Advertisement

Blackmail: 30 ವಿವಿಧ ಠಾಣೆಗಳ ಪೊಲೀಸರಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದ ಆರೋಪಿ ಸೆರೆ

11:03 AM Aug 08, 2024 | Team Udayavani |

ಬೆಂಗಳೂರು: ಪೊಲೀಸ್‌ ಠಾಣೆಗಳಲ್ಲಿ ಆರೋಪಿಗಳನ್ನು ಅಕ್ರಮವಾಗಿ ಲಾಕಪ್‌ನಲ್ಲಿ ಇಟ್ಟಿರುವುದಾಗಿ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಸುಳ್ಳು ದೂರುಗಳನ್ನು ನೀಡಿ  ದಲ್ಲದೆ ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಭಾರತಿನಗರದ ಸೈಯ್ಯದ್‌ ಸರ್ಫರಾಜ್ ಅಹ ಮದ್‌ (35) ಬಂಧಿತ. ಜುಲೈ 24ರಂದು ಶಿವಾಜಿ ನಗರ ಪೊಲೀಸ್‌ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಮೊಹಮ್ಮದ್‌ ಇರ್ಷಾದ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೊಹಮ್ಮದ್‌ ಇರ್ಷಾದ್‌ನನ್ನು ಕಾನೂನುಬಾಹಿರವಾಗಿ ಪೊಲೀಸ್‌ ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ಆರೋಪಿ ದೂರು ನೀಡಿದ್ದ. ಈ ದೂರಿನ ಹಿನ್ನೆಲೆಯಲ್ಲಿ ಮಾನವ ಹಕ್ಕು ಅಧಿಕಾರಿಗಳು ಠಾಣೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿ ಆ ಪ್ರಕರಣವನ್ನು ಹಿಂಪಡೆದುಕೊಳ್ಳಲು 50 ಸಾವಿರ ರೂ. ನೀಡುವಂತೆ ಪೊಲೀಸರ ಬಳಿಯೇ ಬೇಡಿಕೆಯಿಟ್ಟಿದ್ದ. ಅದರ ಮುಂಗಡವಾಗಿ ಜುಲೈ 29ರಂದು ಕ್ವೀನ್ಸ್‌ ರಸ್ತೆಯ ಬಳಿ ಪೊಲೀಸ್‌ ಅಧಿಕಾರಿಯೊಬ್ಬರಿಂದ 25 ಸಾವಿರ ರೂ. ಪಡೆದುಕೊಂಡಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಕರಣವೊಂದರಲ್ಲಿ ಆರೋಪಿಯನ್ನು ಅಕ್ರಮವಾಗಿ ಬಂಧಿಸಿರುವ ಕುರಿತು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದ ವ್ಯಕ್ತಿ ಬಗ್ಗೆ ಮಾಹಿತಿ ಕಲೆಹಾಕಿದಾಗ ಸೈಯದ್‌ ಸರ್ಫರಾಜ್‌ ಕೈವಾಡ ಪತ್ತೆಯಾಗಿತ್ತು. ಆಗ ಆರೋಪಿಯನ್ನು ಸಂಪರ್ಕಿಸಿ ಪ್ರಶ್ನಿಸಿದಾಗ, ಆರೋಪಿ ಪೊಲೀಸ್‌ ಠಾಣಾಧಿಕಾರಿಗೆ 50 ಸಾವಿರ ರೂ. ನೀಡಿದರೆ ಪ್ರಕರಣ ವಾಪಸ್‌ ಪಡೆಯುತ್ತೇನೆ ಎಂದು ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, 25 ಸಾವಿರ ರೂ. ನೀಡುವುದಾಗಿ ಕರೆಯಿಸಿಕೊಂಡು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದಾಗ ನಗರದ ಸುಮಾರು 30 ವಿವಿಧ  ಠಾಣೆಗಳಲ್ಲಿ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next