Advertisement

ತಾಪಮಾನ ಏರಿಕೆ ಅಪಾಯಕಾರಿ

05:34 AM Feb 04, 2019 | |

ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವುದು ಪ್ರತಿ ವ್ಯಕ್ತಿ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ದೊಡ್ಡ ಸವಾಲಾಗಿದೆ ಎಂದು ದೊಡ್ಡಪೇಟೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

Advertisement

ಜಯದೇವ ವೃತ್ತದ ಶಿವಯೋಗಾಶ್ರಮದಲ್ಲಿ ಭಾನುವಾರ ಶರಣ ಸಂಗಮದ ಅಂಗವಾಗಿ ಧರೆಹೊತ್ತಿ ಉರಿದಡೆ-ಜಾಗತಿಕ ತಾಪಮಾನ ಮತ್ತು ಜನಜೀವನ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ನಿತ್ಯದ ವಾತಾವರಣದ ಉಷ್ಣತೆ ಒಂದೊಂದು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾದರೂ ಕೂಡ ಅದರಿಂದಾಗುವ ಅಪಾಯ ಅಪಾರವಾದುದು. ಧ್ರುವಗಳಲ್ಲಿ ಹಿಮ, ನೀರ್ಗಲ್ಲು ಕರಗಿ ಸಮುದ್ರದ ಮಟ್ಟ ಏರಬಹುದು. ಕಡಲ ತಡಿಯ ಜನವಸತಿ ಪ್ರದೇಶಗಳು ಮುಳುಗಬಹುದು. ಆಹಾರ ಉತ್ಪಾದನೆ ಕೊರತೆ, ಮಳೆ ಬೀಳುವಲ್ಲಿ ಏರು-ಪೇರಾಗಬಹುದು. ಹಾಗಾಗಿ ಪರಿಸರದಲ್ಲಿ ಗಿಡ-ಮರಗಳನ್ನು ಹೆಚ್ಚೆಚ್ಚು ಬೆಳೆಸುವ ಮೂಲಕ ಇಡೀ ಜೀವ ಸಂಕುಲದ ಮೇಲಾಗುವ ತೊಂದರೆಯನ್ನು ತಪ್ಪಿಸಬೇಕಾಗಿದೆ ಎಂದರು.

ಆಧುನೀಕರಣ, ಯಾಂತ್ರೀಕರಣ, ಕೈಗಾರಿಕರಣದಲ್ಲಿ ಮಾನವ ಅನುಸರಿಸುತ್ತಿರುವ ನೀತಿಗಳು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಇಂಗಾಲದ ಹೊರಸೂಸುವಿಕೆ, ಅರಣ್ಯ ಪ್ರದೇಶಗಳ ನಾಶ, ತಾಪಮಾನ ಏರಿಕೆಗೆ ಅತಿದೊಡ್ಡ ಕಾಣಿಕೆ ಕೊಡುತ್ತಿವೆ. ಈ ಧೋರಣೆ ಬದಲಾಗಬೇಕಿದೆ ಎಂದು ಹೇಳಿದರು.

ಓಲೆ ಹತ್ತಿ ಉರಿದಡೆ ನಿಲ್ಲಬಹುದಲ್ಲದೇ, ಧರೆ ಹೊತ್ತಿ ಉರಿದಡೆ ನಿಲ್ಲಬಹುದೇ ಅಯ್ನಾ ಎಂದು 12ನೇ ಶತಮಾನದಲ್ಲಿಯೇ ಬಸವಣ್ಣನವರು ಹೇಳುವ ಮೂಲಕ ಜನರನ್ನು ಎಚ್ಚರಿಸಿದ್ದಾರೆ. ಈ ವಾಕ್ಯವನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು. ಮಾನವ ಪರಿಸರಮುಖೀ ಜೀವನ ಸಾಗಿಸಿದಾಗ ಮಾತ್ರ ಪರಿಸರ ಉಳಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪರಿಸರಮುಖೀಯಾಗಿ ಜೀವನ ಸಾಗಿಸೋಣ. ಸಮಾಜದಲ್ಲಿ ಪರಿಸರ ನಾಶ ಆಗದಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸೋಣ ಎಂದು ಹೇಳಿದರು.

Advertisement

ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌ ಮಾತನಾಡಿ, ಜನರು ಸಮೃದ್ಧ ಗಾಳಿ, ಬೆಳಕು ಬರುವ ಪರಿಸರ ಸ್ನೇಹಿ ಮನೆಗಳ ನಿರ್ಮಾಣಕ್ಕೆ ಮುಂದಾಗಬೇಕು. ಇದಕ್ಕೆ ಇಂದಿನ ಇಂಜಿನಿಯರ್ ಕೂಡ ಕೈಜೋಡಿಸಬೇಕು. ನಶಿಸಲಾರದ ಇಂಧನ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿನ ಕಸವನ್ನು ವಿಂಗಡಣೆ ಮಾಡುವ ಮೂಲಕ ಭೂಮಿಯನ್ನು ಸಮೃದ್ಧವಾಗಿ, ಆರೋಗ್ಯಪೂರ್ಣವಾಗಿ ಇಡುವ ಕೆಲಸ ಮಾಡಬೇಕು. ಆಗ ಜಾಗತಿಕ ತಾಪಮಾನ ಕೂಡ ಕಡಿಮೆ ಆಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಕೃತಿ ಸಕಲ ಜೀವಿಗಳಿಗೂ ಉತ್ತಮ ಗಾಳಿ, ನೀರು, ಬೆಳಕು ಎಲ್ಲವನ್ನು ನೀಡುತ್ತಿದೆ. ಆದರೆ ನಮ್ಮ ದುರಾಸೆಗೆ ಪ್ರಕೃತಿ ನಾಶವಾಗುತ್ತಿದೆ. ಪ್ರಜ್ಞಾವಂತ ಜನರು ಗಿಡ-ಮರಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆ ಸಮೃದ್ಧ ಜೀವನ ನಡೆಸಲು ಅನುಕೂಲಕರ ವಾತಾವರಣ ನಿರ್ಮಿಸಿಕೊಡಬೇಕಿದೆ ಹೇಳಿದರು.

ರಾಜ್ಯ ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ| ಸಿ.ಎಚ್. ಮುರಿಗೇಂದ್ರಪ್ಪ, ಹಿರಿಯ ಚಿತ್ರಕಲಾವಿದ ಮಹಾಲಿಂಗಪ್ಪ ಮಾಸ್ತರ್‌ ಉಪಸ್ಥಿತರಿದ್ದರು. ಗಿರೀಶ್‌ ದೇವರಮನಿ ಸ್ವಾಗತಿಸಿದರು. ಚನ್ನಪ್ಪ ಕುಂಟೋಜಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next