Advertisement

ಸೈನಾ, ಶ್ರೀಕಾಂತ್‌ಗೆ ಸೋಲಿನ ಆಘಾತ

02:47 AM Aug 02, 2019 | Team Udayavani |

ಬ್ಯಾಂಕಾಕ್‌: ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಗುರುವಾರ ಭಾರತದ ತಾರಾ ಆಟಗಾರರ ಪತನವಾಗಿದೆ. ವನಿತಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್, ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್‌ ತಮ್ಮ ಆಟ ಮುಗಿಸಿ ಕೂಟದಿಂದ ನಿರ್ಗಮಿಸಿದ್ದಾರೆ. ಆದರೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಕ್ವಾರ್ಟರ್‌ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸಿಂಧು ಗೈರಲ್ಲಿ ಭಾರತದ ಪ್ರಮುಖ ಆಟಗಾರ್ತಿಯಾಗಿದ್ದ ಸೈನಾ ನೆಹ್ವಾಲ್ ಅವರನ್ನು ಜಪಾನಿನ ಸಯಾಕಾ ಟಕಹಾಶಿ 16-21, 21-11, 21-14 ಅಂತರದಿಂದ ಪರಾಭವಗೊಳಿಸಿದರು. ಟಕಹಾಶಿ ಈ ಕೂಟದಲ್ಲಿ ಯಾವುದೇ ಶ್ರೇಯಾಂಕ ಪಡೆದಿಲ್ಲ ಎಂಬುದು ಗಮನಾರ್ಹ.

ಗಾಯದ ಕಾರಣದಿಂದ ಸೈನಾ ನೆಹ್ವಾಲ್ ಕಳೆದ ಇಂಡೋನೇಶ್ಯ ಓಪನ್‌ ಮತ್ತು ಜಪಾನ್‌ ಓಪನ್‌ ಕೂಟದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು.

ವಿಶ್ವದ ನಂ. 10 ಆಟಗಾರ ಕೆ. ಶ್ರೀಕಾಂತ್‌ ಇಂಡೋನೇಶ್ಯದ ಖೊಸಿತ್‌ ಫೆತ್‌ಪ್ರದಾಬ್‌ ವಿರುದ್ಧ ದಿಟ್ಟ ಹೋರಾಟ ನೀಡಿ 3 ಗೇಮ್‌ಗಳಿಂದ ಎಡವಿದರು. ಮೊದಲ ಗೇಮ್‌ನಲ್ಲಿ 21-11 ಮೇಲುಗೈ ಸಾಧಿಸಿದರೂ ಅನಂತರದ ಗೇಮ್‌ಗಳಲ್ಲಿ 16-21, 12-21 ಅಂತರದಿಂದ ಹಿಂದುಳಿದರು.

ರಾಂಕಿರೆಡ್ಡಿ-ಚಿರಾಗ್‌ ಮುನ್ನಡೆ
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್‌ ಸಾಯಿ ರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿ ಭರವಸೆ ಮೂಡಿಸಿದ್ದಾರೆ. ಇವರು ಇಂಡೋನೇಶ್ಯದ ಫ‌ಜರ್‌ ಅಲ್ಫಿಯಾನ್‌-ಮುಹಮ್ಮದ್‌ ರಿಯಾನ್‌ ಅರ್ದಿಯಾಂತೊ ಜೋಡಿಯನ್ನು 21-17, 21-19ರಿಂದ ಪರಾಭವಗೊಳಿಸಿದರು.

Advertisement

ಪ್ರಣಯ್‌ ಪರಾಭವ
ದಿನದ ಕೊನೆಯ ಪಂದ್ಯದಲ್ಲಿ ಎಚ್.ಎಸ್‌. ಪ್ರಣಯ್‌ ಕೂಡ ಸೋಲಿನ ಸುದ್ದಿ ನೀಡಿದರು. ಜಪಾನಿನ ಕೆಂಟ ನಿಶಿಮೊಟೊ ವಿರುದ್ಧ 17-21, 10-21 ಅಂತರದಿಂದ ಕಳೆದುಕೊಂಡು ಕೂಟದಿಂದ ನಿರ್ಗಮಿಸಿದರು.

ಶುಭಂಕರ್‌ಗೆ ಸೋಲುಣಿಸಿದ ಪ್ರಣೀತ್‌
ಭಾರತೀಯರ ಮೇಲಾಟದಲ್ಲಿ ಬಿ. ಸಾಯಿಪ್ರಣೀತ್‌ 21-18, 21-19 ಅಂತರದಿಂದ ಶುಭಂಕರ್‌ ಡೇ ವಿರುದ್ಧ ಗೆದ್ದು ಬಂದರು. ಸಾಯಿ ಪ್ರಣೀತ್‌ ಕ್ವಾ.ಫೈನಲ್ನಲ್ಲಿ ಜಪಾನಿನ 7ನೇ ಶ್ರೇಯಾಂಕಿತ ಆಟಗಾರ ಕಾಂಟ ತ್ಸುನೆಯಾಮ ವಿರುದ್ಧ ಸೆಣಸಲಿದ್ದಾರೆ. ಆದರೆ ಪಾರುಪಳ್ಳಿ ಕಶ್ಯಪ್‌ ಚೈನೀಸ್‌ ತೈಪೆಯ ಚೋ ಟೀನ್‌ ಚೆನ್‌ ವಿರುದ್ಧ 9-21, 14-21 ಅಂಕಗಳಿಂದ ಎಡವಿದರು.

Advertisement

Udayavani is now on Telegram. Click here to join our channel and stay updated with the latest news.

Next