Advertisement

50 ಕ್ಷೇತ್ರಗಳೇ ಬಿಜೆಪಿ ಗುರಿ; ಹಳೆ ಮೈಸೂರು ಭಾಗದಲ್ಲಿ ಕಮಲ ಪಕ್ಷ ಸಂಘಟನೆಗೆ ಒತ್ತು

12:42 AM Aug 28, 2020 | mahesh |

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿರುವ ಆಯ್ದ 50 ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಿ ಆ ಕ್ಷೇತ್ರಗಳಲ್ಲಿ ತತ್‌ಕ್ಷಣದಿಂದಲೇ ಪಕ್ಷ ಸಂಘಟನೆ, ಬಲವರ್ಧನೆಗೆ ಒತ್ತು ನೀಡಲು ರಾಜ್ಯ ಬಿಜೆಪಿ ಸಜ್ಜಾಗಿದೆ. ಪ್ರಮುಖವಾಗಿ ಬಿಜೆಪಿ ಹೆಚ್ಚು ಹಿನ್ನಡೆ ಅನುಭವಿಸುತ್ತಿರುವ ಹಳೆ ಮೈಸೂರು ಭಾಗ ಸಹಿತ ಆಯ್ದ ಕಡೆಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಇತ್ತೀಚೆಗೆ ನಡೆಸಿದ ಸಂಘಟನಾತ್ಮಕ ಸಭೆಯಲ್ಲಿ ಚರ್ಚೆಯಾಗಿದೆ.

Advertisement

ಈ ಜವಾಬ್ದಾರಿಯನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಿಗೆ ನೀಡುವ ಸಾಧ್ಯತೆಯಿದ್ದು, 50 ಕ್ಷೇತ್ರಗಳಲ್ಲಿ ಸದ್ಯವೇ ಪಕ್ಷ ಸಂಘಟನೆ ಚುರುಕುಗೊಳ್ಳುವ ನಿರೀಕ್ಷೆ ಮೂಡಿದೆ. ಈ ಕ್ಷೇತ್ರ ಗಳಲ್ಲಿ ಪಕ್ಷದ ಬೆಳವಣಿಗೆಗೆ ಕೈಗೊಳ್ಳಬೇಕಾದ ಕ್ರಮಗಳು, ಕಾರ್ಯ ತಂತ್ರಗಳ ಬಗ್ಗೆ ಅವರು ಕೆಲವು ತಿಂಗಳಲ್ಲಿ ಸಮಗ್ರ ವರದಿಯನ್ನೂ ಸಲ್ಲಿಸಲಿದ್ದಾರೆ. ಆ ಬಳಿಕ ಸಂಘಟನೆ ಬಲಪಡಿಸುವ ಕಾರ್ಯ ಚುರುಕಾಗಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಬಿಜೆಪಿ ಎರಡನೇ ಬಾರಿಗೆ ಸರಕಾರ ರಚಿಸಿದ್ದರೂ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಈವರೆಗೆ ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವಷ್ಟು ಸ್ಥಾನ ಗಳಿಸಿಲ್ಲ. ಕಳೆದ ಅಂದರೆ, 2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗಳಿಸಿ ಅತಿ ದೊಡ್ಡ ಪಕ್ಷವಾದರೂ ಸರಕಾರ ರಚಿಸಲು ಪಕ್ಷೇತರರು, ವಲಸಿಗರು ಅನಿವಾರ್ಯವಾದರು. ಈ ಹಿನ್ನೆಲೆಯಲ್ಲಿ ಮುಂದೆ ಸ್ಪಷ್ಟ ಬಹುಮತದೊಂದಿಗೆ ಸುಸ್ಥಿರ ಸರಕಾರ ರಚಿಸಲು ಸಿದ್ಧತೆ ಆರಂಭಿಸುವಂತೆ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.

ಪಕ್ಷ ಸಂಘಟನೆಗೆ ಬಲ
 ಬಿಜೆಪಿ ಸೋತಿರುವ ಮತ್ತು ಬಿಜೆಪಿ ಖಾತೆಯನ್ನೇ ತೆರೆಯದ ಕ್ಷೇತ್ರಗಳಲ್ಲಿ ಸಂಘಟನೆಗೆ ಒತ್ತು.
 ಸಂಘಟನೆ ಪರಿಣಾಮಕಾರಿಯಾಗಿ ರುವ ಕ್ಷೇತ್ರಗಳಲ್ಲಿರುವ ವ್ಯವಸ್ಥೆಯನ್ನು ಹಂತ ಹಂತವಾಗಿ ಈ ಕ್ಷೇತ್ರಗಳಲ್ಲೂ ಅಳವಡಿಸುವುದು.
 ಯೋಜಿತ ರೀತಿಯಲ್ಲಿ ಪಕ್ಷ ಸಂಘಟನೆ ಕೈಗೊಳ್ಳುವುದು.
 ಅಭ್ಯರ್ಥಿ, ಪ್ರಚಾರ, ಚುನಾವಣ ಕಾರ್ಯ ತಂತ್ರಗಳಿಗಿಂತ ಪಕ್ಷ ಸೇರ್ಪಡೆ, ಸಂಘಟನೆಯನ್ನು ಪರಿಣಾಮ ಕಾರಿಯಾಗಿ ಕೈಗೊಳ್ಳುವುದು

ಹಳೆ ಮೈಸೂರಿಗೆ ವಿಶೇಷ ಒತ್ತು
ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ನಿರೀಕ್ಷಿತ ಮಟ್ಟದಲ್ಲಿ ಭದ್ರನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಒತ್ತು ನೀಡಬೇಕು ಎಂಬ ಸಂದೇಶವನ್ನು ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇತ್ತೀಚೆಗೆ ಕರೆ ನೀಡಿದ್ದರು. ಹಾಗಾಗಿ ಈ ಭಾಗದಲ್ಲಿ ಪಕ್ಷದ ಬಲವರ್ಧನೆಗಾಗಿ ಉಸ್ತುವಾರಿಗಳನ್ನೂ ನೇಮಿಸಲಾಗುತ್ತದೆ. ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಆರ್‌. ಅಶೋಕ್‌ ಮತ್ತಿತರ ನಾಯಕರ ಜತೆಗೆ ವರ್ಚಸ್ವಿ ನಾಯಕರೊಬ್ಬರಿಗೆ ಉಸ್ತುವಾರಿ ವಹಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

Advertisement

ಸಂಘಟನೆಗೆ ಶರವೇಗ
ಪಕ್ಷದ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್‌. ಸಂತೋಷ್‌ ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಘಟನಾತ್ಮಕ ಸಭೆಗಳನ್ನು ನಡೆಸಿದ್ದು, ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾರೆ. ಆ ಮೂಲಕ ಸಂಘಟನೆಯ ಚಟು ವಟಿಕೆಗಳಿಗೆ ಶರವೇಗ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಪರಾಭವ ಗೊಂಡಿರುವ ಕ್ಷೇತ್ರಗಳಲ್ಲಿ ಸಹಜವಾಗಿಯೇ ಸಂಘಟನೆಗೆ ಒತ್ತು ನೀಡಲಾಗುತ್ತದೆ. ಸದ್ಯದಲ್ಲೇ ಸಾಲು ಸಾಲಾಗಿ ಸ್ಥಳೀಯಾಡಳಿತ ಚುನಾವಣೆ ಎದುರಾಗುವುದರಿಂದ ಅವುಗಳನ್ನು ಎದುರಿಸಲು ಪಕ್ಷ ಸಜ್ಜಾಗಿದೆ. ರಾಜ್ಯದಲ್ಲಿ ಪಕ್ಷಕ್ಕೆ ಇನ್ನಷ್ಟು ಭದ್ರನೆಲೆ ರೂಪಿಸಲು ಪೂರಕವಾಗಿ ಅಗತ್ಯವಿರುವ ಎಲ್ಲ ಪ್ರಯತ್ನಗಳು ಕ್ರಿಯಾಶೀಲವಾಗಿ ನಡೆಯಲಿವೆ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

50ರ ಕಾರ್ಯ ತಂತ್ರ
ಸ್ವಂತ ಬಲದ ಸರಕಾರ ರಚನೆಗೆ 10- 15 ಸ್ಥಾನಗಳಷ್ಟೇ ಕೊರತೆಯಾಗುತ್ತಿದ್ದರೂ ಬಿಜೆಪಿ ಶಾಸಕರಿಲ್ಲದ 50 ಕ್ಷೇತ್ರಗಳನ್ನು ಗುರುತಿಸಿ ತತ್‌ಕ್ಷಣದಿಂದಲೇ ಪಕ್ಷ ಸಂಘಟನೆ ಆರಂಭಿಸುವುದರ ಹಿಂದೆ ಒಂದು ಕಾರ್ಯತಂತ್ರವಿದೆ. ಕಳೆದ ಬಾರಿ ಗೆದ್ದಿರುವ ಅಷ್ಟೂ ಕ್ಷೇತ್ರಗಳನ್ನು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲುವುದು ಸವಾಲೇ ಸರಿ. ಹಾಗಾಗಿ ಹಾಲಿ ಕೆಲವು ಕ್ಷೇತ್ರಗಳನ್ನು ಕಳೆದುಕೊಂಡರೂ ಸ್ಪಷ್ಪ ಬಹುಮತಕ್ಕಿಂತಲೂ ಹೆಚ್ಚು ಸ್ಥಾನಗಳಿಸುವ ರೀತಿಯಲ್ಲಿ 50 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಕಾರ್ಯಯೋಜನೆ ಏನು?
ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿರುವ 50 ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸುವುದು.

ಅದರಲ್ಲೂ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡ ಕ್ಷೇತ್ರ ಮತ್ತು ತೀವ್ರ ಪೈಪೋಟಿಯೊಡ್ಡಿದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು.

ಈ ಕ್ಷೇತ್ರಗಳಲ್ಲಿ ಹಿನ್ನಡೆಗೆ ಕಾರಣವಾಗಿರಬಹುದಾದ ಅಂಶಗಳನ್ನು ಗುರುತಿಸುವುದು.

ಅಗತ್ಯ ಬದಲಾವಣೆಗಳಿಗೆ ಒತ್ತು ನೀಡುವುದು.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next