Advertisement

‘ಮತ್ತೆ ಕಲ್ಯಾಣ’ಕಾರ್ಯಕ್ರಮ ಶುಭ ಲಕ್ಷಣ

04:01 PM Aug 02, 2019 | Team Udayavani |

ತರೀಕೆರೆ: 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಮಾಡಿದವರು ದಾರ್ಶನಿಕ ಬಸವಣ್ಣನವರು. 850 ವರ್ಷಗಳ ನಂತರ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಆರಂಭವಾಗಿರುವುದು ಶುಭ ಲಕ್ಷಣವಾಗಿದೆ ಎಂದು ಹಿರಿಯ ಚಿಂತಕ ಗೊ.ರು.ಚೆನ್ನಬಸಪ್ಪ ಸಂತಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ಅಕ್ಕ ನಾಗಲಾಂಬಿಕಾ ಗದ್ದುಗೆ ಆವರಣದಲ್ಲಿ ಸಹಮತ ವೇದಿಕೆ ಏರ್ಪಡಿಸಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, . ಅಂದಿನ ಕಲ್ಯಾಣ ಕ್ರಾಂತಿಗೆ ಕಾರಣವಾದದ್ದು ದೇವರು-ಧರ್ಮದ ಹೆಸರಿನಲ್ಲಿ ಪೂಜಾರಿಗಳು ನಡೆಸುತ್ತಿದ್ದ ಹುನ್ನಾರಗಳು ಮತ್ತು ಅಂದಿನ ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳು ಕಾರಣವಾಗಿದ್ದವು ಎಂದರು. ಬಸವಣ್ಣನವರು ವಚನ ಸಾಹಿತ್ಯವನ್ನು ಉಳಿಸಲು ಮತ್ತು ಅವರ ಆಶಯಗಳಿಗೆ ಪಟ್ಟಭದ್ರ ಹಿತಾಸಕ್ತಿಗಳು ಹಿಂಸೆ ನೀಡಿದ ಕಾರಣ ಕಲ್ಯಾಣವನ್ನು ತೊರೆಯಬೇಕಾಗಿ ಬಂತು. ಜನರಲ್ಲಿ ಇರುವ ಮೌಡ್ಯ, ಕಂದಚಾರಗಳನ್ನು ದೂರ ಮಾಡಿ ಎಲ್ಲರೂ ಸಮಾನರು. ಮಾನವನ ಘನತೆ ಸಮಾನವಾದುದು ಎಂಬುದೇ ‘ಮತ್ತೆ ಕಲ್ಯಾಣ’ದ ಆಶಯವಾಗಿದೆ ಎಂದು ತಿಳಿಸಿದರು.

ಅಂದಿನ ದಿನಗಳಲ್ಲಿ ಮೇಲ್ವರ್ಗದವರ ಸೇವೆಯನ್ನು ಕೆಳ ವರ್ಗದವರು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ, ಬಸವಣ್ಣನವರು ಎಲ್ಲರೂ ಸಮಾನರು ಎಂದು ಸಾರುತ್ತ, ಮಾನವರೆಲ್ಲರೂ ಸರಿ ಸಮಾನರು ಎಂದು ಹೇಳಿ ಕಾರ್ಯರೂಪಕ್ಕೆ ತಂದವರು. ಸಂಪ್ರದಾಯ ವ್ಯವಸ್ಥೆಯನ್ನು ವಿರೋಧಿಸಿದವರು ಎಂದು ಹೇಳಿದರು.

ದೇಶದಲ್ಲಿ ಮತಾಂಧತೆ ಹೆಚ್ಚಾಗುತ್ತಿದೆ. ಹಲವಾರು ಅನಿಷ್ಠಗಳಿಗೆ ನಾವು ಕಾರಣರಾಗಿದ್ದೇವೆ. ಇಂದಿನ ಸಮಾಜದಲ್ಲಿ ಭಿನ್ನಾಭಿಪ್ರಾಯದ ಅಗ್ನಿ ಪರ್ವತದ ಮೇಲೆ ನಾವಿದ್ದೇವೆ. ನಾವು ನಂಬಿರುವ ನವಗ್ರಹಗಳಿಂದ ನಮಗೆ ತೊಂದರೆಯಾಗುತ್ತಿಲ್ಲ. ಅಧಿಕಾರ, ಹಣ, ಮತಾಂಧತೆ, ಮತೀಯ ಭಾವನೆ, ರಾಜಕೀಯ ಅನಾಯಕತ್ವ ಎನ್ನುವ ಆಧುನಿಕ ನವಗ್ರಹಗಳಿಂದ ನಾವು ತೊಂದರೆಗಳಿಗೆ ಒಳಗಾಗಿದ್ದೇವೆ. ನಮ್ಮಲ್ಲಿ ಮನುಷ್ಯತ್ವ ಎನ್ನುವುದು ಇಲ್ಲದಂತಾಗಿದೆ. ಸ್ವಾರ್ಥಕ್ಕಾಗಿ ನಮ್ಮ ಬದುಕು ಎನ್ನುವಂತಾಗಿರುವುದು ವಿರ್ಪಯಾಸ. ಇದು ನೈತಿಕ ದಾರಿದ್ರ್ಯಕ್ಕೆ ಕಾರಣವಾಗಿದೆ ಎಂದರು.

ಪ್ರೊ| ರಹಮತ್‌ ತರೀಕೆರೆ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಅಕ್ಕ ನಾಗಮ್ಮ ಕಲ್ಯಾಣ ರಾಜ್ಯದಲ್ಲಿ ತಾಯ್ತತನದ ಹಕ್ಕನ್ನು ಪ್ರತಿಪಾದನೆ ಮಾಡಿದವರು. ಕಲ್ಯಾಣದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತಿತ್ತು. ಅಭಿಪ್ರಾಯಗಳನ್ನು ನೇರವಾಗಿ ಹೇಳಬಹುದಾಗಿತ್ತು. 12ನೇ ಶತಮಾನದಲ್ಲಿಯೇ ಅಂತರ್ಜಾತೀಯ ವಿವಾಹವನ್ನು ನಡೆಸಲಾಗಿತ್ತು. ಆದರೆ, ಇಂದು ಅಂತರ್ಜಾತೀಯ ವಿವಾಹ ಒಂದು ಪಾಪ ಎನ್ನುವ ಪರಿಸ್ಥಿತಿ ಬಂದಿದೆ. ಪಶುತ್ವದಿಂದ ಸಮಾಜ ಹೊರಬರಬೇಕಾಗಿದೆ. ಕೊಲೆ ಮಾಡುವುದಕ್ಕೆ ದೇವರ ಹೆಸರು ಪ್ರೇರಣೆಯಾಗಿರುವುದು ಆತ್ಮಕ್ಕೆ ಘಾಸಿಯನ್ನುಂಟು ಮಾಡಿದೆ. ಕೊಲೆಗಳನ್ನು ಸಂಭ್ರಮಿಸುವ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಭಿನ್ನಮತಗಳಿಗೆ ಇಂದು ಅವಕಾಶವಿಲ್ಲದಂತಾಗಿದೆ. ಸಾಂಸ್ಕೃತಿಕ ಪ್ರಜಾಪ್ರಭುತ್ವ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ಚಿಂತಕಿ ಗಂಗಾಂಬಿಕಾ ಬಸವರಾಜು ಮಾತನಾಡಿ, ಅಕ್ಕನಾಗಮ್ಮ ಅನುಭವ ಮಂಟಪದ ಆಧಾರ ಸ್ತಂಭವಾಗಿದ್ದವರು. ಕಲ್ಯಾಣದಲ್ಲಿ ಕ್ರಾಂತಿಯಾದ ಮೇಲೆ ಸಹೋದರ, ಮಗ ಮತ್ತು ಪತಿಯನ್ನು ಕಳೆದುಕೊಂಡರೂ ದೃತಿಗೆಡದೆ ವಚನ ಸಾಹಿತ್ಯವನ್ನು ರಕ್ಷಣೆ ಮಾಡುವುದಕ್ಕಾಗಿ ಕತ್ತಿ ಹಿಡಿದು ಹೋರಾಟ ಮಾಡಿದವರು. ಆಕೆ ಕಲ್ಯಾಣದ ಪ್ರೇರಕ, ಪೂರಕ ಶಕ್ತಿ. ಜೊತೆಗೆ ಅಕ್ಕನಾಗಮ್ಮ ವ್ಯಾಪಕವಾಗಿ ಧರ್ಮ ಪ್ರಚಾರ ಮಾಡಿ ಜ್ಞಾನ ರಕ್ಷಣೆ ಮಾಡಿದರು. ವಚನ ಸಾಹಿತ್ಯವಿಲ್ಲದಿದ್ದರೆ ಕನ್ನಡ ಸಾಹಿತ್ಯ ಬರಡಾಗುತ್ತಿತ್ತು. ಅಧ್ಯಾತ್ಮದಿಂದ ಮನಸ್ಸು ಪರಿವರ್ತನೆ ಸಾಧ್ಯ ಎಂದು ಭಾವಿಸಿದ್ದರು ಎಂದರು. ಚಿಂತಕ ಹಾಗೂ ಚಿತ್ರ ನಟ ಚೇತನ್‌ ಮಾತನಾಡಿ, ಒಳಗೊಳ್ಳುವಿಕೆ ಉದ್ದೇಶವೇ ‘ಮತ್ತೆ ಕಲ್ಯಾಣ’. ಶರಣರ ವಿಚಾರಧಾರೆಗಳು ಮತ್ತು ವಚನಗಳು ಇಂದಿಗೂ ಪ್ರಸ್ತುತವಾಗಿವೆ. 1400 ವರ್ಷಗಳ ಹಿಂದೆ ವೈದಿಕ ಶಾಹಿ ನಮ್ಮನ್ನು ಕತ್ತಲಲ್ಲಿ ಇಟ್ಟಿದ್ದರು. ಅಂದು ಮನುಸ್ಮೃತಿಗೆ ವಿರೋಧವಿರಲಿಲ್ಲ. 12ನೇ ಶತಮಾನದಲ್ಲಿ ಬಂದ ದಾರ್ಶನಿಕ ಬಸವಣ್ಣನವರು ಎಲ್ಲಾ ವರ್ಗದ ಜನರ ಮೇಲೆ ಬೆಳಕು ಚೆಲ್ಲಿದರು ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ತಳವರ್ಗದಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಿದವರು. ಅನುಭವ ಮಂಟಪದಲ್ಲಿ ಅವರ ವಿಚಾರಧಾರೆಗಳನ್ನು ಹೇಳುವ ಅವಕಾಶವನ್ನು ಕಲ್ಪಿಸಿದ್ದರು. ಅಂದು ಪಟ್ಟಭದ್ರ ಹಿತಾಸಕ್ತಿಗಳು ಶರಣ ಸಾಹಿತ್ಯವನ್ನು ಅಳಿಸಲು ಮುಂದಾಗಿದ್ದರು. ಅವುಗಳನ್ನು ನಶಿಸಿಹೋಗದಂತೆ ಜೀವಂತವಾಗಿಡುವ ಪ್ರಯತ್ನಗಳನ್ನು ಅನೇಕ ಮಹನೀಯರು ಮಾಡಿದ್ದಾರೆ. ಶರಣರ ವಿಚಾರಧಾರೆ, ವಚನ, ತತ್ವ-ಸಿದ್ಧಾಂತಗಳು, ಚಿಂತನೆಗಳನ್ನು ಒಳಗೊಳ್ಳಿಸಿಕೊಳ್ಳಬೇಕೆಂದು ಹೇಳಿದರು.

ಶಾಸಕ ಡಿ.ಎಸ್‌.ಸುರೇಶ್‌ ಸ್ವಾಗತಿಸಿದರು. ಶಾಸಕರಾದ ಸಿ.ಟಿ.ರವಿ, ಬೆಳ್ಳಿ ಪ್ರಕಾಶ್‌, ಮಾಜಿ ಶಾಸಕ ಎಸ್‌.ಎಂ.ನಾಗರಾಜ್‌, ಉದ್ಯಮಿ ಎಚ್.ಓಂಕಾರಪ್ಪ, ತಮ್ಮಯ್ಯ, ತಾಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಮಂಜುಳಾ, ಕುರುಬ ಸಮಾಜದ ಮುಖಂಡ ಟಿ.ವಿ.ಶಿವಶಂಕರಪ್ಪ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next