Advertisement

ಭರಪೂರ ಯೋಜನೆ ನೀರೀಕ್ಷೆಯಲ್ಲಿ ಸಿಎಂ ತವರು

01:11 PM Feb 16, 2018 | |

ಮೈಸೂರು: ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ತಮ್ಮ ಸರ್ಕಾರದ ಕಡೇಯ ಹಾಗೂ ಆರನೇ ಆಯವ್ಯಯವನ್ನು ಶುಕ್ರವಾರ ಮಂಡನೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ಇನ್ನೆರಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗುವುದರಿಂದ ಇದು ಚುನಾವಣಾ ಬಜೆಟ್‌ ಎಂದೇ ಬಿಂಬಿತವಾಗುತ್ತಿದೆ.

Advertisement

ಹೀಗಾಗಿ ತವರು ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಮೈಸೂರು ನಗರದ ಜನತೆ ಈ ಬಜೆಟ್‌ನಲ್ಲಿ ಭರಪೂರ ಯೋಜನೆ ಹಾಗೂ ಅನುದಾನದ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಭೆ ನಡೆಸಿ ಸಲಹೆ ಪಡೆದಿರುವ ಮುಖ್ಯಮಂತ್ರಿ ಮೈಸೂರಿಗೆ ಏನೇನು ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಮುಖವಾಗಿ ಬೆಳೆಯುತ್ತಿರುವ ಮೈಸೂರಿಗೆ ಸಮರ್ಪಕ ಕುಡಿಯುವ ನೀರು ಒದಗಿಸುವುದು, ಪ್ರವಾಸೋದ್ಯಮ ಅಭಿವೃದ್ಧಿ, ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಪಾರಂಪರಿಕ ನಗರ ಘೋಷಣೆಯಾಗಬೇಕಿದೆ. ಮೈಸೂರು ಕೈಗಾರಿಕೆಗಳ ಸಂಘ, ಮೈಸೂರು ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಬನ್ನಿಮಂಟಪ ಎ ಮತ್ತು ಬಿ ಬಡಾವಣೆ ಹಾಗೂ ವಿಶ್ವೇಶ್ವರ ನಗರ, ಮೈಸೂರು ದಕ್ಷಿಣ ಕೈಗಾರಿಕಾ ಪ್ರದೇಶದ ಮೂಲಭೂತ ಅಗತ್ಯತೆಯ ಪೂರೈಕೆಗಾಗಿ ಕನಿಷ್ಠ 10 ಕೋಟಿ ರೂ. ಮೀಸಲಿಡುವಂತೆ ಮನವಿ ಮಾಡಿದೆ.

ಅಲ್ಲದೇ, ಹೆಬ್ಟಾಳು, ಮೇಟಗಳ್ಳಿ, ಹೂಟಗಳ್ಳಿ ಬೆಳವಾಡಿ ಕೈಗಾರಿಕಾ ಪ್ರದೇಶಗಳ ರಸ್ತೆ ಅಗಲೀಕರಣ, ಡಕ್ಟ್ ಪೈಕ್‌ ಅಳವಡಿಕೆ, ಸಾಲು ಮರ ಬೆಳೆಸಲು ಸಸಿ ನೆಡುವಿಕೆ, ರಸ್ತೆ ಅಭಿವೃದ್ಧಿ ಇತ್ಯಾದಿ ಕಾಮಗಾರಿಗಳಿಗಾಗಿ ಕೆಐಎಡಿಬಿಗೆ 35ಕೋಟಿ ರೂ.ಗಳನ್ನು ಕಾಯ್ದಿರಿಸಬೇಕು. ಮೈಸೂರು ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕವಾಗಿ 30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗಾರಿಕೆಗಳಿಗೆ ನಿರಂತರ ವಿದ್ಯುತ್‌ ಸರಬರಾಜಿಗಾಗಿ ಗ್ಯಾಸ್‌ ಆಪರೇಟೆಡ್‌ ಸಬ್‌ ಸ್ಟೇಷನ್‌ ಸ್ಥಾಪನೆ ಪ್ರಕಟಿಸಬೇಕು.

ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಹೆಲಿಪ್ಯಾಡ್‌, ಕೆಐಎಡಿಬಿ ಕೈಗಾರಿಕಾ ಪ್ರದೇಶವನ್ನು ಕ್ಲಸ್ಟರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು, ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಂದಾಯ ಇಲಾಖೆಯಿಂದ ಕೆಐಎಡಿಬಿಗೆ ಹಸ್ತಾಂತರವಾಗಿರುವ ಪ್ರದೇಶಕ್ಕೆ ಸಮಾನಾಂತರವಾಗಿ ಕನಿಷ್ಠ 50 ಎಕರೆ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೈಗಾರಿಕಾ ಕ್ಲಸ್ಟರ್‌ ಹಾಗೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ಕೈಗಾರಿಕಾ ಪಾರ್ಕ್‌ಅನ್ನು ಕೇಂದ್ರ ಸರ್ಕಾರದ ಯೋಜನೆಯಲ್ಲಿ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಪ್ರಕಟಿಸಬೇಕು.

Advertisement

ಕೈಗಾರಿಕೆಗೆ ಬೇಕು ಆರ್ಥಿಕ ಬೆಂಬಲ: ಕೈಗಾರಿಕಾ ಪ್ರದೇಶದ ಕೆರೆಗಳ ಸಂರಕ್ಷಣೆ, ಕೈಗಾರಿಕೆ ಪ್ರದೇಶಗಳಿಗೆ ಸೋಲಾರ್‌ ಬೀದಿ ದೀಪ ಅಳವಡಿಕೆಗೆ ಕ್ರಮ, ಮೈಸೂರಿನಲ್ಲಿ ಸುಸಜ್ಜಿತ ರಫ್ತು ಕೇಂದ್ರ ಸ್ಥಾಪನೆ, ಕೈಗಾರಿಕಾ ನೀರು ದರ ಪರಿಷ್ಕರಣೆ, ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆಗೆ ಅಗತ್ಯ ಆರ್ಥಿಕ ಬೆಂಬಲದ ಜೊತೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಚಾಲನೆ ನೀಡುವಂತೆ ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್‌ ಕುಮಾರ್‌ ಜೈನ್‌ ಮನವಿ ಮಾಡಿದ್ದಾರೆ.

ಮೈಸೂರು ನಗರಕ್ಕೆ ಹಳೇ ಉಂಡುವಾಡಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ಸಮಗ್ರ ನೀರು ಸರಬರಾಜು ಯೋಜನೆಗೆ ಶ್ರೀರಂಗಪಟ್ಟಣ ತಾಲೂಕು ಬೀಚನಕುಪ್ಪೆ ಗ್ರಾಮದಲ್ಲಿ 88 ಎಕರೆ ಜಮೀನನ್ನು ಮೈಸೂರು ಮಹಾ ನಗರಪಾಲಿಕೆಯ ಹಳೇ ಉಂಡುವಾಡಿ ನೀರು ಸರಬರಾಜು ಯೋಜನೆಗೆ ಹಸ್ತಾಂತರಿಸಿ ಅಗತ್ಯ ಆರ್ಥಿಕ ಬೆಂಬಲ ನೀಡಬೇಕು.

ನಗರದ ದೇವರಾಜ ಮಾರುಕಟ್ಟೆಯ ಕಟ್ಟಡ ಹಾಗೂ ಲ್ಯಾನ್ಸ್‌ಡೌನ್‌ ಕಟ್ಟಡಗಳ ಪಾರಂಪರಿಕತೆ ಉಳಿಸಿಕೊಂಡು ದೆಹಲಿಯ ಪಾಲಿಕಾ ಬಜಾರ್‌ ಮಾದರಿ ಅಥವಾ ಅದಕ್ಕಿಂತ ಹೆಚ್ಚು ಸೌಲಭ್ಯವುಳ್ಳ ವಿನ್ಯಾಸದೊಂದಿಗೆ ಪಾರ್ಕಿಂಗ್‌ ಸೌಲಭ್ಯವನ್ನು ಒಳಗೊಂಡಂತೆ ನಿರ್ಮಿಸಲು ಪ್ರಸಕ್ತ ಬಜೆಟ್‌ನಲ್ಲಿ ಅಗತ್ಯ ಆರ್ಥಿಕ ಬೆಂಬಲ ನೀಡಬೇಕು.

ಕೈಗಾರಿಕಾ ಮಾಹಿತಿ ಕೇಂದ್ರ ಬೇಕು: ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕನಿಷ್ಠ 20 ಎಕರೆ ಪ್ರದೇಶದಲ್ಲಿ ಟ್ರಕ್‌ ಟರ್ಮಿನಲ್‌ ಅಭಿವೃದ್ಧಿಪಡಿಸಬೇಕು. ದೇವರಾಜ ಅರಸು ಬಹು ಕೌಶಲ್ಯ ಅಭಿವೃದ್ಧಿ ಹಾಗೂ ಕೈಗಾರಿಕಾ ಮಾಹಿತಿ ಕೇಂದ್ರ ಸ್ಥಾಪನೆ ಮಾಡಬೇಕು. ಅಂತರ್ಜಲ ವೃದ್ಧಿಗಾಗಿ ಕೆರೆಗಳ ಸಂರಕ್ಷಣೆ, ಕಲ್ಯಾಣಿ ಮತ್ತು ಬಾವಿಗಳ ಸ್ವತ್ಛತೆ, ಚೆಕ್‌ ಡ್ಯಾಂ ಸೇರಿದಂತೆ ಮಳೆ ನೀರಿನ

ಇಂಗು ಗುಂಡಿಗಳ ನಿರ್ಮಾಣ ಹಾಗೂ ನೀರಿನ ಬಗ್ಗೆ ಜನರಿಗೆ ಅರಿವು ಮೂಡಿಸಲು ರಾಜ್ಯದ ಪ್ರತಿ ಗ್ರಾಮಪಂಚಾಯ್ತಿಗೆ ಇಬ್ಬರು ಪೂರ್ಣಾವಧಿ ಕಾರ್ಯಕರ್ತರನ್ನು ನೇಮಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿ, ಈ ಕಾರ್ಯಕರ್ತರು ಎರಡು ತಿಂಗಳಿಗೆ ಒಮ್ಮೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಕಡ್ಡಾಯವಾಗಿ ವರದಿ ನೀಡಬೇಕು ಎಂದು ಪ್ರಾಧಿಕಾರದ ಸದಸ್ಯ ಪೊ›.ಕೆ.ಎಂ.ಜಯರಾಮಯ್ಯ ಮನವಿ ಮಾಡಿದ್ದಾರೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next