Advertisement

ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಸವಾಲು ದೊಡ್ಡದಿದೆ

07:45 AM Jun 17, 2020 | mahesh |

ಕೋವಿಡ್ ಸೋಂಕಿತರ ಸಂಖ್ಯೆ ಆಘಾತ ಹುಟ್ಟಿಸುವ ರೀತಿಯಲ್ಲಿ ಬೆಳೆಯುತ್ತಲೇ ಇದೆ. ಜೂನ್‌ 12ನೇ ತಾರೀಖೀನಿಂದ ಪ್ರತಿದಿನ 10 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಲಾರಂಭಿಸಿವೆ. ಟೆಸ್ಟ್‌ಗಳ ಸಂಖ್ಯೆ ಅಧಿಕವಾಗಿರುವುದರಿಂದ, ಸೋಂಕಿತರೂ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದಾರೆ ಎನ್ನುವ ವಾದದಲ್ಲಿ ಹುರುಳಿದೆಯಾದರೂ, ಅದೇ ಸಂಪೂರ್ಣ ಸತ್ಯವಲ್ಲ. ಲಾಕ್‌ಡೌನ್‌ ನಿಯಮ ಸಡಿಲಿಕೆಯಾದ ನಂತರದಿಂದ ದೇಶದಲ್ಲಿ ಸೋಂಕು ಪ್ರಸರಣ ಅಧಿಕವಾಗಿಬಿಟ್ಟಿದೆ.

Advertisement

ಈಗ ಬೇಸಿಗೆಯ ಧಗೆ ದೂರವಾಗಿ ಮಳೆ ಹನಿ ಬಂದಪ್ಪಳಿಸುತ್ತಿರುವ ವೇಳೆಯಲ್ಲೇ, ಮಳೆಗಾಲದಲ್ಲಿ ಕೋವಿಡ್ ಕಡಿಮೆಯಾಗುವುದೇ ಎನ್ನುವ ಚರ್ಚೆ ಆರಂಭವಾಗಿದೆ. ಆದರೆ, ಫೆಬ್ರವರಿ ತಿಂಗಳ ಆರಂಭದಲ್ಲಿ, ಅಂದರೆ ಕೊರೊನಾ ವೈರಸ್‌ ಭಾರತಕ್ಕೆ ಕಾಲಿಟ್ಟು ಕೆಲವೇ ದಿನಗಳಾಗಿದ್ದ ಹೊತ್ತಲ್ಲಿ, ಸುಡು ಬಿಸಿಲಿಗೆ ಕೊರೊನಾ ವೈರಸ್‌ ದುರ್ಬಲವಾಗಿಬಿಡುತ್ತದೆ ಎಂದೇ ಭಾವಿಸಲಾಗಿತ್ತು. ಹಲವು ತಜ್ಞರು ಕೂಡ ಇದೇ ಮಾತನ್ನೇ ಹೇಳಿದ್ದರು. ಆದರೆ, ಅದರಿಂದ ಕೊರೊನಾದ ವೇಗಕ್ಕೇನೂ ಪೆಟ್ಟು ಬೀಳಲಿಲ್ಲ. ಈಗ ಮಳೆಗಾಲ ಎದುರಾಗಿದ್ದು, ವೈರಸ್‌ನ ಮೇಲೆ, ಹಾಗೂ ಅದರ ಪ್ರಸರಣ ಶಕ್ತಿಯ ಮೇಲೆ ಮಳೆಯ ಪ್ರಭಾವ ಹೇಗಿರಲಿದೆ ಎನ್ನುವ ಬಗ್ಗೆ ಚರ್ಚೆಗಳು, ಭವಿಷ್ಯವಾಣಿಗಳು ಆರಂಭವಾಗಿದೆ. ಆದರೆ, ವೈರಾಣು ತಜ್ಞರು ಮತ್ತು ಸಾಂಕ್ರಾಮಿಕ ರೋಗ ತಡೆ ತಜ್ಞರು ಮಾತ್ರ ಕೋವಿಡ್‌-19 ಯಾವ ಕಾಲದಲ್ಲಿ ಹೇಗೆ ವರ್ತಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಹಲವು ವರ್ಷಗಳೇ ಬೇಕು ಎನ್ನುತ್ತಾರೆ. ಬೇಸಿಗೆ, ಮಳೆಗಾಲ, ಚಳಿಗಾಲದಲ್ಲಿ ವೈರಸ್‌ನ ವರ್ತನೆಯನ್ನು ಹಲವು ವರ್ಷಗಳವರೆಗೆ ಪರೀಕ್ಷಿಸಿ, ಅದನ್ನು ಅನ್ಯ ದೇಶಗಳೊಂದಿಗೆ ಹೋಲಿಸಿ ನೋಡಿದ ಮೇಲೆಯೇ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತದೆ ಎನ್ನುವುದು ವೈರಾಣು ತಜ್ಞರ ಅಭಿಪ್ರಾಯ.

ಅಮೆರಿಕದ ಸೆಂಟರ್‌ ಫಾರ್‌ ಡಿಸೀಸ್‌ ಪ್ರಿವೆನ್ಶನ್‌ನ ಸದಸ್ಯ, ಹಿರಿಯ ವಿಜ್ಞಾನಿ ಡಾ| ಮಾರ್ಕ್‌ ಅಲೆನ್‌, “”ಇನ್‌ಫ್ಲ್ಯೂಯೆನಾ ಇರಲಿ ಅಥವಾ ಶ್ವಾಸಕೋಶಕ್ಕೆ ತೊಂದರೆ ಮಾಡುವ ವಿವಿಧ ವೈರಸ್‌ಗಳಿರಲಿ…ಈಗಲೂ ಅವು ಯಾವ ಕಾಲಕ್ಕೆ ಹೇಗೆ ವರ್ತಿಸುತ್ತವೆ ಎನ್ನುವುದಕ್ಕೆ ನಿಖರ ಉತ್ತರ ದೊರೆತಿಲ್ಲ” ಎನ್ನುತ್ತಾರೆ.

ಈ ಕಾರಣಕ್ಕಾಗಿಯೇ ಮಳೆಗಾಲದಲ್ಲಿ ವೈರಸ್‌ ಹಾವಳಿ ಕಡಿಮೆಯಾಗಿಬಿಡುತ್ತದೆ, ಚಳಿಗಾಲದಲ್ಲಿ ಹೊರಟುಹೋಗುತ್ತದೆ ಎಂದೆಲ್ಲ ತಪ್ಪು ಸಂದೇಶ ಹರಿದಾಡಲಾರಂಭಿಸಿದರೆ, ಜನರಿಗೆ ಕೊರೊನಾ ಬಗ್ಗೆ ಅಸಡ್ಡೆ ಮೂಡಿಬಿಡುತ್ತದೆ. ಹಾಗೆ, ಆಗುವುದು ತೀರಾ ಅಪಾಯಕಾರಿ ಎನ್ನುವುದು ನೆನಪಿರಲಿ. ಈಗಿನ್ನೂ ದೇಶದಲ್ಲಿ ಕೊರೊನಾ ಉತ್ತುಂಗಕ್ಕೇರಿಲ್ಲ. ಹೀಗಾಗಿ, ಸಾಂಕ್ರಾಮಿಕದ ಹಾವಳಿ ಅಧಿಕವಾಗಿರುವುದರಿಂದ ಈಗ ಮೊದಲಿಗಿಂತಲೂ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next