Advertisement

ಗಣಿಜಿಲ್ಲೆ ಅಭ್ಯರ್ಥಿಗಳ ಭವಿಷ್ಯ ಇಂದು ಪ್ರಕಟ

07:43 AM May 23, 2019 | Team Udayavani |

ಬಳ್ಳಾರಿ: ಗಣಿನಾಡು ಬಳ್ಳಾರಿ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಮತದಾನ ನಡೆದು ಬರೋಬ್ಬರಿ ತಿಂಗಳ ಬಳಿಕ ಅಭ್ಯರ್ಥಿಗಳ ಭವಿಷ್ಯ ಗುರುವಾರ ಹೊರಬೀಳಲಿದ್ದು, ಜನರ ಕುತೂಹಲಕ್ಕೆ ತೆರೆ ಬೀಳಲಿದೆ.

Advertisement

ಮತದಾನದ ನಂತರ ಯಾರಿಗೆ ಸೋಲು, ಗೆಲುವು ಎಂಬ ಲೆಕ್ಕಾಚಾರ ತಮ್ಮ ಅಭ್ಯರ್ಥಿಗಳ ಪರ ಬೆಟ್ಟಿಂಗ್‌ ಇವೆಲ್ಲ ಒಂದೆಡೆ ಕುತೂಹಲ ಮೂಡಿಸುತ್ತಿದ್ದರೆ, ಮತ್ತೂಂದೆಡೆ ಚುನಾವಣೋತ್ತರ ಸಮೀಕ್ಷೆಗಳು ಅಭ್ಯರ್ಥಿಗಳ ಹಾರ್ಟ್‌ಬೀಟ್ ಹೆಚ್ಚುವಂತೆ ಮಾಡಿವೆ.

ಬಳ್ಳಾರಿ ಮೀಸಲು ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದರೂ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ, ಹಾಗೂ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪರ ನಡುವೆ ನೇರ ಫೈಟ್ ಏರ್ಪಟ್ಟಿತ್ತು. ಸ್ಥಳೀಯ ಹಾಗೂ ಹೊರಗಿನ ಅಭ್ಯರ್ಥಿ, ಅಕ್ಷರಸ್ಥ-ಅನಕ್ಷರಸ್ಥ ಹೀಗೆ ಹಲವು ಆರೋಪ, ಪ್ರತ್ಯಾರೋಪಗಳು ಚರ್ಚೆಗೆ ಗ್ರಾಸವಾಗಿದ್ದವು. ಉಭಯ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಭರ್ಜರಿ ಪ್ರಚಾರ ನಡೆಸಿದ್ದರು. ರಾಜಕೀಯದ ಎಲ್ಲ ತಂತ್ರ-ಪ್ರತಿತಂತ್ರ, ವರಸೆಗಳ ಪ್ರಯೋಗ ಆಗಿತ್ತು. ಆದರೆ ಅಭ್ಯರ್ಥಿಗಳಿಗೆ ಜಿಲ್ಲೆಯ ಮತದಾರ ಪ್ರಭುಗಳು ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ? ಯಾರನ್ನು ಗೆಲ್ಲಿಸಲಿದ್ದಾರೆ ಎಂಬೆಲ್ಲ ಪ್ರಶ್ನೆಗಳಿಗೆ ಕೆಲವೇ ಕ್ಷಣಗಳಲ್ಲಿ ಉತ್ತರ ದೊರೆಯಲಿದೆ. ಏ.23ರಂದು ಮತದಾನ ಪ್ರಕ್ರಿಯೆ ನಡೆದ ಬಳಿಕ ಒಂದಷ್ಟು ರಿಲ್ಯಾಕ್ಸ್‌ ಮೂಡ್‌ನ‌ಲ್ಲಿದ್ದ ಉಭಯ ಪಕ್ಷಗಳ ಅಭ್ಯರ್ಥಿಗಳ ಹೃದಯಬಡಿತ ಈಗ ಮತ್ತೆ ಹೆಚ್ಚಿದೆ.

ಏಜೆಂಟ್‌ಗಳಿಗೆ ತರಬೇತಿ: ನಗರದ ರಾವ್‌ ಬಹದ್ದೂರ್‌ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಅದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಆಯಾ ರಾಜಕೀಯ ಪಕ್ಷದಿಂದ ವಿಧಾನಸಭಾ ಕ್ಷೇತ್ರವಾರು ಏಜೆಂಟ್‌ಗಳನ್ನು ನಿಯೋಜಿಸಲು ಕಾಂಗ್ರೆಸ್‌-ಬಿಜೆಪಿ ಸೇರಿ ಇನ್ನಿತರೆ ರಾಜಕೀಯ ಪಕ್ಷಗಳ ಮುಖಂಡರು ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿ ಬಿಜಿಯಾಗಿದ್ದಾರೆ. ಎಣಿಕೆ ಸಂದರ್ಭದಲ್ಲಿ ಏಜೆಂಟ್‌ಗಳು ಗಮನಿಸಬೇಕಾದ ಅಂಶಗಳೇನು? ಅಧಿಕಾರಿಗಳು ಮತಗಳುಳ್ಳ ಕಂಟ್ರೋಲ್ ಯೂನಿಟ್ ಯಂತ್ರವನ್ನು ತೋರಿಸುತ್ತಿದ್ದಂತೆ ಮತಗಳನ್ನು ಬರೆದುಕೊಳ್ಳುವುದು? ಏನಾದರೂ ವ್ಯತ್ಯಾಸಗಳಿವೆಯಾ? ಎಂಬಿತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಿ ಏಜೆಂಟ್‌ಗಳನ್ನು ಸನ್ನದ್ಧಗೊಳಿಸುತ್ತಿದ್ದಾರೆ. ಅಲ್ಲದೇ, ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಇಷ್ಟದೇವರ ಮೊರೆ ಹೋಗಿದ್ದು, ವಿಶೇಷ ಪೂಜೆ ಸಲ್ಲಿಸಿ ಫಲಿತಾಂಶ ತಮ್ಮ ಪರವಾಗಿ ಬರುವಂತೆ ಪ್ರಾರ್ಥಿಸಿ ದೇವರಲ್ಲಿ ಮೊರೆಯಿಡುತ್ತಿದ್ದಾರೆ ಎನ್ನಲಾಗುತ್ತಿದೆ.

ಬೀಡುಬಿಟ್ಟ ರಾಜಕೀಯ ಮಂದಿ: ಲೋಕಸಭೆ ಸಮರ ನಡೆದ ಬಳಿಕ ತಿಂಗಳಿಂದ ಜಿಲ್ಲೆಯಲ್ಲಿ ಕಾಣಿಸಿಕೊಳ್ಳದ ಅಭ್ಯರ್ಥಿಗಳು, ಮುಖಂಡರು ಮೇ 23ರಂದು ಫಲಿತಾಂಶದ ಹಿನ್ನೆಲೆಯಲ್ಲಿ ಪುನಃ ಜಿಲ್ಲೆಗೆ ವಾಪಸ್ಸಾಗಿದ್ದು, ನಗರದ ಹೊಟೇಲ್, ಲಾಡ್ಜ್ ಗಳಲ್ಲಿ ಬೀಡುಬಿಟ್ಟಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು, ಮುಖಂಡರು ಜಿಲ್ಲಾ ಕೇಂದ್ರದಲ್ಲಿ ನೆಲೆಸಿದ್ದಾರೆ. ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದು ಕೊಳ್ಳುತ್ತಿದ್ದಂತೆ ಸಂಭ್ರಮ ಆಚರಿಸಲು, ಜಯಗಳಿಸುತ್ತಿದ್ದಂತೆ ಮೆರವಣಿಗೆ ನಡೆಸಲು ಉಭಯ ಪಕ್ಷಗಳ ಕಾರ್ಯಕರ್ತರು ತಯಾರಿಯಲ್ಲಿ ತೊಡಗಿದ್ದಾರೆ.

Advertisement

ಪ್ರತಿಷ್ಠೆಯ ಕಣವಾದ ಬಳ್ಳಾರಿ ಕ್ಷೇತ್ರ: ಬಳ್ಳಾರಿ ಲೋಕಸಭೆ ಕ್ಷೇತ್ರ ಕಾಂಗ್ರೆಸ್‌-ಬಿಜೆಪಿ ಪಕ್ಷಗಳ ಮಟ್ಟಿಗೆ ಪ್ರತಿಷ್ಠೆಯ ಕಣವಾಗಿದೆ. ಕಳೆದ ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಬಿಜೆಪಿ, ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲು ಶತಾಯಗತಾಯ ಪ್ರಯತ್ನದಲ್ಲಿ ತೊಡಗಿದ್ದು, ಕ್ಷೇತ್ರವನ್ನು ಪುನಃ ತಮ್ಮ ವಶಕ್ಕೆ ಪಡೆಯುವ ಪ್ರಯತ್ನದಲ್ಲಿದೆ. ಇನ್ನು ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದು, ಲೋಕಸಭೆ ಕ್ಷೇತ್ರದಲ್ಲೂ ಜಯಗಳಿಸುವ ಮೂಲಕ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಗಣಿ ಜಿಲ್ಲೆ ಬಳ್ಳಾರಿಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ತವಕ ಕಾಂಗ್ರೆಸ್‌ನವರದ್ದಾಗಿದೆ. ಹೀಗಾಗಿ ಕ್ಷೇತ್ರವನ್ನು ಉಭಯ ಪಕ್ಷಗಳ ಮುಖಂಡರು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದ್ದು, ಮತದಾರರು ಯಾವ ಪಕ್ಷಕ್ಕೆ ಮಣೆಹಾಕಿದ್ದಾರೆ ಎಂಬ ಕುತೂಹಲಕ್ಕೆ ಕೆಲವೇ ಕ್ಷಣಗಳಲ್ಲಿ ತೆರೆಬೀಳಲಿದೆ.

•ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next