Advertisement

ಸ್ವಾಗತಾರ್ಹ ನಡೆ, ಪಠ್ಯ- ಪಾಟೀ ಚೀಲದ ಹೊರೆ ಕಡಿಮೆಯಾಗಲೇಬೇಕು

08:05 AM Feb 27, 2018 | Harsha Rao |

ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ಪಠ್ಯ ಕ್ರಮ ಅನುಸರಿಸುವ ಸಿಬಿಎಸ್‌ಇ ಶಾಲೆಗಳ ಪಠ್ಯದ ಹೊರೆಯನ್ನು ಇಳಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮುಂದಾಗಿರುವುದು ಸ್ವಾಗತಾರ್ಹ ನಡೆ. ಬಹುಕಾಲದಿಂದ ಚರ್ಚೆಯಲ್ಲಿದ್ದ ಈ ವಿಷಯಕ್ಕೆ ಸಂಬಂಧಿಸಿದಂತೆ ಕೊನೆಗಾದರೂ ಸರಕಾರ ದೃಢ ಕ್ರಮ ಕೈಗೊಂಡಿತು ಎನ್ನುವುದು ಸಂತೋಷದ ವಿಚಾರ. ಪ್ರತಿವರ್ಷ ಶೈಕ್ಷಣಿಕ ವರ್ಷ ಪ್ರಾರಂಭವಾಗುವಾಗ ಮಕ್ಕಳ ಪಾಟೀ ಚೀಲ ಮತ್ತು ಪಠ್ಯದ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಒಂದಷ್ಟು ಚರ್ಚೆಗಳಾಗುತ್ತವೆ. ಸರಕಾರಕ್ಕೆ ಹತ್ತಾರು ಸಲಹೆಗಳನ್ನು ನೀಡಲಾ ಗುತ್ತದೆ. ಸರಕಾರವೂ ಈ ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡುತ್ತದೆ. ಆದರೆ ಅಷ್ಟರಲ್ಲಿ ಶಾಲೆಗಳು ಪ್ರಾರಂಭವಾಗಿರುತ್ತದೆ. ಹೊರೆ ಕಡಿಮೆ ಮಾಡುವ ಕೆಲಸ ಮುಂದಿನ ವರ್ಷಕ್ಕೆ ಮುಂದೂಡಲ್ಪಡುತ್ತದೆ. ಇದು ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಕ್ರಮ. ಅಲ್ಲಲ್ಲಿ ಬಿಡಿಬಿಡಿಯಾಗಿ ಕೆಲವೊಂದು ಶಾಲೆಗಳು ಕನಿಷ್ಠ ಪಾಟೀ ಚೀಲದ ಹೊರೆಯನ್ನು ಇಳಿಸುವ ಕ್ರಮ ಕೈಗೊಂಡಿದ್ದರೂ ಇದು ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಇದೀಗ ಕೇಂದ್ರವೇ ಪಠ್ಯದ ಹೊರೆಯನ್ನು ಶೇ. 50ರಷ್ಟು ಕಡಿಮೆ ಮಾಡಲು ಹೇಳಿರುವುದರಿಂದ ಇದಕ್ಕುನುಗುಣವಾಗಿ ಪುಸ್ತಕಗಳ ಹೊರೆಯೂ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಬಹುದು. 1ರಿಂದ 12ನೇ ತರಗತಿ ತನಕದ ಮಕ್ಕಳಿಗೆ ಇದು ಒಂದು ದೊಡ್ಡ ಕೊಡುಗೆಯೆಂದೇ ಹೇಳಬಹುದು. ಪಠ್ಯದ ಹೊರೆ ಮಕ್ಕಳ ಮನಸ್ಸನ್ನು ಜರ್ಜರಿತಗೊಳಿಸಿದರೆ ಪಾಟೀ ಚೀಲದ ಹೊರೆ ದೇಹವನ್ನು ಬಾಧಿಸುತ್ತಿತ್ತು. ಹೀಗಾಗಿ ಈ ಆದೇಶದಲ್ಲಿ ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅವಕಾಶವಿದೆ.

Advertisement

ಕೇಂದ್ರ ಸರಕಾರಕ್ಕಿಂತಲೂ ಮುಂಚಿತವಾಗಿ ದಿಲ್ಲಿ ಸರಕಾರ ಪಠ್ಯದ ಹೊರೆಯನ್ನು ತಗ್ಗಿಸಲು ಆದೇಶ ನೀಡಿತ್ತು. ಆದರೆ ಕೇಂದ್ರೀಯ ಪಠ್ಯಕ್ರಮದಲ್ಲಿ ಎಲ್ಲ ರಾಜ್ಯಗಳಿಗೆ ಹೆಚ್ಚು ಕಡಿಮೆ ಒಂದೇ ರೀತಿಯ ಪಠ್ಯಗಳಿರುವುದರಿಂದ ರಾಜ್ಯಗಳು ಪ್ರತ್ಯೇಕವಾಗಿ ಹೊರೆ ಕಡಿಮೆ ಮಾಡಲು ಸಾಧ್ಯವಿರಲಿಲ್ಲ. ಕೇಂದ್ರ ಸರಕಾರವೇ ಕ್ರಮ ಕೈಗೊಳ್ಳಬೇಕಿತ್ತು. ಪ್ರಸ್ತುತ ರಾಜ್ಯ ಪಠ್ಯಕ್ರಮಕ್ಕೂ ಕೇಂದ್ರೀಯ ಪಠ್ಯಕ್ಕೂ ಬಹಳ ವ್ಯತ್ಯಾಸವಿದೆ. ಕೇಂದ್ರೀಯ ಪಠ್ಯ ಕ್ರಮದಲ್ಲಿ ಪಠ್ಯಗಳು ಭಾರೀ ಕಠಿಣವಾಗಿರುತ್ತವೆ. 9-10ನೇ ತರಗತಿಗೆ ಪದವಿ ತರಗತಿಯ ಪಾಠವನ್ನು ಬೋಧಿಸಲಾಗುತ್ತಿದೆ ಎಂದು ಕೇಂದ್ರ ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಹೇಳಿರುವುದು ಉತ್ಪ್ರೇಕ್ಷೆಯಲ್ಲ. ಆದರೆ ಈ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಕಲಿತ ಮಕ್ಕಳೇ ಹೆಚ್ಚು ಬುದ್ಧಿವಂತ ರಾಗುತ್ತಾರೆ ಎಂಬ ಭ್ರಮೆಯೊಂದು ಹೆತ್ತವರಲ್ಲಿ ಇರುವುದರಿಂದ ಇತ್ತೀಚೆ ಗಿನ ವರ್ಷಗಳಲ್ಲಿ ಸಿಬಿಎಸ್‌ಇ ಶಾಲೆಗಳು ಗಲ್ಲಿಗೊಂದರಂತೆ ತೆರೆದು ಕೊಳ್ಳುತ್ತಿವೆ. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ನೂರಾರು ಶಾಲೆಗಳು ಕೇಂದ್ರೀಯ ಪಠ್ಯವನ್ನು ಅಳವಡಿಸಿಕೊಂಡಿವೆ. ಕೇಂದ್ರೀಯ ಪಠ್ಯದಲ್ಲಿ ಸಮಾಜ ವಿಜ್ಞಾನ, ಗಣಿತ ಮತ್ತು ವಿಜ್ಞಾನದ ಹೊರೆ ವಿಪರೀತ ಎನ್ನುವಷ್ಟಿದೆ. ಜತೆಗೆ ಜನರಲ್‌ ನಾಲೆಜ್‌, ವ್ಯಾಲ್ಯೂ ಎಜುಕೇಶನ್‌, ಕಂಪ್ಯೂಟರ್‌ ಸಯನ್ಸ್‌ ಎಂದು ಮಕ್ಕಳು ಇನ್ನಷ್ಟು ವಿಷಯಗಳನ್ನು ಹೆಚ್ಚು ಕಲಿಯಬೇಕು. ಈ ಹೊರೆಯಿಂದಾಗಿ ಮಕ್ಕಳಿಗೆ ಬಿಡುವೆಂಬುದೇ ಇಲ್ಲ.

ಆಟಪಾಠಗಳಲ್ಲಿ ಸಹಜವಾಗಿ ಅರಳಬೇಕಾದ ಬಾಲ್ಯ ಬರೀ ಕಲಿಯುವುದಕ್ಕಷ್ಟೆ ಸೀಮಿತಗೊಂಡಿದೆ. ಅಂತೆಯೇ ಶಿಕ್ಷಕರಿಗೂ ವರ್ಷ ಮುಗಿಯುವಾಗ ಪಾಠಗಳನ್ನು ಮುಗಿಸುವ ಅವಸರವಿರುವುದರಿಂದ ಮಕ್ಕಳು ಎಷ್ಟು ಮತ್ತು ಏನು ಕಲಿತಿದ್ದಾರೆಂದು ಮೌಲ್ಯಮಾಪನ ಮಾಡುವಷ್ಟು ವ್ಯವಧಾನ ಇರುವುದಿಲ್ಲ. ಅಲ್ಲದೆ ಬಹುತೇಕ ಶಿಕ್ಷಕರು ಕೂಡ ಈ ಹೈಗ್ರೇಡ್‌ ಪಠ್ಯಗಳನ್ನು ಬೋಧಿಸುವಷ್ಟು ಪರಿಣತರಾಗಿಲ್ಲ ಎನ್ನುವ ಅಂಶವೂ ಇತ್ತೀಚೆಗೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ಶಿಕ್ಷಕರಿಗೆ ವಿಶೇಷ ತರಬೇತಿಯನ್ನೂ ಹಮ್ಮಿಕೊಂಡಿತ್ತು. ಹೀಗೆ ಒಟ್ಟಾರೆಯಾಗಿ ಈಗಿನ ಕೇಂದ್ರೀಯ ಪಠ್ಯ ಮಕ್ಕಳಿಗೆ ಮಾತ್ರವಲ್ಲದೆ ಶಿಕ್ಷಕರು ಮತ್ತು ಪಾಲಕರಿಗೆ ಕೂಡಾ ಹೊರೆಯಾಗಿ ಪರಿಣಮಿಸಿದೆ.

ಪಾಠಗಳು ತಲೆಗೆ ಹತ್ತದೆ ಕಬ್ಬಿಣದ ಕಡಲೆಯಾದಾಗ ಮಕ್ಕಳು ಸಹಜ ವಾಗಿಯೇ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಆದರೆ ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಫ‌ಲಿತಾಂಶದ ಮೇಲೆಯೇ ಕಣ್ಣಿರುವುದರಿಂದ ಅದನ್ನು ಪಡೆ ಯಲು ಮಕ್ಕಳನ್ನು ಟ್ಯೂಶನ್‌ಗೆ ಸೇರಿಸುತ್ತಾರೆ. ಶಾಲಾ ಪಠ್ಯದ ಜತೆಗೆ ಟ್ಯೂಶನ್‌ ಹೊರೆಯೂ ಬಿದ್ದಾಗ ಮಕ್ಕಳು ಕಂಗಾಲಾಗುತ್ತಾರೆ. ಬಾಲ್ಯದಲ್ಲೇ ಬರುವ ಬೊಜ್ಜು ಮತ್ತಿತರ ಕಾಯಿಲೆಗಳಿಗೆ ಮಕ್ಕಳ ಸಹಜವಾದ ಆಟೋಟಗಳನ್ನು ಕಸಿದುಕೊಂಡಿರುವ ಪಠ್ಯ ಕ್ರಮವೂ ಒಂದು ಕಾರಣ ಎಂದು ಇತ್ತೀಚೆಗೆ ಕಂಡುಕೊಳ್ಳಲಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಪಠ್ಯದ ಹೊರೆಯನ್ನು ಇಳಿಸುವುದು ಅಪೇಕ್ಷಣೀಯ ನಡೆ. ಸಿಬಿಎಸ್‌ಇ, ಎನ್‌ಸಿಇಆರ್‌ಟಿ ಶಾಲೆಗಳಲ್ಲದೆ ಎಲ್ಲ ಶಾಲೆಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇದೆಲ್ಲ ಮಾಡುವುದು ನಮ್ಮ ಮಕ್ಕಳ ಒಳಿತಿಗಾಗಿ ಎನ್ನುವ ಅರಿವು ಶಿಕ್ಷಕರಲ್ಲಿ ಮತ್ತು ಪೋಷಕರಲ್ಲಿ ಇರಲಿ.

Advertisement

Udayavani is now on Telegram. Click here to join our channel and stay updated with the latest news.

Next