Advertisement

“ವಂದೇ ಮಾತರಂ’ಹಾಡಿಗೆ ವಿಭಿನ್ನ ರಾಗಗಳ ಮೋಡಿ

12:30 AM Mar 01, 2019 | |

 ಸುಮಾರು ಒಂದೂವರೆ ಶತಮಾನಗಳ ಹಿಂದೆ ರಚನೆಯಾದ, ಸ್ವಾತಂತ್ರ್ಯ ಹೋರಾಟದಲ್ಲಿ ,ಹೋರಾಟಗಾರರಲ್ಲಿ ಕಿಡಿ ಹಚ್ಚಿದ “ವಂದೇ ಮಾತರಂ’ ಹಾಡು, 1930ರಲ್ಲಿ ಉಡುಪಿ ರಥಬೀದಿಯಿಂದ “ವಂದೇ ಮಾತರಂ’ ಘೋಷವಾಕ್ಯದೊಂದಿಗೆ ಪ್ರಭಾತ್‌ ಭೇರಿಯಲ್ಲಿ ತೆರಳಿ ಉಪ್ಪಿನ ಸತ್ಯಾಗ್ರಹಕ್ಕೆ ಸಾಕ್ಷಿಯಾದ ಮಲ್ಪೆಯ ಕಡಲತೀರದಲ್ಲಿ ಫೆ. 9ರಂದು ಗೋಲ್ಡನ್‌ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಮಾಡಿತು. 

Advertisement

“ವಂದೇ ಮಾತರಂ’ ಹಾಡನ್ನು ಈಶಾನ್ಯ ರಾಜ್ಯಗಳು, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ 16 ರಾಜ್ಯಗಳ 183 ಹಾಡುಗಾರರು ವಿವಿಧ ರಾಗಗಳಲ್ಲಿ ಸಂಯೋಜನೆ ಮಾಡಿ ಹಾಡಿರುವ ಘಟನೆಗೆ ಈ ಮಾನ್ಯತೆ ದೊರಕಿದೆ. ಒಂದು ರಾಷ್ಟ್ರದ ಹಾಡಿಗೆ ಇಷ್ಟೊಂದು ಹಾಡುಗಾರರು ವಿಭಿನ್ನ ರಾಗಗಳಲ್ಲಿ ಹಾಡಿದ್ದು ಇದೇ ಪ್ರಥಮ. 

ಹೋದ ವರ್ಷ ಇದೇ ತಾಣದಲ್ಲಿ 5,320 ಕಾಲೇಜು ವಿದ್ಯಾರ್ಥಿಗಳು “ವಂದೇ ಮಾತರಂ’ ಹಾಡಿದಾಗಲೂ ಗೋಲ್ಡನ್‌ ಬುಕ್‌ ಆಫ್   ರೆಕಾ ರ್ಡ್ಸ್‌ ವಿಶ್ವ ದಾಖಲೆ ಎಂದು ಮಾನ್ಯ ಮಾಡಿತ್ತು. ಇಷ್ಟು ವಿದ್ಯಾರ್ಥಿಗಳು ಏಕಕಾಲದಲ್ಲಿ ಪೂರ್ತಿ ವಂದೇಮಾತರಂ ಹಾಡನ್ನು ಹಾಡಿರುವುದು ಪ್ರಥಮವಾಗಿತ್ತು. 

ರಾಷ್ಟ್ರಮಟ್ಟದ ಆಲ್ಬಮ್‌ ಸಾಂಗ್‌ ಸ್ಪರ್ಧೆಯಲ್ಲಿ ಸ್ವೀಕೃತಿಗೊಂಡ 183 ಕಲಾವಿದರ ವಿನ್ಯಾಸಗಳಲ್ಲಿ 12 ಹಾಡುಗಳನ್ನು ಅಂತಿಮ ಸ್ಪರ್ಧೆಗೆ ಆರಿಸಲಾಗಿತ್ತು. ಇದರಲ್ಲಿ ಜಗದೀಶ ಪುತ್ತೂರು ಅವರ ರಾಗ ಸಂಯೋಜನೆ ಪ್ರಥಮ ಬಹುಮಾನ ಗಳಿಸಿತು. ಜಗದೀಶ್‌ ಹಾಡಿಗೆ ಐದು ರಾಗಗಳನ್ನು ಸೇರಿಸಿದ್ದಾರೆ. ಮೊದಲ ಚರಣಕ್ಕೆ ವೃಂದಾವನೀ ಸಾರಂಗ, ಎರಡನೆಯ ಚರಣಕ್ಕೆ ವಾಸಂತಿ, ಮೂರನೆಯ ಚರಣಕ್ಕೆ ಶಿವರಂಜನಿ, ನಾಲ್ಕನೆಯ ಚರಣಕ್ಕೆ ರೇವತಿ, ಕೊನೆಯ ಚರಣಕ್ಕೆ ಮಧ್ಯಮಾವತಿ ಮತ್ತು ಸಾರಂಗ ಮಿಶ್ರ ರಾಗವನ್ನು ಸಂಯೋಜಿಸಿರುವುದು ಮೆಚ್ಚುಗೆಗೆ ಪಾತ್ರವಾಯಿತು. 

ದ್ವಿತೀಯ ಬಹುಮಾನ ಪಡೆದ ವಿನಯ ಕಿರಣ್‌ ಶೃಂಗೇರಿಯವರು ಉದಯರಾಗದಲ್ಲಿ (ಬಿಬಾಸ್‌) ಮತ್ತು ಶಿವಾನಿ ಕೊಪ್ಪ ಅವರು ವೃಂದಾವನಿ ಸಾರಂಗ್‌ ರಾಗದಲ್ಲಿ ಸಂಯೋಜಿಸಿದ್ದರು. ಶಿವಾನಿ ಕೊಪ್ಪ ಅವರಿಗೆ ಬೆಸ್ಟ್‌ ಯೂಟ್ಯೂಬ್‌ ಲೈಕ್‌ ಬಹುಮಾನವೂ ಬಂದಿದೆ. ಬೆಸ್ಟ್‌ ಸಿನೆಮಾಟೋಗ್ರಫಿ ಬಹುಮಾನ ಪಡೆದ ಸೌಮ್ಯಾ ಭಟ್‌ ಕಟೀಲು ಅವರು ಚಾರುಕೇಶಿ ರಾಗದಲ್ಲಿ, ಬೆಸ್ಟ್‌ ಟ್ಯೂನ್‌ ಬಹುಮಾನ ಪಡೆದ ಕೇರಳದ ಮಾನಸ ಅವರು ರೇವತಿ ರಾಗದಲ್ಲಿ ಸಂಯೋಜಿಸಿದ್ದರು . ಅಂತಿಮವಾಗಿ ಆಯ್ಕೆಗೊಂಡ 12 ಕಲಾವಿದರಲ್ಲಿ 9 ಮಂದಿ ಕರ್ನಾಟಕದವರೇ ಇದ್ದುದು ಕರ್ನಾಟಕದ ಕಲಾವಿದರ ಪ್ರೌಢಿಮೆ ತಿಳಿಯುತ್ತದೆ. ಇವರಲ್ಲದೆ ಇಬ್ಬರು ಕೇರಳ, ಒಬ್ಬರು ರಾಜಸ್ಥಾನದವರಿದ್ದರು. 

Advertisement

“ನಾವು ವಿಶಿಷ್ಟ ಶೈಲಿಯ ಸಂಗೀತ ಸಂಸ್ಕೃತಿ ಇರುವ ನಾಗಾಲ್ಯಾಂಡ್‌, ಅರುಣಾಚಲಪ್ರದೇಶ ಮೊದಲಾದ ಈಶಾನ್ಯ ರಾಜ್ಯಗಳಲ್ಲದೆ ಮಹಾರಾಷ್ಟ್ರ, ಹಿಮಾಚಲಪ್ರದೇಶಗಳಿಗೆ ಹೋಗಿದ್ದೆವು. ಉಳಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿದೆವು. ವಿಶ್ವ ದಾಖಲೆಗಾಗಿಯೇ ಇದನ್ನು ಕೈಗೊಳ್ಳಲಿಲ್ಲ. ಆದರೆ ಈ ಪ್ರಯತ್ನ ವಿಶ್ವ ದಾಖಲೆಯನ್ನು ಸೃಷ್ಟಿಸಿತು. 16 ರಾಜ್ಯಗಳ ಪೈಕಿ ಕರ್ನಾಟಕ, ಕೇರಳೀಯರ ಕಲಾಪ್ರೌಢಿಮೆ ಶ್ರೇಷ್ಠ ದರ್ಜೆಯಿಂದ ಕೂಡಿದೆ’ ಎನ್ನುತ್ತಾರೆ ಆಯೋಜಕರಾದ ಸಂವೇದನಾ ಫೌಂಡೇಶನ್‌ ಮುಖ್ಯಸ್ಥ ಪ್ರಕಾಶ್‌ ಮಲ್ಪೆಯವರು. 183 ಹಾಡುಗಳಲ್ಲಿ 22 ವೀಡಿಯೋಗಳನ್ನು 2.2 ಲಕ್ಷ ಜನರು ನೋಡಿದ್ದರು. ಮತ್ತೆ ಸಾಮಾಜಿಕ ಜಾಲತಾಣಕ್ಕೆ ಬಿಡುವ ಇರಾದೆ ಇದೆ. ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. 

 ಬಂಕಿಮ್‌ಚಂದ್ರ ಚಟರ್ಜಿಯವರು 1870ರಲ್ಲಿ “ವಂದೇ ಮಾತರಂ’ ರಚಿಸಿ 1881ರಲ್ಲಿ “ಆನಂದಮಠ’ ಕಾದಂಬರಿಯಲ್ಲಿ ಸೇರಿಸಿದ್ದರು. ಈ ಹಾಡಿಗೆ ಮೊದಲು ಸಂಗೀತ ಸಂಯೋಜನೆ ಮಾಡಿದವರು ಮತ್ತು 1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನದಲ್ಲಿ ಹಾಡಿದವರು ರವೀಂದ್ರನಾಥ ಠಾಗೋರ್‌. 1937ರ ಅಕ್ಟೋಬರ್‌ನಲ್ಲಿ ಇದನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. ಸ್ವಾತಂತ್ರ್ಯಕ್ಕೆ ಬಹಳಷ್ಟು ಕೊಡುಗೆ ನೀಡಿದ ಈ ಹಾಡಿಗೆ ಸ್ವಾತಂತ್ರಾéನಂತರ ರಾಷ್ಟ್ರಗೀತೆಯ ಮಾನ್ಯತೆ ಕೈತಪ್ಪಿದರೂ ತತ್ಸಮಾನ ಗೌರವ ದಕ್ಕಿದೆ. ಕಾಕತಾಳೀಯವೆಂಬಂತೆ ದೇಶದಲ್ಲಿ ಸ್ವಾತಂತ್ರ್ಯದ ಕಿಡಿ ಹಬ್ಬಿಸಿದ ವಂದೇಮಾತರಂ ಹಾಡಿನ ಸಾಂಪ್ರದಾಯಿಕ ರಾಗದ ಹೆಸರೂ “ದೇಶ್‌’. 1952ರಲ್ಲಿ “ಆನಂದಮಠ’ ಚಲನಚಿತ್ರದಲ್ಲಿ ಸಂಗೀತ ಸಂಯೋಜನೆ ಮಾಡಿದವರು ಹೇಮಂತಕುಮಾರ್‌. ಈಗ ಜನಸಾಮಾನ್ಯರ ಬಾಯಲ್ಲಿ ಗುಣುಗುಣಿಸುವುದು ಇದೇ ರಾಗ… 

 ಮಟಪಾಡಿ ಕುಮಾರಸ್ವಾಮಿ 

Advertisement

Udayavani is now on Telegram. Click here to join our channel and stay updated with the latest news.

Next