Advertisement

ಗಲಭೆ ಬೆನ್ನಲ್ಲೇ ಜವಳಿ ವ್ಯಾಪಾರ ಮಂಕು

09:01 AM Apr 22, 2022 | Team Udayavani |

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಹಾಗೂ ನಂತರದ ವದಂತಿಗಳಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಅದರಲ್ಲೂ ಜವಳಿ ವ್ಯಾಪಾರದ ಮೇಲೆ ಮಂಕು ಕವಿದಿದೆ.

Advertisement

ಮದುವೆ, ಶುಭ ಸಮಾರಂಭಗಳಿಗೆ ಜವಳಿ ಖರೀದಿಸಬೇಕಾದ ಜನರು ಬೇರೆ ನಗರದತ್ತ ಮುಖ ಮಾಡಿದ್ದು, ಹಿಂದಿನ ಮತೀಯ ಗಲಭೆ, ಗಲಾಟೆಗಳಿಂದ ಇಂದಿಗೂ ವಾಣಿಜ್ಯ ನಗರಿ ಎಂದು ಸೂಕ್ಷ್ಮ ಪ್ರದೇಶ ಎನ್ನುವ ಭಾವನೆ ಮರುಕಳಿಸಿದೆ.

ಸುತ್ತಲಿನ ನಾಲ್ಕೈದು ಜಿಲ್ಲೆಯ ಜನರಿಗೆ ವಾಣಿಜ್ಯ ನಗರಿ ಹುಬ್ಬಳ್ಳಿ ಜವಳಿ ಖರೀದಿಯ ಕೇಂದ್ರ. ಇದೀಗ ಏ.20 ರಿಂದ ಮೇ 25 ರವರೆಗೆ ಮುಹೂರ್ತಗಳಿರುವ ಕಾರಣ ಜವಳಿ ಮಾಡುವ ಸಂದರ್ಭವಿದು. ಹೀಗಿರುವಾಗ ನಗರದಲ್ಲಿ ನಡೆದ ಗಲಾಟೆ ಹಿಂದಿನ ಜನರಲ್ಲಿ ಭೀತಿ ಮೂಡಿಸಿದೆ. ಇದರಿಂದಾಗಿ ಕಳೆದ ಐದು ದಿನಗಳಿಂದ ಜವಳಿ ವ್ಯಾಪಾರ ವಹಿವಾಟಿಗೆ ಪೆಟ್ಟು ಬಿದ್ದಿದೆ. ಹೊರ ಜಿಲ್ಲೆಗಳಿಂದ ಬರುವವರು ಯಾಕೆ ಒಣ ರಿಸ್ಕ್ ಎಂದು ಅಕ್ಕಪಕ್ಕದ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಎಲ್ಲವೂ ಮರೆತು ಒಂದಾಗಿ ಹೋಗುತ್ತಿರುವ ಸಂದರ್ಭದಲ್ಲಿ ಈ ಗಲಾಟೆ ನಗರ ಸೂಕ್ಷ್ಮ ಸ್ಥಳ ಎನ್ನುವುದನ್ನು ಮರುಕಳಿಸುವಂತಾಗಿದೆ.

ಶೇ.40 ವ್ಯಾಪಾರ ಕುಸಿತ: ಹುಬ್ಬಳ್ಳಿಯಲ್ಲಿ ಸರಿ ಸುಮಾರು 200 ಚಿಲ್ಲರೆ ಹಾಗೂ 100 ಸಗಟು ಜವಳಿ ವ್ಯಾಪಾರ ಅಂಗಡಿಗಳಿವೆ. ಪ್ರಮುಖವಾಗಿ ಶೇ. 40-50 ರಷ್ಟು ವ್ಯಾಪಾರ ಆಗುವುದು ಈ ಮದುವೆ ಸೀಸನ್‌ನಲ್ಲಿ. ನಾಲ್ಕೈದು ಜಿಲ್ಲೆ ಸೇರಿದಂತೆ ಕೊಲ್ಲಾಪುರ, ಗೋವಾದವರೆಗೂ ಇಲ್ಲಿನ ಜವಳಿ ವ್ಯಾಪಾರ ವಿಸ್ತಾರ ಗೊಂಡಿದೆ. ಆದರೆ ಗಲಾಟೆ ನಂತರದಲ್ಲಿ ಹುಬ್ಬಳ್ಳಿಯತ್ತ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ದಾವಣಗೆರೆ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಇತರೆ ನಗರಗಳತ್ತ ಜನರು ಮುಖ ಮಾಡಿದ್ದಾರೆ. ಗಲಭೆಯ ನಂತರದಲ್ಲಿ ಸುಮಾರು ಶೇ. 35-40 ವ್ಯಾಪಾರ ಕುಸಿದಿದ್ದು, ಕಳೆದ ಎರಡು ದಿನಗಳಿಂದ ಕೊಂಚ ವ್ಯಾಪಾರ ಚೇತರಿಕೆ ಕಾಣುತ್ತಿದೆ.

ಇಂದಿಗೂ ಸೂಕ್ಷ್ಮ ಸ್ಥಳ: ಇತ್ತೀಚಿನ ವರ್ಷದಲ್ಲಿ ನಗರದಲ್ಲಿ ಗಲಾಟೆ, ಮತೀಯ ಗಲಭೆಗಳು ನಡೆಯದಿದ್ದರೂ ಇಂದಿಗೂ ವಾಣಿಜ್ಯ ನಗರಿ ಸೂಕ್ಷ್ಮ ಸ್ಥಳವಾಗಿದೆ. 1992 ರಿಂದ ಆರಂಭವಾದ ಈದ್ಗಾ ಮೈದಾನದ ಹೋರಾಟ ಹೂಬಳ್ಳಿಯಂತಿದ್ದ ನಗರವನ್ನು ಮತೀಯ ಗಲಭೆಯ ತಾಣವನ್ನಾಗಿಸಿತು. ಇದಕ್ಕೊಂದು ಪರಿಹಾರ ದೊರೆಯಿತು ಎನ್ನುವಷ್ಟರಲ್ಲಿ 2001ರ ಮತೀಯ ಗಲಭೆ ವಾಣಿಜ್ಯ ನಗರಿಯ ವ್ಯಾಪಾರ ವಹಿವಾಟು ಕುಸಿಯಲು ಕಾರಣವಾಯಿತು. ಅಂದಿನ ಸಂದರ್ಭದಲ್ಲಿ 33 ದಿನಗಳ ಕಾಲ ನಗರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಹೀಗಾಗಿ ನಗರ ಇಂದಿಗೂ ಸೂಕ್ಷ್ಮ ನಗರವಾಗಿ ಬಿಟ್ಟಿದೆ.

Advertisement

2015 ರಿಂದ ಮಹದಾಯಿ, ಕಳಸಾ ಬಂಡೂರಿ ಹೋರಾಟ, ಬಂದ್‌ಗಳಿಂದಾಗಿ ಸದಾ ಹೋರಾಟ ಎನ್ನುವ ಮನಸ್ಥಿತಿ ಮೂಡಿದೆ. ಹೀಗಾಗಿ ಸಣ್ಣ ಪ್ರತಿಭಟನೆ ನಡೆದರೂ ಹುಬ್ಬಳ್ಳಿ ದೊಡ್ಡ ಗಲಾಟೆ ಎನ್ನುವ ಭಾವನೆ ಜನರಲ್ಲಿ ಬೇರೂರಿದೆ. ಇದೀಗ ಹಳೇ ಹುಬ್ಬಳ್ಳಿ ಠಾಣೆ ಮುಂಭಾಗದಲ್ಲಿ ಗಲಾಟೆಗೆ ಮತೀಯ ಬಣ್ಣ ನೀಡಿರುವುದು ಜನರ ಭೀತಿಗೆ ಕಾರಣವಾಗಿದೆ.

ಸುಳ್ಳು ವದಂತಿಗಳ ಪಾರಮ್ಯ: ಹಳೇ ಹುಬ್ಬಳ್ಳಿ ಠಾಣೆ ಮುಂಭಾಗದ ಗಲಾಟೆಯನ್ನು ಪೊಲೀಸರು ಮೂರ್‍ನಾಲ್ಕು ಗಂಟೆಗಳಲ್ಲಿ ನಿಯಂತ್ರಿಸಿದರು. ದೇವಸ್ಥಾನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಮತೀಯ ಗಲಭೆಗೆ ಕಾರಣವಾಗಲಿದೆ ಎನ್ನುವ ಭೀತಿ ಸೃಷ್ಟಿಸಿತು. ಆದರೆ ಗಲಾಟೆ ನಡೆದ ದಿನದಿಂದಲೇ ಕಲ್ಲು ತೂರಿ ಗಲಾಟೆ ಮಾಡಿದವರ ಬಂಧನಕ್ಕೆ ಪೊಲೀಸರು ಮುಂದಾದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ಹೇರಿದ ನಂತರ ಯಾವುದೇ ಗಲಾಟೆ, ಘರ್ಷಣೆ ನಡೆಯಲಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಯಿತು. ಇಷ್ಟೆಲ್ಲಾ ಕಠಿಣ ಕ್ರಮದಿಂದಾಗಿ ಗಲಾಟೆ ಆ ದಿನ ಹಾಗೂ ಆ ಪ್ರದೇಶಕ್ಕೆ ಮಾತ್ರ ಸೀಮೀತವಾಯಿತು. ಹಸಿಯಾಗಿರುವ ಉಳಿದಿರುವ ಹಿಂದಿನ ಗಲಭೆಗಳು ಹಾಗೂ ಇಂದಿನ ಗಲಾಟೆಯ ವದಂತಿಗಳ ಪರಿಣಾಮ ನಂತರದಲ್ಲಿ ವದಂತಿಗಳೇ ಇಡೀ ನಗರದ ವ್ಯಾಪಾರ ವಹಿವಾಟು ಮೇಲೆ ಪರಿಣಾಮ ಬೀರಿತು.

ಇತರೆ ವ್ಯಾಪಾರಕ್ಕೂ ಭಾರೀ ಹಿನ್ನಡೆ:

ಪ್ರಮುಖವಾಗಿ ಜವಳಿ ಉದ್ಯಮದ ಮೇಲೆ ಪರಿಣಾಮ ಬೀರಿದ್ದರೆ ಇದರೊಂದಿಗೆ ಚಿನ್ನಾಭರಣದ ಖರೀದಿಯಲ್ಲೂ ಇಳಿಕೆಯಾಗಿದೆ. ಖರೀದಿಗೆ ಬರುವವರು, ಇನ್ನಿತರೆ ವ್ಯವಹಾರ ವಹಿವಾಟಿಗೆ ಬರುವವರನ್ನು ನೆಚ್ಚಿಕೊಂಡಿದ್ದ ಹೊಟೇಲ್‌ ಗಳ ವ್ಯಾಪಾರ ಕೊಂಚ ಮಟ್ಟಿಗೆ ಕೀÒಣಿಸಿದೆ. ಗಲಾಟೆಯಾದ ಮೊದಲ ಮೂರ್‍ನಾಲ್ಕು ದಿನ ಸಾಕಷ್ಟು ಪರಿಣಾಮ ಬೀರಿದೆ. ಆದರೆ ಇದೀಗ ನಗರದಲ್ಲಿ ಗಲಾಟೆಗಳಿಲ್ಲ ಎಲ್ಲವೂ ಸಹಜ ಸ್ಥಿತಿಯಲ್ಲಿದೆ ಎನ್ನುವ ಕಾರಣದಿಂದ ವ್ಯಾಪಾರದಲ್ಲಿ ಕೊಂಚ ಚೇತರಿಕೆ ಕಾಣುತ್ತಿದೆ.

  • ಬೆಳಗಾವಿ, ದಾವಣಗೆರೆ, ಬಾಗಲಕೋಟೆ ನಗರಗಳತ್ತ ಚಿತ್ತ
  • ಶೇ.35-40 ವ್ಯಾಪಾರ ಕುಸಿತ; 2 ದಿನದಿಂದ ಕೊಂಚ ಚೇತರಿಕೆ

ವಾಸ್ತವ ಮರೆ ಮಾಚಿ ವದಂತಿಗಳೇ ಹೆಚ್ಚಾಗಿದ್ದರಿಂದ ಜನರು ಹುಬ್ಬಳ್ಳಿಯತ್ತ ಬರಲು ಹಿಂದೇಟು ಹಾಕಿದರು. ಹೀಗಾಗಿ ಶೇ.35-40 ವ್ಯಾಪಾರ ಕುಸಿತ ಕಂಡಿದೆ. ನಮ್ಮಲ್ಲಿಯೇ ಖರೀದಿಸಬೇಕು ಎನ್ನುವವರು ಕರೆ ಮಾಡಿ ಪರಿಸ್ಥಿತಿ ತಿಳಿದುಕೊಂಡು ಬರುತ್ತಿದ್ದಾರೆ. ನಗರದಲ್ಲಿ ಕರ್ಫ್ಯೂ ಹೇರಲಾಗಿದೆ ಎಂದು ಮುಂಬೈನಿಂದ ಪೂರೈಕೆದಾರರು ಕರೆ ಮಾಡಿ ಕೇಳುವಂತಾಗಿದೆ. ಹತ್ತಿರದವರು ಬರುತ್ತಿದ್ದಾರೆಯೇ ಹೊರತು ದೂರದ ಊರುಗಳಿಂದ ಜನರು ಬರುತ್ತಿಲ್ಲ. -ಅಶೋಕ ಭಂಡಾರಿ, ಜವಳಿ ವ್ಯಾಪಾರಿ

ಜವಳಿ, ಚಿನ್ನಾಭರಣ ಉದ್ಯಮದ ಮೇಲೆ ಬೀರಿದಷ್ಟು ಪರಿಣಾಮ ಇತರೆ ಉದ್ಯಮಗಳ ಮೇಲೆ ಆಗಿಲ್ಲ. ಆರಂಭದ ಮೂರ್‍ನಾಲ್ಕು ದಿನ ಹೊರಗಿನ ಜನರು ಬರಲು ಹೆದರುತ್ತಿದ್ದರು. ಈಗ ಸಹಜ ಸ್ಥಿತಿಯತ್ತ ಬರುತ್ತಿದೆ. ಹಿಂದಿನಂತೆ ಸಾಮಾನ್ಯರು ಜನರು ಗಲಭೆಗಳಿಂದ ದೂರ ಉಳಿಯಬೇಕು. ಇದರಿಂದ ನಮ್ಮ ಬದುಕು ಬೀದಿಗೆ ಬರುತ್ತದೆ ಎನ್ನುವ ಪರಿಜ್ಞಾನ ಹೊಂದಿದ್ದಾರೆ. ಹೀಗಾಗಿ ಒಂದೇ ದಿನಕ್ಕೆ, ಒಂದೇ ಪ್ರದೇಶಕ್ಕೆ ಈ ಗಲಾಟೆ ಸೀಮಿತಾಯಿತು. ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ. -ವಿನಯ ಜವಳಿ, ಅಧ್ಯಕ್ಷರು, ಕರ್ನಾಟಕ ವಾಣಿಜ್ಯೋದ್ಯ ಸಂಸ್ಥೆ

 

Advertisement

Udayavani is now on Telegram. Click here to join our channel and stay updated with the latest news.

Next