Advertisement

ದೋಸ್ತಿಗಳ ಹೇಳಿಕೆ ವಿಪಕ್ಷಕ್ಕೆ ಅಸ್ತ್ರವಾಗದಿರಲೆಂಬ ಆಶಯ ನನ್ನದು

12:32 AM May 20, 2019 | Team Udayavani |

ಹುಬ್ಬಳ್ಳಿ: “ಸಮ್ಮಿಶ್ರ ಸರಕಾರ ಸುಗಮವಾಗಿ ಸಾಗಬೇಕು. ರಾಜ್ಯದ ಜನರು ಹಾಗೂ ಅಧಿಕಾರಿಗಳಿಗೆ ಗೊಂದಲದ ವಾತಾವರಣ ಇರಬಾರದು. ಪಾಲುದಾರ ಪಕ್ಷಗಳ ಮುಖಂಡರೇ ತಮ್ಮ ಹೇಳಿಕೆಗಳ ಮೂಲಕ ವಿಪಕ್ಷಕ್ಕೆ ಅಸ್ತ್ರಗಳನ್ನು ನೀಡುವಂತಾಗಬಾರದು ಎಂಬ ಉದ್ದೇಶವೇ ವಿನ: ಸಮ್ಮಿಶ್ರ ಸರಕಾರ ಬೀಳಲಿ ಎಂಬುದಾಗಲಿ, ವೈಯಕ್ತಿಕ ಲಾಭ-ನಷ್ಟದ ಸ್ವಾರ್ಥವಂತೂ ಇಲ್ಲವೇ ಇಲ್ಲ…’

Advertisement

ಇದು ವಿಧಾನಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟ ಮಾತು. “ಮೈತ್ರಿಕೂಟದಲ್ಲಿ ಗೊಂದಲ ಮುಂದುವರಿಯುವ ಬದಲು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದು ಲೇಸು’ ಎಂಬ ರಾಜಕೀಯ ಸಂಚಲನ ಮೂಡಿಸಿದ ತಮ್ಮ ಹೇಳಿಕೆಯ ಹಿಂದಿನ ಉದ್ದೇಶ ಹಾಗೂ ಆಶಯ ಕುರಿತು ಭಾನುವಾರ “ಉದಯವಾಣಿ’ ಜತೆ ಮಾತನಾಡಿದ ಅವರು, ತಮ್ಮ ಹೇಳಿಕೆ ಉದ್ದೇಶಪೂರ್ವಕದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಮಾಧ್ಯಮ ಸ್ನೇಹಿತರೊಬ್ಬರು ಅನೌಪಚಾರಿಕ ಮಾತುಕತೆ ವೇಳೆ ಸಿಎಂ ಹುದ್ದೆ ವಿಚಾರ ಹಾಗೂ ಗೊಂದಲ ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ಮುಖ್ಯಮಂತ್ರಿ ಇದ್ದಾಗಲೂ ಇನ್ನೊಬ್ಬರ ಹೆಸರು ಪ್ರಸ್ತಾಪಿಸುವುದು ಸರಿಯಲ್ಲ. ಗೊಂದಲ ಹೆಚ್ಚುತ್ತ ಹೋದರೆ ಇದರ ಬದಲು ಚುನಾವಣೆಗೆ ಹೋಗುವುದೇ ಲೇಸಲ್ಲವೇ ಎಂದು ಸಹಜವಾಗಿ ವೈಯಕ್ತಿಕ ಅನಿಸಿಕೆ ವ್ಯಕ್ತಪಡಿಸಿದ್ದೇನೆ. ವಿನ: ಇದನ್ನು ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ ಎಂದರು.

1980ರಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ. ಯಾರು ಏನೇ ಟೀಕೆ ಮಾಡಲಿ, ನನಗೂ ಅಷ್ಟು, ಇಷ್ಟು ರಾಜಕೀಯ ಅನುಭವ ಎಂಬುದಿದೆ. ನನ್ನ ಹೇಳಿಕೆ ಒಟ್ಟಾರೆ ಆಶಯ-ಉದ್ದೇಶ ಕುರಿತು ಅರ್ಧಸತ್ಯ ಅರ್ಥ ಮಾಡಿಕೊಂಡರೆ ಅಥವಾ ಅರ್ಧ ತೋರಿಸಿದರೆ ಅಪಾರ್ಥ ಮೂಡಬಹುದು. ಆದರೆ, ಪೂರ್ಣ ಸತ್ಯ ತಿಳಿದರೆ ಸಮ್ಮಿಶ್ರ ಸರಕಾರದ ಆಶಯ-ಬಾಂಧವ್ಯ ಗಟ್ಟಿಗೊಳಿಸುವ ಉದ್ದೇಶ ಅಡಗಿದೆ ವಿನ: ಅದನ್ನು ಅಸ್ಥಿರಗೊಳಿಸುವುದಲ್ಲ ಎಂಬುದು ಸ್ಪಷ್ಟವಾಗಲಿದೆ ಎಂದರು.

ಅಭಿವೃದ್ಧಿ ಮಾಸದಿರಲಿ: ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿಯವರು ರೈತರ ಸಾಲಮನ್ನಾ, ಬಡವರ ಬಂಧು ಸಹಿತ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಹಲವು ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಮುಂದುವರೆಸಿದ್ದಾರೆ. ಸರಕಾರ ಉತ್ತಮ ಯೋಜನೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರೂ ಸಾಧನೆಗಳಿಗಿಂತ ನಿತ್ಯ ಬೆಳಗಾದರೆ ಮಿತ್ರ ಪಕ್ಷಗಳ ಮುಖಂಡರ ಪರಸ್ಪರ ಹೇಳಿಕೆ, ವಿವಾದ-ಅನಿಸಿಕೆಗಳೇ ವಿಜೃಂಭಿಸುತ್ತಿವೆ.

Advertisement

ಅಭಿವೃದ್ಧಿ ಮಾಯವಾಗಿ, ಸರಕಾರ ಯಾವ ಅಭಿವೃದ್ಧಿ ಕಾರ್ಯಗಳನ್ನೇ ಮಾಡಿಲ್ಲವೇನೋ ಎಂಬಂತೆ ಜನರ ಮುಂದೆ ಬಿಂಬಿತವಾಗತೊಡಗಿದೆ. ಪಾಲುದಾರ ಪಕ್ಷಗಳ ಹೇಳಿಕೆಗಳನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯವರು ಮಿತ್ರಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ, ಶೀಘ್ರದಲ್ಲೇ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಇದು ರಾಜ್ಯದ ಜನ ಹಾಗೂ ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸಿ, ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ.

ಇಂತಹ ಗೊಂದಲ ಇರಬಾರದು ಎಂಬುದೇ ನನ್ನ ಉದ್ದೇಶ ಎಂದು ತಿಳಿಸಿದರು. ರಾಹುಲ್‌ಗಾಂಧಿ, ಎಚ್‌.ಡಿ.ದೇವೇಗೌಡರ ತೀರ್ಮಾನದಿಂದ ಸಮ್ಮಿಶ್ರ ಸರಕಾರ ರಚನೆಗೊಂಡಿದೆ. ಸರಕಾರಕ್ಕೆ ಇನ್ನೂ ನಾಲ್ಕು ವರ್ಷ ಆಡಳಿತಾವಧಿ ಇದೆ. ಎರಡು ಪಾಲುದಾರ ಪಕ್ಷಗಳ ಪರಸ್ಪರ ಹೇಳಿಕೆಗಳಿಂದ ಗೊಂದಲ, ಅಪನಂಬಿಕೆ ಹೆಚ್ಚಬಾರದು ಎಂಬುದು ನನ್ನ ಕಳಕಳಿಯೂ ಕೂಡ ಎಂದರು.

ಉತ್ತಮ ಆಡಳಿತಕ್ಕೆ ಅವಕಾಶ ನಿರ್ಮಾಣವಾಗಲಿ: ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ವಿಧಾನಸಭೆ ವಿಸರ್ಜನೆ ಮಾಡಿದರೆ ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗಷ್ಟೇ ಅಲ್ಲ. ಎಲ್ಲ ಶಾಸಕರಿಗೂ ತೊಂದರೆ ಆಗುತ್ತದೆ. ಅನಗತ್ಯ ವೆಚ್ಚಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ಸಂಪೂರ್ಣ ಅರಿವು ನನಗಿದೆ. ಈ ಹಿಂದೆ ಬಿಜೆಪಿಯವರು “ಆಪರೇಷನ್‌ ಕಮಲ’ ಮೂಲಕ ಅನೇಕ ಶಾಸಕರನ್ನು ಸೆಳೆದು ಉಪ ಚುನಾವಣೆ ಸೃಷ್ಟಿಸಿದ ಸಂದರ್ಭ ತೀವ್ರವಾಗಿ ಟೀಕಿಸಿದ್ದೆ.

ನನ್ನ ಮೂಲ ಆಶಯ ಇಷ್ಟೇ. ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಲ್ಲಿ ಪರಸ್ಪರ ಅಪನಂಬಿಕೆ, ಟೀಕೆ ಮಾದರಿ ಹೇಳಿಕೆಗಳು ನಿಲ್ಲಬೇಕು. ಮುಖ್ಯಮಂತ್ರಿಗೆ ಉತ್ತಮ ರೀತಿಯಲ್ಲಿ ಆಡಳಿತ ನಡೆಸಲು ಮುಕ್ತ ಅವಕಾಶದ ವಾತಾವರಣ ನಿರ್ಮಾಣ ಆಗಬೇಕು. ಅನುಮಾನ, ಶಂಕೆ, ಗೊಂದಲದಿಂದ ಸಮ್ಮಿಶ್ರ ಸರಕಾರವನ್ನು ಜನರು ನೋಡುವಂತಾಗಿರುವ ವಾತಾವರಣ ಬದಲಾಗಬೇಕು ಎಂಬುದಾಗಿದೆ.

ನನ್ನ ಹೇಳಿಕೆ ಕುರಿತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ, ಸಚಿವರಾದ ಆರ್‌.ವಿ.ದೇಶಪಾಂಡೆ, ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ ಇನ್ನಿತರರು ಟೀಕಿಸಿದ್ದಾರೆ. ಯಾರು ಟೀಕಿಸಿದರೂ ನನಗೇನೂ ಬೇಜಾರು ಇಲ್ಲ. ನಾನು ಉಡಾಫೆಯಾಗಿಯೂ ಹೇಳಿಕೆ ನೀಡಿಲ್ಲ. ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿಯೇ ಬಿಡೋಣ ಎಂಬುದು ನನ್ನ ಅನಿಸಿಕೆ ಆಗಿರಲಿಲ್ಲ . ನನ್ನ ಹೇಳಿಕೆಯಿಂದ ಯಾವುದೇ ಪಕ್ಷದ ಶಾಸಕರಿಗೂ ಚುನಾವಣೆಗೆ ಹೋಗುವುದು ಬೇಡವಾಗಿದೆ ಎಂಬುದು ಸಹ ಸ್ಪಷ್ಟಗೊಂಡಿತು.

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next