Advertisement

ತೇಜಸ್ವಿ ಸೂರ್ಯ ಸ್ಪಷ್ಟೀಕರಣಕ್ಕೆ ಕಾಂಗ್ರೆಸ್‌ ಆಗ್ರಹ

12:50 AM Apr 15, 2019 | Team Udayavani |

ಬೆಂಗಳೂರು: ಕೋಲ್ಕತಾ ಮೂಲದ ಸೋಮ್‌ ದತ್ತಾ ಎಂಬ ಮಹಿಳೆ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂಬ ಆರೋಪಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಸ್ಪಷ್ಟೀಕರಣ ನೀಡಬೇಕು ಎಂದು ಕಾಂಗ್ರೆಸ್‌ ವಕ್ತಾರ ಬ್ರಿಜೇಶ್‌ ಕಾಳಪ್ಪ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೇಜಸ್ವಿ ಸೂರ್ಯ ವಿರುದ್ಧ ಸೋಮ್‌ ದತ್ತಾ ಎಂಬ ಮಹಿಳೆ ತಮ್ಮ ಪರಿಚಿತರೊಂದಿಗೆ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರು ತಮಗಾದ ಅನ್ಯಾಯದ ವಿರುದ್ಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

ಇದು ಒಂದು ರೀತಿ “ಮಿ ಟೂ’ ಆರೋಪದಂತಿದೆ ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದರು. ಅಲ್ಲದೇ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ ತೇಜಸ್ವಿ ಸೂರ್ಯ ತಮ್ಮ ಅಫಿಡವಿಟ್‌ನಲ್ಲಿ ನಮೂದಿಸಿಲ್ಲ. ಅಲ್ಲದೇ ತಮ್ಮ ವಿರುದ್ಧ ದೂರು ದಾಖಲಾಗಿದೆಯೋ ಇಲ್ಲವೋ ಎನ್ನುವುದನ್ನು ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರಿಗೆ ವಿವರಿಸಬೇಕು.

ದೂರು ದಾಖಲಾಗಿದ್ದರೆ ಯಾವ ಕಾರಣಕ್ಕೆ ದಾಖಲಾಗಿತ್ತು. ತಮ್ಮ ವಿರುದ್ಧ ಇರುವ ಆರೋಪಗಳೇನು ಎನ್ನುವುದನ್ನು ವಿವರಿಸಬೇಕಾಗುತ್ತದೆ. ಇಲ್ಲದಿದ್ದರೆ, ಮತದಾರರಿಗೆ, ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಆರೋಪ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಆಡಿಯೋದಲ್ಲಿ ಬಿಜೆಪಿ ಪ್ರಭಾವಿ ಶಾಸಕರು, ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಹಾಗೂ ಸಂಸದ ಪ್ರತಾಪ್‌ ಸಿಂಹ ಅವರ ಹೆಸರೂ ಪ್ರಸ್ತಾಪವಾಗಿದ್ದು, ಇವರೆಲ್ಲರಿಗೂ ತೇಜಸ್ವಿ ಸೂರ್ಯ ತನ್ನ ಹಾಗೂ ತನ್ನಂತೆ ಇತರ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಬಗ್ಗೆ ಮಾಹಿತಿ ಇದೆ ಎಂದು ಸೋಮ್‌ ದತ್ತಾ ಎನ್ನಲಾದ ಮಹಿಳೆ ಆಡಿಯೋ ಸಂಭಾಷಣೆಯಲ್ಲಿ ಹೇಳಿದ್ದಾರೆ. ಅಲ್ಲದೇ ಆರ್‌ಎಸ್‌ಎಸ್‌ ಪ್ರಮುಖ ಮುಖಂಡರಿಗೂ ಈ ಮಾಹಿತಿ ಇದೆ ಎಂದು ಆರೋಪಿಸಿದ್ದಾರೆ.

Advertisement

ಪ್ರತಿಷ್ಠಿತ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ತೇಜಸ್ವಿ ಸೂರ್ಯ ಅವರ ಹಿನ್ನೆಲೆಯ ಬಗ್ಗೆ ಬಿಜೆಪಿ ಮುಖಂಡರಿಗೆ ಇಷ್ಟೆಲ್ಲಾ ಮಾಹಿತಿ ಇದ್ದರೂ, ಬಿಜೆಪಿ ನಾಯಕರು ಧ್ವನಿ ಎತ್ತದೆ, ಕ್ಷೇತ್ರದ ಜನತೆಗೆ ಮಾಹಿತಿ ಹಂಚಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಸೋರಿಕೆಯಾಗಿದೆ ಎನ್ನಲಾದ ಸಂಭಾಷಣೆಯಲ್ಲಿ ಮೂವರು ಹೆಣ್ಣುಮಕ್ಕಳ ಹೆಸರು ಪ್ರಸ್ತಾಪವಾಗಿದ್ದು, ಅವರೆಲ್ಲರೂ ತೇಜಸ್ವಿ ಸೂರ್ಯನಿಂದ ದೌರ್ಜನ್ಯಕ್ಕೆ ಒಳಗಾಗಿ ನೊಂದಿದ್ದಾರೆ ಎನ್ನಲಾಗಿದೆ ಎಂದು ದೂರಿದರು.

ಸೋಮ್‌ ದತ್ತಾ ಆಕ್ಷೇಪ: ಈ ಮಧ್ಯೆ, ಬ್ರಿಜೇಶ್‌ ಕಾಳಪ್ಪ ಅವರ ಪತ್ರಿಕಾಗೋಷ್ಠಿಗೆ ಆಕ್ಷೇಪ ವ್ಯಕ್ತಪಡಿಸಿ ಸೋಮ್‌ದತ್ತಾ ಟ್ವೀಟ್‌ ಮಾಡಿದ್ದು, “ರಾಜಕೀಯ ಲಾಭಕ್ಕಾಗಿ ಮಹಿಳೆಯ ವೈಯಕ್ತಿಕ ಗೌರವಕ್ಕೆ ಧಕ್ಕೆ ತಂದಿರುವುದಕ್ಕೆ ನಾಚಿಕೆಯಾಗಬೇಕು’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ಬ್ರಿಜೇಶ್‌ ಕಾಳಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಅವರ ಟ್ವೀಟ್‌ಗೆ ಟ್ವಿಟರ್‌ನಲ್ಲಿಯೇ ಪ್ರತಿಕ್ರಿಯಿಸಿರುವ ಬ್ರಿಜೇಶ್‌ ಕಾಳಪ್ಪ, “ಕಾನೂನು ಕ್ರಮ ಕೈಗೊಂಡರೆ ನಾನು ಸಂತೋಷದಿಂದ ಎದುರಿಸುತ್ತೇನೆ. ಅದಕ್ಕೂ ಮೊದಲು ನನ್ನ ಪತ್ರಿಕಾಗೋಷ್ಠಿಯಲ್ಲಿ ಮಹಿಳೆಯ ಘನತೆಯನ್ನು ಹಾಳು ಮಾಡಿದ್ದೇನಾ ಅಥವಾ ಎತ್ತಿ ಹಿಡಿಯುವ ಕೆಲಸ ಮಾಡಿದಿದ್ದೇನಾ ಎನ್ನುವುದನ್ನು ಕೇಳಿಸಿಕೊಳ್ಳಿ’ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next