Advertisement

ರಾಜ್ಯದಲ್ಲಿ ತಾಪಮಾನ ಕೊಂಚ ಇಳಿಕೆ: ಇಂದು 15 ಜಿಲ್ಲೆಗಳಲ್ಲಿ ಉಷ್ಣ ಅಲೆ ಬೀಸುವ ಸಾಧ್ಯತೆ

12:20 AM Apr 08, 2024 | Team Udayavani |

ಬೆಂಗಳೂರು: ತಾಪಮಾನಕ್ಕೆ ಕರ್ನಾಟಕ ಕಂಗೆಟ್ಟು ಹೋಗಿರುವ ಬೆನ್ನಲ್ಲೇ ರವಿವಾರ ಉಷ್ಣಾಂಶದಲ್ಲಿ ಅಲ್ಪ ಇಳಿಕೆಯಾಗಿದೆ. ಆದರೆ ಮುಂದಿನ 2 ದಿನಗಳಲ್ಲಿ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನವು 2ರಿಂದ 4 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ.

Advertisement

2 ದಿನಗಳಲ್ಲಿ ಉತ್ತರ ಒಳನಾಡಿನ ಎಲ್ಲ ಸ್ಥಳ ಗಳಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ಮತ್ತು ನಗರ, ರಾಮನಗರ, ಶಿವಮೊಗ್ಗ, ದಾವಣಗೆರೆ, ಮೈಸೂರು, ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ 2-4 ಡಿ.ಸೆ ಏರಿಕೆ ಸಾಧ್ಯತೆ ಇದೆ. ಬೆಳಗಾವಿ, ಬೀದರ್‌, ವಿಜಯಪುರ, ಬಾಗಲ ಕೋಟೆ, ಗದಗ, ಕಲಬುರಗಿ, ಹಾವೇರಿ, ಧಾರವಾಡ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಿಗೆ ಎ.8ರಂದು ಉಷ್ಣ ಅಲೆ ಘೋಷಣೆ ಮಾಡಲಾಗಿದೆ.

ದಕ್ಷಿಣಕನ್ನಡ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರಿನ ಪಶ್ಚಿಮ ಭಾಗಗಳ ಜಿಲ್ಲೆಗಳಲ್ಲಿ ಬಿಸಿ ಮತ್ತು ಆದ್ರìತೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವೆಲ್ಲ ಜಿಲ್ಲೆಗಳಲ್ಲಿ ತಾಪಮಾನ ಇಳಿಕೆ?
ಕಲಬುರಗಿಯಲ್ಲಿ ಶನಿವಾರ ದಾಖಲಾಗಿದ್ದ 43.1 ಡಿಗ್ರಿ ಗರಿಷ್ಠ ಉಷ್ಣಾಂಶವು ರವಿವಾರ 42.7 ಡಿ.ಸೆ.ಗೆ ಇಳಿದಿದೆ. ವಿಜಯಪುರ 41ರಿಂದ 40ಕ್ಕೆ, ಕೊಪ್ಪಳ 41.3ರಿಂದ 40.5ಕ್ಕೆ, ಗದಗ 40.6ರಿಂದ 39.2ಕ್ಕೆ ಇಳಿದಿದೆ. ಧಾರವಾಡ 39.2ರಿಂದ 37.8ಕ್ಕೆ ಕಡಿಮೆಯಾಗಿದೆ. ಬಾಗಲಕೋಟೆಯಲ್ಲಿ ಕಳೆದ ಎರಡು ದಿನಗಳಿಂದ 41.5 ಡಿ.ಸೆ. ದಾಖಲಾಗಿದೆ.

ಎಪ್ರಿಲ್‌ ದಾಖಲೆ
ಬೆಂಗಳೂರಿನಲ್ಲಿ ಶನಿವಾರ ದಾಖಲಾಗಿದ್ದ 37.6 ಡಿ.ಸೆ. ಗರಿಷ್ಠ ಉಷ್ಣಾಂಶವು 37.2ಕ್ಕೆ ಇಳಿಕೆಯಾಗಿದೆ. 2016ರಲ್ಲಿ ಎಪ್ರಿಲ್‌ 25ರಂದು 39.2 ದಾಖಲೆಯ ಗರಿಷ್ಠ ಉಷ್ಣಾಂಶ ವರದಿಯಾಗಿದೆ. ಇದನ್ನು ಹೊರತು ಪಡಿಸಿದರೆ 2024 ಎಪ್ರಿಲ್‌ ಮೊದಲ ವಾರದಲ್ಲಿ ಸರಾಸರಿ 37ರಿಂದ 38ರ ಡಿಗ್ರಿವರೆಗೆ ದಾಖಲಾಗಿರುವ ಗರಿಷ್ಠ ತಾಪಮಾನವೇ ದಾಖಲೆಯಾಗಿದೆ. 8 ವರ್ಷಗಳಿಂದ ಬೆಂಗ ಳೂರಿನಲ್ಲಿ ಇಂಥ ತಾಪಮಾನ ವರದಿ ಯಾಗಿಲ್ಲ. ಎಪ್ರಿಲ್‌ 2ನೇ ವಾರಕ್ಕೆ ತಾಪಮಾನ ಇನ್ನಷ್ಟು ಹೆಚ್ಚುವ ಆತಂಕ ಇದೆ.

Advertisement

ಹವಾಮಾನ ಇಲಾಖೆ ಸಲಹೆ
ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಿರಿ ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ಟೋಪಿ, ಬೂಟು ಗಳು ಅಥವಾ ಚಪ್ಪಲಿ ಬಳಸಿ ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ
ಅಲ್ಕೋಹಾಲ್, ಚಹಾ, ಕಾಫಿ, ಕಾಬೊì ನೇಟೆಡ್‌ ತಂಪು ಪಾನೀಯ ಬೇಡ ಮನೆಯಲ್ಲಿ ತಯಾರಿಸಿದ ಲಸ್ಸಿ, ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಸೇವಿಸಿ.

ಬಿಸಿಲಿನ ತಾಪಕ್ಕೆ ಮರದಲ್ಲೇ ಪ್ರಜ್ಞೆ ತಪ್ಪಿದ ಯುವಕ
ಸಕಲೇಶಪುರ: ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನರು ತತ್ತರಿಸಿದ್ದಾರೆ. ಸುಮಾರು 30 ಅಡಿ ಎತ್ತರದ ತೆಂಗಿನ ಮರದ ಸುಳಿ ಕಡಿಯಲು ಮರದ ಮೇಲೆ ಹತ್ತಿದ್ದ ಯುವಕನೋರ್ವ ಬಿಸಿಲಿನ ತಾಪಕ್ಕೆ ಮರದ ಮೇಲೆಯೇ ಪ್ರಜ್ಞೆ ತಪ್ಪಿದ ಘಟನೆ ಭಾನುವಾರ ನಗರದ ಹೊರ ವಲಯದ ಕೊಲ್ಲಹಳ್ಳಿಯಲ್ಲಿ ಸಂಭವಿಸಿದೆ.

ಕೊಲ್ಲಹಳ್ಳಿಯ ಮಂಜು ಎಂಬುವವರಿಗೆ ಸೇರಿದ ತೆಂಗಿನ ಮರದ ಸುಳಿಗಳನ್ನು ಕತ್ತರಿಸಲು ಮರ ಹತ್ತಿದ್ದ ಹಲಸುಲಿಗೆ ಗ್ರಾಮದ ಕಾರ್ಮಿಕ ನವೀನ್‌, ಸುಳಿಗಳನ್ನು ಕತ್ತರಿಸುವ ವೇಳೆ ಬಿಸಿಲಿನಿಂದಾಗಿ ತಲೆ ಸುತ್ತು, ಎಡಗೈಗೆ ನೋವು ಬಂದಿದೆ. ಮರದಿಂದ ಕೆಳಗೆ ಇಳಿಯಲಾಗದೇ ಮರದ ಮೇಲೆಯೇ ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಏಣಿ ಸಹಾಯದಿಂದ ಮರ ಹತ್ತಿ ಯುವಕನನ್ನು ರಕ್ಷಣೆ ಮಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next