Advertisement

ದಾಳಿ ವಿಫ‌ಲ: ಐಎಸ್‌ಐನಿಂದ  ಇಬ್ಬರು ಭಾರತೀಯರ ಹತ್ಯೆ

10:08 AM Jan 23, 2017 | Team Udayavani |

ಹೊಸದಿಲ್ಲಿ: ಭಾರತದಲ್ಲಿ ರೈಲ್ವೇ ಜಾಲವನ್ನು ಗುರಿಯಾಗಿರಿಸಿಕೊಂಡು ನಡೆಸಲು ಉದ್ದೇಶಿಸಿರುವ ದಾಳಿ ವಿಫ‌ಲವಾಗಿರುವುದಕ್ಕೆ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಇಬ್ಬರು ಭಾರತೀಯರನ್ನು ಕೊಂದಿದೆ. ಹೀಗೆಂದು ಮೂಲಗಳನ್ನು ಉಲ್ಲೇಖೀಸಿ “ಇಂಡಿಯಾ ಟುಡೇ’ ವರದಿ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಬಿಹಾರ ಪೊಲೀಸರು ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೆಲ ಸಮಯದ ಹಿಂದೆ ಸಂಭವಿಸಿದ್ದ ರೈಲು ಅಪಘಾತಕ್ಕೆ ಐಎಸ್‌ಐ ನೆರವು ನೀಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಅದಕ್ಕೆ ಪೂರಕವಾಗಿ ನಾಲ್ವರನ್ನು ಬಂಧಿಸಿದ್ದರು ಕೂಡ. ಇಬ್ಬರು ಭಾರತೀಯರನ್ನು ಕೊಲ್ಲಿಸಿದ್ದಕ್ಕೆ ಆಡಿಯೋ ಟೇಪ್‌ ಕೂಡ ಇದೆ ಎಂದು ಚಾನೆಲ್‌ ವರದಿಯಲ್ಲಿ ಹೇಳಿದೆ. 

Advertisement

ಬೃಜ್‌ಕಿಶೋರ್‌ ಗಿರಿ ಎಂಬ ವ್ಯಕ್ತಿ ಅರುಣ್‌ ಮತ್ತು ದೀಪಕ್‌ ರಾಮ್‌ ಎಂಬ ಇಬ್ಬರನ್ನು ದೇಶದಲ್ಲಿರುವ ರೈಲ್ವೇ ಜಾಲದ ಮೇಲೆ ದಾಳಿ ನಡೆಸಲು ನಿಯೋಜನೆ ಮಾಡಿದ್ದ. ಆದರೆ ಅದನ್ನು ಅನುಷ್ಠಾನಗೊಳಿಸುವಲ್ಲಿ ಅವರಿಬ್ಬರು ವಿಫ‌ಲರಾಗಿದ್ದರು. ಹೀಗಾಗಿ ಅವರಿಬ್ಬರನ್ನು ನೇಪಾಲದಲ್ಲಿ ಗಿರಿ ಎಂಬಾತ ಕೊಂದಿದ್ದಾನೆ ಎಂದು ಹೇಳಲಾಗಿದೆ. ಇಂಥ ಕೃತ್ಯ ಎಸಗುವಂತೆ ಐಎಸ್‌ಐನ ಹ್ಯಾಂಡ್ಲರ್‌ ಶಮ್‌ಶೂಲ್‌ ಹೂಡಾ ಎಂಬಾತ ಸೂಚನೆ ನೀಡಿದ್ದ. ರೈಲ್ವೇ ಹಳಿಗಳಲ್ಲಿ ಸ್ಫೋಟ ನಡೆಸಲು ದೀಪಕ್‌ ಮತ್ತು ಅರುಣ್‌ ಸ್ಫೋಟಕಗಳನ್ನು ಇರಿಸಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದರಿಂದ ಸಂಭಾವ್ಯ ದುರಂತ ತಪ್ಪಿಹೋಗಿತ್ತು. ಇದರಿಂದಾಗಿ ಕ್ರುದ್ಧಗೊಂಡ ಗಿರಿ ಅವರಿಬ್ಬರನ್ನು ಹತ್ಯೆ ಮಾಡಿದ. ಅದರ ದಾಖಲೆಗಾಗಿ ಆಡಿಯೋವನ್ನು ಧ್ವನಿ ಮುದ್ರಿಸಿ ಶಮ್‌ಶೂಲ್‌ ಹೂಡಾಗೆ ಕಳುಹಿಸಿಕೊಟ್ಟಿದ್ದ.

ಹಾನಿಗೆ ಸಂಚು: ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಪಾಕ್‌ನ ಐಎಸ್‌ಐ ದೇಶದ ರೈಲ್ವೇ ಜಾಲಕ್ಕೆ ನಷ್ಟ ಉಂಟು ಮಾಡಲು ಮುಂದಾಗಿದೆ. ಅದನ್ನು ಕೇಂದ್ರ ಗುಪ್ತಚರ ಸಂಸ್ಥೆಗಳೂ ಪುಷ್ಟೀಕರಿಸಿವೆ. ಅದರ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಜೀವ ಹಾನಿ ಮಾಡುವ ದುರುದ್ದೇಶವೂ ಕೂಡ ಆ ಸಂಸ್ಥೆಗೆ ಇತ್ತು. ಅದಕ್ಕೆ ಪೂರಕವಾಗಿ ಕಾನ್ಪುರ ರೈಲು ದುರಂತಕ್ಕೆ ಪಾಕ್‌ನ ಗುಪ್ತಚರ ಸಂಸ್ಥೆಯೇ ಕಾರಣ ಎಂಬ ವಾದವನ್ನೂ ಕೇಂದ್ರ ಗುಪ್ತಚರ ಸಂಸ್ಥೆಗಳು ಹೇಳಿಕೊಳ್ಳುತ್ತಿವೆ.
ತನಿಖೆ ವೇಳೆ ಗೊತ್ತಾಯಿತು: ದೀಪಕ್‌ ಮತ್ತು ಅರುಣ್‌ ಎಂಬುವರ ಹತ್ಯೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರಬೇಕಾದರೆ ಕಾನ್ಪುರ ರೈಲು ದುರಂತಕ್ಕೂ ಐಎಸ್‌ಐಗೂ ಸಂಬಂಧವಿದೆ ಎಂಬ ಅಂಶ ಗೊತ್ತಾಯಿತು. ಅದಕ್ಕೆ ಪೂರಕವಾಗಿ ಬಿಹಾರದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಭಾರತ ಮತ್ತು ನೇಪಾಳ ಗಡಿ ಸಮೀಪ ಇರುವ ಘೋರ್‌ಸಹಾನ್‌ ಎಂಬಲ್ಲಿ ಹಳಿಯಲ್ಲಿ ಸ್ಫೋಟಕಗಳನ್ನು ಇರಿಸಲು ಹತ್ಯೆಗೀಡಾದ ದೀಪಕ್‌, ಅರುಣ್‌ ಮುಂದಾಗಿದ್ದರು. ಬಿಹಾರ ಪೊಲೀಸರು ಅದನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದರು. ಹೀಗಾಗಿ, ಅವರಿಬ್ಬರನ್ನು ನೇಪಾಳಕ್ಕೆ ಕರೆದೊಯ್ದು ಅಲ್ಲಿನ ಅರಣ್ಯ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಚಾನೆಲ್‌ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next