Advertisement

ತಾಲೂಕಿನಲ್ಲಿ ಕಸಾಪ ಭವನ ನಿರ್ಮಾಣ: ರಾಜ್ಯದಲ್ಲೇ ಮೊದಲ ಭೂ ಮಂಜೂರಾತಿ ಪಡೆದ ಪಿರಿಯಾಪಟ್ಟಣ

06:52 PM Jul 18, 2022 | Team Udayavani |

ಪಿರಿಯಾಪಟ್ಟಣ: ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕಾಗಿ ಸರ್ಕಾರ ರಾಜ್ಯದಲ್ಲೇ ಮೊದಲ ಬಾರಿಗೆ ಭೂ ಮಂಜೂರಾತಿ ಮಾಡುವ ಮೂಲಕ ಕನ್ನಡ ನಾಡು-ನುಡಿ ಸಾಹಿತ್ಯ, ಸಂಸ್ಕೃತಿ ಸಂವರ್ಧನೆಯ ಮಹತ್ಕಾರ್ಯದ ಹೊಸ ಇತಿಹಾಸಕ್ಕೆ ನಾಂದಿಯಾಗಿದೆ.

Advertisement

ಪಿರಿಯಾಪಟ್ಟಣ ತಾಲೂಕು ಕಸಾಪಕ್ಕೆ ತನ್ನದೇ ಆದ ಇತಿಹಾಸವಿದೆ. ರಾಜ್ಯದಲ್ಲಿ ಅನೇಕ ವಿಭಿನ್ನ ಕಾರ್ಯಚಟುವಟಿಕೆಗಳ ಮೂಲಕ ರಾಜ್ಯದ ಗಮನ ಸೆಳೆಯುತ್ತಾ ಬಂದಿದೆ. ರಾಜ್ಯದಲ್ಲಿ  ಮೊದಲ ಬಾರಿಗೆ 2012ನೇ ಇಸವಿಯಲ್ಲಿ ಮಿನಿವಿಧಾನ ಸೌಧಕ್ಕೆ ಪರ್ಯಾಯವಾಗಿ ತಾಲೂಕು ಆಡಳಿತ ಭವನ ನಾಮಕರಣ ಮಾಡಿದ್ದು, ಇದು ಈಗ ಸರ್ಕಾರದ ಆದೇಶವಾಗಿ ಮಾರ್ಪಟ್ಟಿದೆ. ಸಾಹಿತ್ಯ ಪರಿಷತ್ತಿನ ಮೊದಲ ಗ್ರಾಮ ಘಟಕ ಆರಂಭ, ಗ್ರಾಮೀಣ ಪ್ರದೇಶದಲ್ಲಿ ಕುವೆಂಪು ಪ್ರತಿಮೆಗಳ ಅನಾವರಣ, ರಸ್ತೆ ವೃತ್ತಗಳಿಗೆ ಸಾಹಿತಿ, ಕವಿಗಳ ಹೆಸರಿಡುವುದು, ಸೇರಿದಂತೆ ಅನೇಕ ಮೊದಲುಗಳಿಗೆ ಕಸಾಪ ತಾ.ಘಟಕ ಕಾರಣವಾಗಿದೆ.

ರಾಜ್ಯಾಧ್ಯಕ್ಷರ ಆಶಯಕ್ಕೆ ಇಂಬು:

ನೂತನ ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್‌ಜೋಷಿ ಅವರ ಆಶಯದಂತೆ ಶ್ರೀಸಾಮಾನ್ಯನ ಕಡೆಗೆ ಸಾಹಿತ್ಯ ಪರಿಷತ್ತಿನ ನಡಿಗೆ ಎಂಬ ಘೋಷವಾಕ್ಯದಡಿ ಪ್ರತಿ ತಾಲೂಕಿನಲ್ಲಿ ಸಾಹಿತ್ಯ ಭವನ ನಿರ್ಮಾಣವಾಗಬೇಕೆಂಬ ಆಶಯವನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದ್ದರು. ಇದರಂತೆ ರಾಜ್ಯದಲ್ಲಿ ಮೊದಲ ಬಾರಿಗೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಕಸಾಪಗೆ ಸರ್ಕಾರ ಭೂ ಮಂಜೂರಾತಿ ಮಾಡುವ ಮೂಲಕ ಗ್ರಾಮಾಂತರ ಭಾಗದಲ್ಲಿ ತಾಲೂಕಿನ ಮೊದಲ ಸಾಹಿತ್ಯ ಭವನ ನಿರ್ಮಾಣಕ್ಕೆ ಚಾಲನೆ ಸಿಗಲಿದೆ.

3 ಜಾಗ ಗುಂಟೆ ಮಂಜೂರು:

Advertisement

ಪಿರಿಯಾಪಟ್ಟಣ ಕಸಾಪ ಭವನ ನಿರ್ಮಾಣಕ್ಕಾಗಿ 2020 ಜನವರಿಯಿಂದ ಹೋರಾಟ ನಡೆಸಲಾಗುತ್ತಿತ್ತು. ಅಂತಿಮವಾಗಿ ಪಟ್ಟಣದ ಹೃದಯಭಾಗದಲ್ಲಿ ಸರ್ವೇ. 137/1ಎ ರಲ್ಲಿ ಮೂರುಗುಂಟೆ ನಿವೇಶನವನ್ನು ಶಾಸಕ ಕೆ.ಮಹದೇವ್ ಸೂಚನೆಯಂತೆ ಗುರುತಿಸಿ ಸರಕಾರಕ್ಕೆ ಅನುಮೋದನೆಗೆ ಕಳುಹಿಸಲಾಯಿತು.

ಕ್ಯಾಬಿನೆಟ್ ಒಪ್ಪಿಗೆ:

ಸರ್ಕಾರೇತರ ಸಂಸ್ಥೆಯಾದ ಕಸಾಪಗೆ ತಾಲೂಕು ಮಟ್ಟದಲ್ಲಿ ಸಾಹಿತ್ಯ ಭವನ ನಿರ್ಮಾಣದ ಉದ್ದೇಶಕ್ಕಾಗಿ ಕಡತ ವಿಲೇವಾರಿ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜಯರಾಮರಾಜೇ ಅರಸ್ ಸರ್ಕಾರದ ಅಧಿಕಾರಿಗಳಿಗೆ ಸಾಹಿತ್ಯ ಭವನದ ಅಗತ್ಯತೆಯ ಬಗ್ಗೆ ಮನದಟ್ಟು ಮಾಡಿಕೊಟ್ಟ ಪರಿಣಾಮ ಮತ್ತು ಶಾಸಕ ಕೆ.ಮಹದೇವ್ ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ವಿಶೇಷ ಮನವಿ ಮಾಡಿದ್ದರಿಂದ ಈ ಜಮೀನು ಮಂಜೂರಾತಿ ಕ್ಯಾಬಿನೆಟ್ ಸಭೆಯಲ್ಲಿ ವಿಶೇಷ ವಿಚಾರವಾಗಿ ಪ್ರಸ್ತಾಪವಾಗಿ ಅನುಮೋದನೆ ದೊರಕಿದೆ.

ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಬೇಕೆಂಬ ಮಹದಾಸೆಗೆ ಪಿರಿಯಾಪಟ್ಟಣ ಕಸಾಪ ಮೊದಲ ಅಡಿ ಇಡುತ್ತಿದ್ದು ನಿವೇಶನ ಕಸಾಪಗೆ ನೋಂದಣಿಯಾದ ತಕ್ಷಣ ಶೀಘ್ರದಲ್ಲಿ ಭವನ ನಿರ್ಮಾಣಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳುಂತೆ ಶಾಸಕ ಕೆ.ಮಹದೇವ್ ತಾಲೂಕು ಅಧ್ಯಕ್ಷ ನವೀನ್‌ಕುಮಾರ್‌ಗೆ  ಸೂಚಿಸಿದ್ದಾರೆ.

ರಾಜ್ಯದಲ್ಲೇ ಮೊದಲ ಬಾರಿಗೆ ತಾಲೂಕು ಹಂತದಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿ ಸಹಕಾರ ನೀಡಿದ ಮಾನ್ಯ ಮುಖ್ಯಮಂತ್ರಿಗಳು, ಕಂದಾಯ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಲ್ಲರ ಆಶಯದಂತೆ ತಾಲೂಕಿನಲ್ಲಿ ಮಾದರಿ ಕನ್ನಡ ಭವನ ನಿರ್ಮಾಣವಾಗಲು ಎಲ್ಲರೂ ಕೈಜೋಡಿಸಬೇಕಿದೆ. -ಕೆ.ಮಹದೇವ್ ಶಾಸಕರು ಪಿರಿಯಾಪಟ್ಟಣ.

ಸಾಹಿತ್ಯ ಭವನ ನಿವೇಶನಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿದ ಜಿಲ್ಲಾ, ತಾಲೂಕು ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ ಭವನ ನಿರ್ಮಾಣಕ್ಕೆ ಅಗತ್ಯ ಆರ್ಥಿಕ ನೆರವು ನೀಡಲಾಗುವುದು. -ಡಾ. ಮಹೇಶ್‌ಜೋಷಿ, ರಾಜ್ಯಾಧ್ಯಕ್ಷರು ಕಸಾಪ.

ಜಿಲ್ಲಾ ಕೇಂದ್ರಗಳಂತೆ ತಾಲೂಕು ಕೇಂದ್ರಗಳು ಸ್ವಂತ ಕಟ್ಟಡ ಹೊಂದಬೇಕು ಎಂಬುದು ರಾಜ್ಯಾಧ್ಯಕ್ಷರು ಚಿಂತನೆಯಾಗಿದ್ದು. ಇದರಂತೆ ಜಿಲ್ಲೆಯಲ್ಲಿ ಮೊದಲು ನಿವೇಶನ ಮಂಜೂರಾಗಿರುವುದು ಸಂತಸ ತಂದಿದೆ.-ಗೊರಳ್ಳಿಜಗದೀಶ್ ನಿಕಟಪೂರ್ವ ಅಧ್ಯಕ್ಷರು

ಪಿರಿಯಾಪಟ್ಟಣದಲ್ಲಿ ತಾಲೂಕು ಮಟ್ಟದಲ್ಲಿಯೂ ಸಾಹಿತ್ಯ ಭವನಗಳು ನಿರ್ಮಾಣವಾಗಬೇಕು ಎಂಬ ಹಲವು ವರ್ಷಗಳ ಹೋರಾಟಕ್ಕೆ ಫಲದೊರಕಿದೆ. ಇದಕ್ಕೆ ಸಹಕರಿಸಿದ ಶಾಸಕ ಕೆ.ಮಹದೇವ್, ಕಸಾಪ ಪದಾಧಿಕಾರಿಗಳಿಗೆ ಅಭಿನಂದನೆಗಳು,  ರೂ.1 ಕೋಟಿ ವೆಚ್ಚದಲ್ಲಿ ಮಾದರಿ ಸಾಹಿತ್ಯ ಭವನ ನಿರ್ಮಾಣಮಾಡಬೇಕಾಗಿದೆ ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. – ನವೀನ್ ಕುಮಾರ ಕಸಾಪ ತಾ.ಅಧ್ಯಕ್ಷರು

-ಪಿಎನ್.ದೇವೇಗೌಡ ಪಿರಿಯಾಪಟ್ಟಣ

Advertisement

Udayavani is now on Telegram. Click here to join our channel and stay updated with the latest news.

Next