Advertisement

ಪಕ್ಷಗಳ ಸ್ಥಳೀಯ ನಾಯಕರಿಗೂ ನೀಡಲಾಗುತ್ತದೆ ಟಾರ್ಗೆಟ್‌!

09:15 AM Apr 18, 2018 | Karthik A |

ಬಜಪೆ: ಕೊಟ್ಟ ಟಾರ್ಗೆಟ್‌ ತಲುಪಲೇಬೇಕು… ಶೇ. 100 ಫ‌ಲಿತಾಂಶ ಸಾಧಿಸಲೇಬೇಕು… ಅರೆ ! ಇದೇನಿದು ಖಾಸಗಿ ಉದ್ಯಮವೋ ಅಥವಾ ಶಿಕ್ಷಣ ಸಂಸ್ಥೆಯೋ ಎಂದು ಭಾವಿಸಬೇಕಿಲ್ಲ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ  ಪಕ್ಷಗಳ ಸ್ಥಳೀಯ ನಾಯಕರಿಗೆ ಇರುವ ಟಾರ್ಗೆಟ್‌. ಖಾಸಗಿ ಉದ್ದಿಮೆಗಳಿಗೂ ರಾಜಕೀಯ ಪಕ್ಷಗಳಿಗೂ ಇಲ್ಲಿ ಒಂದು ಸಾಮ್ಯತೆ ಇದೆ. ದೊಡ್ಡ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಟಾರ್ಗೆಟ್‌ ಒಂದನ್ನು ನೀಡಿ ಅದನ್ನು ಪೂರೈಸಿದರೆ ಮಾತ್ರ ಭಡ್ತಿ; ಇಲ್ಲದಿದ್ದಲ್ಲಿ ಬೇರೆಯವರಿಗೆ ಅವಕಾಶ ನೀಡಲಾಗುತ್ತದೆ ಎನ್ನುತ್ತವೆ. ಅದೇ ರೀತಿ ರಾಜಕೀಯ ಪಕ್ಷಗಳೂ ಈಗ ಸ್ಥಳೀಯ ಮಟ್ಟದಲ್ಲಿಯೇ ಪಕ್ಷದ ನಾಯಕರಿಗೆ ಟಾರ್ಗೆಟ್‌ ಕೊಟ್ಟಿವೆಯಂತೆ.

Advertisement

ಪಕ್ಷಗಳು ಪ್ರತಿ ಬೂತ್‌ ಮಟ್ಟದಲ್ಲಿ ಒಬೊಬ್ಬ ನಾಯಕರನ್ನು ನೇಮಿಸಿವೆ. ಆ ಜವಾಬ್ದಾರಿಯನ್ನು ಆತ ಹೇಗೆ ನಿಭಾಯಿಸುತ್ತಾನೆ ಎಂಬುದರ ಮೇಲೆ ಆತನ ಮುಂದಿನ ರಾಜಕೀಯ ಬದುಕು ನಿರ್ಣಯವಾಗುತ್ತದೆ. ಅಲ್ಲಿ ಪಕ್ಷ ಹೆಚ್ಚಿನ ಮತವನ್ನು ಗಳಿಸಲು ಸಾಧ್ಯವಾದರೆ ಅದು ಪಕ್ಷದ ನಾಯಕರ ಗಮನ ಸೆಳೆಯುವಲ್ಲಿ, ಮುಂದೆ ರಾಜಕೀಯದಲ್ಲಿ ಭಡ್ತಿ ಪಡೆಯಲು ಒಂದು ಅವಕಾಶ ಅವನಿಗೆ ಒದಗಿಬರುತ್ತದೆ.

ಪಕ್ಷಗಳಿಗೆ ಬೇಕಾಗಿದೆ ಮತ ಗಳಿಕೆ
ಬೇರೆ ಪಕ್ಷಗಳಿಂದ ನಾಯಕರನ್ನು, ಕಾರ್ಯಕರ್ತರನ್ನು ಪಕ್ಷಾಂತರವಾದರೂ ಮಾಡಿಸಿಕೊಳ್ಳಬಹುದು ಅಥವಾ ತಮ್ಮದೇ ಬುದ್ಧಿಮತ್ತೆ ಬಳಸಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಬಹುದು. ಒಟ್ಟಾರೆ ಪಕ್ಷವನ್ನು ಗೆಲ್ಲಿಸಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಬೇಕು ಎಂಬುದು ಪಕ್ಷಗಳ ಸ್ಥಳೀಯ ನಾಯಕರ ಮುಂದಿರುವ ಟಾರ್ಗೆಟ್‌.

ಯುವಕರ ಬೆಂಬಲ ಇರುವ ಯಾವುದೇ ಸಂಘ – ಸಂಸ್ಥೆಗಳ ನಾಯಕರನ್ನು ಸೆಳೆಯಲು ಪಕ್ಷಗಳು ಈಗ ಬಯಸುತ್ತವೆ. ಯಾವುದೇ ಪಕ್ಷಗಳಲ್ಲಿ ಸಕ್ರಿಯವಾಗಿರದ ನಾಯಕರನ್ನು ಸೆಳೆಯಲು ಹಲವಾರು ತಂತ್ರಗಳನ್ನು ಹೆಣೆಯಲಾಗುತ್ತದೆ. ಇದಕ್ಕಾಗಿ ಪಕ್ಷಗಳು ಏನನ್ನೂ ಮಾಡಲು ತಯಾರಾಗಿವೆ. ಜಾತಿ, ಸಮುದಾಯಗಳ ಬಗ್ಗೆ ಸಮೀಕ್ಷೆಗಳನ್ನು ಮಾಡಿ ಎಲ್ಲಿ ಯಾವ ಪ್ರಾಬಲ್ಯ ಇದೆಯೋ ಅಲ್ಲಿಗೆ ಅದೇ ಜಾತಿ, ಸಮುದಾಯದವರನ್ನು ನಾಯಕರಾಗಿ ನೇಮಿಸಲಾಗಿದೆ.

ಒಂದು ಕಾಲದಲ್ಲಿ ಸ್ಥಳೀಯ ಮಟ್ಟದಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳೇ ಸಿಗದ ಸಂದರ್ಭವೂ ಇತ್ತು. ಮೀಸಲಾತಿ ಬಂದ ಸಂದರ್ಭದಲ್ಲಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿ ಒತ್ತಾಯದ ಮೇರೆಗೆ ಕರೆತಂದು ನಿಲ್ಲಿಸುವ ಪರಿಸ್ಥಿತಿಯೂ ಇತ್ತು. ಅದರಲ್ಲೂ ಮಹಿಳೆಯರು, ಪರಿಶಿಷ್ಟ ಪಂಗಡದ ಮೀಸಲಾತಿ ಇರುವಲ್ಲಿ ಆಕಾಂಕ್ಷಿಗಳನ್ನು ಹುಡುಕುವುದೇ ಸವಾಲಾಗಿತ್ತು. ಸ್ಪರ್ಧಿಗಳು ಸಿಗದೇ ಸ್ಥಳೀಯ ಮಟ್ಟದಲ್ಲಿ ಅವಿರೋಧ ಆಯ್ಕೆಗಳು ಹಲವೆಡೆ ನಡೆದಿದ್ದವು. ಬಳಿಕ ಪಕ್ಷಗಳು ಸ್ಥಳೀಯ ಮಟ್ಟದಲ್ಲಿ ಸಮರ್ಥರನ್ನು ಗುರುತಿಸಿ ಮೀಸಲಾತಿಗೆ ಅನುಗುಣವಾಗಿ ನಾಯಕ, ನಾಯಕಿರನ್ನು ಬೆಳೆಸಿದವು.

Advertisement

ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆ, ಅಲ್ಪಸಂಖ್ಯಾಕ ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಅವರಿಗೆ ಜಾವಾಬ್ದಾರಿ ಹಂಚಲಾಗಿದೆ. ಇದು ಸ್ಥಳೀಯ ಮಟ್ಟದಲ್ಲಿ ಪಕ್ಷ ಬೆಳೆಸಲು ಸಹಕಾರಿಯಾಗಿದೆ. ಅವರು ತಮ್ಮ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸುವ ಪಕ್ಷಗಳ ಸಂಘಟನೆ ಮಾಡಿದರು. ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ನಾಯಕ ಜತೆ ಸಂಪರ್ಕವೂ ಸಾಧ್ಯವಾಯಿತು.

ಈಗ ಎಲ್ಲ ಪಕ್ಷಗಳೂ ಸ್ಥಳೀಯವಾಗಿ ಬಲಗೊಂಡಿವೆ. ಸ್ಪರ್ಧೆಯೂ ತುರುಸಾಗಿದೆ. ಅವನಲ್ಲದಿದ್ದರೆ ಇನ್ನೊಬ್ಬ ಎಂಬಂತೆ ಯಾರಾದರೊಬ್ಬ ನಾಯಕ ಪಕ್ಷಗಳಿಗೆ ಸಿಗುತ್ತಾನೆ. ಸ್ಥಳೀಯವಾಗಿ ನಾಯಕಿಯರೂ ಹುಟ್ಟಿಕೊಂಡಿದ್ದಾರೆ. ಅವರು ಈಗ ಪಕ್ಷಗಳಿಗೆ ಬೇಕಾದ ಭಾಷಣ ಬಿಗಿಯಲು ಕಲಿತಿದ್ದಾರೆ. ಯೋಜನೆಗಳು-ಯೋಚನೆಗಳು ಅವರಲ್ಲಿ ಸಿದ್ಧವಾಗಿವೆ. ಇದರಿಂದ ಮತ ಗಳಿಕೆ ಪಕ್ಷಗಳಿಗೆ ಹೆಚ್ಚು ಅನುಕೂಲವಾಗಿದೆ.

— ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next