Advertisement

ಬಿಎಸ್‌ವೈ ತಂತ್ರಕ್ಕೆ ಸಿದ್ದು ಪಡೆ ಅತಂತ್ರ

12:39 PM May 25, 2019 | Team Udayavani |

ಹಾವೇರಿ: “ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಭಾರೀ ಪ್ರಚಾರ ನಡೆಸಿದ್ದರು. ಇವರಿಬ್ಬರಲ್ಲಿ ಯಡಿಯೂರಪ್ಪ ಅವರ ಶ್ರಮ ಗೆಲುವಿನೊಂದಿಗೆ ಸಾರ್ಥಕತೆ ಪಡೆದುಕೊಂಡರೆ, ಸಿದ್ದರಾಮಯ್ಯ ಅವರ ಶ್ರಮ ಸೋಲು ಕಂಡಿದೆ’. ಇದು ಹಾವೇರಿ ಲೋಕಸಭೆ ಕ್ಷೇತ್ರದ ಜನತೆಯ ವಿಶ್ಲೇಷಣೆ.

Advertisement

ಚುನಾವಣಾ ಪ್ರಚಾರಕ್ಕಾಗಿ ಮೂರ್‍ನಾಲ್ಕು ಬಾರಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದಿದ್ದರು. ಅಭ್ಯರ್ಥಿಗಳ ತುರುಸಿನ ಸ್ಪರ್ಧೆ ಜೊತೆಗೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರ ಪ್ರತಿಷ್ಠೆಗೂ ಕ್ಷೇತ್ರ ಇಂಬು ನೀಡಿತ್ತು. ಇಬ್ಬರೂ ನಾಯಕರು ತಮ್ಮ ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ಮಾಡಿದ್ದರು. ಇಬ್ಬರೂ ಪರಸ್ಪರ ವಾಕ್ಸಮರ ನಡೆಸಿದ್ದರು. ಇವರಿಬ್ಬರ ರಾಜಕೀಯವನ್ನು ಅವಲೋಕಿಸಿ ಮತದಾರರು ಶಿವಕುಮಾರ ಉದಾಸಿಯವರನ್ನು ಬೆಂಬಲಿಸುವ ಮೂಲಕ ಯಡಿಯೂರಪ್ಪ ಅವರ ಕೈ ಬಲಪಡಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ಸಿ.ಎಂ. ಉದಾಸಿ ಹಾಗೂ ಅವರ ಪುತ್ರ ಶಿವಕುಮಾರ ಉದಾಸಿಯವರು ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತರಾಗಿದ್ದು ಈ ಆತ್ಮೀಯತೆಯ ಕಾರಣದಿಂದಾಗಿಯೇ ಯಡಿಯೂರಪ್ಪ ಹಾವೇರಿ ಕ್ಷೇತ್ರದಲ್ಲಿ ಹೆಚ್ಚು ಓಡಾಡಿ ಶಿವಕುಮಾರ ಉದಾಸಿ ಪರ ಪ್ರಚಾರ ಮಾಡಿದ್ದರು. ಅವರ ಜತೆಗೆ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಕೈಜೋಡಿಸಿದ್ದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಿ.ಆರ್‌. ಪಾಟೀಲ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕ್ಷೇತ್ರದಲ್ಲಿ ಎರಡೂಮೂರು ಬಾರಿ ಬಂದು ಪ್ರಚಾರ ನಡೆಸಿದ್ದರು. ಕ್ಷೇತ್ರಕ್ಕೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಸಹ ಬಂದಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಎಲ್ಲ ರಾಜ್ಯ ನಾಯಕರು ಆಗಮಿಸಿದ್ದರು. ಈ ಎಲ್ಲ ನಾಯಕರ ಪ್ರಚಾರಕ್ಕೆ ಕಿವಿಗೊಡದ ಮತದಾರರು ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಿದ್ದಾರೆ.

ತಾರಾ ಪ್ರಚಾರಕರು: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಶ್ರುತಿ, ಮಾಳವಿಕಾ ಪ್ರಚಾರ ಮಾಡಿದ್ದರು. ಕಾಂಗ್ರೆಸ್‌ ಪರ ನಟ ಮುಖ್ಯಮಂತ್ರಿ ಚಂದ್ರು ಮತ ಪ್ರಚಾರ ಮಾಡಿದ್ದರು. ಆದರೆ, ಕ್ಷೇತ್ರದ ಮತದಾರರು ಮುಖ್ಯಮಂತ್ರಿ ಚಂದ್ರು ಅವರ ಮಾತಿಗೆ ಮರುಳಾಗದೇ ಮೋದಿ ಅಲೆಯಲ್ಲಿ ತೇಲಿ ಹೋದರು.

Advertisement

ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು, ತಾರಾ ಪ್ರಚಾರದ ಜೊತೆಗೆ ಬಿಜೆಪಿಗೆ ಬಹುದೊಡ್ಡ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿದ್ದು ಮೋದಿ ಅಲೆ. ಅದರಲ್ಲಿಯೂ ಮೋದಿ ಸರ್ಕಾರದ ಅವಧಿಯಲ್ಲಿ ನಡೆದ ಸರ್ಜಿಕಲ್‌ ಸ್ಟ್ರೆ „ಕ್‌ ಮತದಾರರನ್ನು ಹೆಚ್ಚು ಸೆಳೆಯಿತು.

ಉಪ್ಪಿಗೆ ಸಿಕ್ಕಿಲ್ಲ ಮನ್ನಡೆ
ಉತ್ತಮ ಪ್ರಜಾಕೀಯ ಪಕ್ಷದ ಪರ ಪ್ರಚಾರಕ್ಕಾಗಿ ರಿಯಲ್ ಸ್ಟಾರ್‌ ಉಪೇಂದ್ರ ಒಂದು ದಿನ ಕ್ಷೇತ್ರಕ್ಕೆ ಬಂದಿದ್ದರು. ತಮ್ಮ ಅಭ್ಯರ್ಥಿಪರ ಮಾಧ್ಯಮಗೋಷ್ಠಿಯ ಮೂಲಕ ಪ್ರಚಾರ ನಡೆಸಿದ್ದರು. ಆದರೆ, ಕ್ಷೇತ್ರದ ಮತದಾರ ನಟ ಉಪೇಂದ್ರ ಅವರ ಮಾತಿನ ಮೋಡಿಗೆ ಮರುಳಾಗದೆ ಮೋದಿ ಅಲೆಯಲ್ಲಿ ತೇಲಿಹೋದರು. ಪಕ್ಷದ ಅಭ್ಯರ್ಥಿ ಈಶ್ವರ ಪಾಟೀಲ ಕೇವಲ 7024 ಮತಗಳಿಗೆ ತೃಪ್ತಿಪಡಬೇಕಾಯಿತು.

„ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next