Advertisement

ತಾತ್ಕಾಲಿಕ ಓಟ್ ಬ್ಯಾಂಕ್‌ ಪಾಲಿಟಿಕ್ಸ್‌ ಬಿಜೆಪಿಯದಲ್ಲ

04:34 PM Apr 21, 2019 | Team Udayavani |

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಇದೊಂದು ಅನಿವಾರ್ಯ ಒಪ್ಪಂದ, ಕಾರ್ಯಕರ್ತರಿಗೂ ನಾಯಕರಿಗೂ ಒಪ್ಪಿಗೆ ಇಲ್ಲ. ಬಿಜೆಪಿಯನ್ನು ಹೊರಗಿಡಬೇಕೆಂಬ ಕಾರಣಕ್ಕೆ ಮಾಡಿಕೊಂಡ ಒಪ್ಪಂದ. ಹೆದರಿಕೆಯಿಂದ ಮಾಡಿಕೊಂಡ ಒಪ್ಪಂದ ಅದು. ಇದು ಅಪವಿತ್ರ ಮೈತ್ರಿ.

Advertisement

ಜನರ ಮನಸ್ಸಿನ ಸ್ವಾಭಾವಿಕ ಭಾವನೆಗೆ ಈ ಅಪವಿತ್ರ ಮೈತ್ರಿ ಸಾಟಿ ಅಲ್ಲ. ಒಪ್ಪಿಗೆ ಇಲ್ಲ. ಇದರಿಂದ ಯಾವುದೇ ಪರಿಣಾಮವಿಲ್ಲ. ಅವರ ನಿರೀಕ್ಷಿತ ಫಲಿತಾಂಶ ಸಾಧ್ಯವಿಲ್ಲ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮಟ್ಟಿಗೂ ಹಾಗೇ. ಜನ ಐದು ಬಾರಿ ಗೆಲ್ಲಿಸಿದ್ದಾರೆ. ಅವರಿಗೆ ವಿಶ್ವಾಸವಿದೆ. ನಾವು ಅವರಿಗೆ ಇಷ್ಟವಾಗುತ್ತೇವೆ. ಸರಕಾರ, ನಮ್ಮ ನಾಯಕತ್ವ ಎಲ್ಲವುಗಳ ಮೇಲೆ ಭರವಸೆ ಇದೆ. ಅನಂತಕುಮಾರ ಹೆಗಡೆ ಎಂದರೆ ಇಂದು ವ್ಯಕ್ತಿಯಾಗಿ ಇಲ್ಲ. ಸಿದ್ಧಾಂತ, ಸಂಘಟನೆ, ನಾಯಕತ್ವ, ವೈಯಕ್ತಿಕ ಸಂಬಂಧಗಳು, ಎಲ್ಲ ಸೇರಿಸಿ ಮತದಾನ ಆಗುತ್ತದೆ. ಜನ ನೋಡುವ ದೃಷ್ಟಿಕೋನ ಕೂಡ ಇದೇ. ರಾಷ್ಟ್ರಕ್ಕಾಗಿ ಬೆಂಬಲಿಸುತ್ತಾರೆ. ಮೋದಿ ಅಲೆ ಕೂಡ ಕೈ ಹಿಡಿಯುತ್ತದೆ.

•ರಾಷ್ಟ್ರೀಯವಾದ, ಸೈನಿಕರ ಸಾಧನೆ ಹೊರತುಪಡಿಸಿದ ಸ್ಥಳೀಯವಾಗಿ ನಿಮ್ಮ ಸಾಧನೆ ಏನು?

ಇಡೀ ದೇಶ ಹಾಗೂ ಕ್ಷೇತ್ರ ಕಳೆದ ಐದು ವರ್ಷದಲ್ಲಿ ಕಂಡ ಅಭಿವೃದ್ಧಿ, ಜನಸಾಮಾನ್ಯರಿಗೆ ಆಗಿರುವ ಅಭಿವೃದ್ಧಿ ಅನುಭವ… ಅದನ್ನು ಮತದಾರರೇ ಹೇಳುತ್ತಿದ್ದಾರೆ. ಯಾರೋ ಜಾಹೀರಾತು ಕೊಟ್ಟಿದ್ದಕ್ಕೆ, ಯಾರೋ ಹೇಳಿದ್ದನ್ನು ಒಪ್ಪಿಕೊಂಡು ಜನ ಮೋದಿ ಸರಕಾರ ಮರಳಿ ಬರಬೇಕು ಎಂಬ ವಾತಾವರಣ ಬಂದುದಲ್ಲ. ಜನರು ಅವರು ಕಂಡುಕೊಂಡ ಸತ್ಯದ ಆಧಾರದ ಮೇಲೆ ಮತ ಹಾಕುತ್ತಾರೆ.

Advertisement

ಸಂಸತ್‌ ಚುನಾವಣೆ ಕೇವಲ ಸ್ಥಳೀಯ ಸಂಗತಿಯನ್ನು ಮಾತ್ರ ಗಮನಿಸಿಲ್ಲ. ಅಭಿವೃದ್ಧಿ, ರಾಷ್ಟ್ರೀಯತೆ, ಸ್ವಾಭಿಮಾನ, ನಮ್ಮ ಗೌರವಕ್ಕೆ ಸಿಕ್ಕ ಮನ್ನಣೆ ಎಲ್ಲವೂ ಆಗಿರುತ್ತದೆ. ಇವೆಲ್ಲ ಸಿಕ್ಕಿದ್ದರಿಂದ ಮೋದಿಗೆ ಬೆಂಬಲ. ಅವರು ಕಳೆದ ಐದು ವರ್ಷದಿಂದ ಕಂಡುಕೊಂಡ ಸತ್ಯ. ಜಿಲ್ಲೆಯ ಕೃಷಿಕರ ಆರ್ಥಿಕ ಸ್ಥಿತಿ ಏರಿಸಲು, ಅನೇಕ ಜ್ವಲಂತ ಸಮಸ್ಯೆಗಳ ಇತ್ಯರ್ಥಕ್ಕೆ ಕೆಲಸ ಮಾಡಿದ್ದೇವೆ. ಅವನ್ನೆಲ್ಲ ನಮ್ಮ ವಿಕಾಸ ಪಥದಲ್ಲಿ, ಕರಪತ್ರದಲ್ಲಿ ಜನರಿಗೆ ತಿಳಿಸಿದ್ದೇವೆ.

•ರಾಜ್ಯ ಸರಕಾರದ ಅಬ್ಬರ ಎದುರಿಸಲು ಪ್ರಚಾರದ ವೈಖರಿ, ತಂತ್ರಗಾರಿಕೆ ಹೇಗಿದೆ?

ಅವರದ್ದು ಉತ್ತರ ಕುಮಾರನ ಅಬ್ಬರ. ಅಷ್ಟೇ ಮತ್ತೇನಿಲ್ಲ. ಅದಕ್ಕೆ ಅರ್ಥವಿಲ್ಲ. ಒಟ್ಟು ಹಣ ಖರ್ಚು ಮಾಡುತ್ತಾ ಇದ್ದಾರೆ. ಅಧಿಕಾರ ಇದೆ. ಅದಕ್ಕೋಸ್ಕರ ಜಾಹೀರಾತು ಕೊಟ್ಟು ಆ ಕಡೆ ಓಡಾಡುತ್ತಿದ್ದಾರೆ. ಜನರ ನಡುವೆ ಅಬ್ಬರ, ಪ್ರಚಾರ ಏನೂ ಇಲ್ಲ.

ಇವುಗಳ ಮಧ್ಯೆ ನಾವು ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ಬಹುಮತಕ್ಕಾಗಿ ಅಲ್ಲ, ಸರ್ವ ಮತಕ್ಕಾಗಿ.

•ಅರಣ್ಯ ಹಕ್ಕು ಕಾಯಿದೆ 2006ರಲ್ಲಿ ಬಂದಿದ್ದರೂ ಅದರ ಅನುಷ್ಠಾನ ಕಷ್ಟವಾಗಿದೆ. ಕಾಯ್ದೆ ತಿದ್ದುಪಡಿ ಹೊಸ ದಾರಿಯಾ ಅಥವಾ ಪರ್ಯಾಯ ಇದೆಯಾ?

ಅತ್ಯಂತ ವಿವೇಚನೆಯಿಂದ ಮಾಡಿದ ಅರಣ್ಯ ಹಕ್ಕು ಕಾಯಿದ 2006. ಇದನ್ನು ರಾಜ್ಯ ಸರಕಾರ ಕಾರ್ಯಾನುಷ್ಠಾನ ಮಾಡಬೇಕಿತ್ತು. ಅಧಿಕಾರಿಗಳ ಸೀಮಿತ ದೃಷ್ಟಿಕೊನ ಹಾಗೂ ಸರಕಾರದ ಇಚ್ಛಾ ಶಕ್ತಿ ಕೊರತೆಯಿಂದ ಜೀವ ಪಡೆದಿಲ್ಲ. ಅರಣ್ಯ ಅತಿಕ್ರಮಣದಾರರ ಸಮಸ್ಯೆ ಎಷ್ಟೋ ರಾಜ್ಯದಲ್ಲಿ ಬಗೆ ಹರಿದಿದೆ.

ಆದರೆ, ಇಲ್ಲಿ ಆಗಿಲ್ಲ. ರಾಜ್ಯ ಸರಕಾರವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರಕಾರ ಧನಾತ್ಮಕ ದೃಷ್ಟಿಕೋನದಲ್ಲಿ ಅರಣ್ಯ ಅತಿಕ್ರಮಣದಾರರಿಗೆ ನೆರವಾಗಬೇಕು. ಆಗ ಈ ಸಮಸ್ಯೆ ಇತ್ಯರ್ಥವಾಗುತ್ತದೆ. ಈ ಕಾಯಿದೆಗೆ ಜೀವ ಕೊಡಬೇಕಿರುವುದು ರಾಜ್ಯ ಸರಕಾರ.

•ಉದ್ಯೋಗ ಸೃಷ್ಟಿಗೆ ದೊಡ್ಡ ಸವಾಲೇನು? ಉದ್ಯಮ ಸ್ಥಾಪನೆಗೆ ನಿಮ್ಮ ಬಳಿ ಅಸ್ತ್ರ ಇದೆಯಾ?

ಉದ್ಯೋಗ ಸೃಷ್ಟಿ ಒಂದು ವಿಚಿತ್ರ ಸಮಸ್ಯೆ. ಯಾವ ರೀತಿಯ ಉದ್ಯೋಗ, ಹೇಗೆ ಇರಬೇಕು ಎಂಬುದು ಎಲ್ಲದೂ ಕೂಡ. ಒಂದು ಸಂಘಟಿತ ವಲಯದಲ್ಲಿ ಉದ್ಯೋಗ ಆಗಬೇಕು ಎಂದರೆ ಜಗತ್ತಿನಲ್ಲಿ ಎಲ್ಲೂ ಆ ತರಹದ ವಾತಾವರಣ ಇಲ್ಲ. ಇಡೀ ಜಗತ್ತು ಶೇ.80 ಅಸಂಘಟಿತ ವಲಯದಲ್ಲೇ ಜನ ಬದುಕುತ್ತಿದ್ದಾರೆ. ಶೇ. 20ರಷ್ಟು ಮಾತ್ರ ಸಂಘಟಿತ ವಲಯ. ಅದರಲ್ಲೂ ಸರಕಾರಿ ಪ್ರಾಯೋಜಕತ್ವ ಶೇ.2ರಷ್ಟು ಮಾತ್ರ. ಈ ಕಾರಣದಿಂದಲೂ ಕ್ಷೇತ್ರದಲ್ಲಿ ಉದ್ಯಮ ಶೀಲತೆ ಬೆಳೆಸಬೇಕು.

ಉತ್ತರ ಕನ್ನಡ ಜಿಲ್ಲೆ ವೈಶಿಷ್ಟ್ಯಪೂರ್ಣ ಜಿಲ್ಲೆ. ನಿಸರ್ಗ ಹಾಳಾಗದಂತೆ ನೋಡಿಕೊಳ್ಳಬೇಕು. ಕಾಂಕ್ರೀಟ್ ಕಾಡು ಮಾಡಿದರೆ ಹಸಿರು ಉಳಿಯುವುದಿಲ್ಲ. ನೈಸರ್ಗಿಕ ಸೌಂದರ್ಯದ ಹಿನ್ನೆಲೆಯಲ್ಲೇ ಉದ್ಯೋಗ ಸೃಷ್ಟಿಸಬೇಕು. ಕೆಲವರಿಗೆ ಇದು ಹಿಡಿಸದು. ಹೊರಗಡೆ ಹೋಗುತ್ತಾರೆ. ಉತ್ತರ ಕನ್ನಡಕ್ಕೆ ಇಂಡಸ್ಟ್ರಿಯಲ್ ಜಾಬ್‌ ಸೃಷ್ಟಿ ಇಲ್ಲಿನ ಸ್ವಭಾವ ಅಲ್ಲ. ಹಸಿರು ಮಾದರಿ ಉದ್ಯೋಗವೇ ಬೇಕು. ಇದಕ್ಕೆ ಸಮಯಬೇಕು. ಒಟ್ಟೂ ಪರಿಶ್ರಮದ ಪರಿಣಾಮದಿಂದ ಸಾಧ್ಯವಿದೆ. ಇದು ರೆಡಿಮೇಡ್‌ ಕೇಕ್‌ ಅಲ್ಲ ಹಾಗೂ ಪರಿಸರ ಉಳಿಸಿ ಮುಂದಿನ ತಲೆಮಾರಿಗೂ ಕೊಡಬೇಕು.

•ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ನೀಲನಕ್ಷೆ ಏನು?

ಇಲ್ಲಿ ಆಗಬೇಕಾದ್ದು ಮೂಲ ಸೌಲಭ್ಯ. ನಮ್ಮ ವ್ಯವಹಾರದ ಕೊನೆ ಜೋಡಿಸಬೇಕು. ಜಿಲ್ಲಾ ಕೇಂದ್ರ, ನಗರ ಕೇಂದ್ರಗಳು, ಉದ್ಯಮ ಸೆಂಟರ್‌ಗಳ ಸಂಪರ್ಕ ಆಗಬೇಕು. ಈ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಆಗಿವೆ. ರಾಷ್ಟ್ರೀಯ ಹೆದ್ದಾರಿ, ಕಾರಿಡಾರ್‌ ಮೂಮೆಂಟ್ ಹೀಗೆ ಸಾಕಷ್ಟಿವೆ.

ಗ್ರಾಮೀಣದಲ್ಲಿಯೂ ನೆಟ್ವರ್ಕ್‌ ಕೂಡ ಚೆನ್ನಾಗಿ ಆಗಬೇಕು. ಹಳ್ಳಿಯ ಜನ ಶಹರಕ್ಕೆ ವಲಸೆ ಬರಬಾರದಂತೆ ಆಗಬೇಕು. ಅಂದರೆ, ಅಲ್ಲೇ ಅವರಿಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಬೇಕು. ಕೇಂದ್ರ ಸರಕಾರ ಇದಕ್ಕೆ ಬದ್ಧವಾಗಿದೆ. ಈ ಹಿನ್ನೆಲೆಯಲ್ಲೇ ಅನೇಕ ಯೋಜನೆಗಳನ್ನೂ ಆರಂಭಿಸಿದೆ. ಉತ್ತರ ಕನ್ನಡದಲ್ಲೂ ಅಲ್ಲಲ್ಲಿ ಆರಂಭಿಸಿದ್ದೇವೆ. ಗೊತ್ತಿರಲಿ, ಯಾವತ್ತೂ ತಾತ್ಕಾಲಿಕ ಓಟ್ ಬ್ಯಾಂಕ್‌ ಪಾಲಿಟಿಕ್ಸ್‌ ಬಿಜೆಪಿಯದ್ದಲ್ಲ. ಈಗಾಗಲೇ ನಮ್ಮ ನೀಲನಕ್ಷೆ ಪ್ರಣಾಳಿಕೆ. ಅದು ವಿಸ್ತೃತವಾಗಿದೆ. ಅದನ್ನು ಅನುಷ್ಠಾನ ಮಾಡುವಲ್ಲಿ ಬದ್ಧರಿದ್ದೇವೆ.

Advertisement

Udayavani is now on Telegram. Click here to join our channel and stay updated with the latest news.

Next