Advertisement

ಹಿರಿಯರ ಆಚಾರ-ವಿಚಾರ ಮಕ್ಕಳಿಗೆ ಕಲಿಸಿ

01:08 PM Mar 25, 2022 | Team Udayavani |

ಬಾದಾಮಿ: ಆದಿಕಾಲದಿಂದ ಬಂದಂತಹ ಸಂಸ್ಕೃತಿ ಮರೆಯಬಾರದು. ನಮ್ಮ ಹಿರಿಯರ ಸಂಪ್ರದಾಯದಂತೆ ಮೂರು ತಿಂಗಳವಾದರೂ ತಮ್ಮ ಮಕ್ಕಳಿಗೆ ವೈದಿಕ ವೃತ್ತಿಯನ್ನು ಕಲಿಸಬೇಕು. ನಮ್ಮ ಪೂರ್ವಜರ ವೀರಶೈವರ ಆಚಾರ ವಿಚಾರಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕಿದೆ ಎಂದು ಇಳಕಲ್‌-ಹುನಗುಂದ ಎಸ್‌ಆರ್‌ಇ ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌ .ನವಲಿ ಹಿರೇಮಠ ಹೇಳಿದರು.

Advertisement

ಪಟ್ಟಣದ ಅಕ್ಕಮಹಾದೇವಿ ಅನುಭಾವ ಮಂಟಪದಲ್ಲಿ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವೀರಶೈವ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಂಗಮ ಸಮಾಜದಲ್ಲಿ ಬಹುತೇಕರು ಕಡುಬಡವರಾಗಿದ್ದು, ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜಂಗಮ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸಬೇಕು. ಬಡಜಂಗಮ ಸಮಾಜದವರನ್ನು ಸರಕಾರ ಗುರುತಿಸಿ, ಅವರಿಗೆ ಸೌಲಭ್ಯಗಳನ್ನು ತಲುಪಿಸಬೇಕು. ಜಂಗಮ ಸಮಾಜಕ್ಕೆ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದರು. ಸಮಾಜ ಬಾಂಧವರು ವಿವಿಧ ರಂಗಗಳಲ್ಲಿ ಗುರುತಿಸಿಕೊಂಡು ಎಲ್ಲ ರಂಗಗಳಲ್ಲಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಬಾದಾಮಿ ನಗರದಲ್ಲಿ ರೇಣುಕಾಚಾರ್ಯರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ.ದೇಣಿಗೆ ನೀಡಿದರು.

ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಮಾತನಾಡಿ, ಜಂಗಮ ಸಮಾಜದವರು ಸಮಾಜದಲ್ಲಿ ಕಡಿಮೆ ಇದ್ದರೂ ಸಹಿತ ಉತ್ತಮ ಸಂಸ್ಕೃತಿ ರೂಢಿಸಿಕೊಂಡು ಬಂದಿದ್ದಾರೆ. ಜಂಗಮ ಸಮಾಜದ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಯವರು ಅನುಸರಿಸುವಂತೆ ಮಾಡಬೇಕು. ಎಲ್ಲ ಜಂಗಮ ಸಮಾಜದವರು ಒಗ್ಗಟ್ಟಿನಿಂದ ಕಾರ್ಯಕ್ರಮ ಆಯೋಜನೆ ಮಾಡಿ ಸರಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

Advertisement

ವೀರಪುಲಿಕೇಶಿ ಸಂಸ್ಥೆಯ ಚೇರಮನ್‌ ಎ.ಸಿ.ಪಟ್ಟಣದ, ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ಜಿ.ಪಂ. ಮಾಜಿ ಸದಸ್ಯ ಎಂ.ಬಿ.ಹಂಗರಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿಯವರು ರೇಣುಕಾಚಾರ್ಯರ ಸಮುದಾಯ ಭವನ ನಿರ್ಮಾಣಕ್ಕಾಗಿ 1 ಲಕ್ಷ ರೂ. ದಾನ ನೀಡಿದರು.

ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ವಿ.ಎಸ್‌.ಹಿರೇಮಠ ಜಂಗಮ ಸಮಾಜದ ಆಚಾರ ವಿಚಾರ ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಶಿವುಕುಮಾರ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುದಕಯ್ಯ ಹಿರೇಮಠ, ಪುರಸಭೆ ಅಧ್ಯಕ್ಷ ರಾಜಮಹಮ್ಮದ ಬಾಗವಾನ, ಬಿ.ಡಿ.ಸಿ.ಸಿ.ಬ್ಯಾಂಕ್‌ ನಿರ್ದೇಶಕ ಕುಮಾರಗೌಡ ಜನಾಲಿ, ಕೆಒಎಫ್‌ ನಿರ್ದೇಶಕ ಬಸವರಾಜ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಹಾಜರಿದ್ದರು. ಎಸ್‌ಆರ್‌ಇ ಫೌಂಡೇಶನ್‌ ಅಧ್ಯಕ್ಷ ಎಸ್‌.ಆರ್‌. ನವಲಿಹಿರೇಮಠ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಕಾಚೆಟ್ಟಿ, ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷ ಶಿವಯ್ಯ ಹಿರೇಮಠ, ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ್‌ ಅವರನ್ನು ಸನ್ಮಾನಿಸಲಾಯಿತು.

ಎಸ್‌.ಎಂ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವುಕುಮಾರ ಹಿರೇಮಠ ಸ್ವಾಗತಿಸಿದರು. ದೊಡ್ಡಯ್ಯ ಭೂಸನೂರಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಂಕರಗೌಡ ಪಾಟೀಲ, ಹೊನ್ನಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ಅಮರೇಶ ಯಮನೂರಮಠ, ಮುಕ್ಕಣ್ಣ ಜನಾಲಿ, ಸುನೀಲ ಕಾರುಡಗಿಮಠ, ಗುರುಸಿದ್ದಯ್ಯ ಹಿರೇಮಠ, ಉಮೇಶ ಭಿಕ್ಷಾವತಿಮಠ, ಮಲ್ಲಯ್ಯ ಮುಪ್ಪಿನವರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next