Advertisement

ಸೂಕ್ತ ನಿರ್ಧಾರ ಕೈಗೊಳ್ಳಲು 45 ದಿನ ಗಡುವು

12:01 PM Feb 24, 2020 | Suhan S |

ಹುಬ್ಬಳ್ಳಿ: ಮೂರುಸಾವಿರಮಠದ ಉತ್ತರಾಧಿಕಾರಿ ನೇಮಕ ವಿಚಾರವಾಗಿ ಶ್ರೀಮಠದ ಉನ್ನತ ಸಮಿತಿಯವರು 45 ದಿನದೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಗಡುವು ನೀಡಿದ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಇಲ್ಲವಾದರೆ ಹೋರಾಟ ಮುಂದುವರಿಯಲಿದೆ ಎಂದರು.

Advertisement

ಇಲ್ಲಿನ ಮೂರುಸಾವಿರಮಠದ ಮಹಾದ್ವಾರದ ಮುಂಭಾಗದಲ್ಲಿ ರವಿವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕತೃì ಗದ್ದುಗೆ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಾನು ಹೇಳುವ ವಿಚಾರಗಳೆಲ್ಲ ಸತ್ಯವಾಗಿದ್ದು, ಮಠದ ಆಸ್ತಿ-ಅಂತಸ್ತಿನ ಆಸೆಯಿಂದ ಉತ್ತರಾಧಿಕಾರಿಯಾಗಲು ಬಂದಿಲ್ಲ. ಮಠ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ನನ್ನಿಂದ ನೆರವು ಪಡೆದು ಮಠದ ಉತ್ತರಾಧಿಕಾರಿಯಾಗಬೇಕೆಂದು ಶ್ರೀಮಠದ ಜಗದ್ಗುರುಗಳು ಹಾಗೂ ಉನ್ನತ ಸಮಿತಿಯವರ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದೆ. ನಂತರದಲ್ಲಿ ತಮ್ಮನ್ನು ಉತ್ತರಾಧಿಕಾರಿ ಮಾಡಲು ಸಾಧ್ಯವಿಲ್ಲವೆಂದು, ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ನನ್ನ ಚಾರಿತ್ರ್ಯ ಹರಣ ಮಾಡಿದ್ದರಿಂದ ಈ ಸತ್ಯದರ್ಶನ ಸಭೆ ಕರೆದಿದ್ದೇನೆ ಎಂದರು.

ಬಿಡುಗಡೆಯಾಗದ ದಾಖಲೆ: ಕರ್ತೃ ಗದ್ದುಗೆ ಮುಂದೆ ಸತ್ಯದರ್ಶನ ಮಾಡಬೇಕಾಗಿತ್ತು. ಕೆಲ ಕಾವಿಧಾರಿಗಳು, ರಾಜಕಾರಣಿಗಳು ಸಭೆಗೆ ಅಡ್ಡಗಾಲು ಹಾಕಿದ್ದಾರೆ. ಗದ್ದುಗೆ ಮುಂದೆ ಪ್ರಮಾಣ ಮಾಡಿ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದೆ. ಆದರೆ ಮಠದ ಉತ್ತರಾಧಿಕಾರಿಯಾಗುವ ಸ್ವಾಮೀಜಿ ಸೇರಿದಂತೆ ಭಕ್ತರನ್ನು ಮಠದ ಹೊರಗೆ ನಿಲ್ಲಿಸಿ ಅವಮಾನ ಮಾಡಿದ್ದಾರೆ. ರಸ್ತೆ ಮೇಲೆ ನಿಂತು ದಾಖಲೆಗಳನ್ನು ಬಿಡುಗಡೆ ಮಾಡಿದರೆ ದಾಖಲೆಗಳ ಗೌರವ ಕುಂದಿದಂತೆ. ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡಲಾಗುವುದು ಎಂದರು.

ಮೂರುಸಾವಿರಮಠದ ಜಗದ್ಗುರುಗಳು ಅರ್ಧ ಗಂಟೆಯೊಳಗೆ ಭಕ್ತರ ಮುಂದೆ ಬಂದು ಅಂದಿನ ಪರಿಸ್ಥಿತಿಗೆ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳಲಾಗಿತ್ತು. ಈಗ ಮನಸ್ಸಿಲ್ಲ ಎಂದು ಹೇಳಿದರೆ ವಾಪಸ್‌ ಹೋಗುತ್ತೇನೆ. ನನಗೆ ನ್ಯಾಯಾಲಯದ ನ್ಯಾಯ ಬೇಕಾಗಿಲ್ಲ. ಭಕ್ತ ಸಮೂಹದ ಮುಂದೆ ನನಗೆ ನ್ಯಾಯ ದೊರೆಯಬೇಕು ಎಂದರು.

ಜಗದ್ಗುರುಗಳು ನನ್ನ ಪರವಾಗಿದ್ದಾರೆ: ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಿಸುವ ವಿಚಾರದಲ್ಲಿ ಜಗದ್ಗುರುಗಳು ನನ್ನ ಪರವಾಗಿದ್ದಾರೆ. ಆದರೆ ಅಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕೆಲ ಕಾವಿಧಾರಿಗಳು ನನ್ನ ಏಳ್ಗೆ ಸಹಿಸದೆ ಶ್ರೀಗಳನ್ನು ಬಂಧನದಲ್ಲಿಟ್ಟು ನನ್ನ ವಿರುದ್ಧ ಹೇಳಿಕೆ ನೀಡುವಂತೆ ಮಾಡುತ್ತಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ಗುರುಸಿದ್ಧ ಶ್ರೀಗಳನ್ನು ಇಲ್ಲಿನ ಉದ್ಯಮಿಯೊಬ್ಬರ ಮನೆಯಲ್ಲಿ ಭೇಟಿಯಾದಾಗ ನನ್ನನ್ನು ಉತ್ತರಾಧಿಕಾರಿ ಸಮಸ್ಯೆಯಿಂದ ಪಾರು ಮಾಡಿ ಎಂದು ಬೇಡಿಕೊಂಡಿದ್ದೆ. ನೀವೇ ಮಠಕ್ಕೆ ಸಮರ್ಥರು ಎಂದು ಭರವಸೆ ನೀಡಿದ್ದರು. ಆದರೆ ಇದೀಗ ಶ್ರೀಗಳು ಹೊರಗೆ ಬರುತ್ತಿಲ್ಲ ಎನ್ನುವುದನ್ನು ನೋಡಿದರೆ ಇದರ ಹಿಂದೆ ಕೆಲ ಮಠಾಧೀಶರ ಕೈವಾಡವಿದೆ ಎಂದರು.

Advertisement

ಆಣೆ ಮಾಡಿದ್ದಕ್ಕೆ ಒಪ್ಪಿಕೊಂಡೆ: ಮಠ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅವನತಿಗೊಂಡಾಗ ಇನ್ನೊಬ್ಬ ಶ್ರೀಗಳ ಉತ್ತರಾಧಿಕಾರಿ ಗೊಂದಲ ಬಗೆಹರಿಸಲು ಭಕ್ತರಿಂದ ನೆರವು ಪಡೆದು 1 ಕೋಟಿ ರೂ. ನೀಡಿದ್ದೆ. 2009ರಲ್ಲಿ ಒಮ್ಮೆ ಉತ್ತರಾಧಿಕಾರಿ ನೇಮಕ ಕುರಿತು ನನ್ನ ಗೌರವ ಕುಂದಿಸುವ ಕೆಲಸ ನಡೆಯಿತು. 2014ರಲ್ಲಿ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು, ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಅವರ ತೋಟಕ್ಕೆ ನನ್ನನ್ನು ಕರೆದು ಮನವೊಲಿಸುವ ಕೆಲಸ ಮಾಡಿದ್ದರು. ನಂತರ ಜಗದೀಶ ಶೆಟ್ಟರ ಕೂಡ ನೀವೇ ಉತ್ತರಾಧಿಕಾರಿಯಾಗಬೇಕೆಂದು ಹೇಳಿದ್ದರು. ಇಷ್ಟೆಲ್ಲಾ ಹೇಳಿದರೂ ಒಪ್ಪಿಕೊಂಡಿರಲಿಲ್ಲ. ಆದರೆ ಶ್ರೀಗಳು ಕುಮಾರೇಶ್ವರ ಹಾಗೂ ಗುರುಸಿದ್ದೇಶ್ವರ ಶ್ರೀಗಳ ಮೇಲೆ ಆಣೆ ಮಾಡಿದ್ದಕ್ಕೆ ನಾನು ಒಪ್ಪಿಕೊಂಡಿದ್ದೇನೆ ಎಂದರು.

ಮುಳ್ಳೊಳ್ಳಿ, ಬೊಮ್ಮನಹಳ್ಳಿ, ಮಂಟೂರು ಹಾಗೂ ಅಗಡಿ ಶ್ರೀಗಳು, ಮಾಜಿ ಶಾಸಕರಾದ ಜಿ.ಎಸ್‌. ಗಡ್ಡದೇವರಮಠ, ಶಿವಾನಂದ ಅಂಬಡಗಟ್ಟಿ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಬಸವರಾಜ ದಿಂಡೂರು, ಶಂಕರ ಬಾಳಿಕಾಯಿ, ಗುರುರಾಜ ಹುಣಸಿಮರದ, ಪ್ರಕಾಶ ಬೆಂಡಿಗೇರಿ, ಅಜ್ಜಪ್ಪ ಹೊರಕೇರಿ, ಶಿವಾನಂದ ಮುತ್ತಣ್ಣವರ, ಶೇಖಣ್ಣ ಬೆಂಡಿಗೇರಿ ಇನ್ನಿತರರಿದ್ದರು.

ನೆಹರು ಮೈದಾನದಿಂದ ಪಾದಯಾತ್ರೆಯಲ್ಲಿ ಆಗಮನ ಬಹಿರಂಗ ಸಭೆಗೂ ಮೊದಲು ನೂರಾರು ಭಕ್ತರೊಂದಿಗೆ ಇಲ್ಲಿನ ನೆಹರು ಮೈದಾನದಿಂದ ಮೂರುಸಾವಿರಮಠದವರಿಗೆ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ಡಾ| ಬಿ.ಆರ್‌. ಅಂಬೇಡ್ಕರ್‌, ಬಸವೇಶ್ವರ ಮೂರ್ತಿ, ಸರ್‌ ಸಿದ್ದಪ್ಪ ಕಂಬಳಿ, ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಚನ್ನಮ್ಮ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ನಂತರ ಮೂರುಸಾವಿರಮಠಕ್ಕೆ ಆಗಮಿಸಲಾಯಿತು.

ಪೊಲೀಸರ ಸರ್ಪಗಾವಲು :  ಸಾವಿರಾರು ಸಂಖ್ಯೆಯಲ್ಲಿ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸತ್ಯದರ್ಶನ ಸಭೆಯನ್ನು ಮಠದೊಳಗೆ ನಡೆಸಲು ಪೊಲೀಸರು ಅನುಮತಿ ನೀಡಿರಲಿಲ್ಲ. ಪರಿಣಾಮ ಮುಖ್ಯದ್ವಾರದ ಮುಂಭಾಗದ ರಸ್ತೆಯಲ್ಲೇ ಬಹಿರಂಗ ಸಭೆ ಮಾಡಿ ಮುಕ್ತಾಯಗೊಳಿಸಿದರು. ನಂತರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಭಕ್ತರಿಗೆ ಗದ್ದುಗೆ ದರ್ಶನ ಮಾಡಲು ಅವಕಾಶ ಕಲ್ಪಿಸಿದ್ದರು. ಮಠದೊಳಗೆ ಯಾರಿಗೂ ಅವಕಾಶ ನೀಡಲಿಲ್ಲ. ಮಠದ ಮುಖ್ಯದ್ವಾರದಿಂದ ಮಠದ ಆವರಣದೊಳಗೆ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಿ ಗದ್ದುಗೆ ದರ್ಶನಕ್ಕಾಗಿ ಪ್ರತ್ಯೇಕ ಬ್ಯಾರಿಕೇಡ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಭೆ ಬಳಿಕ ಕಸ ಗುಡಿಸಿದ ದಿಂಗಾಲೇಶ್ವರ ಸ್ವಾಮೀಜಿ:  ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಸಂಬಂಧ ಸತ್ಯದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ, ಸಭೆ ನಂತರ ಕಸ ಗುಡಿಸಿ ಸ್ವತ್ಛಗೊಳಿಸಿದರು. ಸಭೆ ಮುಕ್ತಾಯ ಬಳಿಕ ಆಗಮಿಸಿದ್ದ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಗದಗ, ಹಾವೇರಿ, ಕೊಪ್ಪಳ, ಧಾರವಾಡ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಊಟ ಮಾಡಿ ಎಲ್ಲೆಂದರಲ್ಲಿ ತಟ್ಟೆಗಳನ್ನು ಎಸೆದು ಹೋಗಿದ್ದರು. ಇದನ್ನು ನೋಡಿದ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಕೆಲ ಭಕ್ತರು ಸ್ವತಃ ಕಸಬರಿಗೆ ಹಿಡಿದು ಎಲ್ಲವನ್ನೂ ಸ್ವಚ್ಛಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next