Advertisement

ಅನಿಷ್ಠ ಪದ್ಧತಿಗಳು ಇಂದಿಗೂ ಜೀವಂತ

07:55 AM Jan 30, 2019 | |

ಬಳ್ಳಾರಿ: ಬಾಲ್ಯ ವಿವಾಹ ನಡೆಯಲು ಕೇವಲ ಪೋಷಕರು ಮಾತ್ರವಲ್ಲ, ಅದಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿಕೊಡುವ ಮದುವೆಯ ಇತರೆ ವಿಭಾಗಗಳವರು ಸಹ ಕಾರಣರಾಗಲಿದ್ದಾರೆ. ಅಂತಹವರು ಎಷ್ಟೇ ದೊಡ್ಡವರು, ಪ್ರಭಾವಿಗಳಾಗಿದ್ದರೂ, ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶರು, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಬಿ.ಹಂದ್ರಾಳ್‌ ಖಡಕ್‌ ಎಚ್ಚರಿಕೆ ನೀಡಿದರು.

Advertisement

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಸಹಯೋಗದಲ್ಲಿ ಮಂಗಳವಾರ ನಡೆದ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಮತ್ತು ಬಾಲ್ಯವಿವಾಹ ನಿಷೇಧ ಕುರಿತು ಆಯೋಜಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದ ಅನಿಷ್ಠ ಪದ್ಧತಿಗಳಲ್ಲಿ ಬಾಲ್ಯವಿವಾಹವೂ ಒಂದು. ಆರ್ಥಿಕವಾಗಿ ಹಿಂದುಳಿದವರಲ್ಲಿ ಬಡತನ, ಅನಕ್ಷರತೆ, ಮೂಢನಂಬಿಕೆಗಳು ಬಾಲ್ಯವಿವಾಹ ಇಂದಿಗೂ ಜೀವಂತವಾಗಿರಲು ಕಾರಣಗಳಾಗಿವೆ. ಇಂಥ ಅನಿಷ್ಠ ಬಾಲ್ಯವಿವಾಹ ನಡೆಯಲು ಕೇವಲ ವಧು-ವರರ ಪೋಷಕರು ಮಾತ್ರವಲ್ಲ. ಆ ಮದುವೆಗೆ ಆಹ್ವಾನ ಪತ್ರಿಕೆ ಮುದ್ರಿಸಿದ ಮುದ್ರಣಕಾರರು, ಪುರೋಹಿತರು, ಮೌಲ್ವಿಗಳು, ಪಾದ್ರಿಗಳು, ಕಲ್ಯಾಣ ಮಂಟಪ, ಮಂದಿರಗಳ ವ್ಯವಸ್ಥಾಪಕರು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಹ ಕಾರಣರಾಗಲಿದ್ದು, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಹಾಗಾಗಿ ಬಾಲ್ಯವಿವಾಹವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈ ಜೋಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅಂತಹ ಸಂದರ್ಭ ಬಂದಾಗ ಕಾನೂನಿನ ರಕ್ಷಣೆ ಪಡೆಯಬೇಕು ಎಂದು ಸಲಹೆ ನೀಡಿದರು. ಇದಲ್ಲದೇ, ಕಲ್ಯಾಣ ಮಂಟಪದ ಮಾಲೀಕರು ಕೂಡ ವಧು-ವರರ ಪೂರ್ವಾಪರ ಮಾಹಿತಿಯನ್ನು ಪಡೆಯದೇ ಮಂಟಪವನ್ನ ಬಾಡಿಗೆ ರೂಪದಲ್ಲಿ ನೀಡಿದರೂ ಕಾನೂನಿನ ಪ್ರಕಾರ ಅಪರಾಧ. ಹಾಗಾಗಿ, ಯಾವುದೇ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸುವ ಕುರಿತು ಆಯೋಜಕರು ಮಾಹಿತಿ ನೀಡಿದ ಕೂಡಲೇ ವಧು-ವರರ ಮಾಹಿತಿ ಹಾಗೂ ವಯಸ್ಸು ಮತ್ತು ಪ್ರೌಢ ಶಿಕ್ಷಣ ಪೂರೈಸಿರುವ ಮಾಹಿತಿಯನ್ನು ಮೊದಲೇ ಪಡೆದುಕೊಂಡಿರಬೇಕು. ಅಲ್ಲದೇ, ಪ್ರಿಟಿಂಗ್‌ ಪ್ರಸ್‌ ಮಾಲೀಕರೂ ಸಹ ವಧು-ವರರ ಹೆಸರು ಮತ್ತು ವಯೋ ಮಾನದ ಮಾಹಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಸಂಬಂಧಪಟ್ಟ ಶಾಲೆಯ ಮುಖ್ಯ ಶಿಕ್ಷಕರಿಂದ ಪಡೆದುಕೊಳ್ಳಬೇಕೆಂದರು.

ಕಡ್ಡಾಯವಾಗಿ ವಧು-ವರರ ಹೆಸರನ್ನು ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆಯ ಮೇಲೆ ಮುದ್ರಿಸಬೇಕು. ಅವರ ವಯಸ್ಸನ್ನೂ ಕೂಡ ನಮೂದಿಸಬೇಕು. ಕೆಲವೊಮ್ಮೆ ವಯಸ್ಸು ಮುದ್ರಿಸದೇ ಕಾರ್ಡ್‌ ಅನ್ನು ಮುದ್ರಿಸುತ್ತಾರೆ. ಅಂತಹವರು ಮುದ್ರಿಸಿದ ಕಾರ್ಡಿನಿಂದಾಗಿ ಬಾಲ್ಯವಿವಾಹ ಮಾಡಿಕೊಂಡಿರುವ ಕುರಿತಾದ ಅಂಶ ಬೆಳಕಿಗೆ ಬಂದ್ರೆ ಕಾನೂನಾತ್ಮಕ ಅಪರಾಧವೆಂದು ಭಾವಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗೇಶ ಬಿಲ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರಿ ಉಪವಿಭಾಗಾಧಿಕಾರಿ ಕೆ.ಆರ್‌.ನಂದಿನಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಂ.ವಿಜಯಲಕ್ಷ್ಮೀ ಪ್ರಸಾದ್‌ರಾವ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ, ನ್ಯಾಯವಾದಿ ವಿಜಯಲಕ್ಷ್ಮೀ ಸೇರಿದಂತೆ ಇನ್ನಿತರರಿದ್ದರು.

Advertisement

ಸಮಾಜದ ಅನಿಷ್ಠ ಪದ್ಧತಿಗಳಲ್ಲಿ ಬಾಲ್ಯವಿವಾಹವೂ ಒಂದು. ಆರ್ಥಿಕವಾಗಿ ಹಿಂದುಳಿದವರಲ್ಲಿ ಬಡತನ, ಅನಕ್ಷರತೆ, ಮೂಢನಂಬಿಕೆಗಳು ಬಾಲ್ಯವಿವಾಹ ಇಂದಿಗೂ ಜೀವಂತವಾಗಿರಲು ಕಾರಣಗಳಾಗಿವೆ. ಇಂಥ ಅನಿಷ್ಠ ಬಾಲ್ಯವಿವಾಹ ನಡೆಯಲು ಕೇವಲ ವಧು-ವರರ ಪೋಷಕರು ಮಾತ್ರವಲ್ಲ. ಆ ಮದುವೆಗೆ ಆಹ್ವಾನ ಪತ್ರಿಕೆ ಮುದ್ರಿಸಿದ ಮುದ್ರಣಕಾರರು, ಪುರೋಹಿತರು, ಮೌಲ್ವಿಗಳು, ಪಾದ್ರಿಗಳು, ಕಲ್ಯಾಣ ಮಂಟಪ, ಮಂದಿರಗಳ ವ್ಯವಸ್ಥಾಪಕರು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಹ ಕಾರಣರಾಗಲಿದ್ದು, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಹಾಗಾಗಿ ಬಾಲ್ಯವಿವಾಹವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈ ಜೋಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅಂತಹ ಸಂದರ್ಭ ಬಂದಾಗ ಕಾನೂನಿನ ರಕ್ಷಣೆ ಪಡೆಯಬೇಕು.
•ನ್ಯಾ| ಎಸ್‌.ಬಿ.ಹಂದ್ರಾಳ್‌, ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ.

Advertisement

Udayavani is now on Telegram. Click here to join our channel and stay updated with the latest news.

Next