Advertisement

ಗಂಗೊಳ್ಳಿಯಲ್ಲಿ ಕಳೆಗಟ್ಟಿದ ಆಳ್ವಾಸ್‌ ಸಾಂಸ್ಕೃತಿಕ ವೈಭವ

12:30 AM Feb 08, 2019 | |

ಆಂಧ್ರದ ಬಂಜಾರ ನೃತ್ಯ , ಶಾಸ್ತ್ರೀಯ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ನವದುರ್ಗೆಯರ ವೈಭವ , ಗುಜರಾತಿನ ಗರ್ಭಾ ಮತ್ತು ದಾಂಡಿಯ ನೃತ್ಯ ಲವಲವಿಕೆ, ಆಕರ್ಷಕ ವಸ್ತ್ರ ವಿನ್ಯಾಸ, ಗಾಂಭೀರ್ಯ ಮತ್ತು ನಗುವಿನಿಂದ ಗಮನಸೆಳೆದರೆ, ಮಣಿಪುರ ಸ್ಟಿಕ್‌ ಡ್ಯಾನ್ಸ್‌ ಮತ್ತು ಮೂವತ್ತಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದ ಮಲ್ಲಕಂಬ ಪ್ರದರ್ಶನ ಆಳ್ವಾಸ್‌ ಮಕ್ಕಳ ಏಕಾಗ್ರತೆ ಪರಿಶ್ರಮ ನೈಪುಣ್ಯಕ್ಕೆೆ ಸಾಕ್ಷಿ ನುಡಿದವು. 

Advertisement

ಗಂಗೊಳ್ಳಿಯ ಹಸಿ ಮೀನು ವ್ಯಾಪಾರಸ್ಥರ ಸಂಘ ತನ್ನ ದಶಮಾನೋತ್ಸವದ ಅಂಗವಾಗಿ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್‌ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬೃಹತ್ತಾದ ವೇದಿಕೆಯಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಆಳ್ವಾಸ್‌ನ ಪ್ರತಿಭಾವಂತ ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ಕಾರ್ಯಕ್ರಮ ಜನಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. 

 ಮೊದಲಿಗೆ ಕೇರಳದ ಮೋಹಿನಿಯಾಟ್ಟಂನಲ್ಲಿ ಅಷ್ಟಲಕ್ಷ್ಮೀ ನೃತ್ಯದೊಂದಿಗೆ ವೈಭವಕ್ಕೆ ನಾಂದಿ ಹಾಡಿದ ವಿದ್ಯಾರ್ಥಿಗಳು ಜನರನ್ನು ರಂಜಿಸಿ ನಿರೀಕ್ಷೆಯನ್ನು ಹೆಚ್ಚಿಸಿದರು. ಆ ಬಳಿಕ ಬಡಗುತಿಟ್ಟಿನ ಶೈಲಿಯಲ್ಲಿ ಪ್ರಸ್ತುತಪಡಿಸಿದ ರಾಮಾಯಣ ಕತೆಯ ಯಕ್ಷಗಾನ ಮಂಥರೆಯ ಕುಹಕ ನಡೆ,ರಾಮ ಲಕ್ಷ್ಮಣ ಸೀತೆಯರ ವನವಾಸ, ಗುಹಾ ಜೊತೆ ದೋಣಿಯ ಪಯಣ, ಶೂರ್ಪನಖೀಯ ದ್ವೇಷ, ರಾವಣನಿಂದ ಸೀತೆಯ ಅಪಹರಣ, ಹನುಮಂತ ಸೀತೆಯನ್ನು ಭೇಟಿಯಾಗಿ ಉಂಗುರ ನೀಡಿದ್ದು, ರಾಮ ರಾವಣರ ಯುದ್ಧ ,ಸೀತೆ ಅಗ್ನಿ ಪ್ರವೇಶ ಆ ಬಳಿಕ ಶ್ರೀ ರಾಮ ಪಟ್ಟಾಭಿಷೇಕ ಇತ್ಯಾದಿ ಸನ್ನಿವೇಶಗಳನ್ನೊಳಗೊಂಡು ಪರಿಣಾಮಕಾರಿಯಾಗಿ ಮೂಡಿಬಂತು.

ಆಂಧ್ರದ ಬಂಜಾರ ನೃತ್ಯ , ಶಾಸ್ತ್ರೀಯ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ನವದುರ್ಗೆಯರ ವೈಭವ , ಗುಜರಾತಿನ ಗರ್ಭಾ ಮತ್ತು ದಾಂಡಿಯ ನೃತ್ಯ ಲವಲವಿಕೆ, ಆಕರ್ಷಕ ವಸ್ತ್ರ ವಿನ್ಯಾಸ, ಗಾಂಭೀರ್ಯ ಮತ್ತು ನಗುವಿನಿಂದ ಗಮನಸೆಳೆದರೆ, ಮಣಿಪುರ ಸ್ಟಿಕ್‌ ಡ್ಯಾನ್ಸ್‌ ಮತ್ತು ಮೂವತ್ತಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದ ಮಲ್ಲಕಂಬ ಪ್ರದರ್ಶನ ಆಳ್ವಾಸ್‌ ಮಕ್ಕಳ ಏಕಾಗ್ರತೆ ಪರಿಶ್ರಮ ನಿಪುಣತೆಗೆ ಸಾಕ್ಷಿ ನುಡಿದವು. 

 ಮಳೆಗಾಗಿ ಕಾಯುವ ಮತ್ತು ಭಕ್ತಿಯಿಂದ ದೇವರನ್ನು ಆರಾಧಿಸುವ ಆಶಯದ ಹಿನ್ನೆಲೆಯುಳ್ಳ ಮೂರು ಬಗೆಯ ನೃತ್ಯ ಪ್ರಕಾರಗಳನ್ನು ಮೇಳೈಸಿಕೊಂಡು ಶ್ರೀಲಂಕಾದ ಕ್ಯಾಂಡಿಯನ್‌ ನೃತ್ಯ ವಿಶಿಷ್ಟ ವಸ್ತ್ರ ವಿನ್ಯಾಸ, ಸಾಹಸ ಪ್ರದರ್ಶನ ಮತ್ತು ಬೆಂಕಿ ಪ್ರಯೋಗಗಳಿಂದ ರೋಮಾಂಚನವನ್ನು ಮೂಡಿಸಿತು. 

Advertisement

ಮಣಿಪುರದ ಭಕ್ತಿ ಚಳವಳಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನೃತ್ಯವನ್ನು ತಮ್ಮದೇ ಶೈಲಿಯಲ್ಲಿ ಧೋಲ್‌ ಚಲಮ್‌ ಮೂಲಕ ವಿದ್ಯಾರ್ಥಿಗಳು ಪ್ರದರ್ಶಿಸಿ ದರು. ವೇದಿಕೆಯ ಮೇಲೆಯೇ ನೇರವಾದ ಹಾಡುಗಾರಿಕೆ, ವಯೋಲಿನ್‌ ಹೋಲುವ ತಂತಿವಾದ್ಯ, ತಾಳ, ಡೋಲು ಇತ್ಯಾದಿಗಳನ್ನು ಬಳಸಿಕೊಂಡಿದ್ದರಿಂದ ಈ ನೃತ್ಯ ಮತ್ತಷ್ಟು ಕಳೆಗಟ್ಟಿತ್ತು. ಸುಗ್ಗಿ ಕಾಲದಲ್ಲಿ ಸಂಭ್ರಮಿಸುವ ಪಂಜಾಬ್‌ನ ಬಾಂಗ್ರಾ ನೃತ್ಯ ಎಂದಿನ ಜೋಶ್‌ನಿಂದ ಮನಸೆಳೆದರೆ ಕಥಕ್‌ನ ನವರಂಗ್‌ ತನ್ನ ಲಯಬದ್ಧತೆಯೊಂದಿಗೆ ಚಿತ್ತಾಕರ್ಷಕ ಉಡುಗೆಗಳೊಂದಿಗೆ ವೀಕ್ಷಕರ ಹೃದಯ ತಲುಪಿತ್ತು. 

ಪಶ್ಚಿಮ ಬಂಗಾಳದ ದೇವರ ಆರಾಧನೆಯ ಭಾಗವಾಗಿರುವ ದುಷ್ಟ ಸಂಹಾರ ಶಿಷ್ಟ ರಕ್ಷಣೆಯ ಸಂದೇಶವುಳ್ಳ ವಿಶಿಷ್ಟ ಪುರುಲಿಯಾ ಸಿಂಹ ಬೇಟೆಯ ನೃತ್ಯ ಇಡೀ ವೇದಿಕೆಗೆ ಹೊಸತೊಂದು ಕಳೆ ತಂದಿತ್ತು. 16 ಸಿಂಹಗಳು ಮತ್ತು ಎರಡು ಕೋಣಗಳು ಅರ್ಭಟಿಸಿದ ಪರಿ ನೋಡುಗರನ್ನು ಹಿಡಿದಿಟ್ಟಿತ್ತು. ಎರಡು ಕೋಣಗಳನ್ನು ಬರೋಬ್ಬರಿ 16 ಸಿಂಹಗಳು ಬೇಟೆಯಾಡುವ ಕೊನೆಯ ದೃಶ್ಯ ಅಂತಕರಣವನ್ನು ಮಾನವೀಯ ನೆಲೆಯಲ್ಲಿ ಕಲಕಿತ್ತು. ಎಲ್ಲೋ ಒಂದು ಕಡೆ ಅದು ಕ್ರೌರ್ಯವನ್ನು ಪ್ರತಿನಿಧಿಸಿತಲ್ಲ ಎನ್ನುವಂತಿದ್ದರೂ ಒಟ್ಟಾರೆ ನೃತ್ಯ ಆಕರ್ಷವಾಗಿ ಮೂಡಿಬಂದಿತ್ತು. ಕೊನೆಯದಾಗಿ ಪ್ರಸ್ತುತ ಪಡಿಸಿದ ತೆಂಕುತಿಟ್ಟಿನ ಯಕ್ಷಪ್ರಯೋಗ ಅಗ್ರ ಪೂಜೆಯ ಹಿಮ್ಮೇಳ ಮುಮ್ಮೇಳಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಮಧ್ಯೆ ಸ್ವಲ್ಪವಾದರೂ ಮಾತುಗಳು ಇದ್ದಿದ್ದರೆ ಮತ್ತಷ್ಟು ಚೆನ್ನಾಗಿ ಬರುತಿತ್ತೇನೋ ಎಂತನ್ನಿಸಿದ್ದು ಸಹಜ. 

ನರೇಂದ್ರ ಎಸ್‌. ಗಂಗೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next