Advertisement

45ನೇ ವರ್ಷದ ಪುರಾಣ ಮಹಾಮಂಗಲೋತ್ಸವ

11:18 AM Sep 07, 2019 | Suhan S |

ಕಾರಟಗಿ: ಪಟ್ಟಣದ ಆರಾಧ್ಯ ದೈವ ಶ್ರೀ ಶರಣ ಬಸವೇಶ್ವರ 45ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಹಾಗೂ ಜೋಡು ಮಹಾರಥೋತ್ಸವ ಸೆ. 7 ಹಾಗೂ 8ರಂದು ಅದ್ಧೂರಿಯಾಗಿ ನಡೆಯಲಿದೆ.

Advertisement

ಪುರಾಣ ಮಂಗಲೋತ್ಸವ ಮುನ್ನಾ ದಿನವಾದ ಸೆ.7ರಂದು ವೀರಭದ್ರೇಶ್ವರ ಹಾಗೂ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಗಂಗೆ ಸ್ಥಳಕ್ಕೆ ಹೋಗಿ ಬರುವುದು ಸೇರಿದಂತೆ ನಾನಾ ಕಾರ್ಯಗಳು ನಡೆಯಲಿವೆ. ಈ ಸಂದರ್ಭದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಭಕ್ತಾದಿಗಳು ಶಸ್ತ್ರ ಹಾಕಿಸಿಕೊಂಡು ಭಕ್ತಿ ಮೆರೆಯುತ್ತಾರೆ. ಇದು ನೋಡುಗರ ಮೈ ರೋಮಾಂಚನಗೊಳಿಸುತ್ತದೆ. ಮರುದಿನ ಪುರಾಣ ಮಹಾಮಂಗಲೋತ್ಸವ ಹಾಗೂ ಶ್ರೀ ಶರಣ ಬಸವೇಶ್ವರ ಜೋಡು ರಥೋತ್ಸವ ನಡೆಯಲಿದೆ. ಹಿಂದಿನಿಂದ ಆಚರಿಸುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಸರ್ವ ಜನಾಂಗದವರು ಪಾಲ್ಗೊಳ್ಳುತ್ತಾರೆ.

ಹಿನ್ನೆಲೆ: ಗ‌ತಕಾಲವನ್ನು ಮೆಲುಕು ಹಾಕಿದಾಗ ಕ್ರಿ.ಶ. 973ರಲ್ಲಿ ಕಲ್ಯಾಣದ ಚಾಲುಕ್ಯರು ರಾಷ್ಟ್ರಕೂಟರನ್ನು ಬಗ್ಗು ಬಡಿದು ಗಂಗಾವತಿಯನ್ನು ತಮ್ಮ ಅಧಿಕಾರ ವ್ಯಾಪ್ತಿಗೆ ತೆಗೆದುಕೊಂಡರು. ಇವರ ಆಳ್ವಿಕೆಯಲ್ಲೇ ಕಾರಟಗಿಯಲ್ಲಿ ಕೆಂಪುಮಣ್ಣಿನ ಕೆರೆ ನಿರ್ಮಿಸಿ ಈ ಸ್ಥಳಕ್ಕೆ ಕೆರೆ ಇಟಗಿ ಎಂದು ಹೆಸರಿಸಿದರು. ನಂತರ ಅದು ಕಾಲಾನುಕ್ರಮದಲ್ಲಿ ಕಾರಟಗಿ ಎಂದು ಬದಲಾಯಿತೆಂಬುದು ಪೂರ್ವಜರ ಅಭಿಪ್ರಾಯ. ಅಂದಿನ ಕಾಲದಲ್ಲಿ ಹೋರಾಟದಲ್ಲಿ ಮೃತಪಟ್ಟ ಸೇನಾನಿಗಳ ನೆನಪಿಗಾಗಿ ಕೆತ್ತಲ್ಪಟ್ಟ ವೀರಗಲ್ಲುಗಳನ್ನು ಪಟ್ಟಣದ ಕೆಲವೆಡೆ ಕಾಣಬಹುದು. ವಿಶೇಷವಾಗಿ ಕಾರಟಗಿ ಪಟ್ಟಣದಲ್ಲಿ ಶಿವ ದೇವಾಲಯ, ವಿಷ್ಣು ಗಜಾನನ ಹಾಗೂ ಸಪ್ತಮಾತೃಕೆ ಪುಷ್ಕರಣೆಗಳು ಮುಖ್ಯವಾಗಿವೆ.

ಇಲ್ಲಿನ ಪ್ರಾಚೀನ ಮಹಾದೇಶ್ವರ ದೇವಾಲಯ ಮುಂಭಾಗದಲ್ಲಿ ಕಣ್ಮನ ಸೆಳೆಯುವ ಸುಂದರ ಕಲಾಕೃತಿಯ ವಿಶಿಷ್ಟ ಪುಷ್ಕರಣಿ ಸುಂಕಲ ವೀರಪ್ಪನ ಬಾವಿ ಇದ್ದು, ಅದರಲ್ಲಿ ಮಿಂದೆದ್ದು ಉತ್ತರಕ್ಕೆ ತಿರುಗಿದರೆ ಶಿವನಿಗೆ, ದಕ್ಷಿಣಕ್ಕೆ ತಿರುಗಿದರೆ ವೆಂಕಟೇಶ್ವರ ಸ್ವಾಮಿಗೆ, ಪೂರ್ವಕ್ಕೆ ತಿರುಗಿದರೆ ವೀರಭದ್ರಸ್ವಾಮಿ ಹಾಗೂ ವಿನಾಯಕನಿಗೆ, ಪಶ್ಚಿಮಕ್ಕೆ ತಿರುಗಲು ಗ್ರಾಮದೇವತೆ ಮತ್ತು ಕೋಟೆ ಆಂಜನೇಯಸ್ವಾಮಿಗೆ ನಮಸ್ಕರಿಸಬಹುದೆಂಬುದು ಇಲ್ಲಿಯ ಭಕ್ತರ ವಾಡಿಕೆ.

ಕಾರಟಗಿ ಯಲ್ಲಿ ಕ್ರಿ.ಶ.1973ರಲ್ಲಿ ತೀರಾ ಶಿಥಿಲಾವಸ್ಥೆಯಲ್ಲಿದ್ದ ಗಣೇಶ ದೇವಾಲಯವನ್ನು ಹಿರಿಯರ ಮಾರ್ಗದರ್ಶನ ಹಾಗೂ ಸಹಾಯದಲ್ಲಿ ನವೀಕರಿಸಿ ಧಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲಾಯಿತು. ಮರುವರ್ಷವೇ ಶ್ರೀ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಭವ್ಯ ವೇದಿಕೆ ನಿರ್ಮಿಸಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಆರಂಭಿಸಿದರು. ಆ ವರ್ಷ ಪುರಾಣಿಕರಾಗಿ ಆಗಮಿಸಿದ್ದ ಶ್ರೀ ಮುಪ್ಪಿನ ಶಾಸ್ತ್ರೀಗಳು ಕಾರ್ಯಕ್ರಮಕ್ಕೆ ಒಂದು ಹೊಸ ಆಯಾಮವನ್ನಿತ್ತರಲ್ಲದೆ ಉಳಿದ ಹಣದಲ್ಲಿ ಭವ್ಯ ಮಂಟಪ ನಿರ್ಮಿಸಿ ಅದೇ ಶರಣರ ಪುರಾಣ ಮುಂದುವರಿಸಿದರು.

Advertisement

ಈ ಸಂಪ್ರದಾಯ ಪಾಲಿಸಿಕೊಂಡು ಬಂದ ಕಾರಟಗಿ ಪಟ್ಟಣದ ಸರ್ವಧರ್ಮೀಯ ಸದ್ಭಕ್ತರು ಮತ್ತು ಸುತ್ತಮುತ್ತಲಿನ ಭಕ್ತ ಸಮೂಹ ಕಳೆದ 45 ವರ್ಷಗಳಿಂದ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.

ಜಾತ್ರೆಯ ನಡೆಯುವ ಎರಡು ದಿನಗಳ ಮುಂಚೆಯೇ ಪಟ್ಟಣದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಮಂಗಲೋತ್ಸವ ಹಾಗೂ ರಥೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿರುತ್ತಾರೆ. ಜಾತ್ರೆ ಮುಗಿದು 3ದಿನ ಕಳೆದರೂ ಪಟ್ಟಣದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಗಂಗಾವತಿಯ ಕಾಯಕಯೋಗಿ ಶ್ರೀ ಗುರು ಚನ್ನಬಸವ ಮಹಾ ಸ್ವಾಮಿಗಳ ವಾಕ್‌ಸಿದ್ಧಿಯಂತೆ ಕಾರಟಗಿ ಪಟ್ಟಣ ದಿನದಿಂದ ದಿನಕ್ಕೆ ವ್ಯಾಪಾರ, ಉದ್ಯೋಗ, ಶಿಕ್ಷಣದಲ್ಲಿ, ಕೈಗಾರಿಕೆಗಳಲ್ಲಿ ಮುಂದುವರಿದಿದೆ. ತಾಲೂಕು ರಚನೆಯಾಗಿ ಕಾರಟಗಿ ಪಟ್ಟಣ ಕಲ್ಯಾಣವಾಗಿದೆ.

 

•ದಿಗಂಬರ್‌ ಎನ್‌. ಕುರ್ಡೆಕರ

Advertisement

Udayavani is now on Telegram. Click here to join our channel and stay updated with the latest news.

Next