Advertisement

ಶಾಲೆ ಬ್ಯಾಗ್‌ ಭಾರ ಇಳಿಸುವುದಕ್ಕೆ ಬರಲಿದೆ ಬುಕ್‌ ಬ್ಯಾಂಕ್‌

06:00 AM Jun 28, 2018 | |

ಉಡುಪಿ: ವಿದ್ಯಾರ್ಥಿಗಳ ಮಣಭಾರದ ಶಾಲೆ ಚೀಲದ ಹೊರೆ ತಗ್ಗಿಸಲು ಶಿಕ್ಷಣ ಇಲಾಖೆ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಇದಕ್ಕೆ ಪೂರಕವಾಗಿ ಈ ವರ್ಷದಿಂದ ಶಾಲೆಗಳಲ್ಲಿ ಬುಕ್‌ ಬ್ಯಾಂಕ್‌ ಆರಂಭಕ್ಕೆ ಆದೇಶಿಸಲಾಗಿದೆ.  ಬುಕ್‌ ಬ್ಯಾಂಕ್‌ನಿಂದಾಗಿ ಬ್ಯಾಗ್‌ ಭಾರ ಇಳಿಯಲಿದೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಜೂ.30ರಿಂದ ಎಲ್ಲ ಶಾಲೆಗಳಲ್ಲಿಯೂ ಪ್ರತಿ ತಿಂಗಳ ಕೊನೆಯ ಶನಿವಾರದಂದು ಬ್ಯಾಗ್‌ ರಹಿತ ದಿನವನ್ನಾಗಿ ಮಾಡಲು ಸೂಚಿಸಲಾಗಿದೆ.
  
ಏನಿದು ಬುಕ್‌ ಬ್ಯಾಂಕ್‌? 
ಪಠ್ಯ ಪುಸ್ತಕಗಳನ್ನು ಶಾಲೆಯಲ್ಲಿ ಇಡಲು ವ್ಯವಸ್ಥೆ. ಇದರಿಂದ ನಿತ್ಯವೂ ವಿದ್ಯಾರ್ಥಿ ಅಗತ್ಯವಿದ್ದರೂ, ಇಲ್ಲದಿದ್ದರೂ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಕಿಲ್ಲ. ಹೀಗೆ ಮಾಡುವುದರಿಂದ ಹೊರೆ ಕಡಿಮೆ
ಯಾಗಲಿದೆ. ಪುಸ್ತಕಗಳನ್ನು ಜೋಪಾನ ವಾಗಿಡುವುದಕ್ಕೆ ವ್ಯವಸ್ಥೆಯೂ ಆಗಲಿದೆ. 

Advertisement

ಹಳೆ ಪುಸ್ತಕ ಬುಕ್‌ ಬ್ಯಾಂಕ್‌ಗೆ
ಸದ್ಯ ಸರಕಾರಿ ಶಾಲೆಗಳಲ್ಲಿ ಪಠ್ಯ

ಪುಸ್ತಕಗಳನ್ನು ಉಚಿತವಾಗಿ ನೀಡ ಲಾಗುತ್ತಿದೆ. ವಿದ್ಯಾರ್ಥಿಗಳು ವರ್ಷಾಂತ್ಯದಲ್ಲಿ ಓದು ಮುಗಿಸಿ ಶಾಲೆಯ ಬುಕ್‌ಬ್ಯಾಂಕ್‌ಗೆà ನೀಡ ಬೇಕು. ಇದರಿಂದ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಲಭ್ಯವಾಗಲಿವೆ. ಕಳೆದ ವರ್ಷದ ಪಠ್ಯ ಪುಸ್ತಕ ತೆಗೆದಿಟ್ಟು ಕೊಳ್ಳಲು ಈಗಾಗಲೇ ಇಲಾಖೆ ಶಾಲೆಗಳಿಗೆ ಸೂಚನೆ ನೀಡಿದೆ. ಡಿಡಿಪಿಐ ಮೂಲಕ ಜಿಲ್ಲೆಯ ಶಾಲೆಗಳಿಗೆ ಈ ಸೂಚನೆ ಹೋಗಿದೆ. 

ಆದರೆ ಒಂದು ವೇಳೆ ವಿದ್ಯಾರ್ಥಿಗಳು ಪುಸ್ತಕಗಳನ್ನು ಹಿಂದಿರುಗಿಸದಿದ್ದರೆ, ಅಷ್ಟು ಸಂಖ್ಯೆಯಲ್ಲಿ ಪುಸ್ತಕ ಅಲಭ್ಯವಾಗಿರಲಿದೆ. ಸಾಮಾನ್ಯವಾಗಿ ಎಲ್ಲ ಪುಸ್ತಕಗಳು ಇನ್ನು ಬುಕ್‌ಬ್ಯಾಂಕ್‌ಗಳಲ್ಲಿ ಲಭ್ಯವಾಗಲಿದೆ. ಈ ವರ್ಷ 10ನೇ ತರಗತಿಯ ಮೂರು ವಿಷಯಗಳಲ್ಲಿ ಬದಲಾವಣೆ ಆಗಿದೆ. ಅವುಗಳನ್ನು ಹೊರತುಪಡಿಸಿ ಉಳಿದ ಎಲ್ಲÉ ತರಗತಿಗಳ ಹಳೆಯ ಪಠ್ಯಪುಸ್ತಕಗಳನ್ನು ಶಾಲೆಯಲ್ಲಿ ಸಂಗ್ರಹಿಸಿಡಲಾಗಿದೆ. ಇದೂ ಬ್ಯಾಗ್‌ ಹೊರೆ ಕಡಿಮೆ ಮಾಡಲಿದೆ. 
 
ಪರಿಸರಕ್ಕೂ ಬೆಸ್ಟ್‌
ಬುಕ್‌ ಬ್ಯಾಂಕ್‌ಗಳನ್ನು ಶಾಲೆಗಳಲ್ಲಿ ಮಾಡುವುದರಿಂದ ಪರಿಸರಕ್ಕೂ ದೊಡ್ಡ ಮಟ್ಟದ ಕೊಡುಗೆ ನೀಡಬಹುದು. ಕಾರಣ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪುಸ್ತಕಗಳನ್ನು ನೀಡುವುದಕ್ಕೆ ದೊಡ್ಡ ಮಟ್ಟದಲ್ಲಿ ಮುದ್ರಣ, ಕಾಗದ ವೆಚ್ಚವಾಗುತ್ತದೆ. ಇದರ ಬದಲಿಗೆ ಪುಸ್ತಕಗಳನ್ನು ಜೋಪಾನವಾಗಿಡಲು ಪ್ರೇರೇಪಿಸಿ, ಮುಂದೆ ಶಾಲೆಯಲ್ಲೇ ಇಟ್ಟರೆ, ಅನಂತರದ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ಲಭ್ಯವಾಗುತ್ತದೆ. ಮತ್ತೆ ದೊಡ್ಡ ಮಟ್ಟದಲ್ಲಿ ಪುಸ್ತಕ ಪೂರೈಸಬೇಕಾದ ಅಗತ್ಯವೂ ಇರುವುದಿಲ್ಲ. 

ಜೂ. 30ರಿಂದ ಬ್ಯಾಗ್‌ ರಹಿತ ದಿನ 
ಶಾಲಾ ಬ್ಯಾಗ್‌ ಹೊರೆ ಇಳಿಸಲು ಜೂ. 30ರಿಂದ ಬ್ಯಾಗ್‌ ರಹಿತ ದಿನ ನಡೆಯಲಿದೆ. ಈ ದಿನ ಶಾಲೆಗಳಲ್ಲಿ ಕೆಲವೊಂದು ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಇಲಾಖೆ ಉದ್ದೇಶಿಸಿದೆ. ಪ್ರಮುಖವಾಗಿ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸಿ ಸೃಜನಶೀಲತೆ ಬೆಳೆಸಲು ಯತ್ನಿಸಲಾಗುತ್ತಿದೆ. 

–  ಬ್ಯಾಗ್‌ ರಹಿತ ದಿನದಂದು ಎಲ್ಲ  ವಿದ್ಯಾರ್ಥಿಗಳು ಬ್ಯಾಗ್‌-ಪುಸ್ತಕ ರಹಿತವಾಗಿ ಶಾಲೆಗೆ ಬರಬೇಕು.
– ಆಯಾ ವಿಷಯ ಶಿಕ್ಷಕರು ಪಠ್ಯ ಪೂರಕ ಚಟುವಟಿಕೆ ಕಾರ್ಯಕ್ರಮಗಳು ಹಾಗೂ ಇಲಾಖಾ ವಿವಿಧ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. 
–  ಆಯಾ ವಿಷಯಗಳಿಗೆ ಸಂಬಂಧಪಟ್ಟ ಹಾಗೆ ರಸಪ್ರಶ್ನೆ/ ಮೌಲ್ಯಮಾಪನ, ಕಥೆ ಹೇಳಿಸುವುದು/ಹೇಳುವುದು, ಆಶುಭಾಷಣ, ಚಿತ್ರಕಲೆ, ಕ್ರೀಡಾ/ಆರೋಗ್ಯ ಚಟುವಟಿಕೆಗಳು, ನೈತಿಕ ಶಿಕ್ಷಣ, ರಾಷ್ಟ್ರಗೀತೆ, ನಾಡಗೀತೆಗಳನ್ನು ರಾಗಬದ್ಧವಾಗಿ ಹಾಡಿಸುವುದು, ಭಾಷಣ ಸ್ಪರ್ಧೆ, ಗ್ರಂಥಾಲಯ ಪುಸ್ತಕಗಳನ್ನು ನೀಡುವುದು, ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. 

Advertisement

ದೆಹಲಿ, ಪಂಜಾಬ್‌ಗಳಲ್ಲಿ ಯೋಜನೆ 
ಈಗಾಗಲೇ ದೆಹಲಿ ಮತ್ತು ಪಂಜಾಬ್‌ನ ಶಾಲೆಗಳಲ್ಲಿ ಬುಕ್‌ ಬ್ಯಾಂಕ್‌ ಯೋಜನೆಯನ್ನು ಹೊರತರಲಾಗಿದೆ. ಇದರಿಂದ ಸರಕಾರಗಳು ಪಠ್ಯ ಪುಸ್ತಗಳನ್ನು ಸಕಾಲದಲ್ಲಿ ಪೂರೈಸಬೇಕಾದ ಅನಿವಾರ್ಯತೆಯಿಂದಲೂ ಪಾರಾಗುವ ಉದ್ದೇಶ ಹೊಂದಲಾಗಿದೆ. ಅಗತ್ಯವಿದ್ದಷ್ಟೇ ಪುಸ್ತಗಳನ್ನು ಪೂರೈಸಲು ಅಲ್ಲಿನ ಸರಕಾರಗಳು ಕ್ರಮ ಕೈಗೊಂಡಿವೆ. 

ಎನ್‌ಜಿಟಿ ಹೇಳಿತ್ತು
ಇತ್ತೀಚೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತನ್ನ ಆದೇಶವೊಂದರಲ್ಲಿ ಶಾಲೆಗಳಲ್ಲಿ  ಬುಕ್‌ ಬ್ಯಾಂಕ್‌ಗಳನ್ನು ಸ್ಥಾಪಿಸುವಂತೆ ದೆಹಲಿ ಸರಕಾರಕ್ಕೆ ಸೂಚನೆ ನೀಡಿತ್ತು. ಇದರಿಂದ ಪರಿಸರಕ್ಕೆ ಒಳಿತಾಗುತ್ತದೆ ಎಂದು ಹೇಳಿತ್ತು. ಶಾಲೆಗಳ ಪರಿಸರ ಕ್ಲಬ್‌ಗಳಡಿ ಬುಕ್‌ ಬ್ಯಾಂಕ್‌ ಸ್ಥಾಪಿಸಲು ಹೇಳಲಾಗಿತ್ತು.

 ಸುತ್ತೋಲೆ ನೀಡಲಾಗಿದೆ
ಅನಗತ್ಯ ಪುಸ್ತಕಗಳನ್ನು ಶಾಲೆಯಿಂದ ಮನೆಗೆ ಅಥವಾ ಮನೆಯಿಂದ ಶಾಲೆಗೆ ತರುವ ಅಗತ್ಯವಿಲ್ಲ. ಈ ಬಗ್ಗೆ ಎಲ್ಲ ಶಾಲೆಗಳಿಗೂ ಈಗಾಗಲೇ ಸುತ್ತೋಲೆ ನೀಡಿದ್ದೇವೆ. ಬ್ಯಾಗ್‌ರಹಿತ ದಿನವನ್ನು ಪ್ರತಿ ತಿಂಗಳ ಕೊನೆಯ ಶನಿವಾರದಂದು ಕಡ್ಡಾಯವಾಗಿ ನಡೆಸಲು ಆದೇಶ ನೀಡಲಾಗಿದೆ. 

– ಶೇಷಶಯನ ಕಾರಿಂಜ
ಡಿಡಿಪಿಐ ಉಡುಪಿ 

ಬಸ್‌ಗಳಲ್ಲಿ ಸಾಗುವ ಸಮಸ್ಯೆ  
ಬಸ್‌ಗಳ ಮೂಲಕ ಹೋಗುವ ಮಕ್ಕಳದ್ದು ಹೆಚ್ಚು ಸಮಸ್ಯೆ. ಇತರ ಪ್ರಯಾಣಿಕರು, ಕಂಡಕ್ಟರ್‌ಗಳ ಬೈಗುಳದಲ್ಲಿ ಅವರು ಹೈರಾಣಾಗಿ ಹೋಗುತ್ತಾರೆ. ಬಸ್‌ ಹತ್ತುವಾಗ, ಇಳಿಯುವಾಗ ಬೃಹತ್‌ ಬ್ಯಾಗ್‌ನಿಂದಾಗಿ ಅಪಾಯವೂ ಇದೆ.

– ಅರವಿಂದ್‌,ಪೋಷಕರು 

ಮಕ್ಕಳೂ ಕೇಳುವುದಿಲ್ಲ
ಮಕ್ಕಳು ಎಲ್ಲ ಪುಸ್ತಕಗಳನ್ನು ಕೊಂಡೊಯ್ಯಲೇಬೇಕೆನ್ನುತ್ತವೆ. ಕೆಲವೊಂದನ್ನು ಶಿಕ್ಷಕರು ಕೇಳುವುದಿಲ್ಲ. ಆದರೂ ಮಕ್ಕಳು ಬಿಟ್ಟು ಹೋಗಲು ಒಪ್ಪುವುದಿಲ್ಲ. ಎಲ್ಲ ಪುಸ್ತಕ ತನ್ನ ಬ್ಯಾಗ್‌ ನಲ್ಲೇ ಇರಬೇಕು ಎಂಬ ಹಠ ಹೆಚ್ಚಿನ ಮಕ್ಕಳಲ್ಲಿರುತ್ತದೆ. 
– ಸುರೇಖಾ, ಪೋಷಕರು 

Advertisement

Udayavani is now on Telegram. Click here to join our channel and stay updated with the latest news.

Next