿದ್ದ ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಯುವ ಸಮುದಾಯ ಕಂಕಣ ಕಟ್ಟಿದೆ.
ಸಾಫ್ಟ್ವೇರ್ಎಂಜಿನಿಯರ್ ಕೂಗು
Our Udupi district hospital needs some support from the government(ನಮ್ಮ ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ಸರಕಾರದ ಸಹಾಯ ಬೇಕಿದೆ) ಎನ್ನುವ ಶೀರ್ಷಿಕೆಯಡಿಯಲ್ಲಿ ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಸಿಬಂದಿ ಹಾಗೂ ಕಟ್ಟಡಗಳನ್ನು ಒದಗಿಸುವಂತೆ ಒತ್ತಾಯಿಸಿ ಉಡುಪಿ ಸಾಫ್ಟ್ವೇರ್ ಎಂಜಿನಿಯರ್ ಪುನೀತ್ ಶೆಟ್ಟಿ ಜಿಲ್ಲಾಧಿಕಾರಿ ಅವರಿಗೆ CHANGE.ORG ಪೇಜ್ನಲ್ಲಿ ಪಿಟಿಶನ್ ಸಲ್ಲಿಸಿ, ಲಿಂಕ್ನ್ನು ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಈಗಾಗಲೇ ಸುಮಾರು 120ಕ್ಕೂ ಅಧಿಕ ಮಂದಿ ಸಹಿಯನ್ನು ಹಾಕಿದ್ದಾರೆ.
ಒಂದಾದ ಯುವಜನತೆ
ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಸೌಲಭ್ಯವನ್ನು ಒದಗಿಸುವಂತೆ ಕರಾವಳಿ ಯೂತ್ ಕ್ಲಬ್ ಉಡುಪಿ ಪರಿಶ್ರಮ ವಹಿಸುತ್ತಿದೆ. ಈಗಾಗಲೇ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ , ಜಿಲ್ಲಾಧಿಕಾರಿ ಜಿ. ಜಗದೀಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮುಂದೆ ಇತರ ಶಾಸಕರಾದ ಸುನೀಲ್ ಕುಮಾರ್, ಲಾಲಾಜಿ ಮೆಂಡನ್, ಸುಕುಮಾರ್ ಶೆಟ್ಟಿ ಅವರಿಗೂ ಮನವಿ ಸಲ್ಲಿಸುವ ಆಶಯ ಹೊಂದಿದ್ದಾರೆ.
Related Articles
ಒತ್ತಡ ಹೇರಬೇಕು
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಹಾಗೂ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಆರೋಗ್ಯ ಇಲಾಖೆಯ ಮೇಲೆ ಒತ್ತಡ ಹೇರಿ ಜಿಲ್ಲಾಸ್ಪತ್ರೆಯ ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯ.
ಮೇಲ್ದರ್ಜೆಗೇರಿಲ್ಲ
ಸರಕಾರ ಅಜ್ಜರಕಾಡು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ 18 ವರ್ಷವಾದರೂ ಇನ್ನೂ ಆಸ್ಪತ್ರೆಗೆ ಬೇಕಾಗಿರುವ ಸೌಲಭ್ಯವನ್ನು ಕಲ್ಪಿಸಲು ವಿಫಲವಾಗಿದೆ. ಮಲಗಿರುವ ಸರಕಾರವನ್ನು ಎಬ್ಬಿಸಲು ಸಾಮಾಜಿಕ ಜಾಲತಾಣಗಳು ಸಹಾಯಕ. ಈ ನಿಟ್ಟಿನಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದ್ದೇನೆ.
-ಪುನೀತ್ ಶೆಟ್ಟಿ, ಸಾಫ್ಟ್ವೇರ್ ಎಂಜಿನಿಯರ್ ಉಡುಪಿ
ಅಗತ್ಯ ಸೌಲಭ್ಯ ಒದಗಿಸಿ
ಉಡುಪಿ ಜಿಲ್ಲೆಯಾಗಿ ದಶಕಗಳೇ ಕಳೆದಿವೆ. ಆದರೆ ಜಿಲ್ಲಾ ಸ್ಪತ್ರೆಗೆ ಅಗತ್ಯವಿರು ಸೌಲಭ್ಯಗಳು ಇನ್ನೂ ದೊರಕಿಲ್ಲ. ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಅಧಿಕವಿದ್ದರೂ ಸೇವೆಯನ್ನು ನೀಡುತ್ತಿದೆ. ಈ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯವನ್ನು ನೀಡಿದರೆ ಮುಂದೆ ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವುದು ಖಚಿತ. ಈ ನಿಟ್ಟಿನಲ್ಲಿ ಜಿಲ್ಲೆಯ 5 ಶಾಸಕರು ಹಾಗೂ ಸಚಿವರು ಗಮನ ಹರಿಸಬೇಕು.
-ಅಶೋಕ್,
ಕರಾವಳಿ ಯೂತ್ ಕ್ಲಬ್, ಉಡುಪಿ
ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ
ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳುವಂತೆ ಯುವಕರು ಮನವಿಯನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಸಚಿವರು, ಪ್ರ. ಕಾರ್ಯದರ್ಶಿ, ಆಯುಕ್ತರ ಜತೆ ಚರ್ಚಿಸಲಾಗುತ್ತದೆ. ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ.
-ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವ. ಉಡುಪಿ