Advertisement

ಧಾರವಾಡ ಗ್ರಾಮೀಣ ಬಿಜೆಪಿ ಟಿಕೆಟ್ ಮಿಸ್: ತವನಪ್ಪ ಅಷ್ಟಗಿ ರಾಜೀನಾಮೆ

08:13 PM Apr 12, 2023 | Team Udayavani |

ಧಾರವಾಡ: ಬಿಜೆಪಿ ಪಕ್ಷದ ವರ್ಚಸ್ಸನ್ನೇ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಹಾಳು ಮಾಡಿರುವ ಹಾಲಿ ಶಾಸಕ ಅಮೃತ ದೇಸಾಯಿ ಅವರಿಗೆ ಟಿಕೇಟ್ ನೀಡಲಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಹೊಣೆ ಹೊರವುದು ಬೇಡವೆಂದು ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ನಿಗಮಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ತವನಪ್ಪ ಅಷ್ಟಗಿ ಆಕ್ರೋಶ ಹೊರಹಾಕಿದ್ದಾರೆ.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಆಂತರಿಕವಾಗಿ ಸಮೀಕ್ಷೆ ನಡೆಸಿದಾಗ ಶೇ. ೭೫ರಷ್ಟು ನನ್ನ ಪರ ವರದಿ ಬಂದಿದೆ. ಈ ವಿಚಾರವನ್ನು ಆರ್‌ಎಸ್‌ಎಸ್, ಬಿಜೆಪಿ ಮುಖಂಡರುಗಳೇ ನನಗೆ ಹೇಳಿದ್ದಾರೆ. ಮಂಗಳವಾರ ಸಂಜೆ ವರೆಗೆ ಅಷ್ಟಗಿ ಅವರಿಗೆ ಟಿಕೆಟ್ ಎಂದ ವರಿಷ್ಠರು ಕೊನೆ ಕ್ಷಣದಲ್ಲಿ ಜನರ ಮನಸ್ಸಿನಲ್ಲಿ ಇಲ್ಲದಿರುವ ಅಮೃತ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇದು ನನಗೆ ಹಾಗೂ ರಾಜ್ಯದ ಜೈನ ಸಮುದಾಯಕ್ಕೆ ಬಿಜೆಪಿ ಹೈಕಮಾಂಡ ಮಾಡಿದ ದೊಡ್ಡ ಅನ್ಯಾಯ ಎಂದು ನೋವು ತೋಡಿಕೊಂಡರು.

ಸಿಎಂ ಮಾಡಿದ್ರು, ಇಟ್ಟ ಹೆಜ್ಜೆ ಹಿಂದಿಡಲ್ಲ: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಮೃತ ದೇಸಾಯಿ ಅವರ ಅವನತಿಗೆ ಸ್ವತಃ ಅವರೇ ಕಾರಣ. ಅವರು ಗೆದ್ದಲು ತಿಂದ ಮರದಂತಾಗಿದ್ದಾರೆ. ಅಧಿಕಾರ ಸಿಕ್ಕಾಗ ಅವರು ಸರಿಯಾಗಿ ಆಡಳಿತ ನಡೆಸಲಿಲ್ಲ. ಪ್ರಾಮಾಣಿಕವಾಗಿದ್ದ ನಾನು ಹಣಕ್ಕೆ ಡೀಲ್ ಆಗುವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಮಾಡಿದ್ದೇ ತುಂಬ ಇದೆ ಎಂದು ಭ್ರಷ್ಟಾಚಾರ ನಡೆದಿರುವ ಸುಳಿವು ಕೊಟ್ಟರು. ಜನರು ಈಗ ಅಮೃತ ದೇಸಾಯಿ ವಿರುದ್ಧವಿದ್ದಾರೆ. ಅಂಥವರ ಪರವಾಗಿ ನಾನು ಕೆಲಸ ಮಾಡಲಾರೆ. ನಾನು ಬಿಜೆಪಿಗೆ ರಾಜೀನಾಮೆ ಕೊಟ್ಟಾಗಿದೆ. ಮುಂದೆ ನನ್ನನ್ನು ಸಿಎಂ ಮಾಡುವುದಾಗಿ ಹೇಳಿದರೂ ನಿಲುವು ಬದಲಾಯಿಸಲಾರೆ.

ನನ್ನ ಅಭಿಮಾನಿಗಳ ಸಭೆ ಕರೆದು ಅವರ ಅಣತಿಯಂತೆ ಇದೇ ಚುನಾವಣೆಯಲ್ಲಿ ಸ್ಪಧಿಸಬೇಕೋ ? ಬೇರೆಯವರಿಗೆ ಬೆಂಬಲಿಸಬೇಕೊ ಎಂಬುದನ್ನು ಶೀಘ್ರವೇ ತಿಳಿಸುವುದಾಗಿ ಹೇಳಿದರು.

ಬಿಜೆಪಿಗೆ ಇದು ಶೋಭೆ ತರಲ್ಲ : ಬಿಜೆಪಿ ಪ್ರಕಟಿಸಿದ ೧೮೯ ಕ್ಷೇತ್ರಗಳಲ್ಲಿ ಅಭಯ ಪಾಟೀಲ ಒಬ್ಬರೇ ಜೈನ ಸಮುದಾಯದವರು. ಇಲ್ಲಿ ಸಂಜಯ ಪಾಟೀಲ್ ಸೇರಿದಂತೆ ನನ್ನಂತ ಹಲವರಿಗೆ ಟಿಕೆಟ್ ತಪ್ಪಿಸಲಾಗಿದೆ. ಎಲ್ಲದಕ್ಕೂ ಜಾತಿ, ಹಣದ ಲೆಕ್ಕ ಹಾಕಿ ಅವಮಾನ ಮಾಡಲಾಗಿದೆ ಎಂದು ಕಿಡಿ ಕಾರಿದರು.

Advertisement

ದತ್ತಾ ಡೋರ್ಲೆ, ಶಂಕ್ರಯ್ಯ ಮಠಪತಿ, ಕಸ್ತೂರಿ ಅಷ್ಟಗಿ, ಚಂದ್ರಗೌಡ ಬೊಮ್ಮನಗೌಡ್ರ, ನಿಂಗಪ್ಪ ಸಪೂರಿ, ಬಸಲಿಂಗಪ್ಪ ಮಂಗಳಗಟ್ಟಿ, ಮಲ್ಲನಗೌಡ ಗೌಡ್ರ, ಹನುಮಂತ ಮಾದರ, ಲಕ್ಷ್ಮಿ ಹೊಸಮನಿ, ಮಲ್ಲೇಶ ಲಂಗೋಟಿ, ಉಮೇಶ ಅಂಗಡಿ, ಸಚಿನ ಕದಂ ಸೇರಿದಂತೆ ಮತ್ತಿತರರು ಸುದ್ದಿಗೋಷ್ಟಿಯಲ್ಲಿದ್ದರು.

ಮಡಿವಾಳಜ್ಜ ನೋಡಿಕೊಳ್ಳಲಿ :ಅಷ್ಟಗಿ ಶಾಪ
ಕ್ಷೇತ್ರದಲ್ಲಿ ಎ.ಬಿ ದೇಸಾಯಿ ೪ಬಾರಿ, ಅಮೃತ ದೇಸಾಯಿ ೨ ಬಾರಿ ಸೋತಿದ್ದರು. ಹೀಗಾಗಿ ೨೦೧೮ರಲ್ಲಿ ಅಮೃತ ದೇಸಾಯಿ ಗೆಲುವಿಗೆ ನಾವು ತನು, ಮನ, ಧನದಿಂದ ದುಡಿದಿದ್ದೇನೆ. ಆಗ ಎಂಎಲ್‌ಸಿ ಮಾಡುವುದಾಗಿ ಭರವಸೆ ಕೊಟ್ಟಿದ್ದ ಬಸವರಾಜ ಬೊಮ್ಮಾಯಿ ಮಾತು ತಪ್ಪಿದರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲೂ ಪೀಡಿಸಿದರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈ ಕಮಾಂಡ ಹಾಗೂ ಶಾಸಕ ಅಮೃತ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಶಾಸಕರು ನನಗೆ ತುಂಬ ಅನ್ಯಾಯ ಮಾಡಿದ್ದಾರೆ. ಅವರನ್ನು ಗರಗದ ಮಡಿವಾಳ ಅಜ್ಜನೇ ನೋಡಿಕೊಳ್ಳಲಿ. ನಾನು ತಪ್ಪು ಮಾಡಿದ್ದರೆ ನನ್ನನ್ನು ನೋಡಿಕೊಳ್ಳಲಿ ಎಂದು ಅಷ್ಟಗಿ ಮಾರ್ಮಿಕವಾಗಿ ನುಡಿದು, ಬಹಿರಂಗವಾಗಿ ಶಪಿಸಿದರು.

ಶೆಟ್ಟರ್‌ಗೆ ಅಪಮಾನ : ಬಿಜೆಪಿ ಸೋಲು
ಉತ್ತರ ಕರ್ನಾಟಕ ಭಾಗದ ಹೆಮ್ಮೆಯ ನಾಯಕ ಮಾಜಿ ಸಿಎಂ ಜಗದೀಶ ಶೆಟ್ಟರ್‌ಅವರಂತವರಿಗೆ ಟಿಕೆಟ್ ಘೋಷಣೆ ಮಾಡದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.ಇನ್ನು ಅಮೃತ ದೇಸಾಯಿ ಅವರ ಸೋಲು ಪಕ್ಕಾ ಆಗಿದೆ.ಅವರ ಸೋಲನ್ನು ನನ್ನ ಮೇಲೆ ಹಾಕಬಾರದು ಎಂದು ಬಿಜೆಪಿ ರಾಜೀನಾಮೆ ಕೊಟ್ಟಿದ್ದೇನೆ.
-ತವನಪ್ಪ ಅಷ್ಟಗಿ,ಜೈನ್ ಸಮುದಾಯದ ಮುಖಂಡ

ಇದನ್ನೂ ಓದಿ: ನಾನು ಯಾವುದೇ ಲಾಭಿಯ ಹಿಂದಿಲ್ಲ, ಇದು ನನ್ನ ಕೊನೆಯ ಚುನಾವಣೆ: ಸಿ.ಹೆಚ್.ವಿಜಯಶಂಕರ್

Advertisement

Udayavani is now on Telegram. Click here to join our channel and stay updated with the latest news.

Next