Advertisement

ವರ್ಗಾವಣೆ ಪ್ರಕ್ರಿಯೆಗೆ ಆಗ್ರಹಿಸಿ ಶಿಕ್ಷಕರ ಬೈಕ್‌ ರ್ಯಾಲಿ

07:34 AM Feb 17, 2019 | Team Udayavani |

ಚಿಕ್ಕಬಳ್ಳಾಪುರ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಬೇಕು. ನೂತನ ಪಿಂಚಣಿ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕೆಂದು ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರು ಶನಿವಾರ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜಿಲ್ಲಾ ಕೇಂದ್ರದಲ್ಲಿ ಬೈಕ್‌ ರ್ಯಾಲಿ ನಡೆಸಿ ಗಮನ ಸೆಳೆದರು.

Advertisement

ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬೈಕ್‌ ರ್ಯಾಲಿ ನಡೆಸಿದ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರು ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆಗ್ರಹ: ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಕಾಯ್ದೆ 2017ರ ಅನ್ವಯ ಶಿಕ್ಷಕರ ವರ್ಗಾವಣೆ ಪ್ರತಿಕ್ರಿ ಕೈಗೆತ್ತಿಕೊಳ್ಳದೇ ಸರ್ಕಾರ ಮುಂದೂಡುತ್ತಾ ಬರುತ್ತಿದೆ.  ರಾಜ್ಯ ಸರ್ಕಾರ ಸೇವಾನಿರತ ಪದವೀಧರ ಶಿಕ್ಷಕರಿಗೆ ಬಡ್ತಿ ನೀಡಬೇಕೆಂದು ಆಗ್ರಹಿಸಿದರು. 

ಶಿಕ್ಷಕರಿಗೆ ತೊಂದರೆ: ಪ್ರತಿ ವರ್ಷ ಮಾರ್ಚ್‌ ಅಥವಾ ಏಪ್ರೀಲ್‌ ತಿಂಗಳಲ್ಲಿ ಶಿಕ್ಷಕರ ವಗಾವಣೆ ನಡೆಯುತ್ತಿತ್ತು. ಆದರೆ ಅನಿರ್ವಾಯ ಕಾರಣಗಳಿಂದ ಹಾಗೂ ಚುನಾವಣಾ ನೀತಿ ಸಂಹಿತೆಯಿಂದ ವರ್ಗಾವಣೆ ಮುಂದೂಡುತ್ತಾ ಬರುತ್ತಿರುವುದರಿಂದ ವರ್ಗಾವಣೆ ಬಯಸಿರುವ ಶಿಕ್ಷಕರಿಗೆ ತೊಂದರೆ ಉಂಟಾಗಿದೆ ಎಂದು ಅಳಲು ತೋಡಿಕೊಂಡರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿಯೇ  ಫೆಬ್ರವರಿ ತಿಂಗಳಲ್ಲಿ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದರೂ ಸರ್ಕಾರ ಇದುವರೆಗೂ ಚಾಲನೆ ಕೊಟ್ಟಿಲ್ಲ ಎಂದರು. ಪ್ರಸ್ತಕ ಸಾಲಿನ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ ಪುನಃ ಜೂನ್‌ ತಿಂಗಳಲ್ಲಿ ಮತ್ತೂಮ್ಮೆ ವರ್ಗಾವಣೆ ಮಾಡಿಕೊಡಬೇಕೆಂದ ಅವರು, ಸರ್ಕಾರ ಕೂಡಲೇ ಸೇವಾನಿರತ ಪದವೀಧರ ಶಿಕ್ಷಕರಿಗೆ ಬಡ್ತಿ ನೀಡುವುದು ಅತ್ಯವಶ್ಯಕವಾಗಿದೆ ಎಂದರು. 

Advertisement

ಎರಡು ಬಾರಿ ನೇರ ನೇಮಕಾತಿ ಮೂಲಕ ಪದವೀಧರ ಶಿಕ್ಷಕರನ್ನು ನೇಮಕಾತಿ ಪೂರ್ಣಗೊಂಡಿದ್ದು ಈಗ ಮತ್ತೆ 10000 ಪದವೀಧರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವುದರಿಂದ ಸೇವಾನಿರತ ಪದವೀಧರ ಶಿಕ್ಷಕರಿಗೆ ಆನ್ಯಾಯವಾಗುತ್ತಲೇ ಇದೆ ಎಂದರು.

ಪ್ರತಿಭಟನೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚಿಂತಾಮಣಿಯ ಕೆ.ವಿ.ಚೌಡಪ್ಪ, ಜಿಲ್ಲಾ ಸಂಘದ ಸಹ ಕಾರ್ಯದರ್ಶಿ ವೆಂಕಟರಾಯಪ್ಪ, ಜಿಲ್ಲಾ ಖಜಾಂಚಿ ಕೆ.ಸಿ.ಶಿವಶಂಕರ್‌, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೈಲಾ ಕುಮಾರ್‌, ಜಿಲ್ಲಾ ಉಪಾಧ್ಯಕ್ಷೆ ಪ್ರಭಾವತಿ,

ಬಾಗೇಪಲ್ಲಿ ಅಧ್ಯಕ್ಷ ವೆಂಕಟರವಣಪ್ಪ, ಚಿಂತಾಮಣಿ ಅಧ್ಯಕ್ಷ ಆರ್‌.ಅಶೋಕ್‌ ಕುಮಾರ್‌, ಚಿಕ್ಕಬಳ್ಳಾಪುರ ಅಧ್ಯಕ್ಷ ರಾಮಶೇಷಪ್ಪ, ಶಿಡ್ಲಘಟ್ಟ ಅಧ್ಯಕ್ಷ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಮುನಿರಾಜು, ಕೃಷ್ಣಯ್ಯಶೆಟ್ಟಿ, ಪುಟ್ಟರಾಜ್‌, ಚಾನ್‌ಪಾಷ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಶಿಕ್ಷಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next