Advertisement

ಖೂಬಾ-ಖಾಶೆಂಪೂರ ವಾಗ್ವಾದ

09:12 AM Jun 04, 2019 | Suhan S |

ಬೀದರ: ಜಿಲ್ಲಾ ಪಂಚಾಯತನಲ್ಲಿ ನಡೆದ ಬರ ಪರಿಶೀಲನೆ ಸಭೆಯಲ್ಲಿ ಬರ ಪರಿಹಾರ‌, ಬೆಳೆ ವಿಮೆ, ಕಬ್ಬಿನ ಬಾಕಿ ಹಣ ಪಾವತಿ ವಿಷಯಗಳ ಕುರಿತು ಸಂಸದ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಮಧ್ಯೆ ವಾಗ್ವಾದ ನಡೆಯಿತು.

Advertisement

ಕಳೆದ ವರ್ಷ ಬೆಳೆ ಹಾನಿ ಸಂಭವಿಸಿದ ರೈತರಿಗೆ ಎಷ್ಟು ಪ್ರಮಾಣದ ಪರಿಹಾರ ಪ್ರಸ್ತಾವನೆ ಸಲ್ಲಿಸಲಾಗಿದೆ? ಯಾವ ಕಾರಣಕ್ಕೆ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ಸಂಸದ ಖೂಬಾ ಕೃಷಿ ಅಧಿಕಾರಿಗಳಿಗೆ ಪ್ರಶ್ನಿಸಿದರು. ಕೃಷಿ ಅಧಿಕಾರಿ ಮಾತನಾಡಿ, ಹಿಂಗಾರು ಬೆಳೆಗಳ ಸುಮಾರು 51 ಕೋಟಿ ರೂ. ಬೆಳೆಹಾನಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನೂ ಪರಿಹಾರ ಹಣ ಬಂದಿಲ್ಲ ಎಂದು ಮಾಹಿತಿ ನೀಡಿದರು. ಮಧ್ಯ ಮಾತನಾಡಿದ ಸಚಿವ ಬಂಡೆಪ್ಪ ಖಾಶೆಂಪೂರ, ಬರ ಪರಿಹಾರ ಕೇಂದ್ರ ಸರ್ಕಾರದಿಂದ ಬರಬೇಕು. ಅಲ್ಲಿಂದ ಬಂದ ನಂತರ ರೈತರಿಗೆ ನೀಡಲಾಗುತ್ತದೆ ಎಂದರು.

ಈ ವೇಳೆ ಎಂಎಲ್ಸಿ ರಘುನಾಥರಾವ್‌ ಮಲ್ಕಾಪೂರೆ ಮಾತನಾಡಿ, ರೈತರ ಸರ್ಕಾರ ಎಂದು ಹೇಳುತ್ತೀರಿ, ಮೊದಲು ರೈತರಿಗೆ ಹಣ ಪಾವತಿ ಮಾಡಬೇಕು. ನಂತರ ಕೇಂದ್ರದಿಂದ ಬರುವ ಹಣವನ್ನು ಸರ್ಕಾರ ಪಡೆದುಕೊಳ್ಳಬೇಕು ಎಂದರು. ಇದಕ್ಕೆ ಸಚಿವ ಬಂಡೆಪ್ಪ ಖಾಶೆಂಪೂರ ಸರ್ಕಾರ ನಿಯಮಗಳಂತೆ ಕೆಲಸ ನಡೆಯುತ್ತದೆ. ಇದು ರಾಜ್ಯಮಟ್ಟದ ಸಮಸ್ಯೆ ಇದೆ ಎಂದರು.

ನಂತರ ಬೆಳೆ ಪರಿಹಾರ ವಿಷಯ ಪ್ರಸ್ತಾಪಗೊಂಡಿದ್ದು, ಸಂಸದ ಭಗವಂತ ಖೂಬಾ ರಾಜ್ಯ ಸರ್ಕಾರದ ವೈಫಲ್ಯದಿಂದ ರೈತರಿಗೆ ಬೆಳೆ ಹಾನಿ ವಿಮೆ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು. ಇದಕ್ಕೆ ಸಚಿವ ಬಂಡೆಪ್ಪ ಖಾಶೆಂಪೂರ, ರಾಜ್ಯ ಸರ್ಕಾರದ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. ರಾಜ್ಯ ಸರ್ಕಾರ ಮೊಬೈಲ್ ಆ್ಯಪ್‌ ಮೂಲಕ ಡಾಟಾ ಸಂಗ್ರಹಿಸಿದೆ. ಅಲ್ಲದೇ, ಕೃಷಿ ಇಲಾಖೆ ಅಧಿಕಾರಿಗಳು ಕೂಡ ಮಾಹಿತಿ ಸಲ್ಲಿಸಿದ್ದಾರೆ. ಆ ಎರಡೂ ಮಾಹಿತಿಗಳು ಸೂಕ್ತವಾಗಿ ಹೊಂದಾಣಿಕೆ ಆಗುತ್ತಿಲ್ಲ ಎಂದು ತಿಳಿದು ಬಂದಿದ್ದು, ರಾಜ್ಯ ಸರ್ಕಾರ ಸೂಕ್ತ ಸಮಯದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ್ದರೆ ಈವರೆಗೆ ರೈತರಿಗೆ ವಿಮೆ ಹಣ ಬರುತ್ತಿತ್ತು ಎಂದ ಅವರು, ಈ ಕುರಿತು ರಾಜ್ಯಮಟ್ಟದ ಅಧಿಕಾರಿಗಳ ಜತೆಗೆ ಜಿಲ್ಲಾ ಉಸ್ತುವಾರಿಗಳು ಮಾತುಕತೆ ನಡೆಸಿ ಕೂಡಲೆ ಸಮಸ್ಯೆಗೆ ಸ್ಪಂದಿಸುವಂತೆ ಒತ್ತಾಯಿಸಬೇಕು ಎಂದರು.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಈ ಕುರಿತು ಜೂ.6ರಂದು ಸಭೆೆ ನಡೆಯಲ್ಲಿದ್ದು, ಪೂರ್ಣ ಮಾಹಿತಿ ಪಡೆಯುವುದಾಗಿ ತಿಳಿಸಿದರು. ಅಲ್ಲದೆ, ಆಯಾ ವರ್ಷದಲ್ಲಿನ ಬೆಳೆ ಪರಿಹಾರದ ಸಮಸ್ಯೆಗಳು ಆಯಾ ವರ್ಷದ ಡಿಸೆಂಬರ್‌ ಅಂತ್ಯದ ವರೆಗೆ ಬಗೆಹರಿಯುವಂತೆ ನೋಡಿಕೊಳ್ಳಬೇಕಾಗಿದ್ದು, ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

Advertisement

ಕಬ್ಬಿನ ಹಣ ನೀಡಿ: ರಾಜಕಾರಣಿಗಳಾದ ನಾವು ಮತ ಪಡೆಯಬೇಕಾದರೆ ರೈತರ ಮನೆ ಬಾಗಿಲಿಗೆ ತೆರಳಿ ಮತ ಕೇಳುತ್ತೇವೆ. ಆದರೆ, ರೈತರು ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿ ಬಿಲ್ಗಾಗಿ ರಾಜಕಾರಣಿಗಳ ಮನೆಗೆ ಬರಬೇಕಾ? ಎಂದು ಸಂಸದ ಭಗವಂತ ಖೂಬಾ ಸಚಿವ ಬಂಡೆಪ್ಪ ಖಾಶೆಂಪೂರ ಅವರನ್ನು ಖಾರವಾಗಿ ಪ್ರಶ್ನಿಸಿದರು.

ಸದ್ಯ ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರು ಸಮಸ್ಯೆಯಲ್ಲಿ ಇದ್ದಾರೆ, ಸರ್ಕಾರ ನಿಗದಿ ಪಡಿಸಿರುವ ದರವನ್ನು ಕಾರ್ಖಾನೆಗಳು ನೀಡುತ್ತಿಲ್ಲ ಎಂದು ರೈತರು ಅನೇಕ ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಆದರೂ ಕೂಡ ಸರ್ಕಾರ ರೈತರ ಸಮಸ್ಯೆಗೆ ಯಾಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಕೂಡಲೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ರೈತರ ಸಭೆ ಕರೆದು ಪ್ರಸಕ್ತ ಸಾಲಿನಲ್ಲಿ ಎಷ್ಟು ದರ ನೀಡಬೇಕು. ಹಾಗೂ ಬಾಕಿ ಹಣ ಪಾವತಿ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಎಫ್‌ಆರ್‌ಪಿ ದರ ನೀಡಬೇಕು: ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಂಡೆಪ್ಪ ಖಾಶೆಂಪೂರ್‌, ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರ ನಿಗದಿ ಮಾಡುತ್ತದೆ. ಕೇಂದ್ರ ಸರ್ಕಾದರ ದರವನ್ನೇ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳು ನೀಡುವಂತೆ ಸೂಚಿಸಲಾಗಿದೆ. ಕಬ್ಬು ಕಟಾವು ಹಾಗೂ ಸಾಗಾಟ ಸೇರಿ ಸುಮಾರು 2,650 ಪ್ರತಿ ಟನ್‌ ಕಬ್ಬಿಗೆ ಬೆಲೆ ನೀಡಬೇಕು ಎಂದು ಆಯಾ ಜಿಲ್ಲಾಧಿಕಾರಿಗಳ ಮೂಲಕ ಕೂಡ ಸೂಚಿಸಲಾಗಿದೆ. ಯಾವ ಕಾರ್ಖಾನೆ ನಿಗದಿತ ದರ ನೀಡುವುದಿಲ್ಲ ಅಂತಹ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ರೈತರ ಬಾಕಿ ಹಣ ಉಳಿಸಿಕೊಂಡ ಕಾರ್ಖಾನೆಗಳ ಸಕ್ಕರೆ ಜಪ್ತಿಮಾಡಿಕೊಂಡ ಜಿಲ್ಲಾಡಳಿತ ಹರಾಜು ಮೂಲಕ ಸಕ್ಕರೆ ಮಾರಾಟ ಮಾಡಿ ರೈತರ ಖಾತೆಗೆ ಹಣ ಹಾಕುವ ಕೆಲಸ ಮಾಡಿದ್ದು, ಈ ವರ್ಷಕೂಡ ಅದೇ ಕಾರ್ಯ ನಡೆಯಲಿದೆ ಎಂದು ತಿಳಿಸಿದರು. ಅಲ್ಲದೇ, ಕಬ್ಬಿನ ರೈತರ ಸಮಸ್ಯೆ ಕುರಿತು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next