Advertisement

“ಶಿಕ್ಷಕರ ಬಡ್ತಿ ಗೊಂದಲ ಶೀಘ್ರದಲ್ಲಿ ಇತ್ಯರ್ಥ’

08:48 PM Sep 12, 2021 | Team Udayavani |

ರಾಯಚೂರು: ಬಹುವರ್ಷಗಳಿಂದ ಗೊಂದಲದ ಗೂಡಾಗಿರುವ ಶಿಕ್ಷಕರ ಬಡ್ತಿ ಸಮಸ್ಯೆಯನ್ನು ಶೀಘ್ರದಲ್ಲೇ ನಿವಾರಿಸಿ, ಅರ್ಹ ಶಿಕ್ಷಕರಿಗೆ ಮುಂಬಡ್ತಿ ಸಿಗುವ ಹಾಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ತಿಳಿಸಿದರು.

Advertisement

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕಾಗೃಹದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಡಿಡಿಪಿಐ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಳೆದ 15 ವರ್ಷಗಳಿಂದಲೂ ಶಿಕ್ಷಕ ಬಡ್ತಿ ಪ್ರಕರಣಗಳು ಬಾಕಿ ಉಳಿದಿವೆ. ಇದರಿಂದ ಅನೇಕ ಶಿಕ್ಷಕರು ಅರ್ಹತೆ ಇದ್ದರೂ ಮುಂಬಡ್ತಿಯಿಂದ ವಂಚಿತರಾಗುತ್ತಿದ್ದಾರೆ. ಕೆಲವರ ಸೇವಾವಧಿ  ಕೂಡ ಮುಗಿಯುತ್ತಿದೆ. ಹೀಗಾಗಿ ನನೆಗುದಿಗೆ ಬಿದ್ದಿರುವ ಬಡ್ತಿ ಪ್ರಕರಣಗಳ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಲಾಗಿದೆ.

ಸಾಧ್ಯವಾದಷ್ಟು ಬೇಗವೇ ಈ ಸಮಸ್ಯೆಗೆ ಮುಕ್ತಿ ಕಾಣಿಸಲಾಗುವುದು ಎಂದು ಭರವಸೆ ನೀಡಿದರು. ಸ್ವಾತಂತ್ರÂ ಸಿಕ್ಕು 70 ವರ್ಷಗಳೇ ಕಳೆದರೂ ದೇಶದಲ್ಲಿ ಶಿಕ್ಷಣ ನೀತಿ ಬದಲಿಸಲು ಆಗಿರಲಿಲ್ಲ. ಮೋದಿ ದೇಶದ ಪ್ರಧಾನಿಯಾದ ಐದೇ ವರ್ಷದಲ್ಲಿ ತಜ್ಞರ ಅಭಿಪ್ರಾಯ ಪಡೆದುಕೊಂಡು ನೂತನ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದಾರೆ. ಈ ನೀತಿಯಿಂದ ಶೈಕ್ಷಣಿಕ ವ್ಯವಸ್ಥೆ ಬಲಗೊಳ್ಳಲಿದ್ದು, ಸಾಕಷ್ಟು ಗುರುತರ ಬದಲಾವಣೆಗಳು ಸಾಧ್ಯವಾಗಲಿದೆ ಎಂದರು.

ಕೊರೊನಾದಿಂದ ಶಿಕ್ಷಣ ವಲಯ ಸಾಕಷ್ಟು ದುರ್ಬಲಗೊಂಡಿದೆ. ಸಾಕಷ್ಟು ಶಿಕ್ಷಣ ಸಂಸ್ಥೆಗಳು ಸಮಸ್ಯೆ ಎದುರಿಸಿದವು. ಜಿಲ್ಲಾಡಳಿತ ಕೋವಿಡ್‌ ಲಸಿಕೆ ಗುರಿ ತಲುಪುವಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ಅಕ್ಟೋಬರ್‌ ವೇಳೆಗೆ ಶೇ.100ರಷ್ಟು ಗುರಿ ತಲುಪಬೇಕು ಎಂದು ಕೇಂದ್ರ ಸರ್ಕಾರ
ಗುರಿ ಹಾಕಿದ್ದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಲಸಿಕಾ  ಅಭಿಯಾನಗಳನ್ನು ಬಲಪಡಿಸಲು ಪ್ರಧಾನಿ ಮುಂದಾಗಿದ್ದಾರೆ ಎಂದರು.

Advertisement

ಶಾಸಕ ಡಾ| ಶಿವರಾಜ್‌ ಪಾಟೀಲ್‌ ಮಾತನಾಡಿ, ಒಬ್ಬ ವ್ಯಕ್ತಿ ಜೀವನ ರೂಪಗೊಳ್ಳಲು ಗುರುವೆಂಬ ಶಕ್ತಿಯೇ ಕಾರಣ. ಇಂದು ನಾನು ವೈದ್ಯನಾಗಿ, ಶಾಸಕನಾಗಿ ಇಷ್ಟೆಲ್ಲ ಸಾಧನೆ ಮಾಡಲು ಶಿಕ್ಷಕರ ಮಾರ್ಗದರ್ಶನವೇ ಕಾರಣ. ಶಿಕ್ಷಕರಿಗೆ ಮಾತ್ರ ದೇಶವನ್ನು ಸದೃಢವಾಗಿ ಕಟ್ಟುವ ಶಕ್ತಿ ಇರುವುದು. ಶಿಕ್ಷಕರ ಸಮಸ್ಯೆಗಳೇನಿದ್ದರೂ ಪರಿಹರಿಸಲು ಸದಾ ಶ್ರಮಿಸಲಾಗುವುದು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರರೆಡ್ಡಿ ಮಾತನಾಡಿದರು. ಜಿಲ್ಲೆಯ 22 ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ನಗರಸಭೆ ಅಧ್ಯಕ್ಷ ಈ.ವಿನಯ ಕುಮಾರ, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೃಷಭೇಂದ್ರಯ್ಯ, ಡಯಟ್‌ ಉಪನಿರ್ದೇಶಕ ರಾಮಚಂದ್ರಪ್ಪ ಶಿವಂಗಿ, ಬಿಇಒ ದೊಡ್ಡಮನಿ, ಶಿಕ್ಷಕರ ಸಂಘದ ಸದಸ್ಯರು, ಶಿಕ್ಷಕರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next