Advertisement

ಅಚ್ಚರಿ ಮೂಡಿಸಿದ “ಮಹಾ’ಬದಲಾವಣೆ!

09:55 AM Nov 25, 2019 | mahesh |

ಶಿವಸೇನೆಯ ಉದ್ಧವ್‌ ಠಾಕ್ರೆಯವರೇ ಮುಂದಿನ ಮುಖ್ಯಮಂತ್ರಿ ಎಂದು ಮೂರೂ ಪಕ್ಷಗಳ ನಾಯಕರ ಸಭೆಯಲ್ಲಿ ಬಹುತೇಕ ನಿರ್ಧಾರವಾಗಿರುವಾಗಲೇ, ಶನಿವಾರ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಗಮನಾರ್ಹ ವಿಷಯವೆಂದರೆ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಮತ್ತು ಶರದ್‌ ಪವಾರ್‌ ನಡುವೆ ನವದೆಹಲಿಯಲ್ಲಿ ನಡೆದಿದ್ದ ಭೇಟಿ…

Advertisement

ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರ ಶನಿವಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾದದ್ದು ಹೌದು. ಆದರೆ ಶನಿವಾರದ ವೇಳೆಗೆ ಸಂಪೂರ್ಣ ಚಿತ್ರಣವೇ ಬದಲಾದದ್ದು ಹಗಲಿನಷ್ಟೇ ಸತ್ಯ. ಈ ಬೆಳವಣಿಗೆಗೆ 2006ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ನಡೆದ ಮೈತ್ರಿಯನ್ನು ಉದಾಹರಣೆಗೆ ತೆಗೆದುಕೊಂಡರೆ ಸೂಕ್ತವೆನಿಸೀತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಇದ್ದ ಸರ್ಕಾರವನ್ನು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ನಾಯಕ ದಿ.ಅರುಣ್‌ ಜೇಟ್ಲಿ ಅವರನ್ನು ಸಂಪರ್ಕಿಸಿ 20 ತಿಂಗಳ ಸರ್ಕಾರ ರಚನೆ ಮಾಡಿದ್ದು ಈಗ ಇತಿಹಾಸದ ಪುಟಕ್ಕೆ ಸೇರಿದಂಥ ವಿಚಾರ. ಆಗ ಕೂಡ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ “ಬೆಳವಣಿಗೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ’ವಂತೆ. ಅಂಥ ಒಂದು ಬೆಳವಣಿಗೆ ನಂತರವೇ ಅವರಿಗೆ ಗೊತ್ತಾಗಿತ್ತು ಎಂದು ಕೆಲ ಮಾಧ್ಯಮಗಳು ಹೇಳಿದವು..

ಅದೇ ಮಾದರಿಯ ಬೆಳವಣಿಗೆ ಮಹಾರಾಷ್ಟ್ರದಲ್ಲಿ ನಡೆದಿದೆ. ಹೇಳಿ ಕೇಳಿ ಅಜಿತ್‌ ಪವಾರ್‌ ಮತ್ತು ಅವರ ತಂದೆ ಅನಂತ ರಾವ್‌ ಪವಾರ್‌ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ರ ದೊಡ್ಡಣ್ಣ. ಹೀಗಾಗಿ, ಅವರಿಬ್ಬರ ನಡುವೆ ಇರುವುದು ರಕ್ತಸಂಬಂಧ. ಅದು ಇಲ್ಲಿ ಕೆಲಸ ಮಾಡಿದೆಯೋ ಇಲ್ಲವೋ ಗೊತ್ತಿಲ್ಲ. 2006ರಲ್ಲಿ ಕರ್ನಾಟಕದಲ್ಲಿ ಇದ್ದ ಸ್ಥಿತಿ ಅಲ್ಲಿ ಇರಲಿಲ್ಲ. ಶಿವಸೇನೆಯ ಉದ್ಧವ್‌ ಠಾಕ್ರೆಯವರೇ ಮುಂದಿನ ಮುಖ್ಯಮಂತ್ರಿ ಎಂದು ಮೂರೂ ಪಕ್ಷಗಳ ನಾಯಕರ ಸಭೆಯಲ್ಲಿ ಬಹುತೇಕ ನಿರ್ಧಾರವಾಗಿರುವಾಗಲೇ, ಶನಿವಾರ ಬೆಳಗ್ಗೆ ಸಂಪೂರ್ಣ ಚಿತ್ರಣವೇ ಬದಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಸಿಪಿಯ ಹಿರಿಯ ಶರದ್‌ ಪವಾರ್‌ ನಡುವೆ ನವದೆಹಲಿಯಲ್ಲಿ ನ.20ರಂದು ನಡೆದಿದ್ದ ಭೇಟಿ ಎಲ್ಲರ ಹುಬ್ಬೇರಿಸಿತ್ತು. ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಪ್ರಧಾನಿಯವರು ಶರದ್‌ ಪವಾರ್‌ ಕುರಿತು ಆಡಿದ ಮೆಚ್ಚುಗೆಯ ಮಾತುಗಳು ಈಗ ಪ್ರಸ್ತುತವೆನಿಸುವುದು ಸಹಜ! ಅದರ ಈ ಒಳಸುಳಿ ಎಲ್ಲಿಯೂ ಸೋರಿಕೆಯಾಗದಂತೆ ನೋಡಿಕೊಳ್ಳಲಾಗಿತ್ತು ಎನ್ನುವುದು ಗಮನಾರ್ಹ ಸಂಗತಿ.

ಶರದ್‌ ಪವಾರ್‌ ಮಹಾರಾಷ್ಟ್ರ ಮತ್ತು ದೇಶದ ರಾಜಕೀಯದ ಭೀಷ್ಮ ಎನಿಸಿಕೊಂಡವರು. ಸರಿ ಸುಮಾರು ಅರವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಹಲವು ರೀತಿಯ ಪಟ್ಟು-ಮಟ್ಟುಗಳನ್ನು ಹಾಕಿ ಏಟು ತಿಂದು, ಪಳಗಿದವರು. ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಆಡಳಿತ ಇರುವ ಸಂದರ್ಭದಲ್ಲಿ ಅಜಿತ್‌ ಪವಾರ್‌ ಮೇಲೆ ನೀರಾವರಿ ಯೋಜನೆಯಲ್ಲಿ ಬಹುಕೋಟಿ ರೂಪಾಯಿ ಮೌಲ್ಯದ ಹಗರಣ ಆರೋಪ ಹಾಗೂ ಮಹಾರಾಷ್ಟ್ರ ರಾಜ್ಯ ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದಿತ್ತು ಎಂದು ಹೇಳಲಾಗಿರುವ 2,500 ಕೋಟಿ ರೂಪಾಯಿ ಮೌಲ್ಯದ ಹಗರಣದಲ್ಲಿ ಭಾಗಿಯಾದ ಆರೋಪ ಮರಾಠಾ ಪವರ್‌ ಮ್ಯಾನ್‌ ವಿರುದ್ಧ ಇದೆ. ವಿಧಾನಸಭೆ ಚುನಾವಣೆಗೆ ಮುನ್ನವೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ವಿಚಾರಣೆಗೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಶರದ್‌ ಪವಾರ್‌ ಅವರೇ ಖುದ್ದಾಗಿ ಮುಂಬೈನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ತೆರಳುವುದಕ್ಕೆ ಮುಂದಾದರಾದರೂ, ಹಲವು ಕಾರಣಗಳಿಂದಾಗಿ ಅವರಿಗೆ ಹೋಗಲು ಆಗಲಿಲ್ಲ. ದೊಡ್ಡಣ್ಣನ ಮಗ ಅಜಿತ್‌ ಪವಾರ್‌ ರಾಜಕೀಯ ಭವಿಷ್ಯ ಮುಕ್ತಾಯವಾಗದಿರಲಿ ಎಂಬ ಕಾರಣದಿಂದ ಪವಾರ್‌ “ಮಹಾರಾಷ್ಟ್ರ ರೈತರಿಗೆ ಪರಿಹಾರ ಕೊಡಿಸುವ’ ಹೆಸರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಎನ್‌ಸಿಪಿ-ಬಿಜೆಪಿ ಸರ್ಕಾರ ರಚನೆ ಮಾಡುವ ಮಾತುಕತೆ ನಡೆಸಿದ್ದಿರಲೂಬಹುದು!

Advertisement

ಶನಿವಾರ ಬೆಳಗ್ಗೆ ದೇವೇಂದ್ರ ಫ‌ಡ್ನವೀಸ್‌ ಜತೆಗೆ ಅಜಿತ್‌ ಪವಾರ್‌ ಮಾತ್ರ ಪ್ರಮಾಣ ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಪಕ್ಷದ ಇತರ ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕರಿಸಬಹುದೇನೋ? ಶರದ್‌ ಪವಾರ್‌ ತಾವು ಇದನ್ನು ನಿರೀಕ್ಷೆ ಮಾಡಿಯೇ ಇರಲಿಲ್ಲ ಎಂದಿದ್ದಾರೆ. ಉದ್ಧವ್‌ ಠಾಕ್ರೆಯವರೇ ಮುಖ್ಯಮಂತ್ರಿ ಎಂದು ಹೇಳಿ ಕೊಂಡಿದ್ದವರು, ಈ ಬೆಳವಣಿಗೆ ಆಘಾತ ತಂದಿದೆ ಎನ್ನುತ್ತಿದ್ದಾರೆ.

ಆದರೆ “ತಾವಿದನ್ನು ನಿರೀಕ್ಷೆ ಮಾಡಿಯೇ ಇರಲಿಲ್ಲ’ ಎಂದು ಶರದ್‌ ಪವಾರ್‌ ಎಷ್ಟೇ ಹೇಳಿಕೊಳ್ಳಲಿ, ಪ್ರಮಾಣ ಮಾ ಡಲಿ. 1978ರ ಜುಲೈನಲ್ಲಿ ಅವರೇ ನಡೆಸಿದ್ದ ಕ್ಷಿಪ್ರ ಕ್ರಾಂತಿ 2019ರಲ್ಲಿ ಪುನರಾವರ್ತನೆಯಾಗಿದೆಯಷ್ಟೇ. ಅಂದು ಶರದ್‌ ಪವಾರ್‌ ವಸಂತದಾದಾ ಪಾಟೀಲ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ರಾತ್ರಿ ಬೆಳಗಾಗುವುದರ ಒಳಗೆ ಪತನಗೊಳಿಸಿದ್ದರು. ಈಗ ಇಳಿ ವಯಸ್ಸಿನಲ್ಲಿರುವ ಪವಾರ್‌ಗೆ ಆಗ 38 ವರ್ಷ. ಪ್ರೋಗ್ರೆಸಿವ್‌ ಡೆಮಾಕ್ರಾಟಿಕ್‌ ಫ್ರಂಟ್‌ ಎಂಬ ಪಕ್ಷದ ಹೆಸರಿನಲ್ಲಿ ಅವರು ಕಾಂಗ್ರೆಸ್‌ ಅನ್ನು ವಿಭಜಿಸಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಅವರು ಆ ಕಾಲಕ್ಕೆ ಮಹಾರಾಷ್ಟ್ರದ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 580 ದಿನಗಳ ಕಾಲ ಅವರು ಆ ಹುದ್ದೆಯಲ್ಲಿದ್ದರು. ನಂತರ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ರಾಜ್ಯ ಸರ್ಕಾರವನ್ನು ವಜಾ ಮಾಡಿತ್ತು. 1986ರಲ್ಲಿ ರಾಜೀವ ಗಾಂಧಿಯವರು ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದ ಬಳಿಕ ಶರದ್‌ ಪವಾರ್‌ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.

ಸದ್ಯ ಶರದ್‌ ಪವಾರ್‌ಗೆ 1978ರ ಜುಲೈ ಘಟನೆ ನೆನಪಾಗಿರಲೂ ಸಾಕು. ಹಾಗಿದ್ದರೆ ಬಿಜೆಪಿ-ಎನ್‌ಸಿಪಿ ಮೈತ್ರಿ ಕೂಟ ಸರ್ಕಾರ ಐದು ವರ್ಷ ಪೂರ್ಣಾವಧಿ ಮುಗಿ ಸೀ ತೇ ಇಲ್ಲವೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಇಪ್ಪತ್ತು ವರ್ಷಗಳ ದೇಶದ ವಿವಿಧ ರಾಜ್ಯಗಳಲ್ಲಿನ ಸರ್ಕಾರ ರಚನೆಯ ಕಸರತ್ತುಗಳನ್ನು ಅವಲೋಕಿಸಿದಾಗ, “ಅಭಿವೃದ್ಧಿ’, “ಉದ್ಧಾರ’, “ರೈತರು, ದೀನರ ಪುರೋಭಿವೃದ್ಧಿ’ಗಳೆಲ್ಲ ಅಧಿಕಾರ ಪಡೆಯುವ ಚಿಮ್ಮು ಹಲಗೆಯ ಹಂತಗಳಷ್ಟೇ. ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಬೆಂಬಲ ನೀಡಿದರೆ ಶರದ್‌ - ಅಜಿತ್‌ ವಿರುದ್ಧದ ಹಗರಣಗಳು ಮಾಫಿಯಾದಾವೇ?

ಶಿವಸೇನೆಯವರಿಗೆ ಬೆಂಬಲ ನೀಡಬೇಕಿದ್ದರೆ
ಎನ್‌ಡಿಎಯಿಂದ ಹೊರಬರಬೇಕು ಎಂದು ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ಹೇಳಿ 24 ಗಂಟೆಗಳು ಕಳೆಯುಷ್ಟರಲ್ಲಿ ಆ ಪಕ್ಷದ ಸಂಸದ ಅರವಿಂದ ದಾತಾರ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜತೆಗೆ ರಾಜ್ಯಸಭೆ, ಲೋಕಸಭೆಯಲ್ಲಿಯೂ ಅವರಿಗೆ ಪ್ರತಿಪಕ್ಷಗಳ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕೆ ಶಿವಸೇನೆ ವಕ್ತಾರ ಸಂಜಯ ರಾವುತ್‌ ಆಕ್ಷೇಪ ಮಾಡಿದ್ದುಂಟು. ಎನ್‌ಡಿಎ ತ್ಯಜಿಸುವ ಪ್ರಕ್ರಿಯೆ ಪೂರ್ತಿಯಾಗಿಲ್ಲ ಎಂದು ಹೇಳಿದ್ದರವರು. ಹಾಗಿದ್ದರೆ, ರಾವುತ್‌ ಅವರಿಗೆ ಎನ್‌ಸಿಪಿ ಕೈಕೊಡಲಿದೆಯೇ ಎಂಬ ಸುಳಿವು ಸಿಕ್ಕಿತ್ತೇ? ಮತ್ತೆ ಬಿಜೆಪಿ ಜತೆಗೆ ಹಿಂಬಾಗಿಲ ಮಾತುಕತೆಗೆ ಯತ್ನವಾಗಿತ್ತೋ ಇಲ್ಲವೋ ಸದ್ಯಕ್ಕೆ ನಿಲುಕದ ವಿಚಾರ ಮತ್ತು ಯಾವುದೇ ಹಂತದಲ್ಲಿ ಈ ಅಂಶವನ್ನು ಪುಷ್ಟೀಕರಿಸುವ ಅಂಶಗಳಿಲ್ಲ.

ಶರದ್‌ ಪವಾರ್‌ ಮತ್ತು ನರೇಂದ್ರ ಮೋದಿ-ಅಮಿತ್‌ ಶಾ ಆಟದಲ್ಲಿ ನಿಜಕ್ಕೂ ಸೋತದ್ದು ಶಿವಸೇನೆ ಮತ್ತು ಕಾಂಗ್ರೆಸ್‌. ಉದ್ಧವ್‌ ಠಾಕ್ರೆಯವರು ತಂದೆ ಮತ್ತು ಪಕ್ಷದ ಸಂಸ್ಥಾಪಕ ಬಾಳಾ ಸಾಹೇಬ್‌ ಠಾಕ್ರೆಯವರಿಗೆ ಒಂದಲ್ಲ ಒಂದುದಿನ ಶಿವಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮಾಡಿಸುತ್ತೇನೆ ಎಂದು ಹೇಳಿಕೊಂಡಿದ್ದರು ಎಂಬ ಅಂಶ (ಅ.21ರ ಬಳಿಕ ಉದ್ಧವ್‌ ಸಾರ್ವಜನಿಕವಾಗಿ ಹೇಳಿದ ಮಾತುಗಳು) ಸದ್ಯಕ್ಕೆ ಈಡೇರಲಿಲ್ಲ. ಇನ್ನು ಕಾಂಗ್ರೆಸ್‌ಗೆ ಶಿವಸೇನೆಯ ಮೂಲಕ ಮುಂದಿನ ವರ್ಷಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು ವಿಧಾನಸಭೆ ಮತ್ತು 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸಿ, ಪೂರ್ಣ ಪ್ರಮಾಣದಲ್ಲಿ ಅಲ್ಲದೇ ಇದ್ದರೂ, ಎನ್‌ಡಿಎಗೆ ಪ್ರತಿರೋಧ ನೀಡುವ ಅವರ ದೂರಾಲೋಚನೆ ವಿಫ‌ಲವಾಗಿದೆ. ಹಾಗಿದ್ದರೆ ಮುಂದೇನು ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಷ್ಟೆ. ಕಾನೂನಿನ ಮೂಲಕ ಹೋರಾಟ ನಡೆಸುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ಹೇಳಿಕೊಂಡಿದ್ದಾರೆ.

ಕುತೂಹಲಕಾರಿ ಅಂಶವೇನೆಂದರೆ, ಶಿವಸೇನೆ- ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿಕೂಟದ ರಚನೆಯನ್ನೇ ಪ್ರಶ್ನೆ ಮಾಡಿ ಶುಕ್ರವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಬಿಜೆಪಿ ಮತ್ತು ಶಿವಸೇನೆ ಜತೆಯಾಗಿ ಮತಯಾಚನೆ ಮಾಡಿದ್ದರಿಂದ ಅವರಿಗೆ ರಾಜ್ಯದ ಜನರು ಮತಹಾಕಿದ್ದಾರೆ. ಈಗ ಶಿವಸೇನೆ ಬಿಜೆಪಿ ಸಖ್ಯ ಬಿಟ್ಟು ಭಿನ್ನ ಸಿದ್ಧಾಂತಗಳ ಪಕ್ಷಗಳ ಜತೆಗೆ ಮೈತ್ರಿ ಮಾಡಿದ್ದು ಯಾವ ನ್ಯಾಯ. ಅದಕ್ಕೆ ಸುಪ್ರೀಂಕೋರ್ಟ್‌ ಪರಿಹಾರ ನೀಡಬೇಕು ಎಂದು ಅರ್ಜಿಯಲ್ಲಿನ ಪ್ರಧಾನ ಅರಿಕೆ. ಇಪ್ಪತ್ತನಾಲ್ಕು ಗಂಟೆಗಳಲ್ಲಿ ಆ ಸ್ಥಿತಿಯೂ ಬದಲಾಗಿದೆ.

– ಸದಾ ಶಿವ ಖಂಡಿಗೆ

Advertisement

Udayavani is now on Telegram. Click here to join our channel and stay updated with the latest news.

Next