Advertisement

ಕನ್ನಡ ಜಿಲ್ಲೆಯಲ್ಲಿ ಕರ ನಿರಾಕರಣೆಯ ಕಾವು   

11:09 PM Jun 16, 2022 | Team Udayavani |

ಭಾರತದ ಸ್ವಾತಂತ್ರ್ಯ ಸಂಭ್ರಮಕ್ಕೆ ಅಮೃತ ಮಹೋತ್ಸವದ ಪರ್ವಕಾಲ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ಸಂವತ್ಸರಗಳು ಸಂದವು. ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ಮೆಲುಕು ಹಾಕಲು ಇದು ಸೂಕ್ತ ಸಮಯ. ಹೋರಾಟದ ವಿವಿಧ ಮಜಲುಗಳಲ್ಲಿ ಬ್ರಿಟಿಷರು ಭಾರತೀಯರ ಮೇಲೆ ಹೇರುತ್ತಿದ್ದ ಕರನಿರಾಕರಣೆಯ ಚಳವಳಿಯೂ ಒಂದು. ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಉಪ್ಪಿನ ಸತ್ಯಾಗ್ರಹವು ಈ ನಿಟ್ಟಿನಲ್ಲಿ ವಿಶೇಷ ಮಹತ್ವ ಪಡೆದಿದೆ. ಆದರೆ ಇದಕ್ಕೂ ಮೊದಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ ನಿರಾಕರಣೆಯ ಮೂಲಕ ಬ್ರಿಟಿಷರಿಗೆ ಇಲ್ಲಿನ ರೈತರು ಕೊಟ್ಟ ಶಾಕ್‌ ಬ್ರಿಟಿಷ್‌ ಆಡಳಿತದ ವಿರುದ್ಧದ ಪ್ರತಿಭಟನೆಯಲ್ಲಿ ಮಹತ್ತರವಾದ ಹೆಜ್ಜೆ.

Advertisement

ಉಪ್ಪಿನ ಸತ್ಯಾಗ್ರಹಕ್ಕೂ ಪೂರ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಈ ಚಳವಳಿಯನ್ನು ವಿದ್ವಾನ್‌ ನಾರಾಯಣ್‌ ಮತ್ತು ಮಂಜೇಶ್ವರ ಗಣಪತಿ ರಾವ್‌ ಐಗಳ ಅವರು ಪ್ರಸ್ತಾವಿಸಿರುತ್ತಾರೆ. ಈ ಚಳವಳಿಯು ಇಲ್ಲಿನ ಜನರ ಒಗ್ಗಟ್ಟು ಮತ್ತು ಹೋರಾಟದ ಮನೋಭಾವದ ದೃಷ್ಟಿಯಿಂದ ದಾಖಲಾರ್ಹ ಹೋರಾಟ ಎನ್ನಬಹುದು. ಇದರ ಉದ್ದೇಶವೂ ಬ್ರಿಟಿಷರು ವಿಧಿಸಿದ ಕರದ ನಿರಾಕರಣೆ. ಆಗಿನ ಕಾಲದಲ್ಲಿ ಕೃಷಿಯೇ ದೇಶದ ಜೀವಾಳವಾಗಿತ್ತು. ಬಹುತೇಕ ಮಂದಿ ಕೃಷಿಯನ್ನೇ ಅವಲಂಬಿಸಿದ್ದರು. ಕೃಷಿಗೆ ಕಂದಾಯವನ್ನು ವಿಧಿಸುವುದರ ಮೂಲಕ ಕರಸಂಗ್ರಹಕ್ಕೆ ಬ್ರಿಟಿಷ್‌ ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು. ಬ್ರಿಟಿಷರಿಂದ ನೇಮಿಸಲ್ಪಟ್ಟ ಅಧಿಕಾರಿಗಳು ಕರಸಂಗ್ರಹದ ಕುರಿತು ವಿವಿಧ ವರದಿಗಳನ್ನು ಮೇಲಿನ ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದರು. ಕ್ಯಾಪ್ಟನ್‌ ಮನ್ರೊಈ ಭಾಗದ ಅಂದಿನ ಕಲೆಕ್ಟರ್‌. ಈತನು ಮದ್ರಾಸ್‌ ಸರಕಾರಕ್ಕೊಂದು ಪತ್ರ ಬರೆಯುತ್ತಾನೆ.

ಈ ಪತ್ರದಲ್ಲಿ ಮುಖ್ಯವಾಗಿ ಎರಡು ವಿಚಾರಗಳನ್ನು ಉಲ್ಲೇಖೀಸುತ್ತಾನೆ. ಒಂದು ಉಡುಪಿ ಹಾಗೂ ಕುಂದಾಪುರದ ಭಾಗಗಳು ಫ‌ಲವತ್ತಾದ ಭೂಮಿಯನ್ನು ಹೊಂದಿವೆ ಎಂಬ ಅಂಶ. ಇನ್ನೊಂದು ಕುಂಬಳೆ ಹಾಗೂ ಕಡಬ ಪ್ರದೇಶದ ಜನರು ಕೊಡಗಿನ ಅರಸರಿಂದ ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂಬ ದೂರು. ಈ ಪತ್ರವನ್ನು ಗಮನಿಸಿದ ಅಂದಿನ ಮದ್ರಾಸ್‌ ಪ್ರಾಂತದ ಗವರ್ನರ್‌ ಮಾಕ್ಟೀಸ್ ವೆಲ್ಲೆಸ್ಲಿಯು ಈ ಭಾಗದ ಆರ್ಥಿಕ ಪರಿಸ್ಥಿತಿಗಳನ್ನು ಅರಿಯಲು ಕ್ರಿ.ಶ. 1801ರಲ್ಲಿ ಡಾ| ಫ್ರಾನ್ಸಿಸ್‌ ಬಿ. ಚಾನ್‌ (ಫ್ರಾನ್ಸಿಸ್‌ ಬುಚೆನನ್‌) ಎಂಬವನನ್ನು ಕಳುಹಿಸುತ್ತಾನೆ.  ಈತನು ನೀಲೇಶ್ವರ, ಕುಂಬಳೆ, ಬಂಟ್ವಾಳ, ಫ‌ರಂಗಿಪೇಟೆ, ಉಡುಪಿ, ಬ್ರಹ್ಮಾವರ, ಕುಂದಾಪುರ ಮೊದಲಾದ ಭಾಗಗಳಲ್ಲಿ ಸುತ್ತಾಡಿ ಸಮೀಕ್ಷೆ ನಡೆಸಿ ವರದಿಯನ್ನು ಬ್ರಿಟಿಷ್‌ ಸರಕಾರಕ್ಕೆ ನೀಡುತ್ತಾನೆ. ಅದರ ಪರಿಣಾಮವಾಗಿ ಹೆಚ್ಚಿನ ಕಂದಾಯವನ್ನು ನೀಡುವಂತೆ ಬ್ರಿಟಿಷರು ಆದೇಶಿಸುತ್ತಾರೆ. ‌

ಕಂಪೆನಿ ಸರಕಾರದ ಈ ಧೋರಣೆಯನ್ನು ರೈತರು ಪ್ರತಿಭಟಿಸಿ 1831ರಲ್ಲಿ ಕರನಿರಾಕರಣೆಗೆ ಮುಂದಾ ಗುತ್ತಾರೆ. ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತದೆ. ಜನರ ಒಗ್ಗಟ್ಟಿನ ಹೋರಾಟವು ಅಧಿಕಾರಿಗಳ ನಿದ್ರೆಗೆಡಿಸುತ್ತದೆ. ಈ ಹೋರಾಟಕ್ಕೆ ಹೆದರಿದ ಬ್ರಿಟಿಷರು ಕೊನೆಗೂ ರೈತರ ಬೇಡಿಕೆಗೆ ಮಣಿಯುತ್ತಾರೆ. ಮುಂದೆ ಈ ಮಟ್ಟದ ಹೋರಾಟ ನಡೆಯದಂತೆ ಇನ್ನೊಂದು ಉಪಾಯವನ್ನು ಬ್ರಿಟಿಷರು ಮಾಡುತ್ತಾರೆ. ಇದರ ಪರಿಣಾಮವಾಗಿ ಕನ್ನಡ ಜಿಲ್ಲೆಯು 1860ರಲ್ಲಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಎಂದು ಇಬ್ಭಾಗವಾಗುತ್ತದೆ. ದ.ಕ. ಜಿಲ್ಲೆಯನ್ನು ಮದ್ರಾಸ್‌ ಪ್ರಾಂತಕ್ಕೂ, ಉ.ಕ. ಜಿಲ್ಲೆಯನ್ನು ಮುಂಬಯಿ ಪ್ರಾಂತಕ್ಕೂ ಸೇರಿಸುತ್ತಾರೆ.

ಉಪ್ಪಿನ ಸತ್ಯಾಗ್ರಹಕ್ಕೂ ಪೂರ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಕರನಿರಾಕರಣೆ ಚಳವಳಿಯನ್ನು ವಿದ್ವಾನ್‌ ನಾರಾಯಣ್‌ ಮತ್ತು ಮಂಜೇಶ್ವರ ಗಣಪತಿ ರಾವ್‌ ಐಗಳ ಅವರು ಪ್ರಸ್ತಾವಿಸಿರುತ್ತಾರೆ. ಈ  ಚಳವಳಿಯು ಇಲ್ಲಿನ ಜನರ ಒಗ್ಗಟ್ಟು ಮತ್ತು ಹೋರಾಟದ ಮನೋಭಾವದ ದೃಷ್ಟಿ ಯಿಂದ ದಾಖಲಾರ್ಹ ಹೋರಾಟ ಎನ್ನಬಹುದು. ಇದರ ಉದ್ದೇಶವೂ ಬ್ರಿಟಿಷರು ವಿಧಿಸಿದ ಕರದ ನಿರಾಕರಣೆ. ಆಗಿನ ಕಾಲದಲ್ಲಿ ಕೃಷಿಯೇ ದೇಶದ ಜೀವಾಳವಾಗಿತ್ತು. ಬಹುತೇಕ ಮಂದಿ ಕೃಷಿಯನ್ನೇ ಅವಲಂಬಿಸಿದ್ದರು. ಕೃಷಿಗೆ ಕಂದಾಯವನ್ನು ವಿಧಿಸುವುದರ ಮೂಲಕ ಕರಸಂಗ್ರಹಕ್ಕೆ ಬ್ರಿಟಿಷ್‌ ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು. ಬ್ರಿಟಿಷರಿಂದ ನೇಮಿಸಲ್ಪಟ್ಟ ಅಧಿಕಾರಿ ಗಳು ಕರಸಂಗ್ರಹದ ಕುರಿತು ವಿವಿಧ ವರದಿಗಳನ್ನು ಮೇಲಿನ ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದರು.

Advertisement

1837ರ ಕರನಿರಾಕರಣೆಯ ಬಂಡಾಯ :

ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ನಡೆಯಿತು. ಇದಕ್ಕೂ ಇಪ್ಪತ್ತು ವರ್ಷಗಳ ಮೊದಲು ಅಂದರೆ 1837ರಲ್ಲಿ ಬ್ರಿಟಿಷರ ವಿರುದ್ಧ ಕೊಡಗಿನ ಸೇನಾಧಿಪತಿ ಕಲ್ಯಾಣಪ್ಪನ ನೇತೃತ್ವದಲ್ಲಿ ರೈತರು ಬಂಡಾಯ ಏಳುತ್ತಾರೆ. ಇದನ್ನು ಕಲ್ಯಾಣಪ್ಪನ ಕಾಟಕಾಯಿ, ಕೊಡಗು-ಕೆನರಾ ಬಂಡಾಯ, ಅಮರ ಸುಳ್ಯದ ರೈತರ ದಂಗೆ ಮೊದಲಾದ ಹೆಸರುಗಳಿಂದ ಕರೆಯಲಾಗಿದೆ. ಈ ಕ್ರಾಂತಿಗೆ ಒಂದು ಕಾರಣ ಕೊಡಗಿನ ಅರಸು ವೀರ ರಾಜೇಂದ್ರನನ್ನು ಬ್ರಿಟಿಷರು ಪದಚ್ಯುತಿಗೊಳಿಸಿ ಅಮರ, ಪಂಜ, ಬೆಳ್ಳಾರೆ, ಸುಳ್ಯ ಮಾಗಣೆಗಳನ್ನು ಕನ್ನಡ ಜಿಲ್ಲೆಗೆ ಸೇರಿಸಿದುದು. ಇದರೊಂದಿಗೆ ಕರ ಅಥವಾ ಕಂದಾಯವನ್ನು ಧಾನ್ಯದ ಬದಲು ಹಣದ ರೂಪದಲ್ಲಿ ಕೊಡುವಂತೆ ಬ್ರಿಟಿಷ್‌ ಅಧಿಕಾರಿಗಳು ರೈತರ ಮೇಲೆ ಒತ್ತಡ ಹೇರಿದ್ದು.  ಕೊಡಗು ಹಾಗೂ ದ.ಕ. ಜಿಲ್ಲೆಯ ರೈತರು ಇದರಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಕರನಿರಾಕರಣೆಯ ಉಪ್ಪಿನ ಚಳವಳಿ :

ಬ್ರಿಟಿಷರ ವಿರುದ್ಧ ದೇಶದಾದ್ಯಂತ ನಡೆದ ಕರನಿರಾಕರಣೆಯ ಅತೀ ದೊಡ್ಡ ಚಳವಳಿ 1930ರ ಉಪ್ಪಿನ ಸತ್ಯಾಗ್ರಹ. ಮಹಾತ್ಮಾ ಗಾಂಧಿಯವರೇ ಈ ಚಳವಳಿಯ ಪ್ರಮುಖ ರೂವಾರಿ. ಜನಸಾಮಾನ್ಯರು ಉಪಯೋಗಿಸುವ ಉಪ್ಪಿನ ಮೇಲೆ ತೆರಿಗೆಗಳನ್ನು ಬ್ರಿಟಿಷರು ಹೇರುತ್ತಾರೆ. ಇದಲ್ಲದೆ ಬ್ರಿಟಿಷ್‌ ಸರಕಾರದ ಹೊರತು ಬೇರೆ ಯಾರೂ ಉಪ್ಪನ್ನು ತಯಾರಿಸದಂತೆ ಅಥವಾ ಮಾರಾಟ ಮಾಡದಂತೆ ಕಾನೂನನ್ನು ಜಾರಿಗೊಳಿಸುತ್ತಾರೆ. ಅಧಿಕ ಆದಾಯ ಸಂಗ್ರಹದ ಉದ್ದೇಶದಿಂದ‌ ಬ್ರಿಟಿಷ್‌ ಸರಕಾರವು ಜಾರಿಗೆ ತಂದ ಈ ಕಾಯ್ದೆಯಿಂದ ಜನಸಾಮಾನ್ಯನ ಮೇಲೆ ಅಧಿಕ ಆರ್ಥಿಕ ಹೊರೆ ಬೀಳುತ್ತದೆ. ದೇಶದ ಜನರು ಉಪ್ಪನ್ನು ತಯಾರಿಸಲು ಮುಂದಾಗುವ ಮೂಲಕ ಈ ಕಾಯ್ದೆಗೆ ಸಡ್ಡು ಹೊಡೆಯುತ್ತಾರೆ. ಸಾಬರಮತಿಯಿಂದ ದಂಡಿಯವರೆಗೆ ಕಾಲ್ನಡಿಗೆ ಯಲ್ಲಿಯೇ ಹೋರಾಟಗಾರರು ಸುಮಾರು 240 ಮೈಲುಗಳಷ್ಟು ದೂರ ಸಾಗಿ ಬರುತ್ತಾರೆ. ಮಂಗಳೂರು, ಉಡುಪಿ, ಕುಂದಾಪುರ ಭಾಗ ಗಳಲ್ಲೂ ಈ ಚಳವಳಿ ಬಿರುಸಿನಿಂದ ಸಾಗುತ್ತದೆ.

ಕನ್ನಡ ಜಿಲ್ಲೆಯಲ್ಲಿ ರೈತರು ಬ್ರಿಟಿಷರ ಧೋರಣೆ ವಿರುದ್ಧ ನಡೆಸಿದ ಹೋರಾಟವು ಇಲ್ಲಿನ ಜನರ ಒಗ್ಗಟ್ಟು ಮತ್ತು ಹೋರಾಟದ ಮನೋಭಾವಕ್ಕೆ ಉತ್ತಮ ನಿದರ್ಶನ. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ಮರಣೀಯ.

 

-ಡಾ| ಶ್ರೀಕಾಂತ್‌ ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next