Advertisement

ಉಗ್ರ ಕೌಸರ್‌ನ ನಾಲ್ವರು ಸಹಚರರ ಸುಳಿವು ಇನ್ನೂ ಸಿಕ್ಕಿಲ್ಲ!

11:02 PM Oct 14, 2019 | Team Udayavani |

ಬೆಂಗಳೂರು: ಚಿಕ್ಕಬಾಣವಾರದ ಮನೆಯೊಂದರಲ್ಲಿ ಸ್ಫೋಟಕ ತಯಾರಿಕೆಯಲ್ಲಿ ಭಾಗಿಯಾಗಿ ಆಶ್ರಯ ಪಡೆದುಕೊಂಡಿದ್ದ ಜೆಎಂಬಿ ಪ್ರಮುಖ ಉಗ್ರ ಕೌಸರ್‌ನ ನಾಲ್ವರು ಸಹಚರರ ಸುಳಿವು ರಾಜ್ಯ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳಿಗೆ ಇದುವರೆಗೂ ಪತ್ತೆಯಾಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

Advertisement

ಜೆಎಂಬಿ ಉಗ್ರರಾದ ಕೌಸರ್‌, ಆದಿಲ್‌ ಶೇಖ್‌, ಹಬೀಬುರ್‌ ರೆಹಮಾನನ್ನು ಎನ್‌ಐಎ ಬಂಧಿಸಿದೆ. ಆದರೆ, ಅವರ ಜತೆಗಿದ್ದ ನಾಜೀರ್‌ ಶೇಖ್‌, ನಜ್ರುಲ್ಲಾ ಇಸ್ಲಾಂ, ಆಸೀಫ್ ಇಕ್ಬಾಲ್‌, ಆರೀಪ್‌ ರಾಜ್ಯದಲ್ಲೇ ತಲೆಮರೆಸಿಕೊಂಡಿರುವ ಶಂಕೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನಾಲ್ವರು ಉಗ್ರರ ಬಂಧನಕ್ಕೆ ಎನ್‌ಐ ಶೋಧ ಮುಂದುವರಿಸಿದೆ. ಇತ್ತ ರಾಜ್ಯ ಪೊಲೀಸರು ಕೂಡ ಪ್ರತ್ಯೇಕ ನಡೆಸುತ್ತಿದ್ದಾರೆ. ನಾಲ್ವರು ಆರೋಪಿಗಳು ಉಗ್ರ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ತನಿಖೆ ಕ್ಷಿಪ್ರಗೊಂಡಿದೆ.

ಅಲ್ಲದೆ, ನಾಲ್ವರು ಉಗ್ರರ ಕುರಿತ ಮಾಹಿತಿಯನ್ನು ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು ಪೊಲೀಸರಿಗೆ ರವಾನಿಸಲಾಗಿದೆ. ಗುಪ್ತಚರ ದಳದ ಒಂದು ತಂಡ ಇತ್ತೀಚೆಗಷ್ಟೇ ನೆರೆರಾಜ್ಯಗಳಿಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಕಲೆ ಹಾಕಿದೆ. ಆದರೆ, ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮೊದಲು ಬಂದಿದ್ದ ಜೆಎಂಬಿ ತಂಡ!: ಬುಧ್ವಾನ್‌ ಬಾಂಬ್‌ ಸ್ಫೋಟದ ಬಳಿಕ ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಉಗ್ರ ಸಂಘಟನೆಯ ಅಸ್ತಿತ್ವಕ್ಕೆ ಪಶ್ಚಿಮ ಬಂಗಾಳದಲ್ಲಿ ಪೆಟ್ಟುಬಿದ್ದಿತ್ತು. ಸ್ಥಳೀಯ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳ ( ಎನ್‌ಐಎ) ಅಧಿಕಾರಿಗಳು ಬೆನ್ನು ಬಿದ್ದ ಸುಳಿವು ಆಧರಿಸಿ ಕೌಸರ್‌ ಅಂಡ್‌ ಟೀಂ ಬಂದಿಳಿದಿದ್ದೇ ಬೆಂಗಳೂರಿಗೆ! ಜೆಎಂಬಿ ಉಗ್ರ ಸಂಘಟನೆ ಕುರಿತ ತನಿಖೆ ಚುರುಕುಗೊಳಿಸಿರುವ ಎನ್‌ಐಎ ತನಿಖೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.

ಬಾಂಗ್ಲಾದೇಶದಲ್ಲಿ ಬೌದ್ಧರಿಂದ ರೋಹಿಂಗ್ಯ ಮುಸ್ಲಿಂರ ಮೇಲೆ ದೌರ್ಜನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದರು. ಅದೇ ತಂಡದಲ್ಲಿ ಕೌಸರ್‌ ಕೂಡ ಬಂದಿದ್ದ. ಬಂಗಾಳದಲ್ಲಿ ನೆಲೆಗೊಂಡ ಕೆಲವೇ ವರ್ಷಗಳಲ್ಲಿ ಸಹಚರರ ಜತೆಗೂಡಿ ಜೆಎಂಬಿ(ಭಾರತ) ವಿಭಾಗವನ್ನು ಹುಟ್ಟುಹಾಕಿದ ಬಳಿಕ ಇಲ್ಲಿನ ಬೌದ್ಧರನ್ನು ಟಾರ್ಗೆಟ್‌ ಮಾಡಿಕೊಂಡು ಉಗ್ರ ಕೃತ್ಯಗಳ ಸಂಚು ರೂಪಿಸತೊಡಗಿದರು.

Advertisement

ಈ ಸಂಚಿನ ಮೊದಲ ಭಾಗವಾಗಿ ಸ್ಫೋಟಕಗಳನ್ನು ತಯಾರಿಸುವ ವೇಳೆ ಬುಧ್ವಾìನ್‌ ಜಿಲ್ಲೆಯ ಕಗ್ರಾಗರ್‌ನ ಮನೆಯಲ್ಲಿ 2014ರ ಅಕ್ಟೋಬರ್‌ 2ರಂದು ಸ್ಫೋಟಕ ಸಿಡಿದು ಇಬ್ಬರು ಮೃತಪಟ್ಟ ಬಳಿಕ ಜೆಎಂಬಿ ಉಗ್ರ ಸಂಘಟನೆಯ ಅಸ್ತಿತ್ವದ ಬಗ್ಗೆ ಬೆಳಕಿಗೆ ಬಂದಿತು. ಇದಾದ ಬಳಿಕ, ಜೆಎಂಬಿಯ ಹಲವು ಮಂದಿ ಉಗ್ರರ ಬಂಧನವಾದ ಬಳಿಕ ಪ್ರಮುಖ ಉಗ್ರ ಕೌಸರ್‌ ಹಾಗೂ ಮತ್ತಿತರರು ತಲೆಮರೆಸಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.

ನಗರಕ್ಕೆ ಧಾವಿಸಿದ ಜೆಎಂಬಿ ಉಗ್ರರ ತಂಡ ಜೀವನೋಪಾಯಕ್ಕಾಗಿ ಬಟ್ಟೆ ವ್ಯಾಪಾರ, ಏರ್‌ಪಿನ್‌, ಚಿಕ್ಕ ಪುಟ್ಟ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿಕೊಂಡು ಕೆ.ಆರ್‌.ಪುರ ಸಮೀಪದ ಬಾಡಿಗೆ ಮನೆಯಲ್ಲಿ ಕೆಲಕಾಲ ವಾಸವಿತ್ತು. ನಂತರ ತಂಡದ ಸದಸ್ಯರು ನಗರ ಹಾಗೂ ನಗರ ಹೊರವಲಯದ ಹಲವೆಡೆ ಆಶ್ರಯ ಪಡೆದಿದ್ದ‌ರಲ್ಲದೇ ಚಿಕ್ಕಬಾಣವಾರದ ಹಳೆ ರೈಲು ನಿಲ್ದಾಣದ ಮನೆಯಲ್ಲೂ ವಾಸವಾಗಿದ್ದರು.

ಅದೇ ಮನೆಯಲ್ಲಿ ಕೌಸರ್‌ ತನ್ನ ಸಹಚರರಾದ ಆದಿಲ್‌, ಹಬೀಬುರ್‌ ರೆಹಮಾನ್‌, ನಾಜೀರ್‌ ಶೇಖ್‌, ನಜ್ರುಲ್ಲಾ ಇಸ್ಲಾಂ, ಆಸೀಫ್ ಇಕ್ಬಾಲ್‌, ಆರೀಪ್‌ಗೆ ಸ್ಫೋಟಕ ತಯಾರಿಕೆ ನಡೆಸಲು ಹೇಳಿದ್ದ. ಬಳಿಕ ಅಲ್ಲಿಂದ ಸ್ಫೋಟಕಗಳನ್ನು ಹೊತ್ತೂಯ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ರಾಕೆಟ್‌ ಬಾಂಬ್‌ ಉಡಾವಣೆಯನ್ನು ಎರಡು ಬಾರಿ ಪ್ರಯೋಗ ನಡೆಸಿದ್ದರು.

ಹಣ ಹೊಂದಿಸಲು ದರೋಡೆ: ಆರ್ಥಿಕವಾಗಿ ಪ್ರಬಲವಾಗಲು ಹವಣಿಸುತ್ತಿದ್ದ ಜೆಎಂಬಿ ಉಗ್ರರು ಹಣ ಹೊಂದಿಸಲು ದರೋಡೆ, ಸುಲಿಗೆ ಕೃತ್ಯಗಳಿಗೆ ಕೈ ಹಾಕಿದರು. ಅತ್ತಿಬೆಲೆ ಸೇರಿದಂತೆ ನಗರ ಹೊರವಲಯದ ಹಲವು ಕಡೆ ದುಷ್ಕೃತ್ಯಗಳ ಮೂಲಕ ಹಣ ಸಂಗ್ರಹಿಸುತ್ತಿದ್ದರು.ಅದೇ ಹಣವನ್ನು ಬಳಸಿ ಉಪ್ಪಾರಪೇಟೆ, ಚಿಕ್ಕಪೇಟೆ ಮುಂತಾದ ಕಡೆ ಬಾಂಬ್‌ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಬಳಸಿ ಚಿಕ್ಕಬಾಣವಾರದ ಮನೆಯಲ್ಲಿ ಸ್ಫೋಟಕಗಳ ತಯಾರಿಯಲ್ಲಿ ತೊಡಗಿದ್ದರು ಎಂದು ಮೂಲಗಳು ಹೇಳಿವೆ.

* ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next