Advertisement

ಚುನಾವಣಾ ಕಾರ್ಯದಿಂದ ಶಿಕ್ಷಕರಿಗಿಲ್ಲ ಮುಕ್ತಿ

08:49 PM Aug 03, 2023 | Team Udayavani |

ಬೆಂಗಳೂರು: ಶಿಕ್ಷಕರಿಗೆ ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಸರ್ಕಾರ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ತೊಡಗಿಸಿಕೊಳ್ಳುವಂತೆ ಆದೇಶಿಸಿದೆ.

Advertisement

ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಕೈಪಿಡಿ-2016 ರ ನಿಯಮಗಳ ಪ್ರಕಾರ ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳಾಗಿ 13 ವಿವಿಧ ಹುದ್ದೆಗಳ ಸಿಬ್ಬಂದಿಯನ್ನು ನಿಯೋಜಿಸಲು ಅವಕಾಶವಿದ್ದು, ಅದರಲ್ಲಿ ಶಿಕ್ಷಕರ ಹುದ್ದೆಯೂ ಒಂದು.

ಅಲ್ಲದೆ, ಸುಪ್ರೀಂಕೋರ್ಟ್‌ ಕೂಡ ಈ ಬಗ್ಗೆ ಸ್ಪಷ್ಟ ಆದೇಶಗಳನ್ನು ನೀಡಿದ್ದು, ಚುನಾವಣಾ ಕಾರ್ಯದಲ್ಲಿ ಶಿಕ್ಷಕರನ್ನು ಬಳಸಬಹುದು ಎಂದಿದೆ. ಆದರೆ, ಕೆಲಸವೊಂದಿಷ್ಟು ಷರತ್ತುಗಳಿದ್ದು, ಅವುಗಳನ್ನು ಪೂರೈಸುವಂತೆ ಆದೇಶದಲ್ಲಿದೆ.

ನಿವೃತ್ತಿ ಅಂಚಿನಲ್ಲಿರುವವರು, ದೀರ್ಘ‌ಕಾಲಿಕ ಕಾಯಿಲೆ ಹೊಂದಿದವರಿಗೆ ವಿನಾಯಿತಿ: ಯಾವುದೇ ಶಾಲೆಯಲ್ಲಿನ ಶೇ.100ರಷ್ಟು ಎಲ್ಲ ಶಿಕ್ಷಕರನ್ನೂ ನಿಯೋಜಿಸಬಾರದು. ಶಿಕ್ಷಕರನ್ನು ನಿಯೋಜಿಸುವಾಗ ರಜಾ ದಿನಗಳಲ್ಲಿ ಹಾಗೂ ಬೋಧನಾ ಸಮಯವನ್ನು ಹೊರತುಪಡಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬೇಕು. ಮಾರಣಾಂತಿಕ ಅಥವಾ ದೀರ್ಘ‌ಕಾಲಿಕ ಕಾಯಿಲೆ ಹೊಂದಿರುವ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು. ಮುಂದಿನ 6 ತಿಂಗಳ ಅವಧಿಯಲ್ಲಿ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಚುನಾವಣೆ) ಇಲಾಖೆಯ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್‌.ಯೋಗೇಶ್ವರ ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next