Advertisement

ಸೌದಿಯಿಂದ ಬಂದ ಆರೋಪಿ ಬಂಧನ

01:00 AM Mar 20, 2019 | Harsha Rao |

ಮಂಗಳೂರು: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ಹಾಕಿ ಕೊಲೆ ಬೆದರಿಕೆಯೊಡ್ಡಿದ್ದ ಯುವಕನನ್ನು ಕಾವೂರು ಪೊಲೀಸರು ಮಂಗಳವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

Advertisement

ಪುತ್ತೂರು ನಿವಾಸಿ ಹಕೀಮ್‌ ಬಂಧಿತ ಯುವಕ. ಈತ ಸೌದಿ ಆರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾನೆ. ಮಂಗಳವಾರ ಮುಂಜಾನೆ ಸೌದಿ ಆರೇಬಿಯಾದಿಂದ ಊರಿಗೆ ಆಗಮಿಸುತ್ತಿದ್ದ ಸಂದರ್ಭ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲಾಣದಲ್ಲಿ ಹಕೀಮ್‌ನನ್ನು ಬಂಧಿಸಲಾಯಿತು.

ಪೂಜಾರಿ ಹೇಳಿದ್ದೇನು?
ಜನಾರ್ದನ ಪೂಜಾರಿ ಅವರು ಕೆಲವು ತಿಂಗಳ ಹಿಂದೆ ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಸಂದರ್ಭ “ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ಹೇಳಿಕೆಯನ್ನು ವಿರೋಧಿಸಿ ಯುವಕನೋರ್ವ ಪೂಜಾರಿ ಅವರಿಗೆ ಜೀವ ಬೆದರಿಕೆಯೊಡ್ಡುವ ರೀತಿಯಲ್ಲಿ ವೀಡಿಯೋ ರೆಕಾರ್ಡ್‌ ಮಾಡಿಕೊಂಡು ವಾಟ್ಸ್‌ ಆ್ಯಪ್‌ನಲ್ಲಿ ರವಾನೆ ಮಾಡಿದ್ದು, ಅದು ವೈರಲ್‌ ಆಗಿತ್ತು.

ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಲವಾರು ಮಂದಿ ಸೈಬರ್‌ ಪೊಲೀಸ್‌ ಠಾಣೆ ಸೇರಿದಂತೆ ನಗರದ ವಿವಿಧ ಪೊಲೀಸ್‌ ಠಾಣೆಗಳಿಗೆ ದೂರು ನೀಡಿದ್ದರು. ಆರೋಪಿ ಸೌದಿ ಅರೇಬಿಯಾದಲ್ಲಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಆತನ ಬಂಧನಕ್ಕೆ ಕಾರ್ಯ ಯೋಜನೆ ರೂಪಿಸಿ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next