Advertisement

ಬಡ ಮಕ್ಕಳಿಗೆ ಸೂರು ಕಟ್ಟಿಕೊಟ್ಟ ಉದ್ಯಮಿಯ 75ರ ಸಂಭ್ರಮ

11:22 PM May 04, 2019 | sudhir |

ಉಡುಪಿ: ಕುತ್ಪಾಡಿ ರಾಮಚಂದ್ರ ಗಾಣಿಗರು ಮುಂಬೈಯಲ್ಲಿ ಉದ್ಯಮಿ. ಕಷ್ಟದಲ್ಲಿ ಬದುಕು ಕಟ್ಟಿಕೊಂದು ಈಗ ಸಮಾಜದಲ್ಲಿ ಪ್ರತಿಷ್ಠಿತರಾಗಿ ಮಾನ್ಯರಾದವರು. ರಾಮಚಂದ್ರ ಗಾಣಿಗರು ತಮ್ಮ 75ರ ಆಚರಣೆಯನ್ನು ಯಾವ ಆಡಂಬರವಿಲ್ಲದೆ ಅರ್ಥಪೂರ್ಣವಾಗಿ ಆಚರಿಸಲು ಮುಂದಾದಾಗ ಅವರ ಗಮನಕ್ಕೆ ಬಂದದ್ದು ಪ್ರಧಾನಿಯವರ ಸೂರಿಲ್ಲದವರಿಗೆ ಮನೆಕಟ್ಟಿ ಕೊಡುವ ಯೋಜನೆ.

Advertisement

ಹುಟ್ಟೂರಿನಲ್ಲಿ ಮನೆ ಇಲ್ಲದ ಬಡವರಿಗೆ ನಾಲ್ಕು ಮನೆ ಕಟ್ಟಿಕೊಡಲು ಸಂಕಲ್ಪಿಸಿದರು. ಮುಂಬಯಿಯಲ್ಲಿರುವ ಅವರಿಗೆ ಈ ಯೋಜನೆ ಅನುಷ್ಠಾನಕ್ಕೆ ತರುವುದು ಹೇಗೆ ಎಂದು ಯೋಚಿಸುತ್ತಿರುವಾಗ ಥಟ್ಟನೆ ಹೊಳೆದುದು ಉಡುಪಿಯ ಯಕ್ಷಗಾನ ಕಲಾರಂಗ. ಈ ಸಂಸ್ಥೆ ಈಗಾಗಲೆ 12 ಮನೆಗಳನ್ನು ವಿದ್ಯಾಪೋಷಕ್‌ ವಿದ್ಯಾರ್ಥಿಗಳಿಗೆ ನಿರ್ಮಿಸಿಕೊಟ್ಟಿದ್ದು ಅವರಿಗೆ ಗೊತ್ತಿತ್ತು, ಕಾರ್ಯದರ್ಶಿ ಮುರಲಿ ಕಡೆಕಾರ್‌ ಅವರನ್ನು ಸಂಪರ್ಕಿಸಿ ತನ್ನ ಯೋಜನೆ ಅರುಹಿ 12 ಲ.ರೂ. ನೀಡುವುದಾಗಿ ಹೇಳಿದರು.

ಇದನ್ನು ಒಪ್ಪಿಕೊಂಡ ಕಲಾರಂಗವು ವಿದ್ಯಾಪೋಷಕ್‌ನ ಅರ್ಹ ಮೂವರು ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಲು ನಿರ್ಧರಿಸಿತು.

ಪ್ರಸ್ತುತ ದ್ವಿತೀಯ ಪಿಯುಸಿ ಕಲಿಯುತ್ತಿರುವ ಸಂಪಿಗೆನಗರದ ಶೃಜಾ, ಬಿಜೂರಿನ ವಿನೋದಾ, ಯಳಜಿತ್‌ನ ಪ್ರಜ್ವಲ್‌ ಈ ಮೂವರನ್ನು ಆಯ್ಕೆ ಮಾಡಿತು. ಯಕ್ಷಗಾನ ಕಲಾರಂಗ ಮನೆ ಕಟ್ಟಿಸುವಾಗಲೆಲ್ಲ ಅದರ ಜವಾಬ್ದಾರಿ ಹೊತ್ತು ಕ್ಲಪ್ತ ಸಮಯದಲ್ಲಿ ಅಚ್ಚುಕಟ್ಟಾಗಿ ಮುಗಿಸಿಕೊಡುವವರು ಸಂಸ್ಥೆಯ ಉಪಾಧ್ಯಕ್ಷ ಎಂ. ಗಂಗಾಧರ ರಾವ್‌. ಮನೆಕಟ್ಟಲು ಬೇಕಾದ ಎಲ್ಲ ಆಡಳಿತಾತ್ಮಕ ಪರವಾನಿಗೆಯ ಅಲೆದಾಟ, ಮರಳಿನ ಅಭಾವ ಇನ್ನೂ ಹಲವು ಅಡೆ, ತಡೆಗಳನ್ನು ಮೀರಿ ಮೂರು-ನಾಲ್ಕು ತಿಂಗಳಲ್ಲಿ ಸುಂದರವಾದ ಮೂರು ಮನೆಗಳನ್ನು ಅವರು ನಿರ್ಮಿಸಿದರು.

ಮೂರು ಮನೆಗಳ ಉದ್ಘಾಟನೆ ಮೇ 2ರಂದು ದಾನಿಗಳಾದ ಯು. ವಿಶ್ವನಾಥ ಶೆಣೈ, ಭುವನೇಂದ್ರ ಕಿದಿಯೂರು, ಸೂರ್ಯಪ್ರಕಾಶ್‌, ಹರಿಯಪ್ಪ ಕೋಟ್ಯಾನ್‌, ಆನಂದ ಪಿ. ಸುವರ್ಣ, ಯುವರಾಜ ಸಾಲ್ಯಾನ್‌, ಡಾ| ದೀಪಕ್‌ ಪ್ರಭು, ಬಾಬುರಾಯ ಶೆಣೈ, ವಿಶ್ವೇಶ್ವರ ಅಡಿಗ ಮೊದಲಾದ ಗಣ್ಯರು, ಕಲಾರಂಗದ ಅಧ್ಯಕ್ಷ ಕೆ. ಗಣೇಶ ರಾವ್‌ ಸಹಿತ ಇತರ ಪದಾಧಿಕಾರಿಗಳ ಸಮಕ್ಷದಲ್ಲಿ ಕ್ರಮವಾಗಿ ಸಂಪಿಗೆನಗರ, ಯಳಜಿತ್‌ ಹಾಗೂ ಬಿಜೂರಿನಲ್ಲಿ ಜರಗಿತು. ಕುತ್ಪಾಡಿ ರಾಮಚಂದ್ರ ಗಾಣಿಗ-ಸುಗುಣ ಗಾಣಿಗ ದಂಪತಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಗಾಣಿಗರ ಅಣ್ಣ ಕೆ. ಗೋಪಾಲ್‌ ಹಾಗೂ ಸಹೋದರರು, ಮಕ್ಕಳು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಸಂಸ್ಥೆ ವತಿಯಿಂದ ಗಾಣಿಗ ದಂಪತಿಯನ್ನು ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next