Advertisement

ಬಿಜೆಪಿ ಅಂದ್ರೆ ಭ್ರಷ್ಟಾಚಾರಿ ಜನತಾ ಪಕ್ಷ

11:08 AM May 13, 2019 | Team Udayavani |

ಹುಬ್ಬಳ್ಳಿ: ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಬಿಜೆಪಿಯವರೇ ಹಣ, ಹೆಂಡದ ಹೊಳೆ ಹರಿಸುತ್ತಿದ್ದಾರೆ. ಬಿಜೆಪಿ ಅಂದರೆ ಭ್ರಷ್ಟಾಚಾರ. ಬಿ ಅಂದ್ರೆ ಭ್ರಷ್ಟಾಚಾರಿ ಜನತಾ ಪಕ್ಷ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ದಾಳಿ ಮಾಡೋದೇ ಬಿಜೆಪಿ

ಕೆಲಸ. ನಮ್ಮ ವೈಫಲ್ಯಗಳಿದ್ದರೆ ಟೀಕೆ ಮಾಡಲಿ. ಅದು ಬಿಟ್ಟು ಅನವಶ್ಯಕ ಟೀಕೆ ಮಾಡುವುದನ್ನು ಬಿಡಲಿ. ಅವರು ಭಯದಿಂದ ಇನ್ನಿಲ್ಲದನ್ನು ಮಾತನಾಡುತ್ತಿದ್ದಾರೆ. ನಾಲಿಗೆ ಹರಿಬಿಡುತ್ತಿದ್ದಾರೆ ಎಂದರು.

160 ಸೀಟು ದಾಟಲ್ಲ: ಲೋಕಸಭೆ ಚುನಾವಣೆ 5 ಹಂತಗಳ ಮತದಾನದ ಬಳಿಕ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ ಯಾಗಿರುವ ಮಾಹಿತಿ ಇದೆ. ಆದರೆ ಸಮೀಕ್ಷಾ ವರದಿಗಳನ್ನು ಬಹಿರಂಗಪಡಿಸಿಲ್ಲ. 7 ಹಂತಗಳ ಮತದಾನ ಮುಗಿದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 160 ಸೀಟುಗಳನ್ನು ದಾಟುವುದಿಲ್ಲ. ಇದು ಬಿಜೆಪಿ ಮುಖಂಡರನ್ನು ಕಂಗೆಡಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿಯ ಎಲ್ಲ ಮುಖಂಡರು ಹತಾಶೆಯಿಂದ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಮೇ 23ರ ನಂತರ ದೇಶದಲ್ಲಿ ಎನ್‌ಡಿಎ ಸರ್ಕಾರ ಪತನವಾಗುತ್ತೆ. ರಾಜ್ಯದಲ್ಲಿ ಬರವಿದ್ದರೂ ಚುನಾವಣೆ ಆಯೋಗ ಬರ ಅಧ್ಯಯನ ಮಾಡಲು ಬಿಡುತ್ತಿಲ್ಲ. ನಮಗೆ ನಿರ್ಬಂಧ ಹಾಕಿದೆ. ಇದು ದುರ್ದೈವದ ಸಂಗತಿ. ಕೇಂದ್ರ ಸರ್ಕಾರ ಬರ ಪರಿಹಾರ ಕಾಮಗಾರಿಗೆ ದುಡ್ಡು ಕೊಟ್ಟಿಲ್ಲ. ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಏರ್‌ಪೋರ್ಟ್‌ಲ್ಲಿ ವೇಣು, ದಿನೇಶ, ಡಿಕೆಶಿ
ಹುಬ್ಬಳ್ಳಿ:
ಇಲ್ಲಿನ ವಿಮಾನ ನಿಲ್ದಾಣದಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಹಾಗೂ ಸಚಿವ ಡಿ.ಕೆ. ಶಿವಕುಮಾರ ರವಿವಾರ ಮಾತುಕತೆ ನಡೆಸಿದರು. ಕುಂದಗೋಳ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ವೇಣುಗೋಪಾಲ, ದಿನೇಶ ಅವರು ಸಂಜೆ ಕುಂದಗೋಳಕ್ಕೆ ತೆರಳಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಬೆಂಗಳೂರಿಗೆ ವಾಪಸ್‌ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದೇ ವೇಳೆ ಡಿ.ಕೆ. ಶಿವಕುಮಾರ ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದರು. ಆಗ ಉಭಯ ನಾಯಕರು ನಿಲ್ದಾಣದಲ್ಲೇ ಕುಂದಗೋಳ ಮತ್ತು ಚಿಂಚೋಳಿ ಮತಕ್ಷೇತ್ರದ ಚುನಾವಣೆ ಕುರಿತು ಕೆಲ ಹೊತ್ತು ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.

ಜಿಪಂ-ಗ್ರಾಪಂ ಸದಸ್ಯರ ಸಭೆ

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ , ತಾಲೂಕು ಹಾಗೂ ಗ್ರಾಪಂ ಸದಸ್ಯರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಸಭೆ ನಡೆಸಿದ್ದಲ್ಲದೆ, ಬಿಜೆಪಿಯ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಎಂದು ತಿಳಿಸಿದರು ಎಂದು ಹೇಳಲಾಗುತ್ತಿದೆ. ನಗರದಲ್ಲಿ ರವಿವಾರ ಸಭೆ ನಡೆಸಿದ ಅವರು, ಯಾವುದೇ ಸಂದರ್ಭದಲ್ಲೂ ಪಕ್ಷದ ಅಭ್ಯರ್ಥಿಯ ಗೆಲುವು ಕೈ ತಪ್ಪಬಾರದು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗುವಂತೆ ನೋಡಿಕೊಳ್ಳಿ ಎಂದು ಸಲಹೆ-ಸೂಚನೆ ನೀಡಿದರು ಎನ್ನಲಾಗಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next