Advertisement

ರಣ ಬಿಸಿಲಿಗೆ ಗಡಿ ಜಿಲ್ಲೆ ಹೈರಾಣ

02:26 PM Apr 26, 2019 | pallavi |

ಚಾಮರಾಜನಗರ: ರಾಜ್ಯದ ಅಲ್ಲಲ್ಲಿ ಸ್ವಲ್ಪವಾದರೂ ಮಳೆಯಾಗುತ್ತಿದ್ದರೆ, ಗಡಿ ಜಿಲ್ಲಾ ಕೇಂದ್ರವಾದ ಚಾಮರಾಜನಗರ ಪಟ್ಟಣದಲ್ಲಿ ಮಳೆ ಬೀಳದ ಕಾರಣ, ಬಿಸಿ ಲಿನ ತಾಪ ಹಾಗೂ ವಾತಾವರಣದಲ್ಲಿ ಉಷ್ಣಾಂಶ ಏರಿ ಕೆಯಾಗಿ ಜನರು ಸೆಖೆಯಿಂದ ತತ್ತರಿಸುವಂತಾಗಿದೆ.

Advertisement

ನಗರದಲ್ಲಿ ಏಪ್ರಿಲ್ ತಿಂಗಳಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇದುವರೆಗೂ 39 ಡಿಗ್ರಿ ಅಥವಾ 38 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗುತ್ತಲೇ ಇದೆ. ಮಳೆ ಬೀಳ ದಿರುವುದು ತಾಪಮಾನ ಕಡಿಮೆಯಾಗದಿರಲು ಕಾರಣ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಅಲ್ಲಲ್ಲಿ ಮಳೆ ಯಾಗಿದೆ. ತಾಲೂಕಿನಲ್ಲಿ ಹದ ಮಳೆ ಬಿದ್ದಿಲ್ಲ. ಜಿಲ್ಲಾ ಕೇಂ ದ್ರದಲ್ಲ ಂತೂ 10 ನಿಮಿಷ ಕಾಲ ಸಾಧಾರಣ ಮಳೆ ಯೂ ಸುರಿ ದಿಲ್ಲ. ಮಂಗಳವಾರ ಸಂಜೆ ಒಂದೈದು ನಿಮಿ ಷ ತುಂತು ರು ಮಳೆ ಬಂದು ಆಸೆ ಮೂಡಿಸಿ ಮಾಯ ವಾ ಯಿತು. ಆ ಮಳೆ ಒಂದು ಕಡೆ ಬಿದ್ದಿದೆ. ಇನ್ನೊಂದು ಕಡೆಗೆ ಇಲ್ಲ.

ಛತ್ರಿ ಅನಿವಾರ್ಯ: ಹೀಗಾಗಿ ಜಿಲ್ಲಾ ಕೇಂದ್ರದಲ್ಲಿ ಸೂರ್ಯ ಧಗ ಧಗಿಸುತ್ತಿದ್ದಾನೆ. ಕೆಂಡದಂಥ ಬಿಸಿಲು ಜನರನ್ನು ಕಂಗೆಡುವಂತೆ ಮಾಡಿದೆ. ಬಿಸಿಲಿಗೆ ಮೈ ಕೊಡಲಾರದಷ್ಟು ತಾಪ ಹೆಚ್ಚಿದೆ. ನಗರದ ಜನರು ಹೈರಾಣಾಗಿದ್ದಾರೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ.

ರಸ್ತೆಗೆ ಬರಬೇಕಾದರೆ ಛತ್ರಿ ಅನಿವಾರ್ಯವಾಗಿದೆ. ವಾಹನ ಸವಾರಿ ಮಾಡುವವರು ಕಪ್ಪು ಕನ್ನಡಕಗಳನ್ನು ಅವಲಂಬಿಸಿದ್ದಾರೆ. ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು ಸನ್‌ ಬರ್ನ್ ಭಯದಿಂದ ಮುಖವನ್ನು ಪೂರ್ತಿ ಆವರಿಸುವಂತೆ ಸ್ಕಾರ್ಪ್‌ಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ.

ಮರಗಳಿಲ್ಲದ್ದೂ ಬೇಗೆ ಹೆಚ್ಚಲು ಕಾರಣ: ನಗರದ ಪ್ರಮುಖ ರಸ್ತೆಗಳಲ್ಲಿ ಅಗಲೀಕರಣದ ನೆಪವೊಡ್ಡಿ ಸಾವಿರಾರು ಮರಗಳನ್ನು ಒಂದೆರಡು ವರ್ಷಗಳ ಹಿಂದೆ ಕಡಿದು ಹಾಕಲಾಯಿತು. ಹೀಗಾಗಿ ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಒಂದೂ ಮರಗಳಿಲ್ಲ. ಡೀವಿಯೇಷನ್‌ ರಸ್ತೆಯಲ್ಲಂತೂ ಗಿಡಮರಗಳ ಸುಳಿವೇ ಇಲ್ಲ. ನ್ಯಾಯಾಲಯ ರಸ್ತೆಯಲ್ಲೂ ಸಹ ಮರಗಳನ್ನು ಕಡಿದು ಹಾಕಿದ್ದು, ಈಶ್ವರಿ ಸಂಗೀತ ಸಾಮಾಜಿಕ ಟ್ರಸ್ಟ್‌ನ ವೆಂಕಟೇಶ್‌ ಹಾಕಿರುವ ಗಿಡಗಳು ಈಗಷ್ಟೇ ಬೆಳೆಯುತ್ತಿವೆ. ರಸ್ತೆಯಲ್ಲಿ ಮರಗಳೂ ಇಲ್ಲದ್ದರಿಂದ ನೆರಳಿಲ್ಲದೇ ಪಾದಚಾರಿಗಳು ಬಿಸಿಲು, ಬೆವರಿನಿಂದ ಬಸವಳಿಯುತ್ತಿದ್ದಾರೆ. ನಗರದ ರಸ್ತೆಗಳೆಲ್ಲ ಸಿಮೆಂಟ್ ಕಾಂಕ್ರೀಟ್ ಆಗಿರುವುದರಿಂದ ಬಿಸಿಲನ ಕಾವು ಇನ್ನಷ್ಟು ಹೆಚ್ಚಾಗಿದೆ.

Advertisement

ತಂಪು ಪಾನೀಯ, ಕಲ್ಲಂಗಡಿ ಮಾರಾಟ: ಬೇಸಿಗೆಯ ಬೇಗೆಯನ್ನು ತಣಿಸಿಕೊಳ್ಳಲು ಜನರು ಎಳನೀರು, ತಂಪು ಪಾನೀಯ, ಕಲ್ಲಂಗಡಿ ಹಣ್ಣು, ಮಜ್ಜಿಗೆ, ಐಸ್‌ಕ್ರೀಂ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಇವುಗಳ ಮಾರಾಟ ಹೆಚ್ಚಳವಾಗಿದೆ. ಎಳನೀರಿಗೆ ಡಿಮ್ಯಾಂಡ್‌ ಹೆಚ್ಚಾಗಿದ್ದು, ನಗರಕ್ಕೆ ಪೂರೈಕೆ ಕಡಿಮೆಯಾಗಿದೆ. ಪ್ರತಿದಿನ ಬಂದ ಲೋಡ್‌ ಆದಷ್ಟು ಬೇಗನೆ ಖಾಲಿ ಯಾಗುತ್ತಿದೆ. ತಂಪು ಪಾನೀಯದ ಅಂಗಡಿಗಳಲ್ಲಿ 10 ರೂ.ಗಳಿಗೆ ನೀಡುವ ಜ್ಯೂಸ್‌ಗೆ ಭಾರಿ ಬೇಡಿಕೆಯಿದೆ. ಹೆಚ್ಚು ಹಣ ಕೊಡುವ ಶಕ್ತಿಯಿರುವವರು ಮೂಸಂಬಿ, ಕಿತ್ತಳೆ, ಸೇಬು ಹಣ್ಣಿನ ರಸ ಕುಡಿಯುತ್ತಾರೆ.

ಕಲ್ಲಂಗಡಿ ಬೇಡಿಕೆ: ಐಸ್‌ಕ್ರೀಂ ಅಂಗಡಿಗಳಲ್ಲಿ ಮಾರಾಟ ಹೆಚ್ಚಾಗಿದೆ. ಅಮುಲ್, ಜಾಯ್‌, ಅರುಣ್‌, ಡೈರಿಡೇ ಮತ್ತಿತರ ಬ್ರಾಂಡ್‌ ಗಳ ಐಸ್‌ಕ್ರೀಂಗಳು ಗ್ರಾಹಕರ ದೇಹವನ್ನು ತಂಪಾಗಿಸುತ್ತಿವೆ. ಪ್ರತಿ ದಿನ ಲಾರಿಗಳಲ್ಲಿ ಲೋಡ್‌ಗಟ್ಟಲೆ ಕಲ್ಲಂಗಡಿ ನಗರಕ್ಕೆ ಬಂದಿಳಿಯುತ್ತಿದೆ. ಅಷ್ಟೇ ವೇಗವಾಗಿ ಕಲ್ಲಂಗಡಿ ಮಾರಾಟವಾಗುತ್ತಿದೆ. ನಗರದ ಜನರು ಸ್ಥಳದಲ್ಲಿ ಹಣ್ಣನ್ನು ತಿನ್ನುವುದರ ಜೊತೆಗೆ ಒಂದೆರಡು ಹಣ್ಣು ಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಕಲ್ಲಂಗಡಿ ಹಣ್ಣಿನ ಬೆಲೆಯೂ ಪ್ರತಿ ಕೆಜಿಗೆ 25 ರಿಂದ 30ರೂ.ವರೆಗೆ ಮಾರಾಟವಾಗುತ್ತಿದೆ. ಮಿಣಕೆ ಹಣ್ಣಿಗೂ ಬೇಡಿಕೆಯಿದೆ. ಬೆಲ್ಲ ಹಾಕಿ ಮಾಡುವ ಮಿಣಕೆ ಹಣ್ಣಿನ ಪಾನಕ ರುಚಿಕರವಾಗಿದ್ದು, ಮಿಣಕೆ ಹಣ್ಣು ತನ್ನದೇ ಆದ ಬೇಡಿಕೆ ಗಳಿಸಿದೆ.

ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದೆ. 10 ರೂ.ಗೆ ನಾಲ್ಕು ದೊರಕುತ್ತಿದ್ದ ದಪ್ಪ ಹಣ್ಣಿಗೆ ಈಗ ಒಂದಕ್ಕೇ 10 ರೂ. ನೀಡಬೇಕಾಗಿದೆ. ಸಣ್ಣ ಗಾತ್ರದ ನಿಂಬೆ ಹಣ್ಣಿಗೆ 5 ರೂ.ಗಳಾಗಿವೆ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next