Advertisement

ಕಾರ್ಯತಂತ್ರ ಬದಲಿಸಿದ ಕಮಲ ಪಾಳಯ

07:29 AM Jun 27, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ನ ಅತೃಪ್ತರೆನ್ನಲಾದ ಕೆಲ ಶಾಸಕರ ನಿಗೂಢ ನಡೆ ಮತ್ತು ದ್ವಂದ್ವ ನಿಲುವಿನಿಂದಾಗಿ ಕಮಲ ಪಾಳಯಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳಲು ತುಸು ಹಿನ್ನಡೆ ಉಂಟಾಗಿದೆ. ಹಾಗಾಗಿ, ಸದ್ಯದ ಮಟ್ಟಿಗೆ ಸರ್ಕಾರ ರಚನೆ ಪ್ರಯತ್ನಕ್ಕಿಂತ ಪಕ್ಷದ ಸಂಘಟನೆ, ಸದಸ್ಯತ್ವ ನೋಂದಣಿಯತ್ತ ಬಿಜೆಪಿ ಚಿತ್ತ ಹರಿಸಿದೆ.

Advertisement

ಮೇಲ್ನೋಟಕ್ಕೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಒಳಜಗಳ ಕಡಿಮೆಯಾದಂತಿದ್ದರೂ ಒಳಬೇಗುದಿ ಮುಂದಿವರಿದಿದೆ ಎಂಬ ಮಾತುಗಳಿವೆ. ಹಾಗಾಗಿ, ಮೈತ್ರಿ ಪಕ್ಷ ತಾನಾಗಿಯೇ ಪತನವಾದರೆ ಮುಂದಿನ ಪ್ರಯತ್ನ ನಡೆಸುವ ಲೆಕ್ಕಾಚಾರದಲ್ಲಿ ಬಿಜೆಪಿ ದಿನ ಕಳೆಯುತ್ತಿದೆ. ಲೋಕಸಭಾ ಚುನಾವಣೆ ಫ‌ಲಿತಾಂಶದ ಬಳಿಕ ಕಾಂಗ್ರೆಸ್‌, ಜೆಡಿಎಸ್‌ ಪಕ್ಷ ಸಂಘಟನೆಗೆ ಒತ್ತು ನೀಡಲು ಮುಂದಾಗುತ್ತಿದ್ದಂತೆ ಬಿಜೆಪಿ ಕೂಡ ಕಾರ್ಯತಂತ್ರ ಬದಲಾಯಿಸಿದ್ದು, ಸಂಘಟನೆಗೆ ಆದ್ಯತೆ ನೀಡಿದೆ.

ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟವಾಗಿ ತಿಂಗಳು ಕಳೆದಿದ್ದು, ರಾಜ್ಯ ರಾಜಕೀಯದ ಚಿತ್ರಣವೂ ತುಸು ಬದಲಾಗಿದೆ. ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಪರಸ್ಪರ ಆರೋಪ-ಪ್ರತ್ಯಾರೋಪಗಳು ತಕ್ಕ ಮಟ್ಟಿಗೆ ಕಡಿಮೆಯಾಗಿವೆ. ಆಡಳಿತ ಯಂತ್ರಕ್ಕೆ ವೇಗ ನೀಡುವ ಕಾರ್ಯಕ್ಕೆ ಮುಖ್ಯಮಂತ್ರಿಗಳು ಗಮನ ನೀಡುತ್ತಿದ್ದಂತೆ ಕಾರ್ಯಾಂಗವೂ ಚುರುಕಾಗುತ್ತಿರುವಂತಿದೆ. ಈ ನಡುವೆ ಕಾಂಗ್ರೆಸ್‌, ಜೆಡಿಎಸ್‌ ಸದ್ದಿಲ್ಲದೇ ಸಂಘಟನೆಗೆ ಒತ್ತು ನೀಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಬದಲಾದ ಕಾರ್ಯತಂತ್ರ: ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಕ್ರಮೇಣ ಆಡಳಿತ ನಿರ್ವಹಣೆಗೆ ಗಮನ ನೀಡುವುದರ ಜೊತೆಗೆ ಸಂಘಟನೆಯ ಬಲವರ್ಧನೆಗೆ ಒತ್ತು ನೀಡಿರುವುದರ ಸುಳಿವು ಹಿಡಿದ ಬಿಜೆಪಿ, ಸದ್ಯದ ಮಟ್ಟಿಗೆ ತನ್ನ ಕಾರ್ಯತಂತ್ರ ಬದಲಾಯಿಸಿದೆ. ಪಕ್ಷ ಬಲವರ್ಧನೆಯತ್ತ ದೃಷ್ಟಿ ಹರಿಸಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಪ್ರಚಂಡ ವಿಜಯವನ್ನೇ ಆಧಾರವಾಗಿಟ್ಟುಕೊಂಡು ಹೆಚ್ಚು ಮಂದಿಯನ್ನು ಪಕ್ಷದತ್ತ ಸೆಳೆಯಲು ಬಿಜೆಪಿ ಮುಂದಾಗಿದೆ. ಜನರಲ್ಲಿ ಮೂಡಿರುವ ರಾಷ್ಟ್ರವಾದವನ್ನು ನಿರಂತರವಾಗಿಟ್ಟುಕೊಳ್ಳುವ ಮೂಲಕ ಸಂಘಟನೆಯತ್ತಲೂ ಗಮನ ಹರಿಸುತ್ತಿದೆ.

ಸಂಘಟನೆ ದುರ್ಬಲವಾಗಿರುವ ಹಾಸನ, ಮಂಡ್ಯ, ರಾಮನಗರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಆಯ್ದ ಜಿಲ್ಲೆಗಳಲ್ಲಿ ಸದಸ್ಯತ್ವ ನೋಂದಣಿ ಕಾರ್ಯವನ್ನು ವಿಶೇಷವಾಗಿ ಕೈಗೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಈಗಾಗಲೇ 80 ಲಕ್ಷ ಮಂದಿ ಬಿಜೆಪಿ ಸದಸ್ಯತ್ವ ಪಡೆದಿದ್ದು, ಈ ಬಾರಿ ಹೆಚ್ಚುವರಿಯಾಗಿ 50 ಲಕ್ಷ ಮಂದಿಯ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ. ಆ ಮುಲಕ ರಾಜ್ಯದಲ್ಲಿ ಪಕ್ಷದ ಸದಸ್ಯತ್ವ ಒಂದು ಕೋಟಿ ದಾಟುವ ಲೆಕ್ಕಾಚಾರದಲ್ಲಿ ತೊಡಗಿದೆ.

Advertisement

ಅತೃಪ್ತರಲ್ಲಿ ದ್ವಂದ್ವ: ಮೈತ್ರಿ ಸರ್ಕಾರದ ಪಕ್ಷಗಳಲ್ಲಿನ ಅತೃಪ್ತರೆನ್ನಲಾದ ಶಾಸಕರನ್ನು ಸೆಳೆಯುವ, ವಿಶ್ವಾಸದಲ್ಲಿರಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ತೆರೆಮರೆಯಲ್ಲೇ ಮುಂದುವರಿಸಿದೆ. ಹಾಗಿದ್ದರೂ, ಅತೃಪ್ತ ಶಾಸಕರ ನಡೆ ಇನ್ನೂ ನಿಗೂಢವಾಗಿಯೇ ಇದೆ. ಈ ನಡುವೆ ಕೆಲ ಅತೃಪ್ತ ಶಾಸಕರು ದ್ವಂದ್ವ ನಿಲುವು ತೋರುತ್ತಿರುವುದು ಸಹ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ. ಪರಿಸ್ಥಿತಿಯ ಲಾಭ ಪಡೆದು ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡಿರುವ ಅತೃಪ್ತ ಶಾಸಕರೊಂದಿಗೆ ಅಂತರ ಕಾಯ್ದುಕೊಳ್ಳುವ ಪ್ರಯತ್ನವೂ ನಡೆದಿದೆ. ಹೀಗಾಗಿ, ಮುಂದಿನ ರಾಜಕೀಯ ಬೆಳವಣಿಗೆ ಆಧರಿಸಿ ಮುಂದುವರಿಯಲು ಬಿಜೆಪಿ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.

ಈ ಕಾರಣಗಳ ಹಿನ್ನೆಲೆಯಲ್ಲಿ ಸದ್ಯ ರಾಜ್ಯ ಬಿಜೆಪಿ ನಾಯಕರು ಮೈತ್ರಿ ಸರ್ಕಾರದ ಪತನ, ಬಿಜೆಪಿ ಸರ್ಕಾರ ರಚನೆ, ಅತೃಪ್ತ ಶಾಸಕರ ರಾಜೀನಾಮೆ ಇತರ ವಿಚಾರಗಳ ಬಗ್ಗೆ ಹೆಚ್ಚು ಪ್ರಸ್ತಾಪಿಸುತ್ತಿಲ್ಲ. ಇನ್ನೊಂದೆಡೆ, ಮೈತ್ರಿ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಜನಾಂದೋಲನ ರೂಪಿಸುವ ಪ್ರಯತ್ನ ನಡೆಸಿದ್ದು, ಸೂಕ್ತ ಸನ್ನಿವೇಶದ ನಿರೀಕ್ಷೆಯಲ್ಲಿದೆ.

ಮುಖ್ಯಮಂತ್ರಿಗಳು ಸರ್ಕಾರದ ಹಣದಲ್ಲಿ ಪಕ್ಷದ ಜಾತ್ರೆ ನಡೆಸುತ್ತಿದ್ದಾರೆ. ತೆರಿಗೆದಾರರ ಹಣದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದು, ಅದಕ್ಕಾಗಿ ಜೆಡಿಎಸ್‌ ಶಾಸಕರಿರುವ ಕ್ಷೇತ್ರಗಳನ್ನೇ ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎರಡೂ ಪಕ್ಷಗಳು ಸಂಘಟನೆಯತ್ತ ಗಮನ ಹರಿಸಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಇಲ್ಲದೆ ಇಲ್ಲ. ಅದಕ್ಕೆ ಪೂರಕವಾಗಿ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದ್ದು, ಸದ್ಯ ಸಂಘಟನೆ ಹಾಗೂ ಸದಸ್ಯತ್ವ ನೋಂದಣಿಗೆ ಒತ್ತು ನೀಡಲಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಬಿಜೆಪಿ ಸೂಕ್ತ ರಾಜಕೀಯ ನಿರ್ಧಾರ ಕೈಗೊಳ್ಳಲಿದೆ.
-ಎನ್‌.ರವಿಕುಮಾರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next