Advertisement

72ರ ಹರೆಯದಲ್ಲೂ ಕೃಷಿ ಚಟುವಟಿಕೆಯಲ್ಲಿ ನಿರತ ಸಫ‌ಳಿಗರು ಯುವಕರಿಗೆ ಮಾದರಿ

08:16 PM Dec 19, 2019 | Sriram |

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಅಜೆಕಾರು: ಭಾರತೀಯ ಸಂಸ್ಕೃತಿಯ ಮೂಲವೇ ಕೃಷಿ. ಸಾವಿರಾರು ಕುಟುಂಬಗಳು ಭತ್ತ ಕೃಷಿಯನ್ನೇ ಅವಲಂಬಿಸಿ ಶತಮಾನಗಳ ಕಾಲ ಜೀವನ ನಡೆಸುತ್ತ ಬಂದಿದ್ದರೂ ಅನಂತರದ ದಿನಗಳಲ್ಲಿ ಲಾಭದ ಉದ್ದೇಶದೊಂದಿಗೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ ರೈತ ಭತ್ತದ ಗದ್ದೆಗಳನ್ನು ಹಡಿಲು ಬಿಡಲಾರಂಭಿಸಿದರು. ಆದರೆ ಬೈಲೂರು ಕೌಡೂರು ಗ್ರಾಮದ ಕಾಳಿಬೆಟ್ಟುವಿನ 72 ವರ್ಷ ಪ್ರಾಯದ ಬಾಬು ಸಫ‌ಳಿಗರು ಇಂದಿಗೂ ಸಹ ಸುಮಾರು 3 ಎಕ್ರೆ ಪ್ರದೇಶದಲ್ಲಿ ಭತ್ತದ ಎರಡು ಬೆಳೆ ಬೆಳೆದು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಸುಮಾರು 4.63 ಎಕ್ರೆ ಕೃಷಿ ಭೂಮಿ ಹೊಂದಿರುವ ಇವರು 1 ಎಕ್ರೆ ಪ್ರದೇಶದಲ್ಲಿ ಅಡಿಕೆ ತೋಟವನ್ನು, ಇತರೆ ಜಾಗದಲ್ಲಿ ತೆಂಗು, ಮಲ್ಲಿಗೆ, ತರಕಾರಿ ಬೆಳೆಗಳನ್ನು ಬೆಳೆದು ಪ್ರಗತಿಪರ ಕೃಷಿಕರಾಗಿ ದುಡಿಯುತ್ತಿದ್ದು, 2017ನೇ ಸಾಲಿನ ಕಾರ್ಕಳ ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜತೆಗೆ ವಿವಿಧ ಸಂಘ-ಸಂಸ್ಥೆಗಳು ಗುರುತಿಸಿ ಸಮ್ಮಾನಿಸಿ ಗೌರವಿಸಿವೆ.

ಭತ್ತದ ಕೃಷಿಯಿಂದ ಉತ್ತಮ ಲಾಭ
ಪ್ರತಿ ಎಕರೆಗೆ ಸುಮಾರು 25 ಕ್ವಿಂಟಾಲ್‌ ಭತ್ತದ ಫ‌ಸಲು ಪಡೆಯುವ ಇವರು ಭತ್ತದ ಕೃಷಿಯಿಂದಲೂ ಸಾಕಷ್ಟು ಲಾಭ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ವಿವಿಧ ತರಕಾರಿಗಳಾದ ಬೆಂಡೆ, ಅಲಸಂಡೆ, ಹಿರೇಕಾಯಿ, ಬೂದುಗುಂಬಳ, ಇಬ್ಬುಳ ತರಕಾರಿಗಳನ್ನು ಬೆಳೆದು ಲಾಭ ಪಡೆಯುತ್ತಿದ್ದಾರೆ. ಅಲ್ಲದೆ ಅಡಿಕೆ, ತೆಂಗು, ಮಲ್ಲಿಗೆ ಕೃಷಿಯಿಂದಲೂ ಲಾಭ ಗಳಿಸುತ್ತಿದ್ದಾರೆ.

ಮಿಶ್ರಬೆಳೆ
ಕೃಷಿಕರು ಮಿಶ್ರಬೆಳೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದ್ದು ಒಂದೇ ಕೃಷಿಯನ್ನು ಅವಲಂಬಿಸಿದರೆ ನಷ್ಟ ಸಂಭವಿಸಬಹುದಾಗಿದ್ದು ಸಣ್ಣ ಜಾಗದಲ್ಲಿಯೂ ಮಿಶ್ರ ಬೆಳೆ ಮಾಡಬೇಕು ಎಂದು ಇವರು ಹೇಳುತ್ತಾರೆ.

Advertisement

ಬಿಎಂಆರ್‌ ತಳಿ
ಬೆಳೆದ ಭತ್ತದಲ್ಲಿ ಮನೆ ಖರ್ಚಿಗೆ ಬೇಕಾದಷ್ಟು ಉಳಿಸಿಕೊಂಡು ಉಳಿದ ಅಕ್ಕಿಯನ್ನು ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. ಬಾಬು ಸಫ‌ಳಿಗರು ಹೊಸ ಹೊಸ ಭತ್ತದ ತಳಿಯನ್ನು ತಮ್ಮ ಕೃಷಿ ಭೂಮಿಯಲ್ಲಿ ಬಿತ್ತಿ ಹೆಚ್ಚು ಹೆಚ್ಚು ಲಾಭ ಗಳಿಸುವ ಜತೆಗೆ ರೋಗ ಕಡಿಮೆ ಬರುವ ಬಿಎಂಆರ್‌ ತಳಿಯನ್ನು ಪ್ರಥಮ ಬಾರಿಗೆ ತಮ್ಮ ಕೃಷಿ ಭೂಮಿಯಲ್ಲಿ ಬಿತ್ತಿ ಲಾಭ ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ. ಅವರು ಹೆಚ್ಚಾಗಿ ಕೃಷಿಗೆ ಸುಣ್ಣ, ಹಟ್ಟಿ ಗೊಬ್ಬರ, ಸುಡುಮಣ್ಣನ್ನೇ ಬಳಸುತ್ತಿದ್ದು ಸಾವಯವ ಕೃಷಿ ಉತ್ತಮ ಎನ್ನುತ್ತಾರೆ. ಪತ್ನಿ ಸುಮತಿ ಇವರ ಕೃಷಿ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ಒಂದು ಹೆಣ್ಣು ಒಂದು ಗಂಡು ಮಕ್ಕಳನ್ನು ಹೊಂದಿರುವ ಇವರು ಮಕ್ಕಳಿಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರೇರೇಪಿಸಿದ್ದು, ವಿವಿಧೆಡೆ ಮಕ್ಕಳು ಸಹ ಕೃಷಿ ಕಾರ್ಯ ನಡೆಸುತ್ತಿದ್ದಾರೆ.

ಕೃಷಿ ಸಮಸ್ಯೆಗಳು
ಕೃಷಿಯಲ್ಲಿ ಮಿಶ್ರ ಬೆಳೆಯಿಂದ ಲಾಭ ಪಡೆಯಬಹುದಾದರೂ ನವಿಲು, ಆಡು, ಹಂದಿ, ಮಂಗಗಳಿಂದ ಫ‌ಸಲನ್ನು ರಕ್ಷಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳುವ ಇವರು ಕೃಷಿ ಚಟುವಟಿಕೆಗೆ ಕೂಲಿಯಾಳುಗಳನ್ನು ಹೆಚ್ಚಾಗಿ ಅವಲಂಬಿಸದೆ ಕೃಷಿಕನೇ ಹೆಚ್ಚಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳುತ್ತಾರೆ.

ಹೈನುಗಾರಿಕೆ
ಕೃಷಿಗೆ ಪೂರಕವಾಗಿ ಹೈನುಗಾರಿಕೆಯು ಅತ್ಯಗತ್ಯ ಎಂದು ಮನಗಂಡ ಇವರು ದಶಕಗಳಿಂದ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. 4 ಜೆರ್ಸಿ ದನಗಳನ್ನು ಸಾಕುತ್ತಿರುವ ಇವರು ಪ್ರತಿ ದಿನ ಸರಾಸರಿ 20ಲೀ. ಹಾಲನ್ನು ಸಂಘಕ್ಕೆ ನೀಡುತ್ತಿದ್ದಾರೆ. ತಂದೆ ಕಾಡ್ಯ ಸಫ‌ಳಿಗರ ಕಾಲದಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಇವರು ಬಾಲ್ಯದಿಂದಲೇ ಹಲವು ಕೃಷಿ ಪದ್ಧತಿಗಳನ್ನು ತಮ್ಮ ಕೃಷಿಭೂಮಿಯಲ್ಲಿ ಅಳವಡಿಸಿಕೊಂಡಿದ್ದರು.

ಕೃಷಿ ಬದುಕಿನ ಅವಗಣನೆ ಸಲ್ಲದು
ಆಧುನಿಕ ಜೀವನ ಶೈಲಿಗೆ ಮಾರಿ ಹೋಗಿ ಕೃಷಿ ಬದುಕಿನ ಅವಗಣನೆ ಮಾಡುವುದು ಸರಿಯಲ್ಲ. ಶ್ರಮ ಜೀವಿಯಾಗಿ ಕೃಷಿ ಕ್ಷೇತ್ರದಲ್ಲಿ ದುಡಿದಲ್ಲಿ ಹೆಚ್ಚಿನ ಲಾಭ ಗಳಿಸುವ ಜತೆಗೆ ಪರಿಸರ ಸಮತೋಲನ ಕಾಪಾಡಬಹುದಾಗಿದೆ. ಯುವ ಸಮುದಾಯ ನಗರ ಜೀವನದತ್ತ ಮುಖ ಮಾಡದೇ ಹಿರಿಯರು ಬೆಳೆ ಬೆಳೆಯುತ್ತಿದ್ದ ಗದ್ದೆಗಳನ್ನು ಹಡಿಲು ಬಿಡದೇ ಕೃಷಿ ಚಟುವಟಿಕೆಯನ್ನು ನಡೆಸುವುದು ಇಂದಿನ ಅಗತ್ಯವಾಗಿದೆ. ಭತ್ತ ಬೆಳೆ ಬೆಳೆಯುವುದರಿಂದ ಭೂಮಿಯ ಅಂತರ್ಜಲವನ್ನು ಹೆಚ್ಚಿಸುವ ಜತೆಗೆ ಭವಿಷ್ಯದಲ್ಲಿ ಕಾಡಬಹುದಾದ ಆಹಾರದ ಕೊರತೆ ನೀಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ನಿರಂತರವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
-ಬಾಬು ಸಫ‌ಳಿಗ,
ಪ್ರಗತಿಪರ ಕೃಷಿಕ

ಹೆಸರು: ಬಾಬು ಸಫ‌ಳಿಗ
ಏನೇನು ಕೃಷಿ: ಭತ್ತ, ಅಡಿಕೆ, ತೆಂಗು, ಮಲ್ಲಿಗೆ, ವಿವಿಧ ತರಕಾರಿ
ಎಷ್ಟು ವರ್ಷ : 72
ಕೃಷಿ ಪ್ರದೇಶ :4.63 ಎಕ್ರೆ ಕೃಷಿ ಭೂಮಿ

-ಜಗದೀಶ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next