Advertisement

11 ವರ್ಷ ಕಳೆದ್ರೂ ಹನಿ ನೀರು ಸಿಕ್ಕಿಲ್ಲ!

11:15 AM May 16, 2019 | Naveen |

ತರೀಕೆರೆ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನೆನಗುದಿಗೆ ಬಿದ್ದಿದೆ.

Advertisement

ಗ್ರಾಮೀಣ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ರಾಜ್ಯ ಸರಕಾರ 7.36 ಲಕ್ಷ ರೂ. ವೆಚ್ಚದಲ್ಲಿ ಸೊಪ್ಪಿನಮಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಈ ಯೋಜನೆಯ ಕಾಮಗಾರಿ ಪೂರ್ಣಗೊಳ್ಳದೆ ತ್ರಿಶಂಕು ಸ್ಥಿತಿಯಲ್ಲಿದೆ.

7 ಗ್ರಾಮ ಪಂಚಾಯತ್‌ ವ್ಯಾಪ್ತಿಯ 11 ಗ್ರಾಮಗಳಿಗೆ ಭದ್ರಾ ನದಿಯಿಂದ ನೀರೊದಗಿಸುವ ಉದ್ದೇಶದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿಗೊಳಿಸಿದ್ದು, ಯೋಜನೆ ಪ್ರಾರಂಭವಾಗಿ 11 ವರ್ಷಗಳು ಕಳೆದರೂ ಒಂದು ಲೋಟ ನೀರು ಗ್ರಾಮಸ್ಥರಿಗೆ ತಲುಪದಿರುವುದು ವಿಪರ್ಯಾಸದ ಸಂಗತಿ.

ತಾಲೂಕಿನಲ್ಲಿ ನೈಸರ್ಗಿಕವಾಗಿ ದೊರೆಯುವ ಜಲಮೂಲಗಳಿಗೆ ಕೊರತೆ ಇಲ್ಲ. ಇಲ್ಲಿ ಭದ್ರಾ ನದಿ, ಹೆಬ್ಬೆ ಜಲಪಾತ, ಕಲ್ಲತ್ತಿ ಜಲಪಾತ, ಭೀಮನಹಳ್ಳ, ಕೊಂಡೆಖಾನ್‌ಹಳ್ಳ, ಗಾಣಗಿತ್ತಿಹಳ್ಳ, ಹೋದಿರಾಯನ ಹಳ್ಳ, ಗೊಂದಿ ಅಣೆಕಟ್ಟು ಇವುಗಳ ಜೊತೆಗೆ ಲೆಕ್ಕವಿಲ್ಲದಷ್ಟು ಸಣ್ಣ ಸಣ್ಣ ತೊರೆಗಳು ಮಳೆಗಾಲದಲ್ಲಿ ತುಂಬಿ ನೀರು ವ್ಯರ್ಥವಾಗಿ ಹರಿದು ನದಿಗೆ ಸೇರುತ್ತದೆ. ಆದರೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ.

2007-08ರಲ್ಲಿ 11 ಗ್ರಾಮಗಳಿಗೆ ಸೊಪ್ಪಿನಮಟ್ಟಿ ಬಹುಗ್ರಾಮ ಕುಡಿಯುವ ಕುಡಿಯುವ ನೀರು ಯೋಜನೆ ಜಾರಿಗೆ ಅನುಮೋದನೆ ಸಿಕ್ಕಿತ್ತು. ಯೋಜನೆಯ ಕಾಮಗಾರಿ ಆರಂಭವಾಗಿ 9 ತಿಂಗಳೊಳಗೆ ಪೂರ್ಣಗೊಳಿಸುವಂತೆ ಷರತ್ತು ವಿಧಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಯೋಜನೆ ಕುಟುಂತ್ತಾ, ತೆವಳತ್ತ ಸಾಗಿದೆ.

Advertisement

ಆರಂಭದಲ್ಲಿ ಈ ಯೋಜನೆಗೆ 5.14 ಕೋಟಿ ರೂ. ಮೀಸಲಿರಿಸಲಾಗಿತ್ತು. ಬಳಿಕ 5.86 ಕೋಟಿ ರೂ.ಗೆ ಟೆಂಡರ್‌ ನೀಡಲಾಯಿತು. ಇಲಾಖೆಯ ದಾಖಲೆ ಪ್ರಕಾರ ಯೋಜನೆ 2014ರಲ್ಲಿಯೇ ಪೂರ್ಣಗೊಳಿಸಲಾಗಿದೆ. ಯೋಜನೆ ಪೂರ್ಣಗೊಳಿಸಲು ಗ‌ುತ್ತಿಗೆದಾರನಿಗೆ ಸರಕಾರ ಇಲ್ಲಿಯವರೆಗೆ 7.36 ಕೋಟಿ ರೂ.ಪಾವತಿಸಿದೆ. ಆದರೆ ಈ ಯೋಜನೆಯ ವ್ಯಾಪ್ತಿಯ ಕರಕುಚ್ಚಿ, ಕೆಂಚಿಕೊಪ್ಪ, ಹಲಸೂರು, ಮುಡಗೋಡು, ಬರಗೇನಹಳ್ಳಿ, ಬಾವಿಕೆರೆ ಮತ್ತು ಸಿದ್ದರಹಳ್ಳಿ ಗ್ರಾಪಂ, ಮಾಳಿಕೊಪ್ಪ, ಯರೇಬೈಲು, ದುಗ್ಲಾಪುರ ಮತ್ತು ಗಂಜಿಗೆರೆ ಗ್ರಾಮಗಳಿಗೆ ಇನ್ನೂ ಕುಡಿಯುವ ನೀರು ಪೂರೈಕೆಯಾಗದಿರುವುದು ವಿಶೇಷ.

ಸೊಪ್ಪಿನಮಟ್ಟಿ ಗುಡ್ಡದಲ್ಲಿ ನೀರು ಶುದ್ಧೀಕರಣ ಘಟಕದ ಕಾಮಗಾರಿ ಪೂರ್ಣಗೊಂಡಿದೆ. ಇದರ ತಪ್ಪಲಿನಲ್ಲಿಯೇ ಇರುವ ಕರಕುಚ್ಚಿ ಗ್ರಾಮಕ್ಕೆ ಇಲ್ಲಿಯವರೆಗೆ ನೀರು ಪೂರೈಕೆಯಾಗಿಲ್ಲ. ಶುದ್ಧೀಕರಣ ಘಟಕದಿಂದ ನೀರು ಹರಿಸಿದ ಕೂಡಲೇ ನೀರಿನ ಒತ್ತಡ ತಾಳದೆ ಪೈಪ್‌ಲೈನ್‌ಗಳು ಒಡೆದು ಹೋಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಮೋಟಾರ್‌ ಪಂಪ್‌ ಅಳವಡಿಕೆ ಮತ್ತು ಟ್ಯಾಂಕ್‌ ನಿರ್ಮಾಣಕ್ಕೆ ಮುನ್ನವೇ ಪೈಪ್‌ಲೈನ್‌ ಅಳವಡಿಸಲಾಗಿದೆ. ನೀರು ಹರಿಯುವ ಪ್ರಮಾಣಕ್ಕೆ ಅನುಗುಣವಾದ ಪಿವಿಸಿ ಪೈಪ್‌ಗ್ಳು, ಅಗತ್ಯವಿರುವ ಕಡೆಗಳಲ್ಲಿ ಎರಕ ಪೈಪ್‌ ಅಳವಡಿಸದಿರುವುದು ಯೋಜನೆ ಹಳ್ಳ ಹಿಡಿಯಲು ಕಾರಣವಾಗಿದೆ. ಯೋಜನೆ ಪೂರ್ಣಗೊಂಡಿದೆ ಎಂಬ ವರದಿ ಆಧಾರದ ಮೇರೆಗೆ ಸರಕಾರ ಯೋಜನೆಯ ನಿರ್ವಹಣೆಗಾಗಿ 2 ಕೋಟಿ ರೂ. ಬಿಡುಗಡೆ ಮಾಡಲು ಸಿದ್ಧವಾಗಿತ್ತು. ಆದರೆ ಯೋಜನೆಯನ್ನು ತಜ್ಞರಿಂದ ತನಿಖೆ ಮಾಡಿಸಿ ವರದಿ ಪಡೆದುಕೊಂಡ ಸರಕಾರ ಬಿಡುಗಡೆ ಆದೇಶವನ್ನು ಹಿಂದಕ್ಕೆ ಪಡೆದಿದೆ.

ಒಟ್ಟಾರೆ ಸರಕಾರ ಕುಡಿಯುವ ನೀರಿಗಾಗಿ ಕೋಟಿಗಟ್ಟಲೇ ಹಣ ನೀಡಿದೆ. ಸರಕಾರ ನೀಡಿದ ಅನುದಾನವು ಕೂಡ ಪೂರ್ಣ ಪ್ರಮಾಣದಲ್ಲಿ ಖರ್ಚಾಗಿದೆ. ಆದರೆ ಕುಡಿಯುವ ನೀರು ಇನ್ನೂ ಯಾವ ಗ್ರಾಮಕ್ಕೂ ತಲುಪಿಲ್ಲ. ಸಾರ್ವಜನಿಕರ ಹಣ ಯಾವ ರೀತಿ ಪೋಲಾಗುತ್ತದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಜಿಲ್ಲೆಯಲ್ಲಿ ಕಳಸ, ಸಖರಾಯಪಟ್ಟಣ, ಸೊಪ್ಪಿನಮಟ್ಟಿ ಮತ್ತು ಬೇಲೇನಹಳ್ಳಿ ಹಂತ-1 ಮತ್ತು ಹಂತ -2 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ ಈ ಬಹುಗ್ರಾಮ ಕುಡಿಯುವ ಯೋಜನೆಗಳು ಪೂರ್ಣಗೊಂಡರು ನೀರು ಹರಿದು ಬರದಿರುವುದು ಜಿಲ್ಲೆಯ ಜನತೆಯ ದುರಂತವೇ ಸರಿ.

ಸೊಪ್ಪಿನಮಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸರಕಾರದ ಒಪ್ಪಿಗೆ ಪಡೆದು 11 ವರ್ಷಗಳು ಕಳೆದಿವೆ. ಈ ಯೋಜನೆ ಬಗ್ಗೆ ಜಿಪಂ ಸಭೆಗಳಲ್ಲಿ ಆಗಿರುವ ವಿಳಂಬ ಮತ್ತು ಕಳಪೆ ಕಾಮಗಾರಿಗಳ ಬಗ್ಗೆ ಸುದೀರ್ಘ‌ ಚರ್ಚೆ ನಡೆದಿದೆ. ತನಿಖೆಗೂ ಒತ್ತಾಯ ಮಾಡಲಾಗಿತ್ತು. ಸಿಇಒ, ಕಾರ್ಯಪಾಲಕ ಇಂಜನಿಯರ್‌, ಹಲವಾರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದೇ ವಿಶೇಷ. ಆದರೂ ಯೋಜನೆ ಇನ್ನೂ ಕೂಡ ಕಾರ್ಯಗತವಾಗಿಲ್ಲ.ಅಧಿಕಾರಿಗಳಿಗೆ ಯೋಜನೆ ಪೂರ್ಣಗೊಳಿಸುವ ಮನಸ್ಥಿತಿ ಇದ್ದಿದ್ದರೆ ಯೋಜನೆ ಜನರಿಗೆ ತಲುಪುತ್ತಿತ್ತು.
ಕೆ.ಪಿ.ಕುಮಾರ್‌,
ಜಿಪಂ ಮಾಜಿ ಸದಸ್ಯ, ಕರಕುಚ್ಚಿ.

ಸೊಪ್ಪಿನಮಟ್ಟಿ ಯೋಜನೆಯೇ ಅವೈಜ್ಞಾನಿಕ. 7 ಗ್ರಾಪಂಗ‌ಳಿಗೆ ನೀರೊದಗಿಸುವ ಯೋಜನೆ ಇದಾದರು,ಈ ಯೋಜನೆ ಪೂರ್ಣಗೊಳ್ಳಲು 10 ವರ್ಷ ಕಳೆದರೂ ಸಹ ಇನ್ನೂ ಪೂರ್ಣಗೊಂಡಿಲ್ಲ ಎನ್ನುವುದಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಇನ್ನೊಂದಿಲ್ಲ. ಸರಕಾರ ಗ್ರಾಪಂಗ‌ಳಿಗೆ ತಲಾ 1 ಕೋಟಿ ರೂ. ನೀಡಿದ್ದರೆ ಗ್ರಾಪಂಗಳು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುತ್ತಿದ್ದವು. ನೆನಗುದಿಗೆ ಬೀಳುವ ಇಂತಹ ಯೋಜನೆಗಳಿಂದ ಯಾರಿಗೆ ತಾನೇ ಲಾಭ. ಸರಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಗ್ರಾಮಗಳಿಗೆ ನೀರು ಹರಿಸುವ ಕೆಲಸ ಮಾಡಲಿ.
ರಾಮಪ್ಪ,
ತಾಪಂ ಸದಸ್ಯರು, ಮುಡಗೋಡು.

ಸೊಪ್ಪಿನಮಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಈ ಹಿಂದೆ ಸಬ್‌ಮರ್ಸಿಬಲ್ ಪಂಪ್‌ ಅಳವಡಿಸಲಾಗಿತ್ತು. ಇದನ್ನು ಬದಲಿಸಿ ಟರ್ಬೋ ಮೋಟಾರ್‌ ಪಂಪ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಗುಜರಾತ್‌ನಿಂದ ಪಂಪಿಂಗ್‌ ಮಷಿನ್‌ ಬಂದ ಕೂಡಲೇ ಅಳವಡಿಸಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.
ಬಿ.ಶಿವಕುಮಾರ್‌,ಇಇ,ಗ್ರಾನೀಸ ಇಲಾಖೆ.

ಶೇಖರ್‌ ವಿ.ಗೌಡ

Advertisement

Udayavani is now on Telegram. Click here to join our channel and stay updated with the latest news.

Next