Advertisement

ಕರಾವಳಿಯಲ್ಲಿ ತಾರಾ ಪ್ರಚಾರ ಶುರು!

09:20 AM Apr 05, 2019 | keerthan |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕಣ ಚುರುಕು ಪಡೆಯುತ್ತಿದ್ದಂತೆ, ಬಿಜೆಪಿಯ ಸ್ಟಾರ್‌ ಪ್ರಚಾರಕಿ ತಾರಾ ಅನುರಾಧಾ ಅವರು ಗುರುವಾರ ನಗರದ ಕೇಂದ್ರ ಮೀನು ಮಾರುಕಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಪರವಾಗಿ ಮತಯಾಚಿಸಿದರು.

Advertisement

ತಾರಾಗೆ ಮುಟ್ಟಾಳೆ ತೊಡಿಸಿ, ಕೇಸರಿ ಶಾಲು ಹಾಕಿ ಸ್ವಾಗತಿಸಲಾಯಿತು. ಶಾಸಕ ವೇದವ್ಯಾಸ ಕಾಮತ್‌, ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ.ಕೆ. ಭಟ್‌, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ, ರೂಪಾ ಬಂಗೇರ ಉಪಸ್ಥಿತರಿದ್ದರು. ಸುಮಾರು ಅರ್ಧ ಗಂಟೆ ಕಾಲ ತಾರಾ ಸಂವಾದ ನಡೆಸಿದರು.

ಕೇಂದ್ರ ಮೀನು ಮಾರುಕಟ್ಟೆಯಲ್ಲಿ ಮತಯಾಚನೆ ವೇಳೆ ಮೀನುಗಾರ ಮಹಿಳೆಯರು ಮಾರುಕಟ್ಟೆಯ ದುರವಸ್ಥೆ ಬಗ್ಗೆ ತಾರಾ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ತಾರಾ, ಚುನಾವಣೆ ಮುಗಿದ ಬಳಿಕ ಈ ಸಮಸ್ಯೆಗೆ ಶಾಸಕರು ಪರಿಹಾರ ದೊರಕಿಸಲಿದ್ದಾರೆ. ರಾಜ್ಯದಲ್ಲೂ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ ಎಂದರು.  ಮೀನು ಮಾರಾಟ ಮಾಡುವ ಸ್ಥಳದಲ್ಲಿ ಸಾಗಿದ ತಾರಾ, ಮೋದಿ ಮತ್ತು ಬಿಜೆಪಿ ಬೆಂಬಲಿಸುವಂತೆ ವಿನಂತಿಸಿದರು.

ಮೋದಿ ಪ್ರಧಾನಿ ಆಗುತ್ತಾರಾ?
ಮೀನುಗಾರ ಮಹಿಳೆಯರ ಜತೆಗೆ ಮಾತನಾಡುವ ವೇಳೆ ಹಿರಿಯ ಮೀನುಗಾರ ಮಹಿಳೆ ರುಕ್ಮಿಣಿ ಬೋಳೂರು ಅವರು ತಾರಾ ಅವರ ಕಿವಿಯಲ್ಲಿ, ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವಾ ಎಂದು ಮೆಲ್ಲಗೆ ಕೇಳಿದರು. ಇದಕ್ಕೆ ಮೋದಿ ಮತ್ತೆ ಗೆಲ್ಲುತ್ತಾರೆ-ಪ್ರಧಾನಿ ಆಗುತ್ತಾರೆ ಎಂದು ತಾರಾ ಪಿಸುನುಡಿದರು. ರುಕ್ಮಿಣಿ ನಕ್ಕು ಧನ್ಯವಾದ ಸಲ್ಲಿಸಿದರು.

ಎ.9: ಮೀನುಗಾರರ ಸಮಾವೇಶ
ಚುನಾವಣೆ ಹಿನ್ನೆಲೆಯಲ್ಲಿ ಎ.9ರಂದು ಮಂಗಳೂರು ಪುರಭವನದಲ್ಲಿ ಬಿಜೆಪಿಯಿಂದ ಮೀನುಗಾರರ ಸಮಾವೇಶವನ್ನು ಆಯೋಜಿಸಲಾಗಿದೆ. ಮೀನುಗಾರ ಪ್ರಮುಖರು ಮತ್ತು ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಇದರಲ್ಲಿ ಮೀನುಗಾರರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಬಿಜೆಪಿ ಮುಖಂಡರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next