Advertisement

ಚೊಚ್ಚಲ ಟೆಸ್ಟ್‌ ವಿಶ್ವಕಪ್‌ ನಮ್ದೇ ಆಗಲಿ…:ಭಾರತ-ನ್ಯೂಜಿಲ್ಯಾಂಡ್‌ ಮುಖಾಮುಖೀಗೆ ಕ್ಷಣಗಣನೆ

11:19 PM Jun 17, 2021 | Team Udayavani |

ಸೌತಾಂಪ್ಟನ್‌: ಕ್ರಿಕೆಟ್‌ ಇತಿಹಾಸದ ಪ್ರಪ್ರಥಮ ವಿಶ್ವಕಪ್‌ ಟೆಸ್ಟ್‌ ಫೈನಲ್‌ಗೆ ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಕ್ಷಣಗಣನೆ ಆರಂಭಿಸಿವೆ. ಇಲ್ಲಿನ “ಏಜಸ್‌ ಬೌಲ್‌ ಸ್ಟೇಡಿಯಂ’ನಲ್ಲಿ ಶುಕ್ರವಾರ ಐತಿಹಾಸಿಕ ಮುಖಾಮುಖೀ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್‌ ವಿಶ್ವಕಪ್‌ ಕಿರೀಟ ಏರಿಸಿಕೊಳ್ಳಲು ಎರಡೂ ತಂಡಗಳು ತುದಿಗಾಲಲ್ಲಿ ನಿಂತಿವೆ. ಕೊಹ್ಲಿ ಪಡೆಯೇ ಗೆದ್ದು ಬರಲಿ ಎಂಬುದು ಭಾರತದ ಕ್ರಿಕೆಟ್‌ ಪ್ರೇಮಿಗಳ ಹಾರೈಕೆ.

Advertisement

ಕೇವಲ 45 ವರ್ಷಗಳ ಅವಧಿಯಲ್ಲಿ ಸಾಕಷ್ಟು ಏಕದಿನ ಹಾಗೂ ಟಿ20 ವಿಶ್ವಕಪ್‌ಗ್ಳನ್ನು ಕಂಡ ಕ್ರಿಕೆಟ್‌ ಪ್ರಿಯರಿಗೆ, 144 ವರ್ಷಗಳ ಸುದೀರ್ಘ‌ ಇತಿಹಾಸ ಹೊಂದಿರುವ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಡೆಯುತ್ತಿರುವ ಚೊಚ್ಚಲ ವಿಶ್ವಕಪ್‌ ಸಹಜ ವಾಗಿಯೇ ಕುತೂಹಲ ಹುಟ್ಟಿಸಿದೆ, ಕೌತುಕ ಮೂಡಿಸಿದೆ. ಭಾರತ-ಕಿವೀಸ್‌ ಕ್ರಿಕೆಟಿಗರಿಗೂ ಇದು ವಿಶೇಷ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ. ತಟಸ್ಥ ತಾಣದಲ್ಲಿ ನಡೆಯುವ ಪಂದ್ಯವಾದ್ದರಿಂದ ಎರಡೂ ತಂಡಗಳು ಒತ್ತಡ ರಹಿತವಾಗಿ ಆಡಬಹುದು ಎಂಬ ನಿರೀಕ್ಷೆ ಇದೆ.

ಭಾರತಕ್ಕೆ ಅಭ್ಯಾಸ ಕೊರತೆ
ವರ್ಷಾರಂಭದಲ್ಲಿ ವಿರಾಟ್‌ ಕೊಹ್ಲಿ ಗೈರಲ್ಲಿ ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಐತಿಹಾಸಿಕ ಸರಣಿ ಜಯಿಸಿದ್ದು, ಅನಂತರ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಹಿನ್ನಡೆ ಅನುಭವಿಸಿಯೂ ಸರಣಿ ವಶಪಡಿಸಿಕೊಂಡದ್ದೆಲ್ಲ ಭಾರತದ ಟೆಸ್ಟ್‌ ಯಶೋಗಾಥೆಯನ್ನು ಸಾರುತ್ತವೆ. ಈ ಸಾಧನೆಯನ್ನು ಪರಿಗಣಿಸಿದರೆ ಭಾರತವೇ ಫೈನಲ್‌ ಪಂದ್ಯದ ಫೇವರಿಟ್‌.
ಆದರೆ ಅನಂತರ ಟೀಮ್‌ ಇಂಡಿಯಾ ಯಾವುದೇ ಟೆಸ್ಟ್‌ ಪಂದ್ಯಗಳಲ್ಲಿ ಆಡದಿರುವುದು, ಕೇವಲ ಸೀಮಿತ ಓವರ್‌ಗಳ ಪಂದ್ಯಗಳಲ್ಲೇ ತೊಡಗಿಸಿಕೊಂಡದ್ದು, ಇಂಗ್ಲೆಂಡಿಗೆ ಬಂದಿಳಿದ ಬಳಿಕವೂ ಯಾವುದೇ ಪ್ರ್ಯಾಕ್ಟೀಸ್‌ ಮ್ಯಾಚ್‌ ಇಲ್ಲದಿದ್ದುದ್ದನ್ನೆಲ್ಲ ಗಂಭೀರವಾಗಿ ಪರಿಗಣಿಸಿದಾಗ ಭಾರತ ಈ ಪಂದ್ಯದಲ್ಲಿ ಹಿನ್ನಡೆ ಕಂಡೀತು ಎಂಬ ಆತಂಕವೂ ಕಾಡದಿರದು.

ಓಪನರ್‌ ಪಾತ್ರ ನಿರ್ಣಾಯಕ
ಭಾರತದ ಆಡುವ ಬಳಗ‌ ಅಂತಿಮಗೊಂಡಿದೆ. ರೋಹಿತ್‌-ಗಿಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಅಕಸ್ಮಾತ್‌ ಮೊದಲು ಬ್ಯಾಟಿಂಗ್‌ ಅವಕಾಶ ಸಿಕ್ಕಿದರೆ ಇವರು ಬೌಲ್ಟ್- ಸೌಥಿ ಜೋಡಿಯ ವೇಗದ ದಾಳಿಯನ್ನು ಮೆಟ್ಟಿ ನಿಲ್ಲುವುದರ ಮೇಲೆ ಭಾರತದ ನಡೆಯನ್ನು ಗುರುತಿಸಬಹುದು.

ಕೊಹ್ಲಿ ಬ್ಯಾಟಿಂಗ್‌ ಫಾರ್ಮ್ ಕೂಡ ಭಾರತದ ಪಾಲಿಗೆ ನಿರ್ಣಾಯಕವಾಗಲಿದೆ. ಅವರ ಇತ್ತೀಚಿನ ಟೆಸ್ಟ್‌ ಇನ್ನಿಂಗ್ಸ್‌ ಗಳಲ್ಲಿ ದೊಡ್ಡ ಮೊತ್ತ ಬಂದದ್ದಿಲ್ಲ. ಪೂಜಾರ, ರಹಾನೆ, ಬ್ರಿಸ್ಬೇನ್‌ ಹೀರೋ ಪಂತ್‌, ಆಲ್‌ರೌಂಡರ್‌ ಜಡೇಜ ನಿಂತು ಆಡಬೇಕಾದುದು ಅತ್ಯಗತ್ಯ.
ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಜಡೇಜ ಸೇರಿದಂತೆ 5 ಮಂದಿ ಸ್ಪೆಷಲಿಸ್ಟ್‌ ಬೌಲರ್‌ಗಳನ್ನು ಭಾರತ ಕಣಕ್ಕಿಳಿಸಲಿದೆ. ಇದು ತ್ರಿವಳಿ ವೇಗಿ, ಅವಳಿ ಸ್ಪಿನ್‌ ಕಾಂಬಿನೇಶನ್‌ ಆಗಿರಲಿದೆ. ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ, ಅನುಭವಿ ವೇಗಿಗಳಾದ ಇಶಾಂತ್‌, ಶಮಿ, ಪ್ರಧಾನ ಸ್ಪಿನ್ನರ್‌ ಅಶ್ವಿ‌ನ್‌ ಕಿವೀಸ್‌ ಸರದಿಗೆ ಕಂಟಕವಾದರೆ “ಕಪ್‌ ನಮೆªà’ ಎನ್ನಲಡ್ಡಿಯಿಲ್ಲ.

Advertisement

ಕಿವೀಸ್‌ಗೆ ಬೇಕಿದೆ ಲಕ್‌
ಭಾರತಕ್ಕೆ ಈಗಾಗಲೇ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ 3 ವಿಶ್ವಕಪ್‌ ಗೆದ್ದಿದೆ. ಆದರೆ ನ್ಯೂಜಿಲ್ಯಾಂಡ್‌ ಈ ವರೆಗೆ ಯಾವ ಮಾದರಿಯಲ್ಲೂ ವಿಶ್ವ ಚಾಂಪಿಯನ್‌ ಆಗಿಲ್ಲ. ಕಳೆದೆರಡು ಏಕದಿನ ವಿಶ್ವಕಪ್‌ ಕೂಟಗಳ ಫೈನಲ್‌ಗೆ ಲಗ್ಗೆ ಇರಿಸಿತಾದರೂ ಚಾಂಪಿಯನ್‌ ಪಟ್ಟ ಒಲಿಯಲಿಲ್ಲ. ಹೀಗಾಗಿ ಯಾವ ಕಾರಣಕ್ಕೂ ಸೌತಾಂಪ್ಟನ್‌ನಲ್ಲಿ ಕಪ್‌ ಜಾರಲು ಬಿಡಬಾರದು ಎಂಬ ಸಂಕಲ್ಪದಲ್ಲಿದೆ ವಿಲಿಯಮ್ಸನ್‌ ಪಡೆ.

ಸೌತಾಂಪ್ಟನ್‌ ಟ್ರ್ಯಾಕ್‌ ನ್ಯೂಜಿಲ್ಯಾಂಡ್‌ ಮಾದರಿಯ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುವುದು, ಫೈನಲ್‌ ಪಂದ್ಯಕ್ಕೂ ಮುನ್ನ ಆತಿಥೇಯ ಇಂಗ್ಲೆಂಡ್‌ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಿ ಭರ್ಜರಿ ಅಭ್ಯಾಸ ಗಳಿಸಿದ್ದು, ಇದಕ್ಕೂ ಮಿಗಿಲಾಗಿ ವಿಲಿಯಮ್ಸನ್‌ ಗೈರಲ್ಲಿ ಸರಣಿ ವಶಪಡಿಸಿಕೊಂಡದ್ದೆಲ್ಲ ನ್ಯೂಜಿಲ್ಯಾಂಡ್‌ಗೆ ಪ್ಲಸ್‌ ಪಾಯಿಂಟ್‌ ಆಗಿ ಪರಿಣಮಿಸಿದೆ.
ಆದರೆ ತಂಡವೊಂದು ಎಷ್ಟೇ ಬಲಿಷ್ಠವಾಗಿರಲಿ, ಎಷ್ಟೇ ಆಭ್ಯಾಸ ನಡೆಸಲಿ, ಟ್ರ್ಯಾಕ್‌ ಅವರಿಗೇ ಫೇವರ್‌ ಆಗಿರಲಿ… ಅದೃಷ್ಟ ಇಲ್ಲದೇ ಹೋದರೆ ಯಾವ ಕಪ್‌ ಕೂಡ ಕೈ ಹಿಡಿಯದು ಎಂಬುದು ಕ್ರಿಕೆಟಿನ ಸಾರ್ವಕಾಲಿಕ ಸತ್ಯ!

Advertisement

Udayavani is now on Telegram. Click here to join our channel and stay updated with the latest news.

Next