Advertisement

“ಆ” ಕುಚೇಷ್ಟೆಯೇ ಪರೀಕ್ಷಿತ ಮಹಾರಾಜನ ಸಾವಿಗೆ ಕಾರಣವಾಯ್ತು!

12:00 PM May 08, 2018 | |

   ಒಂದೊಮ್ಮೆ ಅಶ್ವತ್ಥಾಮರು ದ್ರೌಪದಿ ಪುತ್ರರನ್ನು ನಾಶಮಾಡಿದ ನಂತರ ಅಭಿಮನ್ಯುವಿನ ಹೆಂಡತಿ ಉತ್ತರೆಯೂ ಗರ್ಭಿಣಿಯಾಗಿದ್ದಳು. ಪಾಂಡು ವಂಶವನ್ನು ನಿರ್ವಂಶ ಮಾಡಲು ಅಶ್ವತ್ಥಾಮರು  ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದರು. ಆಗ ಉತ್ತರೆಯೂ ಭಯದಿಂದ ಓಡುತ್ತಾ ಕೃಷ್ಣನಲ್ಲಿಗೆ ಬಂದು ರಕ್ಷಣೆಗೆ ಮೊರೆಹೋದಳು….

Advertisement

ಉತ್ತರೆಯು ಕೃಷ್ಣನನ್ನು ಪ್ರಾರ್ಥಿಸಿದಳು
ಹೇ ದೇವಾಧಿದೇವ.. ಮಹಾಯೋಗಿಯೇ… ಕಾಪಾಡು, ನಿನ್ನನ್ನು ಬಿಟ್ಟು ನನಗೆ ಬೇರೆ ಯಾರೂ ಅಭಯ ನೀಡಲಾರರು. ನೀನು ಸರ್ವಶಕ್ತ , ಕಾದ ಕಬ್ಬಿಣದ ಬಾಣವೊಂದು ನನ್ನನ್ನು ಅಟ್ಟಿಸಿಕೊಂಡು ಬರುತ್ತಿದೆ. ಇದು ಬೇಕಾದರೆ ನನ್ನನ್ನು ಸುಟ್ಟುಹಾಕಲಿ . ಆದರೆ ನನ್ನ ಗರ್ಭವನ್ನು ನಾಶಪಡಿಸದಂತೆ ಅನುಗ್ರಹಿಸು ಸ್ವಾಮಿ …..

ಭಗವಾನ್ ಶ್ರೀ ಕೃಷ್ಣನು ಆಕೆಯ ಗೋಳಾಟವನ್ನು ಕೇಳಿದೊಡನೆಯೇ , ಅಶ್ವತ್ಥಾಮರು  ಪಾಂಡವರ ವಂಶವನ್ನು ನಾಶ ಮಾಡಲು ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಿರುವುದನ್ನು ಅರಿತುಕೊಂಡು, ಕುರುವಂಶದ ಕುಡಿಯನ್ನು ಉಳಿಸುವುದಕ್ಕಾಗಿ ಉತ್ತರೆಯ ಗರ್ಭವನ್ನು ತನ್ನ ಮಾಯಾ ಕವಚದಿಂದ ಆವರಿಸಿ ಬಿಟ್ಟನು. ತದನಂತರ ಶ್ರೀಕೃಷ್ಣ ತನ್ನ ಸುದರ್ಶನ ಚಕ್ರದಿಂದ ಬ್ರಹ್ಮಾಸ್ತ್ರವನ್ನು ತಡೆಯುವ ಮೂಲಕ ಉತ್ತರೆಯ ಗರ್ಭ ಉಳಿಸಿದ್ದ.

ಒಂದು ಶುಭ ಸಮಯದಲ್ಲಿ ಉತ್ತರೆಯು ಸುಪುತ್ರನಿಗೆ ಜನ್ಮ ನೀಡುತ್ತಾಳೆ. ಮಗು ಜನಿಸಿದಾಗ ಸುದರ್ಶನದ ರಕ್ಷಾಕವಚದಿಂದ ದೂರವಾಯಿತು ಆ ಕ್ಷಣವೆ ಬ್ರಹ್ಮಾಸ್ತ್ರವು ಮಗುವನ್ನು ಬಲಿ ತೆಗೆದುಕೊಂಡಿತು. ಶ್ರೀಕೃಷ್ಣನು ಮಗುವಿಗೆ ಪುನರ್ಜೀವ ನೀಡಿದನು . ಅದಕ್ಕಾಗಿ  ಅವನಿಗೆ ( ವಿಷ್ಣುವಿನಿಂದ ರಕ್ಷಿಸಲ್ಪಟ್ಟವ) ವಿಷ್ಣುರಾತ  ಎಂಬ ಹೆಸರಾಯಿತು. ನಾಮಕರಣದ ಸಂದರ್ಭದಲ್ಲಿ ಜಾತಕ ನೋಡಿಸಿದಾಗ ಸರ್ಪದಿಂದ ಸಾವು ಬರುತ್ತದೆ ಎಂದು ತಿಳಿಸುತ್ತಾರೆ, ಹಾಗಾಗಿ ಅವನು ಸಾವಿನ ಭಯದಿಂದ ಎಲ್ಲಾ ಕಡೆಯು ಪರಿಶೀಲಿಸಿಕೊಂಡೇ ವಿಹರಿಸುತ್ತಿದ್ದ ಅದಕ್ಕೆ ಅವನಿಗೆ ಪರೀಕ್ಷಿತ ಎಂಬ ಹೆಸರಾಯಿತು, ಅದೇ ಹೆಸರಿಂದಲೇ ಪ್ರಸಿದ್ದನಾದ.

ಶ್ರೀಕೃಷ್ಣನು ಪರಂಧಾಮಕ್ಕೆ ಹೋದಮೇಲೆ ದುಃಖಿತರಾದ ಪಾಂಡವರು ಪರೀಕ್ಷಿತನಿಗೆ ಪಟ್ಟಕಟ್ಟಿ ಸ್ವರ್ಗಕ್ಕೆ ತೆರಳ್ಳುತ್ತಾರೆ. ಪರೀಕ್ಷಿತನಾದರೂ ಒಳ್ಳೆ ರೀತಿಯಲ್ಲಿ ರಾಜ್ಯವನ್ನು ಆಳತೊಡಗಿದನು.. ಅವನು ತನ್ನ ಸೋದರಮಾವನಾದ ಉತ್ತರನ ಪುತ್ರಿ ಇರಾವತಿ ಎಂಬುವಳೊಡನೆ ವಿವಾಹವಾಗಿ ಜನಮೇಜಯನೇ ಮೊದಲಾದ ನಾಲ್ಕು ಮಕಳ್ಳನ್ನು ಪಡೆದನು.

Advertisement

 ಕೃಷ್ಣ ಪರಂಧಾಮಕ್ಕೆ ಹೋದ ಮೇಲೆ ಕಲಿಪುರುಷನ ಆಗಮನವಾದರೂ ಪರೀಕ್ಷಿತನು ಕಲಿಪುರುಷನನ್ನೇ ಸಂಹರಿಸಲು ಮುಂದಾಗಿದ್ದನು. ಕಲಿಯು ಕ್ಷಮೆಯಾಚಿಸಿದಾಗ ಪರೀಕ್ಷಿತರಾಜನ ನಿರ್ದೇಶನದಂತೆ ಅಸತ್ಯ , ಮದ, ಕಾಮ, ವೈರ, ಮತ್ತು ರಜೋಗುಣ ಎಂಬ ಐದು ಸ್ಥಾನಗಳಲ್ಲಿ ಕಲಿಯು ವಾಸಿಸತೊಡಗಿದನು.

     ಒಂದು ದಿನ ಕಾಡಿನಲ್ಲಿರುವ ಕ್ರೂರ ಪ್ರಾಣಿಗಳನ್ನು ಭೇಟೆಯಾಡಲು ಹೋಗಿದ್ದ ಪರೀಕ್ಷಿತನು ಆಯಾಸದಿಂದ ಬಾಯಾರಿ ಅಲ್ಲೇ ಹತ್ತಿರದಲ್ಲಿದ್ದ ಋಷ್ಯಾಶ್ರಮವನ್ನು ಹೊಕ್ಕನು. ಅಲ್ಲಿ ಕಣ್ಣುಮುಚ್ಚಿ ಧ್ಯಾನಸ್ಥರಾಗಿ ಶಾಂತಭಾವದಿಂದ ಪಂಚೇಂದ್ರಿಯಗಳನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡು ಇಹವನ್ನು ಮರೆತು ಕುಳಿತಿದ್ದ ಶಮೀಕ ಮುನಿಯನ್ನು ಕಂಡನು. ಅವರಲ್ಲಿ ಗಂಟಲು ಒಣಗಿದ್ದ ರಾಜನು ನೀರು ಕೇಳಿದನು.

 ಋಷಿಗೆ ಯಾವುದರ ಪರಿವೆಯೇ ಇರಲಿಲ್ಲ. ರಾಜನನ್ನು ಉಪಚರಿಸಲು ಯಾರೂ ಬರಲಿಲ್ಲ. ಅವನಿಗೆ ಕುಳಿತುಕೊಳ್ಳಲು ಸರಿಯಾದ ಸ್ಥಳವಿರಲಿಲ್ಲ. ಒಂದು ಸವಿಮಾತನ್ನಾದರೂ ಆಡಲಿಲ್ಲ, ರಾಜನು ತನಗೆ ಅಪಮಾನವಾಯಿತೆಂದು ಭಾವಿಸಿ ಬಹಳ ಕೋಪಗೊಂಡನು. ಆ ಋಷಿಯ ಮೇಲೆ ಅಸೂಯೆಯೂ, ಕ್ರೋಧವೂ ಉಂಟಾದವು. ರಾಜನ ಜೀವನದಲ್ಲಿ ಮೊಟ್ಟ ಮೊದಲನೆ ಬಾರಿಗೆ ಇಂತಹ ಘಟನೆಯು ನಡೆದಿತ್ತು.  ಅಲ್ಲಿಂದ ಮರಳುವಾಗ ಅವನು ಸಿಟ್ಟಿನಿಂದ ಅಲ್ಲೆ ಸತ್ತುಬಿದ್ದಿದ್ದ ಒಂದು ಹಾವನ್ನು ಧನುಸ್ಸಿನ ತುದಿಯಿಂದ ಎತ್ತಿ ಆ ಋಷಿಯ ಕೊರಳಿಗೆ ಹಾಕಿ ಹಿಂದಿರುಗಿದ.

ಅರಸನ ಆ ವಿಚಿತ್ರ ವರ್ತನೆಯು  ಋಷಿಪುತ್ರನಾದ ಶೃಂಗಿಗೆ ತಿಳಿಯಿತು. ತನ್ನ ತಂದೆಗೆ ಆದ ಅವಮಾನವನ್ನು ಸಹಿಸಲಾಗಲಿಲ್ಲ, ಕೋಪದಿಂದ ನನ್ನ ಪೂಜ್ಯ ತಂದೆಗೆ ಅಪಮಾನ ಮಾಡಿದ ಪರೀಕ್ಷಿತನನ್ನು ಇಂದಿನಿಂದ ಏಳನೆಯ ದಿನಕ್ಕೆ ತಕ್ಷಕ ಸರ್ಪವು ಕಚ್ಚಲಿ ಎಂದು ಶಾಪವಿತ್ತನು.

ಧ್ಯಾನದಿಂದ ಎಚ್ಚರಗೊಂಡ ಮುನಿಗೆ ನಡೆದ ಸಂಗತಿ ತಿಳಿಯಿತು. ಮಗನು ಮಾಡಿದ ಕೆಲಸ ತಂದೆಗೆ ಹಿತವಾಗಲಿಲ್ಲ, ಆ ಮುನಿಯು ತನ್ನ ಶಿಷ್ಯನನ್ನು ಕರೆದು ತಮ್ಮ ಮಗನು ಕೊಟ್ಟ ಶಾಪವನ್ನು ರಾಜನಿಗೆ  ತಿಳಿಸಿ ಬಾ ಎಂದು ಕಳುಹಿಸಿದರು. ಅದನ್ನು ಕೇಳಿದ ರಾಜನು  ಆ ತಕ್ಷಕನೆಂಬ ಬೆಂಕಿಯು ರಾಜಕಾರ್ಯಗಳಲ್ಲಿ ಮತ್ತು ಭೋಗಗಳಲ್ಲಿ ಆಸಕ್ತನಾಗಿರುವ ನನಗೆ ವೈರಾಗ್ಯಕ್ಕೆ ಕಾರಣವಾಯಿತು ಎಂದು ಭಾವಿಸಿಕೊಂಡು ಮೃತ್ಯುವನ್ನು ಒಪ್ಪಿಕೊಂಡನು.

ವೀರ ಅಭಿಮನ್ಯು ಹಾಗೂ ಉತ್ತರೆಯ ಪುತ್ರನಾದ ಪರೀಕ್ಷಿತ ಮಹಾರಾಜನು ಗರ್ಭದಲ್ಲಿದ್ದಾಗಲೇ ಮೃತ್ಯುವು ಅವನನ್ನು ಹಿಂಬಾಲಿಸಿತ್ತು. ಕೊನೆಗೂ ಪರೀಕ್ಷಿತ ಮಹಾರಾಜನ ಒಂದು ಸಣ್ಣ ಕುಚೇಷ್ಟೆಯ ಬುದ್ಧಿಯಿಂದಾಗಿ ಮೃತ್ಯು ತಕ್ಷಕ ರೂಪದಿಂದ ಬಂದೊದಗಿತು .

ಎಲ್ಲವನ್ನು ತ್ಯಜಿಸಿ ಗಂಗಾ ನದಿಯ ಬಳಿಬಂದು  ಮುನಿಧರ್ಮವನ್ನು ಹಿಡಿದು ಆಮರಣಾಂತ ಉಪವಾಸದ ನಿಶ್ಚಯಗೈದು ಶ್ರೀಕೃಷ್ಣನನ್ನು ಧ್ಯಾನಿಸತೊಡಗಿದನು. ಅದೇ ಸಮಯಕ್ಕೆ ಋಷಿ ಪುಂಗರ ಸಮೂಹವೇ ಅಲ್ಲಿಗೆ ಬರುತ್ತದೆ. ಪರೀಕ್ಷಿತನ ಪ್ರಾರ್ಥನೆಯಂತೆ ಋಷಿಮುನಿಗಳು ಅಲ್ಲಿಯೇ ಉಳಿಯುತ್ತಾರೆ. ಭಾಗವತದ ಶ್ರವಣದಿಂದ ಮೃತ್ಯು ಭಯ ದೂರಾಗುತ್ತದೆ ಎಂದು ತಿಳಿಸುತ್ತಾರೆ. ಅವರ ಆದೇಶದಂತೆ ಪರೀಕ್ಷಿತನು ಏಳು ದಿನಗಳನ್ನು ಕಳೆಯಲು ತೀರ್ಮಾನಿಸುತ್ತಾನೆ. ಹಾಗೆ ಪರೀಕ್ಷಿತರಾಜನ ಸಲುವಾಗಿ  ಭಾಗವತದ ಪಾರಾಯಣವಾಗುತ್ತದೆ.

ರಾಜನಿಗೆ ಬಂದೊದಗಿದ ಸಂಕಟದ ಸುದ್ದಿ ಹಾಗೂ ಭಾಗವತ ಪಾರಾಯಣದ ವಿಷಯ ಎಲ್ಲೆಡೆ ಹರಡುತ್ತದೆ. ಅಲ್ಲಿಗೆ ಜನರು ತಂಡೋಪ ತಂಡವಾಗಿ ಬರತೊಡಗುತ್ತಾರೆ. ಹಾಗೆ ರಾಜನ ಉಳಿವಿಗೆ ತಕ್ಷಕನನ್ನು ತಡೆಯಲು ಸಕಲ ಪ್ರಯತ್ನಗಳು ನಡೆಯುತ್ತವೆ. ಏಳು ದಿನಗಳ ಪಾರಾಯಣ ಮುಗಿಯುವ ಹೊತ್ತಿಗೆ ಪರೀಕ್ಷಿತನಿಗೆ ವೈರಾಗ್ಯ ಬಂದು ಯೋಗದಿಂದ ಸಮಾಧಿ ಸ್ಥಿತಿ ಹೊಂದಲು ತೀರ್ಮಾನಿಸುತ್ತಾನೆ .

ಇತ್ತ ತಕ್ಷಕ ವೇಷ ಧರಿಸಿಕೊಂಡು ಬರುತ್ತಿರುತ್ತಾನೆ ಆದರೆ ರಾಜನ ಬಳಿ ಹೋಗುವುದು ಕಷ್ಟವಾಗಿತ್ತು, ಉಪಾಯ ಮಾಡಿ ಭಾಗವತ ಕೇಳಲು ಹೋಗುವವರು ತೆಗೆದುಕೊಂಡು ಹೋಗುತ್ತಿದ್ದ ಫಲವಸ್ತುವಿನಲ್ಲಿ ಹುಳವಾಗಿ ಸೇರಿಕೊಂಡು ಒಳಹೊಕ್ಕುತ್ತಾನೆ. ರಾಜನ ಸಮೀಪವಾಗುತ್ತಿದಂತೆ ಸರ್ಪರೂಪ ಧರಿಸಿ ರಾಜನ್ನನು ಕಚ್ಚುತ್ತಾನೆ ಆದರೆ ರಾಜ ಅದೇ ಸಮಯಕ್ಕೆ ಎಲ್ಲಾ ಇಂದ್ರಿಯಗಳನ್ನು ಲಯಗೊಳಿಸುತ್ತಾ ಶ್ರೀಕೃಷ್ಣನ ಧ್ಯಾನಿಸುತ್ತಾ ಸಮಾಧಿಸ್ಥಿತಿ ತಲುಪುತ್ತಾನೆ.

ಲೋಕದ ದೃಷ್ಟಿಯಲ್ಲಿ ಋಷಿಪುತ್ರನ ಶಾಪದಂತೆ ತಕ್ಷಕ  ರಾಜನನ್ನು ಕಚ್ಚಿದರು ಅವನಿಗೆ ಭಾಗವತದ ಶ್ರವಣ ಫಲದಿಂದ ಯೋಗಸ್ಥಿತಿ ಲಭಿಸಿತು ಶ್ರೀಕೃಷ್ಣನು ಪರೀಕ್ಷಿತ ರಾಜನಿಗೆ ಮೋಕ್ಷವನ್ನು ಕರುಣಿಸಿದನು.

Advertisement

Udayavani is now on Telegram. Click here to join our channel and stay updated with the latest news.

Next