Advertisement

ನೋಟು ಬದಲಾವಣೆಗೆ ಯತ್ನಿಸುತ್ತಿದ್ದ ತಮಿಳುನಾಡಿನ ಐವರ ಬಂಧನ

12:41 PM Jun 06, 2017 | Team Udayavani |

ಬೆಂಗಳೂರು: ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಸಿದ್ಧತೆ ನಡೆಸಿದ್ದ ತಮಿಳುನಾಡಿನ ನಾಲ್ವರು ಸೇರಿದಂತೆ ಐವರನ್ನು ಕಬ್ಬನ್‌ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಕಿಶೋರ್‌, ಡೈಮಂಡ್‌ ರಾಜು, ಶರವಣ, ಸತ್ಯನಾರಾಯಣ ಮತ್ತು ಬೆಂಗಳೂರಿನ ರಾಜಗೋಪಾಲ್‌ ಬಂಧಿತರು.

Advertisement

ಅಮಾನ್ಯಗೊಂಡ ಒಂದು ಸಾವಿರ ಮುಖ ಬೆಲೆಯ 2.5 ಕೋಟಿ ರೂ. ನೋಟುಗಳನ್ನು ಇವರಿಂದ ವಶಕ್ಕೆ ಪಡೆಯಲಾಗಿದೆ. ಮತ್ತೂಬ್ಬ ಆರೋಪಿ ಮುರಳಿ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ, ನಿವೃತ್ತ ಎಂಜಿನಿಯರ್‌ ಮುರುಳಿಗೆ ಕರೆ ಮಾಡಿದ್ದ ಸದ್ಯ ಬಂಧನಲ್ಲಿರುವ ಆರೋಪಿಗಳೂ ಶೇ.30ರಷ್ಟು ಕಮಿಷನ್‌ ಪಡೆದು ನೋಟುಗಳ ಬದಲಾವಣೆಗೆ ಕೇಳಿಕೊಂಡಿದ್ದರು.

ಅದರಂತೆ ಬೆಂಗಳೂರಿಗೆ ಬರುವಂತೆ ಮುರುಳಿ ಸೂಚಿಸಿದ್ದ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ತಮಿಳುನಾಡಿನಿಂದ ಹೊರಟು ಸೋಮವಾರ ಬೆಂಗಳೂರಿನ ಸೇಂಟ್‌ ಮಾರ್ಕ್ಸ್ ಆಸ್ಪತ್ರೆ ಬಳಿ ನೋಟುಗಳ ಬದಲಾವಣೆಗೆ ಸಿದ್ಧತೆ ನಡೆಸಿದ್ದರು. ಚೆನ್ನೈನಿಂದ ಚರ್ಚ್‌ ಸ್ಟ್ರೀಟ್‌ನ ಎಂಪೈರ್‌ ಹೊಟೆಲ್‌ಗೆ ಬಂದಿದ್ದ ಆರೋಪಿಗಳು ಊಟ ಮಾಡುತ್ತಾ, ನೋಟು ಬದಲಾವಣೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಪೊಲೀಸ್‌ ಬಾತ್ಮೀದಾರರು ಮಾಹಿತಿ ಪಡೆದು ಪೊಲೀಸರಿಗೆ ತಿಳಿಸಿದ್ದಾರೆ.

ಹೋಟೆಲ್‌ ಹೊರಗೆ ತಮಿಳುನಾಡು ನೊಂದಣಿಯ ಕಾರು ನಿಂತಿದೆ ಎಂದು ಮಾಹಿತಿದಾರರು ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಕಬ್ಬನ್‌ ಪಾರ್ಕ್‌ ಠಾಣೆಯ ಸಿಬ್ಬಂದಿ ಮಾರುವೇಶದಲ್ಲಿ ದಾಳಿ ನಡೆಸಿ ಆರೋಪಿಗಳು ಮತ್ತು ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸ್ಪೆಸಿಫೈಡ್‌ ನೋಟ್ಸ್‌ ಆಕ್ಟ್ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next