Advertisement

ನ್ಯಾಯಾಂಗಕ್ಕೆ ಕಪ್ಪು ಚುಕ್ಕೆಯಾದ ಪ್ರಕರಣ

06:34 AM May 09, 2019 | Team Udayavani |

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ವಿರುದ್ಧ ಅವರ ಗೃಹ ಕಚೇರಿಯಲ್ಲಿ ನೌಕರಿಗಿದ್ದ ಮಹಿಳೆಯೊಬ್ಬರು ಹೊರಿಸಿದ ಲೈಂಗಿಕ ಕಿರುಕುಳದ ಆರೋಪವನ್ನು ತನಿಖೆಗೊಳಪಡಿಸಿರುವ ನ್ಯಾಯಾಲಯದ ಆಂತರಿಕ ತನಿಖಾ ಸಮಿತಿ ‘ಆರೋಪಿ’ ಸ್ಥಾನದಲ್ಲಿದ್ದ ನ್ಯಾಯಮೂರ್ತಿಗಳಿಗೆ ಕ್ಲೀನ್‌ಚಿಟ್ ನೀಡುವುದರ ಮೂಲಕ ಈ ಪ್ರಕರಣವನ್ನೇನೋ ಮುಗಿಸಿರಬಹುದು. ಆದರೆ ಪ್ರಕರಣ ಉತ್ತರವಿಲ್ಲದ ಅಥವಾ ಉತ್ತರಿಸಲು ಇಷ್ಟವಿಲ್ಲದ ಹಲವು ಪ್ರಶ್ನೆಗಳನ್ನು ಉಳಿಸಿ ಹೋಗಿದೆ. ಮುಖ್ಯವಾಗಿ ಆರೋಪಿ ಸ್ಥಾನದಲ್ಲಿರುವವರು ಪರಮೋಚ್ಚ ಅಧಿಕಾರ ಪೀಠದಲ್ಲಿದ್ದವರಾದರೆ ಅವರಿಂದ ಸಂತ್ರಸ್ತರಾದವರಿಗೆ ನ್ಯಾಯ ಸಿಗುವುದು ಅಸಾಧ್ಯವೆ ಎನ್ನುವ ಪ್ರಶ್ನೆ ಜನಸಾಮಾನ್ಯರ ಮನಸಿನಲ್ಲಿ ಸುಳಿದಾಡಿದರೆ ಆಶ್ಚರ್ಯಪಡಬೇಕಾಗಿಲ್ಲ. ಏಕೆಂದರೆ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಡೆದ ತನಿಖೆಯ ಪ್ರಕ್ರಿಯೆಯೇ ಇಂಥದ್ದೊಂದು ಅನುಮಾನವನ್ನು ಉಳಿಸಿಹೋಗಿದೆ.

Advertisement

ಹಾಗೇ ನೋಡಿದರೆ ಈ ಪ್ರಕರಣ ಒಂದಕ್ಕಿಂತ ಹೆಚ್ಚು ಆಯಾಮಗಳನ್ನು ಒಳಗೊಂಡಿದೆ. ಕಿರಿಯ ಅಧಿಕಾರಿ ದರ್ಜೆಯ ಮಹಿಳೆಯೊಬ್ಬರು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ಲೈಂಗಿಕ ಕಿರುಕುಳ ಮಾಡಿದರು ಎಂಬ ಕಾರಣಕ್ಕೆ ಮಹತ್ವ ಪಡೆದುಕೊಂಡಿದ್ದರೂ ಅದರ ಜೊತೆಗೆ ನ್ಯಾಯಾಂಗದಲ್ಲಿ ತಥಾಕಥಿತ ಫಿಕ್ಸರ್‌ಗಳು ನಿಭಾಯಿಸುತ್ತಿರುವ ಪಾತ್ರ ಮತ್ತು ಕೆಲವು ಕಾರ್ಪೋರೇಟ್ ಕುಳಗಳು ನ್ಯಾಯಾಲಯಗಳ ತೀರ್ಪನ್ನು ತಮಗನುಕೊಲವಾಗುವಂತೆ ಬರೆಸಿಕೊಳ್ಳುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಸದ್ಯಕ್ಕೆ ನ್ಯಾಯಮೂರ್ತಿಗಳ ವಿರುದ್ಧವಿರುವ ಆರೋಪದ ತನಿಖೆಯನ್ನು ಬರೀ ಮೂರು ವಾರದಲ್ಲಿ ತರಾತುರಿಯಲ್ಲಿ ಮಾಡಿ ಮುಗಿಸಿ ಕ್ಲೀನ್‌ಚಿಟ್ ನೀಡಲಾಗಿದೆಯಷ್ಟೆ. ಹಲವು ಘನವೇತ್ತ ನ್ಯಾಯಾಧೀಶರುಗಳೇ ಒಪ್ಪಿಕೊಂಡಿರುವ ಫಿಕ್ಸರ್‌ಗಳ ಹಾವಳಿಯ ಕುರಿತಾದ ಮತ್ತು ಕಾರ್ಪೋರೇಟ್ ಕುಳಗಳು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ವಿಚಾರಗಳ ಬಗ್ಗೆ ಇನ್ನಷ್ಟೇ ತನಿಖೆಯಾಗಬೇಕಿದೆ. ಇವೆರಡು ನಿಜಕ್ಕೂ ಬಹಳ ಗಂಭೀರವಾಗಿರುವ ವಿಚಾರ. ನ್ಯಾಯಾಂಗದ ಪಾವಿತ್ರ್ಯದ ಮೇಲೆ ಕಪ್ಪುಚುಕ್ಕೆಯಿಟ್ಟಿರುವ ಈ ಆರೋಪಗಳ ಕುರಿತು ಸಮಗ್ರವಾದ ತನಿಖೆಯಾಗುವುದು ಅಗತ್ಯ.

ಮುಖ್ಯ ನ್ಯಾಯಮೂರ್ತಿಗಳ ವಿಚಾರಕ್ಕೆ ಬರುವುದಾದರೆ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಯಗಳ ನ್ಯಾಯಾಧೀಶರ ದುರ್ನಡತೆ ವಿಚಾರವನ್ನು ಬಗೆಹರಿಸಲು ಇರುವ ಆಂತರಿಕ ವ್ಯವಸ್ಥೆಯ ಮೂಲಕ ವಿಚಾರಣೆ ನಡೆಸಲಾಗಿದೆ. ನ್ಯಾಯಾಂಗವೇ ಜಾರಿಗೆ ತಂದಿರುವ ಈ ಆಂತರಿಕ ವ್ಯವಸ್ಥೆ ಪರಿಪೂರ್ಣ ಎಂಬ ನಂಬಿಕೆ ನ್ಯಾಯಾಧೀಶರಿರಬಹುದಾದರೂ ಜನರಿಗೂ ಆ ನಂಬಿಕೆ ಹುಟ್ಟಿಸುವಂತೆ ಮಾಡುವಲ್ಲಿ ಈ ವ್ಯವಸ್ಥೆ ವಿಫ‌ಲವಾಗಿರುವಂತೆ ಕಂಡು ಬರುತ್ತದೆ. ಸಾಮಾನ್ಯವಾಗಿ ಇಂಥ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಪಾಲಿಸುವ ಕನಿಷ್ಠ ಪ್ರಕ್ರಿಯೆಗಳನ್ನು ಪಾಲಿಸಲಾಗಿಲ್ಲ ಎನ್ನುವುದು ಬಹಳ ಗಂಭೀರವಾದ ಆರೋಪ. ಇಡೀ ವಿಚಾರಣೆಯನ್ನು ವೀಡಿಯೊಗ್ರಾಫ್ ಮಾಡಬೇಕಿತ್ತು, ಇದಾಗಿಲ್ಲ. ಫಿರ್ಯಾದುದಾರಳಿಗೆ ಹೇಳಿಕೆಯ ಪ್ರತಿಗಳನ್ನು ನೀಡಲಿಲ್ಲ ಮತ್ತು ಆಕೆಗೆ ವಕೀಲರನ್ನೂ ಒದಗಿಸಲಿಲ್ಲ. ವಿಚಾರಣಾ ಸಮಿತಿಗೆ ಹೊರಗಿನವರೊಬ್ಬರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕೆಂಬ ಬೇಡಿಕೆಯನ್ನು ಪುರಸ್ಕರಿಸಲಿಲ್ಲ. ಕೊನೆಗೆ ಮಹಿಳೆ ಬಹಿರಂಗವಾಗಿಯೇ ನ್ಯಾಯ ಸಿಗುವ ಭರವಸೆಯಿಲ್ಲ ಎಂದು ಹೇಳಿ ವಿಚಾರಣೆಯಿಂದ ಹಿಂದೆ ಸರಿದರು. ಸಂತ್ರಸ್ತೆಗೆ ದೇಶದ ಉನ್ನತ ನ್ಯಾಯಾಲಯದಲ್ಲೇ ನ್ಯಾಯ ಸಿಗುವ ಭರವಸೆ ಇಲ್ಲ ಎಂದಾದರೆ ನ್ಯಾಯಕ್ಕಾಗಿ ಆಕೆ ಇನ್ನೆಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ. ನ್ಯಾ| ಡಿ.ವೈ.ಚಂದ್ರಚೂಡ ಅವರೊಬ್ಬರೇ ವಿಚಾರಣಾ ಪ್ರಕ್ರಿಯೆಯಲ್ಲಿ ಮಾರ್ಪಾಡು ಆಗಬೇಕೆಂದು ಆಗ್ರಹಿಸಿದ್ದರು. ಆದರೆ ಅವರ ಆಕ್ಷೇಪದ ಧ್ವನಿಗೆ ನ್ಯಾಯಾಂಗದೊಳಗಿಂದ ಬೆಂಬಲ ಸಿಕ್ಕಿಲ್ಲ. ಈ ನಡುವೆ ಆಂತರಿಕ ತನಿಖಾ ಸಮಿತಿಯ ಮುಖ್ಯಸ್ಥರಾಗಿದ್ದ ನ್ಯಾ| ಎಸ್‌. ಎ. ಬೋಬ್ಡೆ ಅವರನ್ನು ನ್ಯಾಯಧೀಶರಾಗಿರುವ ಆರ್‌.ಎಫ್.ನಾರಿಮನ್‌ ಮತ್ತು ಚಂದ್ರಚೂಡ ರಹಸ್ಯವಾಗಿ ಭೇಟಿಯಾಗಿದ್ದಾರೆ ಎಂಬ ವರದಿಯೊಂದು ಸಂಚಲನವುಂಟು ಮಾಡಿದೆ. ಸುಪ್ರೀಂ ಕೋರ್ಟ್‌ ಈ ಇದನ್ನು ‘ಸಂಪೂರ್ಣ ತಪ್ಪು ವರದಿ’ ಎಂಬುದಾಗಿ ಹೇಳಿ ನಿರಾಕರಿಸಿದ್ದರೂ, ಅದರ ಕುರಿತಾಗಿರುವ ಅನುಮಾನಗಳಿನ್ನೂ ಪೂರ್ಣವಾಗಿ ಬಗೆಹರಿದಿಲ್ಲ.

ಮಹಿಳೆ ಮಾಡಿದ ಆರೋಪ ಸತ್ಯವೋ ಸುಳ್ಳೋ ಎನ್ನುವುದು ತನಿಖೆಯಿಂದ ತಿಳಿಯಬೇಕಾದ ಸಂಗತಿ. ಈ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವುದು ದೇಶದ ಉನ್ನತ ನ್ಯಾಯದಾನ ಪೀಠದ ನೈತಿಕ ಜವಾಬ್ದಾರಿಯಾಗಿತ್ತು. ಈ ನೆಲೆಯಲ್ಲಿ ಹೇಳುವುದಾದರೆ ತನಗೆ ನ್ಯಾಯ ಸಿಕ್ಕಿಲ್ಲ ಎಂದು ಹೇಳುವ ಎಲ್ಲ ಹಕ್ಕುಗಳು ಸಂತ್ರಸ್ತೆಗೆ ಇದೆ. ನ್ಯಾಯಾಂಗದ ಉನ್ನತ ಸ್ಥಾನದಲ್ಲಿರುವವರ ವಿರುದ್ಧ ಸಾಮಾನ್ಯ ಜನರು ಆರೋಪಗಳನ್ನು ಮಾಡಿದರೆ ನ್ಯಾಯ ಸಿಗುವ ಖಾತರಿಯಿಲ್ಲ ಎನ್ನುವ ಸಂದೇಶ ಈ ಪ್ರಕರಣದಿಂದ ರವಾನೆಯಾದರೆ ಅದರಿಂದ ಹಾನಿಯಾಗುವುದು ನ್ಯಾಯಾಂಗದ ಪಾವಿತ್ರ್ಯಕ್ಕೆ. ಈ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಪರಿಶುದ್ಧರೇ ಆಗಿರಬಹುದು. ಆದರೆ ನ್ಯಾಯಾಂಗದ ಅಗ್ನಿಪರೀಕ್ಷೆಯಲ್ಲಿ ಇದು ಸಂಶಯಾತೀತವಾಗಿ ಸಾಬೀತಾಗಿಲ್ಲ ಎನ್ನುವುದು ಕಳವಳವುಂಟು ಮಾಡುವ ಸಂಗತಿ. ಈ ಪ್ರಕರಣ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೊಂದು ಕಪ್ಪುಚುಕ್ಕೆಯಾಗಿ ಉಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next