Advertisement

ಜೀವಕ್ಕೆ ಶ್ಯೂರಿಟಿ ಇಲ್ಲದ ಟೆಂಡರ್‌ ಶ್ಯೂರ್‌ ರಸ್ತೆ

01:32 PM Sep 10, 2022 | Team Udayavani |

ಧಾರವಾಡ: ಅಂದುಕೊಂಡಂತೆ ಆಗಿದ್ದರೆ ಈ ರಸ್ತೆ ದೇಶಕ್ಕೆ ಮಾದರಿಯಾಗಬೇಕಿತ್ತು. ಇಲ್ಲಿ ಫುಟ್‌ಪಾತ್‌ಗಳಲ್ಲಿ ಸೈಕಲ್‌ ಸವಾರರು ಓಡಾಡಬೇಕಿತ್ತು. ಒಳಚರಂಡಿಗಳ ಎಲ್ಲಾ ಲೈನ್‌ಗಳು ಒಂದೇ ಸಮಯಕ್ಕೆ ಅಚ್ಚುಕಟ್ಟಾಗಿ ನಿರ್ಮಾಣವಾಗಬೇಕಿತ್ತು. ಎಂತದೇ ಅಪಾರ್ಟ್‌ಮೆಂಟ್‌ ಅಕ್ಕಪಕ್ಕ ಬಂದರೂ ರಸ್ತೆ ಅಗೆಯಲೇ ಬಾರದಿತ್ತು. ಆದರೆ ಏನಾಗಬಾರದಿತ್ತೋ ಅದೆಲ್ಲವೂ ಇಲ್ಲಿ ಆಗಿ ಹೋಗಿಬಿಟ್ಟಿದೆ.

Advertisement

ಹೌದು, ಉತ್ತರ ಕರ್ನಾಟಕದಲ್ಲಿಯೇ ಮೊಟ್ಟಮೊದಲ ಟೆಂಡರ್‌ಶ್ಯೂರ್‌ ರಸ್ತೆಯ ಕರ್ಮಕಾಂಡವಿದು. ಕಳೆದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆರಂಭಗೊಂಡು, ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಪರಿಪೂರ್ಣವಾಗಿ ಮುಕ್ತಾಯಗೊಳ್ಳದ ಈ ರಸ್ತೆಯಲ್ಲಿ ಧೂಳು, ಕೆಸರು ಇಂದಿಗೂ ವಾಹನ ಸವಾರರಿಗೆ, ಪಾದಚಾರಿಗಳಿಗೆ ಮೆತ್ತಿಕೊಳ್ಳುತ್ತಲೇ ಇದೆ.

ಹಳೆ ಎಸ್‌ಪಿ ಕಚೇರಿಯಿಂದ ಶಿವಾಜಿ ವೃತ್ತದ ಮೂಲಕ ಮುರುಘಾಮಠದ ವರೆಗಿನ 3.5 ಕಿಮೀ ಉದ್ದದ ಈ ರಸ್ತೆ ನಿರ್ಮಾಣಕ್ಕೆ 7.5 ಕೋಟಿಗೂ ಅಧಿಕ ಹಣ ವೆಚ್ಚ ಮಾಡುವುದಾಗಿ 2016ರಲ್ಲಿ ಘೋಷಣೆ ಮಾಡಲಾಗಿತ್ತು. ಸವದತ್ತಿ, ನವಲಗುಂದ ಎರಡು ತಾಲೂಕು ರಸ್ತೆಯ ಮತ್ತು ಈ ಮೂಲಕ ಬೆಳಗಾವಿ ಮತ್ತು ಗದಗ ಜಿಲ್ಲೆಯ ಸಂಪರ್ಕ ರಸ್ತೆ ಕೂಡಾ ಆಗಿರುವ ನಗರ ವ್ಯಾಪ್ತಿಯ ಟೆಂಡರ್‌ಶ್ಯೂರ್‌ ರಸ್ತೆಯನ್ನು ಅಚ್ಚುಕಟ್ಟಾಗಿ ನಿರ್ಮಿಸುವ ಕನಸು ಬಿತ್ತಿದ್ದರು ಗುತ್ತಿಗೆದಾರರು.

ಚರಂಡಿಭೂತ ಭಯ: ಟೆಂಡರ್‌ ಶ್ಯೂರ್‌ ರಸ್ತೆಯುದ್ದಕ್ಕೂ ನಟ್ಟನಡುವೆಯೇ ಚರಂಡಿ ಗುಂಡಿಗಳಿವೆ. ಇವು ವರ್ಷದಲ್ಲಿ ಕನಿಷ್ಟ ಎರಡು ಬಾರಿ ಒಡೆದು ಹೋಗಿರುತ್ತವೆ. ಅವುಗಳನ್ನು ದುರಸ್ತಿ ಮಾಡಲು ಪ್ರತಿ ಬಾರಿಯೂ ಕನಿಷ್ಟ ಎರಡು ಮೂರು ತಿಂಗಳು ಸಮಯ ತಗುಲುತ್ತದೆ. ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವಾಗ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು. ಇನ್ನು ದ್ವಿಚಕ್ರ ವಾಹನಗಳ ಸವಾರರಂತೂ ಕೆಲವು ಸಲ ಅಪಘಾತಕ್ಕೆ ಈಡಾಗಿದ್ದ ನಿದರ್ಶನಗಳೂ ಉಂಟು.

ಮುರುಘಾ ಮಠ ವೃತ್ತವು ನಾಲ್ಕು ರಸ್ತೆಗಳು ಸೇರುವ ಸ್ಥಳ. ಟೆಂಡರ್‌ಶ್ಯೂರ್‌ ರಸ್ತೆ ನಿರ್ಮಿಸುತ್ತಿರುವಾಗಿನಿಂದಲೂ ಈ ವೃತ್ತದಲ್ಲಿ ಒಮ್ಮೆಯೂ ಅಚ್ಚುಕಟ್ಟು ಕಾಮಗಾರಿ ಆಗಿಯೇ ಇಲ್ಲ. ಈಗಲೂ ಈ ವೃತ್ತದಲ್ಲಿನ ಸಂಪೂರ್ಣ ರಸ್ತೆ ಕಿತ್ತು ಹೋಗಿದ್ದು, ಜಲ್ಲಿಕಲ್ಲಿನ ಮೇಲೆಯೇ ವಾಹನ ಸಂಚರಿಸುತ್ತಿವೆ. ಮಳೆಯಾದಾಗ ಕೆಸರು, ಬಿಸಿಲು ಬಿದ್ದಾಗ ವಿಪರೀತ ಧೂಳು ಬಡಿದುಕೊಂಡೇ ಮುಂದಕ್ಕೆ ಸಾಗಬೇಕು.

Advertisement

ರಸ್ತೆಯಂಚು ಅಯೋಮಯ: ಟೆಂಡರ್‌ಶ್ಯೂರ್‌ ರಸ್ತೆ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆ ಎಂದು ಬೆಂಜ್‌ ಕಾರಿನಲ್ಲಿ ಬಂದ ಇದರ ವಿನ್ಯಾಸಕಿಯೊಬ್ಬರು ಧಾರವಾಡಿಗರಿಗೆ ಹಲ್ವಾ ತಿನ್ನಿಸಿ ಹೋಗಿದ್ದಾರೆ. ಅವರು ನಿರ್ಮಿಸಿದ ಫುಟ್‌ಪಾತ್‌ಗಳ ಗುಣಮಟ್ಟ ನೋಡಿದರೆ ನಿಜಕ್ಕೂ ಬೇಸರ ಬರುತ್ತದೆ. ಮುರುಘಾಮಠದ ರಸ್ತೆಯಲ್ಲಂತೂ ಫುಟ್‌ಪಾತ್‌ ಗಳು ಆಯೋಮಯವಾಗಿದ್ದು, ಇಲ್ಲಿನ ಕೆಲವು ಕುಟುಂಬಗಳು ಇಂದಿಗೂ ಫುಟ್‌ಪಾತ್‌ನ ಮೇಲೆಯೇ ದನದ ಸೆಗಣಿ ಎರಚಿ ಅದನ್ನು ಕೃಷಿಯ ತಿಪ್ಪೆಗುಂಡಿ ಮಾಡಿಕೊಂಡಿದ್ದಾರೆ.

ಪ್ಯಾರಲಲ್‌ ರಸ್ತೆ ಅನಿವಾರ್ಯ: ಸವದತ್ತಿ, ನವಲಗುಂದ ರಸ್ತೆಗಳಿಗೆ ಜಿಲ್ಲೆಗಳನ್ನು ಸಂಪರ್ಕಿಸುವ ಬಸ್‌ಗಳು ಮತ್ತು ಇತರೆ ವಾಹನಗಳ ಓಡಾಟವೂ ಇದೆ. ಇಂದಲ್ಲ ನಾಳೆ ಈ ಎರಡೂ ರಸ್ತೆಗಳನ್ನು ಸಂಧಿಸುವ ಪರ್ಯಾಯ ರಸ್ತೆಯೊಂದನ್ನು ನಿರ್ಮಿಸುವ ಅಗತ್ಯವಿದೆ. ಬೆಳಗಾವಿ ರಸ್ತೆಯ ಕೃಷಿ ವಿವಿ ಪಕ್ಕದಲ್ಲಿ ದಾಟಿಕೊಂಡು ಸವದತ್ತಿ ರಸ್ತೆ ಕೂಡುವ ಕಿರು ಬೈಪಾಸ್‌ ಅಗತ್ಯವಿದೆ. ಭಾರಿ ಗಾತ್ರದ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದಾಗಿ ರಸ್ತೆಯ ಒಳಚರಂಡಿಗಳು ಕುಸಿದು ಹೋಗುತ್ತಿವೆ. ಹೀಗಾಗಿ ಬೆಳಗಾವಿ ರಸ್ತೆಯಿಂದಲೇ ಕೃಷಿ ವಿವಿವರೆಗೂ ಸಂಚರಿಸಿ ಎತ್ತಿನಗುಡ್ಡದ ಬಳಿ ಹೊಸ ದ್ವಿಪಥ ರಸ್ತೆ ನಿರ್ಮಿಸಿ ಅದನ್ನು ಸವದತ್ತಿ ಮತ್ತು ನವಲಗುಂದ ರಸ್ತೆಗೆ ಸಂಪರ್ಕಿಸುವಂತೆ ಮಾಡಿದರೆ ಬಹುಶಃ ಟೆಂಡರ್‌ಶ್ಯೂರ್‌ ರಸ್ತೆಯ ಮೇಲಿನ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ.

ಬಾಟಲ್‌ ನೆಕ್‌ ಆದ ಮುರುಘಾಮಠ ರಸ್ತೆ: ಟೆಂಡರ್‌ ಶ್ಯೂರ್‌ ರಸ್ತೆ ಹಳೆ ಎಸ್‌ಪಿ ಕಚೇರಿಯಿಂದ ಬಸ್‌ ಡಿಪೋ ಸರ್ಕಲ್‌ ವರೆಗೂ ಇದ್ದ ಅಗಲ ಅಲ್ಲಿಂದ ಮುರುಘಾಮಠದ ವರೆಗೂ ಇಲ್ಲ. ಇಲ್ಲಿ 30 ಮೀಟರ್‌ ಇದ್ದರೆ, ಅದಲ್ಲಿ 20 ಮೀಟರ್‌ ಇದೆ. ಹೀಗಾಗಿ ವಾಹನ ದಟ್ಟಣೆ ವಿಚಾರದಲ್ಲಿ ಇದು ಬಾಟಲ್‌ನ ಗಂಟಲಂತಾಗುತ್ತಿದ್ದು, ಪ್ರತಿದಿನವೂ ಇಲ್ಲಿ ವಾಹನ ಸವಾರರ ಪರದಾಟ ನಡೆದೇ ಇರುತ್ತದೆ.

ಪೂರ್ವ ಬೈಪಾಸ್‌ ಅನಿವಾರ್ಯ
ನಗರದಲ್ಲಿನ ಪ್ರಮುಖ ರಸ್ತೆಗಳಲ್ಲಿ ಭಾರಿ ಗಾತ್ರದ ವಾಹನಗಳು, ಕಂಟೇನರ್‌ಗಳು, ಉಸುಕು ತುಂಬುವ ಟಿಪ್ಪರ್‌ಗಳ ಓಡಾಟದಿಂದಲೇ ರಸ್ತೆಗಳು ಹೆಚ್ಚಾಗಿ ಹದಗೆಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ದೈತ್ಯ ವಾಹನಗಳು ನಗರದ ಒಳಗೆ ಬರದಂತೆ ತಡೆಯುವ ವ್ಯವಸ್ಥೆ ಧಾರವಾಡ ನಗರಕ್ಕೆ ಇನ್ನೂ ಬಂದಿಲ್ಲ. ಹುಬ್ಬಳ್ಳಿಗೆ ಬೆಂಗಳೂರು ರಸ್ತೆಯಿಂದ ಗದಗ-ಬಾಗಲಕೋಟೆ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್‌ ರಸ್ತೆಯಂತೆ ಧಾರವಾಡಕ್ಕೂ ಬಾಗಲಕೋಟೆ, ಸವದತ್ತಿ ರಸ್ತೆಗಳನ್ನು
ಸಂಪರ್ಕಿಸುವ ವರ್ತುಲ ರಸ್ತೆ ಅಥವಾ ಬೈಪಾಸ್‌ ಅಗತ್ಯವಿದೆ. ಅಥವಾ ಹುಬ್ಬಳ್ಳಿಯಲ್ಲಿ ಈಗಾಗಲೇ ನಿರ್ಮಾಣಗೊಂಡ ರಸ್ತೆಯೇ ಮುಂದುವರಿದು ನರೇಂದ್ರ ಕ್ರಾಸ್‌ ಸಮೀಪದ ವರೆಗೂ ವಿಸ್ತರಣೆಯಾದರೂ ನಗರದಲ್ಲಿನ ದೈತ್ಯ ವಾಹನ ದಟ್ಟಣೆ ತಡೆಯಬಹುದಾಗಿದೆ. ಹೀಗಾಗಿ ಹು-ಧಾ ಪಶ್ಚಿಮ ಬೈಪಾಸ್‌ ಇದ್ದಂತೆ ಪೂರ್ವದಲ್ಲೂ ಬೈಪಾಸ್‌ ಅನಿವಾರ್ಯವಾಗಿದೆ.

ಒಮ್ಮೆ ಟೆಂಡರ್‌ಶ್ಯೂರ್‌ ರಸ್ತೆ ನಿರ್ಮಾಣವಾದರೆ ಸಾಕು ಮತ್ತೆ ಅದನ್ನು ಕೀಳುವ, ಅಗೆಯುವ ಗೋಜಿಗೆ ಹೋಗುವುದಿಲ್ಲ ಎಂದೆಲ್ಲ ಹೇಳಿದ ಜನಪ್ರತಿನಿಧಿಗಳು, ಈಗ ಅದನ್ನು ಅಗೆದರೂ ಸುಮ್ಮನಿದ್ದಾರೆ. ಅಕ್ಕಪಕ್ಕ ದೊಡ್ಡ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗುತ್ತಿದ್ದು, ಅವುಗಳಿಗೆ ಸಂಪರ್ಕಿಸುವ ನೀರು, ವಿದ್ಯುತ್‌ನ ಮಾರ್ಗಕ್ಕಾಗಿ ಟೆಂಡರ್‌ ಶ್ಯೂರ್‌ ರಸ್ತೆ ಕೊರೆದು ಹಾಕಲಾಗುತ್ತಿದೆ.
ಮಂಜುನಾಥ್‌ ಕುಂದಗೋಳ, ಮರಾಠಾ ಕಾಲೋನಿ ನಿವಾಸಿ

ಟೆಂಡರ್‌ಶ್ಯೂರ್‌ ರಸ್ತೆ ಲೋಕೋಪಯೋಗಿ ಇಲಾಖೆ ಅಡಿಯಲ್ಲಿನ ಕೆ-ಶಿಫ್‌ ವಿಭಾಗದ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ. ಇನ್ನೂ ನಮಗೆ ಹಸ್ತಾಂತರವಾಗಿಲ್ಲ. ಅದರ
ಖರ್ಚುವೆಚ್ಚಗಳು ನಮಗೆ ಗೊತ್ತಿಲ್ಲ.
ಲೋಕೋಪಯೋಗಿ ಇಲಾಖೆ
ಹಿರಿಯ ಅಧಿಕಾರಿ, ಧಾರವಾಡ

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next