Advertisement

ರಾಜ್ಯದಲ್ಲಿ ಟೆಸ್ಲಾ ಶ್ಲಾಘನೀಯ ಬೆಳವಣಿಗೆ

12:49 AM Jan 14, 2021 | Team Udayavani |

ಭಾರತದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಜಗತ್ತಿನ ಅತಿವಿಖ್ಯಾತ ಎಲೆಕ್ಟ್ರಿಕ್‌ ಕಾರು ಉತ್ಪಾದನ ಸಂಸ್ಥೆ ಟೆಸ್ಲಾ, ಬೆಂಗಳೂರಿನಲ್ಲಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಸ್ಥಾಪಿಸಲು ನಿರ್ಧರಿಸಿದೆ. ರಿಜಿಸ್ಟ್ರಾರ್‌ ಆಫ್ ಕಂಪೆನೀಸ್‌ ಇಂಡಿಯಾದಲ್ಲಿ ಟೆಸ್ಲಾ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ನೋಂದಣಿ ಮಾಡಿದೆ. ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ವಾಯುಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸಬೇಕೆಂಬ ಭಾರತದ ಗುರಿಯ ಹಿನ್ನೆಲೆಯಲ್ಲಿ ನೋಡಿದಾಗ, ಈ ಬೆಳವಣಿಗೆ ಮಹತ್ವ ಪಡೆಯುತ್ತದೆ. ಕೇವಲ ಪರಿಸರ ಸ್ನೇಹಿ ಉದ್ಯಮ ಎಂಬ ಕಾರಣಕ್ಕಷ್ಟೇ ಅಲ್ಲ, ಬೆಂಗಳೂರಿನಲ್ಲಿ ಸಂಶೋಧನೆ ಹಾಗೂ ಉತ್ಪಾದನ ಘಟಕವನ್ನು ಸ್ಥಾಪಿಸುವುದರಿಂದ, ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ. ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಜಾಗತಿಕ ಕಂಪೆನಿಗಳೆಲ್ಲ ಭಾರತದತ್ತ ಮುಖ ಮಾಡುತ್ತಿರುವುದು, ಭಾರತವನ್ನು ಉತ್ಪಾದನ ಹಬ್‌ ಆಗಿಸಬೇಕೆಂಬ ನಮ್ಮ ಗುರಿಯ ಭಾಗವೇ ಆಗಿದೆ.

Advertisement

ಗಮನಾರ್ಹ ಸಂಗತಿಯೆಂದರೆ, ಪ್ಯಾರಿಸ್‌ ಹವಾಮಾನ ಒಪ್ಪಂದದಲ್ಲಿನ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಭಾರತ ತೋರಿಸುತ್ತಿರುವ ಬದ್ಧತೆ ಶ್ಲಾಘನೀಯವಾದದ್ದು. ಅದರಲ್ಲೂ ಪರಿಸರ ಸ್ನೇಹಿ ಯೋಜನೆಗಳ ಅನುಷ್ಠಾನದಲ್ಲಿ ಕರ್ನಾಟಕ ಮುನ್ನೆಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಪಾವಗಡದಲ್ಲಿ ಸ್ಥಾಪನೆಯಾಗಿರುವ ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್‌ ಇದಕ್ಕೊಂದು ಉದಾಹರಣೆ.

ಟೆಸ್ಲಾ ಕಾರುಗಳ ವಿಚಾರಕ್ಕೆ ಬರುವುದಾದರೆ, ಇದೇ ವರ್ಷದಲ್ಲೇ ಮಾಡೆಲ್‌ 3 ಸೆಡಾನ್‌ ಮೂಲಕ  ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧವಾಗಿದೆ. ದೇಶದ ಕಾರು ಮಾರುಕಟ್ಟೆಯ ಚಹರೆಯನ್ನೇ ಇದು ಬದಲಿಸಲಿದೆ ಎನ್ನುವುದು ಖಂಡಿತ ಉತ್ಪ್ರೇಕ್ಷೆಯಾಗುತ್ತದೆ. ಏಕೆಂದರೆ ಸಾಮಾನ್ಯ ಜನರ ಕೈಗೆಟುಕದಂಥ ದುಬಾರಿ ಬೆಲೆಯನ್ನು ಈ ಕಾರುಗಳು ಹೊಂದಿವೆ. ಆದರೆ ಮುಂದಿನ ದಿನಗಳಲ್ಲಿ ದೇಶದ ಎಲೆಕ್ಟ್ರಿಕ್‌ ವಾಹನೋದ್ಯಮದಲ್ಲಿ ಅತ್ಯಂತ ವೇಗದ ಸಂಶೋಧನೆಗೆ ಹಾಗೂ ಸ್ಪರ್ಧೆಗೆ ಈ ರೀತಿಯ ಬೆಳವಣಿಗೆ ಕಾರಣವಾಗಲಿದೆ ಎನ್ನುವ ನಿರೀಕ್ಷೆಯನ್ನಂತೂ ಇಟ್ಟುಕೊಳ್ಳಲೇಬೇಕು.  ಕೋವಿಡ್‌ನ‌ ಸಮಯದಲ್ಲಿ ಅನೇಕ ರಾಷ್ಟ್ರಗಳು ಚೀನಕ್ಕೆ ಪರ್ಯಾಯವಾಗಿ ಮತ್ತೂಂದು ರಾಷ್ಟ್ರವನ್ನು ಹುಡುಕುತ್ತಿರುವಾಗ ಅವುಗಳ ಆದ್ಯತೆಯ ಪಟ್ಟಿಯಲ್ಲಿ ಭಾರತವೂ ಪ್ರಮುಖ ಸ್ಥಾನದಲ್ಲಿದೆ. ವಿದೇಶಿ ಕಂಪೆನಿಗಳಿಗೆ ಉತ್ಪಾದನ ಘಟಕಗಳ ಸ್ಥಾಪನೆಗೆ ಪೂರಕವಾದಂಥ ವಾತಾವರಣವನ್ನು ನಿರ್ಮಿಸಲೂ ಸರಕಾರಗಳು ಶ್ರಮಿಸುತ್ತಿವೆ. ಆದರೆ ಇತ್ತೀಚೆಗೆ ವೆಸ್ಟ್ರಾನ್‌ ಐಫೋನ್‌ ಕಾರ್ಖಾನೆಯಲ್ಲಿ ನಡೆದ ಗಲಾಟೆ, ಉದ್ಯೋಗಿಗಳೆಡೆಗೆ ಆ ವಿದೇಶಿ ಕಂಪೆನಿ ತೋರಿದ ವರ್ತನೆಯ ಹಿನ್ನೆಲೆಯಲ್ಲಿ ಸರಕಾರ ಹಾಗೂ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ನವ ಕಂಪೆನಿಗಳು ಪಾಠ ಕಲಿಯಲೇಬೇಕು. ವೆಸ್ಟ್ರಾನ್‌ ಕಂಪನಿಯಲ್ಲಿ ನಡೆದ

ಗಲಭೆಯು ರಾಜ್ಯದ ಹೂಡಿಕೆಯ ವಾತಾವರಣದ ಮೇಲೆ ಋಣಾತ್ಮಕ ಪರಿಣಾಮ ಬೀರುವಷ್ಟು ಗಂಭೀರವಾಗಿತ್ತು ಎನ್ನುವುದು ಎಷ್ಟು ಸತ್ಯವೋ, ವಿದೇಶಿ ಕಂಪೆ‌ನಿಗಳು ಹಣ ಉಳಿಸುವ ಹಪಾಹಪಿಯಲ್ಲಿ ಉದ್ಯೋಗಿಗಳ ಶೋಷಣೆಗೆ ಹೇಗೆ ಇಳಿಯುತ್ತಿವೆ ಎನ್ನುವ ಸತ್ಯವನ್ನೂ ಈ ಘಟನೆ ಬಹಿರಂಗಪಡಿಸಿತ್ತು. ಈ ಹಿನ್ನೆಲೆಯಲ್ಲಿಯೇ ವಿದೇಶಿ ಉದ್ಯಮಗಳಿಗೆ ನೆಲೆ ಒದಗಿಸುವ ಜತೆಯಲ್ಲಿಯೇ, ಅವುಗಳಿಂದಾಗಿ ಉದ್ಯೋಗಿಗಳಿಗೆ ತೊಂದರೆಯಾಗದಂಥ ಕಠಿನ ನಿಯಮಗಳನ್ನು ಸರಕಾರ ಅನ್ವಯ ಮಾಡುವುದು ಅತ್ಯಗತ್ಯ.

ಇದೇನೇ ಇದ್ದರೂ ಟೆಸ್ಲಾದಂಥ ಸಂಸ್ಥೆಯು ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಸ್ಥಾಪಿಸಲು ಮುಂದಾಗಿರುವುದು ನಿಸ್ಸಂಶಯವಾಗಿಯೂ ಅತ್ಯುತ್ತಮ ಬೆಳವಣಿಗೆಯೇ ಸರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next